
ಚಿಕ್ಕಮಗಳೂರು (ಮಾ.26): ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಕೆಎಸ್ಆರ್ಟಿಸಿ (KSRTC) ಬಸ್ಸಿನ ನಿರ್ವಹಣಾ ವೈಫಲ್ಯಕ್ಕೆ ಸಾಕ್ಷಿಯಾದ ಭೀಕರ ಘಟನೆಯೊಂದು ನಡೆದಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಕಾಲಭೈರವೇಶ್ವರ ದೇಗುಲದ ಬಳಿ ಸರ್ಕಾರಿ ಬಸ್ಸೊಂದು ಪ್ರಯಾಣಿಕರಿಂದ ತುಂಬಿ ಚಲಿಸುತ್ತಿದ್ದಾಗಲೇ ಅದರ ಹಿಂಭಾಗದ ಚಕ್ರವು ಇದ್ದಕ್ಕಿದ್ದಂತೆ ಕಳಚಿ ರಸ್ತೆಗೆ ಬಿದ್ದಿದೆ. ಬಸ್ ಚಲನೆಯಲ್ಲಿದ್ದಾಗಲೇ ಈ ತಾಂತ್ರಿಕ ದೋಷ ಸಂಭವಿಸಿದ್ದರಿಂದ ಚಾಲಕ ತಕ್ಷಣವೇ ಬಸ್ಸನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಬಸ್ಸಿನಲ್ಲಿದ್ದ ಹತ್ತಾರು ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ರಸ್ತೆ ಮಧ್ಯೆಯೇ ಚಕ್ರ ಕಳಚಿ ಬಿದ್ದ ಈ ದೃಶ್ಯ ಕಂಡು ಪ್ರಯಾಣಿಕರು ಬೆಚ್ಚಿಬಿದ್ದಿದ್ದು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. "ಹಳೆಯ ಬಸ್ಸುಗಳ ಓಡಾಟ ಮತ್ತು ಸರಿಯಾದ ನಿರ್ವಹಣೆ ಇಲ್ಲದಿರುವುದೇ ಇಂತಹ ಘಟನೆಗಳಿಗೆ ಕಾರಣ" ಎಂದು ಪ್ರಯಾಣಿಕರು ದೂರಿದ್ದಾರೆ. ಬಸ್ಸಿನ ಸಾಮರ್ಥ್ಯ ಮತ್ತು ಸಾರಿಗೆ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಸ್ಥಳದಲ್ಲಿದ್ದವರು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಭೇಟಿ ನೀಡಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸಾರಿಗೆ ಇಲಾಖೆಯು ಇನ್ನು ಮುಂದೆ ಬಸ್ಸುಗಳ ತಾಂತ್ರಿಕ ತಪಾಸಣೆಗೆ ಆದ್ಯತೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.