ಈ ಕೊರೋನಾ ವೈರಸ್ ಎನ್ನುವ ಮಾಹಾಮಾರಿ ಭಾರತದಲ್ಲಿ ಅಟ್ಟಹಾಸ ಮುಂದುವರಿಸಿದ್ದು, ಜನರು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ. ಮತ್ತೊಂದೆಡೆ ಕರ್ನಾಟಕದಲ್ಲಿ ಕೈದಿಗಳು ಇನ್ನಿಲ್ಲ ಸಂತಸದಲ್ಲಿದ್ದಾರೆ.
ಬೆಂಗಳೂರು, (ಏ.01): ವಿಶೇಷ ದಿನಗಳ ಸಂದರ್ಭದಲ್ಲಿ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಬಿಡುಗಡೆಗೊಳಿಸಲಾಗುತ್ತದೆ.
ಆದ್ರೆ, ಇದೀಗ ಕೊರೋನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಕೆಲ ಕೈದಿಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸುಮಾರು 45000ಕ್ಕೂ ಹೆಚ್ಚು ಕೈದಿಗಳಿದ್ದಾರೆ.
ಇವರ ಪೈಕಿ 500ರಿಂದ 600 ಕೈದಿಗಳನ್ನು ರಿಲೀಸ್ ಮಾಡಲು ನಿರ್ಧರಿಸಲಾಗಿದೆ. ಕಳ್ಳತನ, ಸುಲಿಗೆ, ದರೋಡೆ ಸೇರಿದಂತೆ ಸಣ್ಣ-ಪುಟ್ಟ ಪ್ರಕರಣಗಳಲ್ಲಿ ಜೈಲು ಸೇರಿರುವ ಕೈದಿಗಳು ಬಿಡುಗಡೆಯಾಗಲಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಸುಮಾರು 2000 ಕೈದಿಗಳಿಗೆ ಇರುವಷ್ಟು ಸ್ಥಳವಿದೆ.ಆದ್ರೆ, ಈಗ 45000ಕ್ಕೂ ಹೆಚ್ಚು ಕೈದಿಗಳಿದ್ದರಿಂದ ಕೊರೋನಾ ಸೋಂಕು ಹರಡುವ ಭೀತಿ ಇದೆ. ಇದ್ರಿಂದ ಕೆಲವರಿಗೆ ಬಿಡುಗಡೆ ಭಾಗ್ಯ ದೊರೆಯಲಿದೆ.
ಈಗಾಗಲೇ ಬೆಂಗಳೂರು ನಗರದ ಸುಮಾರು 80ಕ್ಕೂ ಹೆಚ್ಚು ಠಾಣೆಗಳ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ್ದು, ತಮ್ಮ ಠಾಣೆಯ ಅಪರಾಧಿಗಳು ಮಾಹಿತಿಯನ್ನು ಜೈಲಾಧಿಕಾರಿಗೆ ನೀಡಿದ್ದಾರೆ. ಎಲ್ಲಾ ಅಂದುಕೊಂಡತೆ ಆದ್ರೆ ಇಂದು (ಬುಧವಾರ) ಸಂಜೆ ಹೊತ್ತಿಗೆ ಕೈದಿಗಳು ಜೈಲಿನಿಂದ ಹೊರಬರಲಿದ್ದಾರೆ.
ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದ ಅನೇಕ ಜೈಲುಗಳಿಂದ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ.