'ಕೊರೋನಾ ಆತಂಕ: ಹೆಲ್ತ್‌ ಎಮರ್ಜೆನ್ಸಿ ಪಾಲಿಸದಿದ್ರೆ ಕಠಿಣ ಕ್ರಮ'

By Kannadaprabha NewsFirst Published Mar 29, 2020, 10:54 AM IST
Highlights

ಭಟ್ಕಳದಲ್ಲಿ ವಿವಿಧ ಅಂಗಡಿಕಾರರು ಮನೆ ಮನೆಗೆ ದಿನಸಿ, ತರಕಾರಿ ಸೇರಿದಂತೆ ಔಷಧವನ್ನೂ ವಿತರಣೆ ಮಾಡಲಿದ್ದಾರೆ| ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಕ್ರಮ| ಯಾರೂ ಭಯ ಪಡುವ ಅಗತ್ಯವಿಲ್ಲ| ಮನೆಯಿಂದ ಹೊರಕ್ಕೆ ಬಂದರೆ ಅಂತಹವರ ಮೇಲೆ ಕ್ರಮ| 

ಭಟ್ಕಳ(ಮಾ.29): ಕೊರೋನಾ ವೈರಸ್‌ ತಡೆಯಲು ಹೆಲ್ತ್‌ ಎಮೆರ್ಜೆನ್ಸಿಯನ್ನು ಪಾಲಿಸಬೇಕು. ಮನೆಯಿಂದ ಯಾರೂ ಹೊರಬರಬಾರದು ಮತ್ತು ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಸಹಾಯಕ ಆಯುಕ್ತ ಎಸ್‌. ಭರತ್‌ ಹೇಳಿದ್ದಾರೆ.

ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಟ್ಕಳದಲ್ಲಿ ವಿವಿಧ ಅಂಗಡಿಕಾರರು ಮನೆ ಮನೆಗೆ ದಿನಸಿ, ತರಕಾರಿ ಸೇರಿದಂತೆ ಔಷಧವನ್ನೂ ವಿತರಣೆ ಮಾಡಲಿದ್ದಾರೆ. ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಯಾರೂ ಭಯ ಪಡುವ ಅಗತ್ಯವಿಲ್ಲ, ಯಾವುದೇ ರೀತಿಯ ಅವಶ್ಯಕತೆಗಾಗಿ ಜನತೆ ಸಂಬಂಧಪಟ್ಟವರನ್ನು ಸಂಪರ್ಕಿಸುವಂತೆ ತಿಳಿಸಿದ ಅವರು ತೊಂದರೆಯಾದಲ್ಲಿ ನೋಡಲ್‌ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಮನೆಯಿಂದ ಹೊರಕ್ಕೆ ಬಂದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ವಾಹನಗಳಲ್ಲಿ ಬಂದರೆ ಅವರ ವಾಹನ ಪರವಾನಗಿ ರದ್ದಾಗುವುದು. ಎರಡನೇ ಬಾರಿ ನಿಯಮ ಮೀರಿದರೆ ವಾಹನ ವಶಕ್ಕೆ ಪಡೆದು ಜ​ಫ್ತಿ ಮಾಡಲಾಗುವುದು ಎಂದೂ ತಿಳಿಸಿದರು.

