7 ಕ್ವಿಂಟಾಲ್‌ ಮೆಣಸು ರಸ್ತೆಗೆ ಸುರಿದ ಮಾಜಿ ಯೋಧ

Kannadaprabha News   | Asianet News
Published : Apr 02, 2020, 08:51 AM IST
7 ಕ್ವಿಂಟಾಲ್‌ ಮೆಣಸು ರಸ್ತೆಗೆ ಸುರಿದ ಮಾಜಿ ಯೋಧ

ಸಾರಾಂಶ

ಕೊರೋನಾ ಸೋಂಕು ಪರಿಣಾಮದಿಂದಾಗಿ ದೇಶಾದ್ಯಂತ ಲಾಕ್‌ಡೌನ್‌ ಆಗಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಹಸಿ ಮೆಣಸು ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದು, ನಿವೃತ್ತ ಯೋಧರೊಬ್ಬರು 7 ಕ್ವಿಂಟಾಲ್‌ ಹಸಿ ಮೆಣಸು ರಸ್ತೆಗೆ ಸುರಿದು ಪಟ್ಟಣಕ್ಕೆ ಬಂದವರಿಗೆ ಉಚಿತವಾಗಿ ನೀಡಿದ್ದಾರೆ.  

ಮಡಿಕೇರಿ(ಎ.02): ಕೊರೋನಾ ಸೋಂಕು ಪರಿಣಾಮದಿಂದಾಗಿ ದೇಶಾದ್ಯಂತ ಲಾಕ್‌ಡೌನ್‌ ಆಗಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಹಸಿ ಮೆಣಸು ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದು, ನಿವೃತ್ತ ಯೋಧರೊಬ್ಬರು 7 ಕ್ವಿಂಟಾಲ್‌ ಹಸಿ ಮೆಣಸು ರಸ್ತೆಗೆ ಸುರಿದು ಪಟ್ಟಣಕ್ಕೆ ಬಂದವರಿಗೆ ಉಚಿತವಾಗಿ ನೀಡಿದ್ದಾರೆ. ಮತ್ತೊಂದೆಡೆ ಈ ಭಾಗದಲ್ಲಿ ಹಸಿ ಮೆಣಸು ಫಸಲು ಗಿಡದಲ್ಲೇ ಹಣ್ಣಾಗಿ ಕೊಳೆಯುತ್ತಿದೆ. ಆದ್ದರಿಂದ ಜಿಲ್ಲಾಡಳಿತ ರೈತರಿಗೆ ಸೂಕ್ತ ಮಾರುಕಟ್ಟೆವ್ಯವಸ್ಥೆ ಕಲ್ಪಿಸಿಕೊಡಬೇಕಿದೆ.

ಸೊಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೊಸಮುನ್ಸಿಪಾಲ್ಟಿನಿವಾಸಿ ಮಾಜಿ ಯೋಧ ದೇವರಾಜ್‌ (ರವಿ) ಎಂಬುವರು ತನ್ನ ಒಂದು ಎಕರೆ ಜಮೀನಿನಲ್ಲಿ ಹಸಿ ಮೆಣಸು ಬೆಳೆಸಿದ್ದರು. ಬೆಳೆದಂತಹ ಹಸಿ ಮೆಣಸು ಬೆಳೆ ಇದೀಗ ಕಟಾವಿಗೆ ಬಂದಿದೆ. ಆದರೆ ಕೊರೋನಾ ಪರಿಣಾಮದಿಂದ ರೈತರಿಂದ ನೇರವಾಗಿ ಉತ್ತಮ ಬೆಲೆಗೆ ಖರೀದಿಸುವವರಿಲ್ಲದೆ, 7 ಕ್ವಿಂಟಾಲ್‌ ಮೆಣಸನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಿದ್ದಾರೆ. ಇದನ್ನು ಜನ ಮುಗಿಬಿದ್ದು ಕೊಂಡು ಹೋದರು. ಆದರೆ ಮೆಣಸು ಬೆಳೆದ ಈ ರೈತರಿಗೆ ನಷ್ಟವಾಗಿದ್ದು, ತಮಗೆ ಸರ್ಕಾರ ಬೆಂಬಲ ಬೆಲೆ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಕೊಳೆಯುತ್ತಿದೆ ಮೆಣಸು:

ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಯ ಹಾರೆ ಹೊಸೂರು ಗ್ರಾಮದಲ್ಲಿ ಪರಮೇಶ, ಮಹೇಶ್‌, ಸೋಮ, ಜಯಂತ್‌ 4 ಮಂದಿ ಸೇರಿ ಒಂದು ಲಕ್ಷ ಮೆಣಸು ಗಿಡ ಬೆಳೆಸಿದ್ದರು. ಈಗಾಗಲೇ ಮೊದಲ ಬೆಳೆಯ 10 ಟನ್‌ ಫಸಲನ್ನು ಕೊಯ್ಲು ಮಾಡಲಾಗಿದೆ. ಆದರೆ ಈಗ ಮೆಣಸು ಹಣ್ಣಾಗಿ ಕೊಳೆಯುತ್ತಿದೆ. ಇನ್ನೂ ಹಲವು ಫಸಲು ಉಳಿದಿದೆ. ಆದ್ದರಿಂದ ಇದಕ್ಕೆ ಮಾರುಕಟ್ಟೆವ್ಯವಸ್ಥೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಕನಿಷ್ಠ 40 ರು. ನೀಡಲಿ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಯಾರೂ ಮೆಣಸನ್ನು ಕೊಂಡುಕೊಳ್ಳುತ್ತಿಲ್ಲ. ಮಧ್ಯವರ್ತಿಗಳು ಕೆ.ಜಿ.ಗೆ 15ರಿಂದ 20 ರು.ಗೆ ಕೇಳುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 40ರಿಂದ 60 ರು. ವರೆಗೆ ಬೆಲೆಯಿದೆ. ಆದ್ದರಿಂದ ನಮಗೆ ಕನಿಷ್ಠ 40 ರು. ನೀಡಬೇಕು. ಇದಕ್ಕೆ ಜಿಲ್ಲಾಡಳಿತ ಮಾರುಕಟ್ಟೆವ್ಯವಸ್ಥೆ ಮಾಡಿಕೊಡಬೇಕೆಂದು ಬೆಳೆ​ಗಾ​ರ​ರು ಮನವಿ ಮಾಡಿದ್ದಾರೆ.

ಲಾಕ್‌ಡೌನ್: 13 ಕಿ.ಮೀ ನಡೆದೇ ಆಸ್ಪತ್ರೆಗೆ ಹೋಗುವ ಸಿಬ್ಬಂದಿ..!

ಹಾರೆಹೊಸೂರು ಗ್ರಾಮದಲ್ಲಿ ಒಂದು ಲಕ್ಷ ಗಿಡ ಹಸಿ ಮೆಣಸು ಹಾಕಿದ್ದೇವೆ. ಈಗಾಗಲೇ ಮೊದಲ ಬೆಳೆ ಕೊಯ್ಲು ಮಾಡಲಾಗಿದೆ. ಈಗ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೊಂಳ್ಳುವವರಿಲ್ಲ. ಇನ್ನೂ ಗಿಡದಲ್ಲಿ ಅಪಾರ ಪ್ರಮಾಣದಲ್ಲಿ ಫಸಲಿದೆ. ಇದು ಗಿಡದಲ್ಲೇ ಒಣಗಿದ್ದು, ಅಪಾರ ನಷ್ಟವಾಗಿದೆ. ಆದ್ದರಿಂದ ಜಿಲ್ಲಾಡಳಿತ ಇದಕ್ಕೆ ಮಾರುಕಟ್ಟೆವ್ಯವಸ್ಥೆ ಮಾಡಿಕೊಟ್ಟು ಸಹಕರಿಸಬೇಕು ಎಂದು ಮೆಣಸು ಬೆಳೆಗಾರ ಹಾರೆಹೊಸೂರು ಜಯಂತ್‌ ಹೇಳಿದ್ದಾರೆ.

1ರಿಂದ 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪಾಸ್: ಕೊರೋನಾದಿಂದ ಸಿಕ್ತು ಗ್ರೇಸ್

ಒಂದು ಎಕರೆಯಲ್ಲಿ ಮೆಣಸು ಫಸಲು ಬೆಳೆಸಿದ್ದೆ. 17 ಮಂದಿ ಕೊಯ್ಲು ಮಾಡಿದ್ದೇವೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟಿಗೆ ಸಮಸ್ಯೆಯಾಗಿದೆ. ಆದ್ದರಿಂದ 7 ಕ್ವಿಂಟಾಲ್‌ ಮೆಣಸನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಿದ್ದೇನೆ. ಇನ್ನೂ ಗಿಡದಲ್ಲಿ ಹಾಗೆ ಉಳಿದಿದೆ. ಜಿಲ್ಲಾಡಳಿತ ಮಾರುಕಟ್ಟೆವ್ಯವಸ್ಥೆ ಕಲ್ಪಿಸಬೇಕು. ಮಾರುಕಟ್ಟೆಯಲ್ಲಿ ಗ್ರಾಹಕರಿಗೆ 40 ರಿಂದ 60 ರು. ವರೆಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಮಧ್ಯವರ್ತಿಗಳು ನಮ್ಮ ಬಳಿ 6ರಿಂದ 12 ರು.ಗೆ ಮಾತ್ರ ಕೇಳುತ್ತಿದ್ದಾರೆ. ಇದರಿಂದ ತುಂಬಾ ನಷ್ಟವಾಗಿದೆ. ಆದ್ದರಿಂದ ಸರ್ಕಾರ ಬೆಂಬಲ ಬೆಲೆ ನೀಡಬೇಕು ಎಂದು ಕೊಡ್ಲಿಪೇಟೆ ಮಾಜಿ ಯೋಧ ದೇವರಾಜು ತಿಳಿಸಿದ್ದಾರೆ.

-ವಿಘ್ನೇಶ್‌ ಎಂ. ಭೂತನಕಾಡು

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?