ಕ್ವಾರಂಟೈನ್‌ಗೆ ಒಳಗಾದವರ ಮನೆಗೆ ನೋಟಿಸ್‌, ಹೊರ ಬಂದ್ರೆ ಹುಷಾರ್

By Kannadaprabha NewsFirst Published Mar 24, 2020, 8:52 AM IST
Highlights

ಹೋಮ್‌ ಕ್ವಾರಂಟೈನ್‌ಗೆ ಒಳಗಾದವರು ಬೇಜವಾಬ್ದಾರಿಯಿಂದ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವುದನ್ನು ತಡೆಯಲು ಅವರ ಮನೆಗೆ ನೋಟಿಸ್‌ ಅಂಟಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು(ಮಾ.24): ಹೋಮ್‌ ಕ್ವಾರಂಟೈನ್‌ಗೆ ಒಳಗಾದವರು ಬೇಜವಾಬ್ದಾರಿಯಿಂದ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವುದನ್ನು ತಡೆಯಲು ಅವರ ಮನೆಗೆ ನೋಟಿಸ್‌ ಅಂಟಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಗರಕ್ಕೆ ಸುಮಾರು 22 ಸಾವಿರ ಜನ ವಿದೇಶಗಳಿಂದ ಬಂದಿದ್ದು, ಅವರನ್ನು ಪತ್ತೆ ಮಾಡಿ ಹೋಮ್‌ ಕ್ವಾರಂಟೈನ್‌ ಮುದ್ರೆ ಹಾಕಲಾಗುತ್ತಿದೆ. ಮುದ್ರೆ ಹಾಕಿಸಿಕೊಂಡವರು ಸಾರ್ವಜನಿಕ ಪ್ರದೇಶಗಳಲ್ಲಿ ಬೇಜವಾಬ್ದಾರಿ ತನದಿಂದ ನಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನೋಟಿಸ್‌ ನೀಡಲು ಮುಂದಾಗಿದ್ದೇವೆ. ಹೋಮ್‌ ಕ್ವಾರಂಟೈನ್‌ಗೆ ಒಳಪಟ್ಟವರ ಮನೆಗೆ ನೋಟಿಸ್‌ ಅಂಟಿಸಲಾಗುವುದು ಪಕ್ಕದ ಮನೆಯವರಿಗೆ ಕ್ವಾರಂಟೈನ್‌ಗೆ ಒಳಗಾದ ವ್ಯಕ್ತಿ ಎಲ್ಲೂ ಹೋಗದಂತೆ ಎಚ್ಚರಿಕೆ ವಹಿಸುವಂತೆಯೂ ಹಾಗೂ ಹೊರಗೆ ಹೋದರೆ ಮಾಹಿತಿ ನೀಡುವಂತೆಯೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

1 ದಿನದ ಎಫೆಕ್ಟ್: ಬೆಂಗ್ಳೂರಲ್ಲಿ ಕಡಿಮೆಯಾಯ್ತು ವಾಯು ಮಾಲೀನ್ಯ

ವಿದೇಶದಿಂದ ನಗರಕ್ಕೆ ಬಂದವರ ಮನೆಗಳನ್ನು ಪತ್ತೆಗೆ ಪಾಲಿಕೆ ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸ್‌ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, 300 ತಂಡ ಭಾನುವಾರ ಆರು ಸಾವಿರ ಜನರಿಗೆ ಹೋಮ್‌ ಕ್ವಾರಂಟೈನ್‌ ಸೀಲ್‌ ಹಾಕಲಾಗಿದೆ. ಸೋಮವಾರ ಸಾವಿರ ಜನರಿಗೆ ಮುದ್ರೆ ಹಾಕಲಾಗುವುದು. ಮಂಗಳವಾರ 500 ತಂಡಗಳನ್ನು ರಚಿಸಿ ಮುದ್ರೆ ಹಾಕುವ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲಾಗುವುದು ಎಂದು ತಿಳಿಸಿದರು.

ಅಪಾರ್ಟ್‌ಮೆಂಟ್‌ಗಳಾದರೆ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗುತ್ತಿದೆ. ಹೋಮ್‌ ಕ್ವಾರೆಂಟೈನ್‌ಗೆ ಒಳಗಾದವರಿಂದಲೂ ಪಾಲಿಕೆ ಹಿಂಬರಹ ಪಡೆದುಕೊಳ್ಳುತ್ತಿದೆ. ಈ ರೀತಿ ಹೋಮ್‌ ಕ್ವಾರಂಟೈನ್‌ ಆಗಿರುವವರ ಆರೋಗ್ಯ ಸ್ಥಿತಿಯನ್ನು ಪಾಲಿಕೆ 5 ಮತ್ತು 10 ದಿನಗಳಿಗೊಮ್ಮೆ ಪರಿಶೀಲಿಸಲಿದೆ ಎಂದು ಮಾಹಿತಿ ನೀಡಿದರು.

click me!