ಚಿಕಿತ್ಸೆಗೆ ತೆರಳುತ್ತಿದ್ದ ವೃದ್ಧನಿಗೆ ಲಾಠಿ ಬೀಸಿದ ಪಿಡಿಒ

ನೋಡಲ್‌ ಅಧಿಕಾರಿ ಸಾಜಿದ್‌ ಅಹಮ್ಮದ್‌ ಮುಲ್ಲಾ ಮಾತನಾಡಿ, ಜನತೆ ತಮಗೆ ಅನುಕೂಲವಿದ್ದ ಅಂಗಡಿಯವರಿಗೆ ತಿಳಿಸಿ ದಿನಸಿ ಇತ್ಯಾದಿ ಸಾಮಾನುಗಳನ್ನು ತರಿಸಿಕೊಳ್ಳಬಹುದು. ಆದರೆ, ಒಂದೇ ಬಾರಿಗೆ ಅಗತ್ಯಕ್ಕಿಂತ ಹೆಚ್ಚು ತರಿಸಿಕೊಳ್ಳೂವುದು ಇಲ್ಲವೇ ಕನಿಷ್ಟವಸ್ತುಗಳನ್ನು ಆದೇಶ ಮಾಡುವುದು ಬೇಡಾ. ತಮ್ಮ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ಅಂಗಡಿಕಾರರು ವಹಿಸಿಕೊಂಡಿದ್ದು ಅವರಿಗೆ ಸಹಕಾರ ಕೊಡಿ ಎಂದು ಕೇಳಿದರು.
ಡಿವೈಎಸ್‌ಪಿ ಗೌತಮ್‌ ಮಾತನಾಡಿ, ಸಾರ್ವಜನಿಕರು ಮನೆಯಿಂದ ಹೊರಗೆ ಬರದೇ ಸಹಕರಿಸಬೇಕು. ಕೆಲವೊಂದು ಸಾಮಾಜಿಕ ತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹರಡಿಸಲಾಗುತ್ತದೆ. ಅಂತಹವರ ಮೇಲೆ ಇಲಾಖೆ ಸದಾ ನಿಗಾ ವಹಿಸಿದ್ದು, ತಪ್ಪು ಸಂದೇಶಗಳನ್ನು ಹರಡುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಸಾರ್ವ​ಜ​ನಿ​ಕ​ರಿಗೆ ಅಗತ್ಯವಿದ್ದ ಸಂದರ್ಭದಲ್ಲಿ ಇಲಾಖೆಯ ವಾಹನವನ್ನು ಕಳುಹಿಸುವ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದರಲ್ಲದೇ ಮನೆಯಿಂದ ಹೊರ ಬಂದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದರು.
ಯಾರೂ ಅಂತಹ ಪರಿಸ್ಥಿತಿಯನ್ನು ತಂದುಕೊಳ್ಳದೇ ಮನೆಯಲ್ಲಿರುವುದು ಉತ್ತಮ. ರೋಗ ತಡೆ​ಗೆ ಇನ್ನಷ್ಟುಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದರು.

ಡಾ. ಶರದ್‌ ನಾಯಕ ಮಾತನಾಡಿ, ಯಾರಾರ‍ಯರು ಹೋಮ್‌ ಕ್ವಾರಂಟೈನ್‌ನಲ್ಲಿದ್ದಾರೋ ಅವರು ಯಾವುದೇ ಕಾರಣಕ್ಕೂ ಹೊರಕ್ಕೆ ಬರಬಾರದು. ಪ್ರತಿಯೋಬ್ಬರೂ ಸ್ವಚ್ಛತೆಯ ಕುರಿತು ಹೆಚ್ಚಿನ ನಿಗಾ ವಹಿಸಬೇಕು. ಪ್ರತಿ ಬಾರಿಯೂ ಕೈಯನ್ನು ಸೋಪ್‌ ಇಲ್ಲವೇ ಸ್ಯಾನಿಟೈಸರ್‌ ಹಾಕಿ ತೊಳೆ​ಯಬೇಕು. ಖಾಸಗಿ ವೈದ್ಯರು ಸೇವೆಗೆ ಮರುಳುವುದಾದರೆ ಅವರಿಗೆ ಎ​ಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗುವುದು.

ಭಟ್ಕಳ ತಾಲೂಕಾಸ್ಪತ್ರೆಯನ್ನು ಕೊರೋನಾ ಆಸ್ಪತ್ರೆಯನ್ನಾಗಿ ಮಾಡಿದ್ದು ಸಣ್ಣಪುಟ್ಟ ಚಿಕಿತ್ಸೆಗಾಗಿ ಶಿರಾಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗುವಂತೆಯೂ ಸಲಹೆ ಮಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಿ.ಎನ್‌. ಅಶೋಕ ಕುಮಾರ್‌ ಉಪಸ್ಥಿತರಿದ್ದರು.
 

click me!