ಬಸವಾದಿ ಶರಣರ ಕಾಯಕ, ಡಾ.ರಾಜ್ ಹಾಡು ಸ್ಮರಿಸಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ!

By Suvarna NewsFirst Published Feb 16, 2024, 11:41 AM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 15ನೇ ಬಜೆಟ್ ಮಂಡಿಸಿದ್ದಾರೆ. ಹಲವು ಸವಾಲುಗಳ ನಡುವೆ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಕೆಲ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಆದರೆ ಬಜೆಟ್ ಮಂಡನೆ ಆರಂಭದಲ್ಲಿ ಸಿದ್ದರಾಮಯ್ಯ ಬಸವಣ್ಣ, ಶರಣರು, ಅಂಬೇಡ್ಕರ್, ಡಾ. ರಾಜ್ ಕುಮಾರ್ ಸ್ಮರಿಸಿ ಬಜೆಟ್ ಮಂಡಿಸಿದ್ದಾರೆ.
 

ಬೆಂಗಳೂರು(ಫೆ.16) ಲೋಕಸಭೆ ಚುನಾವಣೆ, ಉಚಿತ ಗ್ಯಾರೆಂಟಿ ಯೋಜನೆ ಸವಾಲಿನ ನಡುವೆ ಸಿದ್ದರಾಮಯ್ಯ 15ನೇ ಬಜೆಟ್ ಮಂಡಿಸಿದ್ದಾರೆ. ಭರಪೂರ ಘೋಷಣೆ ಜೊತೆಗೆ ಕೆಲ ಸಮುದಾಯಗಳಿಗೆ ಬಂಪರ್ ಕೊಡುಗೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ. ಬಜೆಟ್ ಮಂಡನೆ ಆರಂಭದಲ್ಲಿ ಸಿದ್ದರಾಮಯ್ಯ ಬಸವಣ್ಣ, ಶರಣರು, ಅಂಬೇಡ್ಕರ್, ಡಾ. ರಾಜ್ ಕುಮಾರ್ ಸೇರಿದಂತೆ ಪ್ರಮುಖರನ್ನ ಸ್ಮರಿಸಿ ಬಜೆಟ್ ಮಂಡಿಸಿದ್ದಾರೆ. ವಿಶೇಷ ಅಂದರೆ ಡಾ. ರಾಜ್‌ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ಹಾಡಿನ ಸಾಲುಗಳನ್ನು ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ.

ಬಜೆಟ್ ಆರಂಭದಲ್ಲಿ ಸಿದ್ದರಾಮಯ್ಯ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಸ್ಮರಿಸಿ, ಸಂವಿಧಾನ ಆಶಯದಂತೆ ಬಜೆಟ್ ಮಂಡಿಸುವುದಾಗಿ ಹೇಳಿದರು. ಅಂಬೇಡ್ಕರ್‌ ಅವರು ರೂಪಿಸಿದ ಸಂವಿಧಾನದ ಆಶಯದಂತೆ ನ್ಯಾಯ, ಸಮಾನತೆ ಹಾಗೂ ಭ್ರಾತೃತ್ವದ ತಳಹದಿಯ ಮೇಲೆ ಕರ್ನಾಟಕ ಮಾದರಿ ಅಭಿವೃದ್ಧಿಯ ಹೊಸ ದೃಷ್ಟಾಂತವನ್ನು ರೂಪಿಸಲು ನಾವು ಹೆಜ್ಜೆಯಿಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಬಂಪರ್; ವಕ್ಫ್‌ಗೆ 100 ಕೋಟಿ, ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ ರೂ!

ಸಾಮಾಜಿಕ ನ್ಯಾಯ ಎನ್ನುವುದು ನಮ್ಮ ನಂಬಿಕೆ ಮಾತ್ರವಲ್ಲ; ಅದು ಉದಾತ್ತ ಜೀವನ ದೃಷ್ಟಿಕೋನ. ಸಮ ಸಮಾಜ ನಿರ್ಮಾಣದಲ್ಲಿ ಬಸವಾದಿ ಶರಣರ ಕಾಯಕ ಮತ್ತು ದಾಸೋಹ ತತ್ವಗಳು ನಮಗೆ ಪ್ರೇರಣೆಯಾಗಿದೆ. ದುಡಿಮೆಯ ಒಂದು ಭಾಗವನ್ನು ದಾಸೋಹಕ್ಕೆ ಬಳಸಬೇಕೆಂಬ ಶರಣರ ಚಿಂತನೆ, ಸಮಾಜದಲ್ಲಿ ಸಂಪತ್ತಿನ ನ್ಯಾಯಯುತ ಹಂಚಿಕೆ ಮಾಡುವ ನಮ್ಮ ಆಶಯಕ್ಕೆ ಆಧಾರವಾಗಿದೆ ಎಂದು ಸಿದ್ದರಾಮಯ್ಯ ತಮ್ಮ ಬಜೆಟ್ ಮಂಡನೆ ಆರಂಭದಲ್ಲಿ ಉಲ್ಲೇಖಿಸಿದರು.

ವರನಟ ಡಾ.ರಾಜ್‌ಕುಮಾರ್ ಅಭಿನಯದ ಬಂಗಾರ ಮನುಷ್ಯ ಚಿತ್ರದ ಹಾಡನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದಾರೆ. ಆಗದು ಎಂದು; ಕೈಲಾಗದು ಎಂದು, ಕೈಕಟ್ಟಿ ಕುಳಿತರೆ, ಸಾಗದು ಕೆಲಸವು ಮುಂದೆ, ಮನಸೊಂದಿದ್ದರೆ ಮಾರ್ಗವು ಉಂಟು, ಕೆಚ್ಚೆದೆ ಇರಬೇಕೆಂದು... ಈ ಹಾಡನ್ನು ಸಿದ್ದರಾಮಯ್ಯ ಉಲ್ಲೇಖಿಸಿದರು.

ಬಜೆಟ್‌ನಲ್ಲಿ ಬೆಂಗಳೂರು ಅಭಿವೃದ್ಧಿಗೆ ಭರ್ಜರಿ ಘೋಷಣೆ, ಮೆಟ್ರೋ, ಟನಲ್ ರೋಡ್‌, ಬಿಎಂಟಿಸಿಗೆ ಸಿಕ್ಕಿದ್ದೆಷ್ಟು?

ರಾಜ್‌ಕುಮಾರ್‌ ಅಭಿನಯದ ಹಾಗೂ ಆರ್.ಎನ್.ಜಯಗೋಪಾಲ್‌ ರಚಿಸಿದ ಬಂಗಾರದ ಮನುಷ್ಯ ಚಿತ್ರದ ಈ ಹಾಡಿನಂತೆ ದೇಶದ ಯಾವುದೇ ಸರ್ಕಾರ ಜಾರಿಗೊಳಿಸದ ಅತ್ಯಂತ ಬೃಹತ್‌ ಪ್ರಮಾಣದ ನೇರ ನೆರವು ನೀಡುವ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಶ್ರೇಯ ನಮ್ಮದಾಗಿದೆ. ನಮ್ಮ ಮಹತ್ವಾಕಾಂಕ್ಷೆಯ ಗ್ಯಾರಂಟಿಗಳು ಜನರ ಆಶೋತ್ತರಗಳನ್ನು ಆಧರಿಸಿವೆ ಎಂದು ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

click me!