
ಚಿಕ್ಕಮಗಳೂರು (ಏ.07) ಮಡಿಕೇರಿಯ ತಡಿಯಂಡಮೋಳ್ ಪರ್ವತ ಚಾರಣದ ವೇಳೆ ಕೇರಳದ ಯುವತಿ ಶರಣ್ಯ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ನಾಲ್ಕು ದಿನಗಳ ಬಳಿಕ ಶರಣ್ಯ ಪತ್ತೆಯಾಗಿ ಸುರಕ್ಷಿತವಾಗಿ ಕುಟುಂಬದ ಜೊತೆ ಸೇರಿಕೊಂಡಿದ್ದಾಳೆ. ಈ ಮಿಸ್ಸಿಂಗ್ ಪ್ರಕರಣದ ಚರ್ಚೆ ನಡೆಯುತ್ತಿರುವಾಗಲೇ ಇದೀಗ ಚಿಕ್ಕಮಗಳೂರಿನಲ್ಲೂ ಯುವತಿ ನಾಪತ್ತೆ ಪ್ರಕರಣ ವರದಿಯಾಗಿದೆ. ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಯುವತಿ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಈಕೆ ಕೂಡ ಕೇರಳ ಮೂಲದವಳು. ಕುಟುಂಬದ ಜೊತೆ ಪ್ರವಾಸಕ್ಕೆ ಬಂದ ಯುವತಿ ನಾಪತ್ತೆಯಾಗಿದ್ದು, ಹುಡುಕಾಟ ತೀವ್ರಗೊಂಡಿದೆ.
ಕೇರಳದ ಪಾಲಕ್ಕಾಡ್ ಮೂಲದ ನಂದನ ಎಂಬ ಯುವತಿ ನಾಪತ್ತೆಯಾಗಿದ್ದಾಳೆ. ಕೇರಳದಿಂದ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಆಗಮಿಸಿದ್ದ ಕೇರಳದ ಕುಟುಂಬ ಚಂದ್ರದ್ರೋಣ ಪ್ರರ್ವತ ಚಾರಣಕ್ಕೆ ತೆರಳಿತ್ತು. 40 ಕುಟುಂಬ ಸದಸ್ಯರ ಪೈಕಿ ಯುವತಿ ನಂದನ ಕೂಡ ಸೇರಿಕೊಂಡಿದ್ದಳು. ಪರ್ವತದ ಸುಂದರ ತಾಣ ವೀಕ್ಷಿಸುತ್ತಾ ತೆರಳುವಾಗ ಕುಟುಂಬ ಸದಸ್ಯರ ತಂಡದಿಂದ ನಂದನಾ ಬೇರ್ಪಟ್ಟಿದ್ದಾಳೆ.
ಚಂದ್ರದ್ರೋಣ ಪರ್ವತ ಚಾರಣ ಮಾಡಿದ ಕುಟುಂಬ ಸದಸ್ಯರ ಮೇಲಕ್ಕೆ ತಲುಪುದ್ದಂತೆ ನಂದನಾ ನಾಪತ್ತೆಯಾಗಿದ್ದು ಅರಿವಾಗಿದೆ. ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇತ್ತ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ. ಇತ್ತ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಹೀಗಾಗಿ ಪೊಲೀಸರು ಸ್ಥಳಕ್ಕೆ ಆಗಮಿಸಿದ ಶೋಧ ಕಾರ್ಯ ಆರಂಭಿಸಿದ್ದಾರೆ. ಇದೇ ವೇಳೆ ಸ್ಥಳೀಯರ ತಂಡ ಕೂಡ ಅರಣ್ಯ ಇಲಾಖೆ ಹಾಗೂ ಪೊಲೀಸರ ಜೊತೆ ಶೋಧ ಕಾರ್ಯ ಆರಂಭಿಸಿದೆ.
ದಟ್ಟ ಅರಣ್ಯ ಹಾಗೂ ಕಡಿದಾದ ಬೆಟ್ಟಗುಡ್ಡಗಳಲ್ಲಿ ತೀವ್ರ ಕಾರ್ಯಾಚರಣೆ ನಡೆಯುತ್ತಿದೆ. ಮಂಜು ಹಾಗೂ ಕತ್ತಲಿನ ವಾತಾವರಣದಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ. ಇದೀಗ ಪ್ರವಾಸಿಗರ ವಲಯದಲ್ಲಿ ನಾಪತ್ತೆ ಪ್ರಕರಣ ಆತಂಕ ಮೂಡಿಸಿದೆ. ಚಂದ್ರದ್ರೋಣ ಪರ್ವತ ದಟ್ಟ ಕಾಡಿನಿಂದ ಕೂಡಿದೆ. ಹೀಗಾಗಿ ಇಲ್ಲಿ ದಾರಿ ತಪ್ಪಿದರೆ ಅಪಾಯದ ಸಾಧ್ಯತೆ ಹೆಚ್ಚು. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಡಿಕೇರಿಯ ಪ್ರವಾಸಿ ತಾಣ ತಡಿಯಂಡಮೋಳ್ ಪರ್ವತ ಚಾರಣದ ವೇಳೆ ನಾಪತ್ತೆಯಾದ ಕೇರಳದ ಯುವತಿ ಶರಣ್ಯ ನಾಲ್ಕು ದಿನಗಳ ಬಳಿಕ ಪತ್ತೆಯಾಗಿದ್ದರು. ಈಕೆಗೆ ಸನ್ಮಾನ ಕಾರ್ಯಕ್ರಮಗಳೂ ನಡೆದಿದೆ. ಇದೀಗ ಈಕೆಯ ಮಾತುಗಳು ಹಾಗೂ ನಾಪತ್ತೆ ಘಟನೆ ಪ್ರಹಸನದ ರೀತಿ ಕಾಣುತ್ತಿದೆ ಅನ್ನೋ ಆರೋಪಗಳು ಕೇಳಿಬರುತ್ತಿದೆ.