ಕೊರೋನಾ ವಿರುದ್ಧದ ಹೋರಾಟಕ್ಕೆ ಹಲವರು ಆರ್ಥಿಕವಾಗಿ ಸಾಥ್ ನೀಡುತ್ತಿದ್ದಾರೆ. ಅಲ್ಲದೇ ಸಂಕಷ್ಟ ಪರಿಹಾರಕ್ಕೆ ರಾಜ್ಯದ ವಿವಿಧ ಮಠ-ಮಾನ್ಯಗಳು ಸಹ ಕೈಜೋಡಿಸುತ್ತಿದ್ದು, ಇದೀಗ ಸಿದ್ದಗಂಗಾವೂ ಸಹ ನೆರವಿಗೆ ಬಂದಿದೆ.
ತುಮಕೂರು, (ಏ.04):ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ತುಮಕೂರಿನ ಸಿದ್ದಗಂಗಾ ಮಠ 50 ಲಕ್ಷ ರೂ.ಹಣವನ್ನು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ದೇಣಿಗೆ ನೀಡಿದೆ.
ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಇಂದು (ಶನಿವಾರ) ಮಠದಿಂದ 25 ಲಕ್ಷ ರೂ. ಹಾಗೂ ವಿದ್ಯಾಸಂಸ್ಥೆಯಿಂದ 25ಲಕ್ಷ ರೂ. ಸೇರಿ ಒಟ್ಟು 50 ಲಕ್ಷ ರೂ.ಗಳ ಡಿಡಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮೂಲಕ ಸಿಎಂ ಪರಿಹಾರ ನಿಧಿಗೆ ನೀಡಿದರು.