'ಉತ್ತರ ಕರ್ನಾಟಕದ 4 ದಶಕದ ಕನಸು ನನಸು ಮಾಡಿದ ಯಡಿಯೂರಪ್ಪ'

By Kannadaprabha NewsFirst Published Mar 6, 2020, 10:35 AM IST
Highlights

ಉತ್ತರ ಕರ್ನಾಟಕದ ಬಹು ವರ್ಷದ ಕನಸು ನನಸು: ಸಚಿವ ಸಿ.ಸಿ ಪಾಟೀಲ| ಯಡಿಯೂರಪ್ಪ ರೈತರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಹಾಗೂ ವಯೋಮಾನದವರಿಗೆ ಅನುಕೂಲಕರವಾದ ಬಜೆಟ್ ಮಂಡಿಸಿದ್ದಾರೆ|

ಗದಗ(ಮಾ.06): ಕಳೆದ 4 ದಶಕಗಳಿಂದ ನಿರಂತರವಾಗಿ ಹೋರಾಟ ನಡೆಯುತ್ತಿರುವ ಮಹದಾಯಿ ಯೋಜನೆಗೆ ಇದ್ದ ಅಡ್ಡಿ ಎಲ್ಲವೂ ನಿವಾರಣೆಯಾಗಿದ್ದು, ಸದ್ಯ ರಾಜ್ಯ ಬಜೆಟ್‌ನಲ್ಲಿ ಯೋಜನೆಗೆ 500 ಕೋಟಿ ಕಾಯ್ದಿರಿಸುವ ಮೂಲಕ ಉತ್ತರ ಕರ್ನಾಟಕದ ಬಹುವರ್ಷಗಳ ಕನಸು ನನಸು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದ್ದಾರೆ. 

ರಾಜ್ಯ ಬಜೆಟ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನ ಆಯವ್ಯಯವನ್ನು ಪ್ರಪ್ರಥಮ ಬಾರಿಗೆ ಇಲಾಖಾವಾರು ಬದಲಿಯಾಗಿ ಆರು ವಲಯಗಳನ್ನಾಗಿ ವಿಂಗಡಿಸಿ ಅನುದಾನ ಹಂಚಿಕೆ ಮಾಡಿರುವುದು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯತ್ತ ಹೆಜ್ಜೆಯನ್ನಿರಿಸಿರುವುದನ್ನು ಸೂಚಿಸುತ್ತದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆರು ವಲಯಗಳಾದ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 32,590 ಕೋಟಿ, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ 72,093 ಕೋಟಿ, ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆಗೆ 55,732 ಕೋಟಿ, ಬೆಂಗಳೂರು ಸಮಗ್ರ ಅಭಿವೃದ್ಧಿಗೆ 8,772  ಕೋಟಿ, ಸಂಸ್ಕೃತಿ, ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ 4,552 ಕೋಟಿ ಹಾಗೂ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳಿಗೆ 10,194 ಕೋಟಿ ಒದಗಿಸಲಾಗಿದೆ. 

ಈ ಎಲ್ಲ ಅಂಶಗಳನ್ನು ಅವಲೋಕಿಸಿದಲ್ಲಿ ಮುಖ್ಯಮಂತ್ರಿಗಳು ರೈತರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಹಾಗೂ ವಯೋಮಾನದವರಿಗೆ ಅನುಕೂಲಕರವಾದ ಹರ್ಷದಾಯಕ ಮತ್ತು ಪ್ರಗತಿಪರ ಆಯವ್ಯಯವನ್ನು ಮಂಡಿಸಿದ್ದಾರೆ ಎಂದು ಸಚಿವ ಸಿ.ಸಿ. ಪಾಟೀಲ ಸಂತಸ ವ್ಯಕ್ತಪಡಿಸಿದ್ದಾರೆ.
 

click me!