ಗಡಿ ಬಂದ್: ಸುಪ್ರೀಂ ಮುಂದೆ ಕರ್ನಾಟಕದ ವಿರುದ್ಧ ಕೇರಳ ಗಂಭೀರ ಆರೋಪ

By Suvarna NewsFirst Published Apr 6, 2020, 9:13 PM IST
Highlights

ಕೊರೋನಾ ವೈರಸ್‌ ಮಧ್ಯೆ ಕರ್ನಾಟಕ ಹಾಗೂ ಕೇರಳ ನಡುವೆ ಗಡಿ ಜಟಾಪಟಿ ನಡೆದಿದೆ. ಇದೀಗ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಕರ್ನಾಟಕ ವಿರುದ್ಧ ಕೇರಳ ಗಂಭೀರ ಆರೋಪ ಮಾಡಿದೆ.

ನವದೆಹಲಿ, (ಏ.06): ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳ ಗಡಿ ಬಂದ್ ಮಾಡಲಾಗಿದ್ದು, ಪರಿಣಾಮ ಕೇರಳದ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇರಳ ಸರ್ಕಾರ ಆರೋಪಿಸಿದೆ.

ಸುಪ್ರೀಂಕೋರ್ಟಿಗೆ ಅಫಿಡವಿಟ್ ಸಲ್ಲಿಸಿರುವ ಕೇರಳ ಸರ್ಕಾರ, ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ವಿರುದ್ಧವಾಗಿದೆ ಎಂದು ಕೇರಳ ಹೇಳಿದ್ದು, ಕೂಡಲೇ ಗಡಿ ಭಾಗವನ್ನು ತೆರವು ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಲು ಮನವಿ ಮಾಡಿಕೊಂಡಿದೆ. 

ಈ ಕುರಿತು ನಾಳೆ (ಮಂಗಳವಾರ) ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಲಿದೆ.

ಕೇಂದ್ರಾಡಳಿತ ಪ್ರದೇಶವಾಗಲಿದೆಯಾ ಕಾಸರಗೋಡು..?

ಕೇರಳ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮತ್ತಷ್ಟು ಮಾಹಿತಿ ಕೋರಿ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್‍ಗೆ ಅಫಿಡವಿಟ್ ಮೂಲಕ ಉತ್ತರ ಸಲ್ಲಿಸಿರುವ ಕೇರಳ ಈ ಆರೋಪಗಳನ್ನು ಮಾಡಿದೆ.

ಡಿ ಭಾಗ ಬಂದ್ ಆಗಿರುವ ಹಿನ್ನೆಲೆ ಕೇರಳಕ್ಕೆ ತೊಂದರೆಯಾಗಿದೆ. ತುರ್ತು ಆರೋಗ್ಯ ಕಾರ್ಯಗಳಿಗೆ ತೊಂದರೆ ಉಂಟಾಗಿದೆ. ಇತರ ಅಗತ್ಯ ವಸ್ತುಗಳು ಸಾಗಾಟಕ್ಕೂ ತೊಂದರೆಯಾಗಿದೆ. ಕರ್ನಾಟಕ ತನ್ನ ರಸ್ತೆ ತಡೆ ಕ್ರಮ ಹಿಂಪಡೆಯಬೇಕೆಂದು ಆಗ್ರಹ ಮಾಡಿತ್ತು. 

ಕರ್ನಾಟಕ-ಕೇರಳ ಗಡಿ: ದೇವೇಗೌಡ್ರ ಪತ್ರಕ್ಕೆ ಬಿಎಸ್‌ವೈ ಕೊಟ್ಟ ಜಾಣ್ಮೆ ಉತ್ತರ, ಅಬ್ಬಬ್ಬಾ...!

ಆದರೆ ಕಾಸರಗೋಡು ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ್ದು ಗಡಿ ಭಾಗ ತೆರವು ಮಾಡಿದ್ದಲ್ಲಿ ಮತ್ತಷ್ಟು ಸೋಂಕು ಕರ್ನಾಟಕಕ್ಕೆ ಹಬ್ಬುವ ಸಾಧ್ಯತೆ ಇದೆ. ಈ ಹಿನ್ನೆಲೆ ಗಡಿ ಭಾಗ ತೆರವು ಮಾಡಲು ಸಾಧ್ಯವಿಲ್ಲ. ಇದಲ್ಲದೇ ಕೇಂದ್ರ ಸರ್ಕಾರದಿಂದಲೂ ಈ ಬಗ್ಗೆ ಆದೇಶಗಳಿದೆ ಎಂದು ಕರ್ನಾಟಕ ವಾದ ಮಂಡಿಸಿತ್ತು.

ಎರಡೂ ಕಡೆಯ ವಾದ ಆಲಿಸಿದ್ದ ಸುಪ್ರೀಂ ಕೋರ್ಟ್ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಸೂಚನೆ ನೀಡಿತ್ತು. ಇದಕ್ಕೂ ಮುನ್ನ ಕೇರಳ ಹೈಕೋರ್ಟ್ ಗಡಿ ತೆರವು ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ಕರ್ನಾಟಕ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದೆ.

ಕೊರೋನಾ ಆತಂಕ: 'ಯಾವುದೇ ಕಾರಣಕ್ಕೂ ಕೇರಳ ಗಡಿ ತೆರೆಯಲು ಬಿಡೋದಿಲ್ಲ'

ಕೋವಿಡ್ 19 ಭೀತಿ ಹೆಚ್ಚಾಗಿರುವುದರಿಂದ ಕರ್ನಾಟಕ-ಕೇರಳ ಗಡಿ ಬಂದ್‌ ಸಡಿಲಗೊಳಿಸಲು ಸಾಧ್ಯವೇ ಇಲ್ಲ ಎಂದು ಈಗಾಗಲೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

"

click me!