
ನವದೆಹಲಿ(ಅ.06): ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯ ಮಹತ್ವದ ಸಭೆ ಸೋಮವಾರ ನಡೆಯಿತು. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯಗಳ ನಷ್ಟಪರಿಹಾರ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬರಲು ವಿಫಲವಾದವು. ಇದೇ ವೇಳೆ, ರಾಜ್ಯಗಳ ಜಿಎಸ್ಟಿ ಪರಿಹಾರವಾಗಿ 20 ಸಾವಿರ ಕೋಟಿ ರು.ಗಳನ್ನು ಸೋಮವಾರ ರಾತ್ರಿಯೇ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು, ಸಾಲದ ಮೂಲಕ ನಷ್ಟಪರಿಹಾರಕ್ಕೆ ಕೇಂದ್ರ ಸರ್ಕಾರ 2 ಆಯ್ಕೆ ನೀಡಿತ್ತು. ಆ ಪೈಕಿ 21 ರಾಜ್ಯಗಳು ಎರಡರ ಪೈಕಿ ಒಂದನ್ನು ಆಯ್ಕೆ ಮಾಡಿಕೊಂಡಿವೆ. ಆದರೆ ಕೆಲವು ರಾಜ್ಯಗಳು ಯಾವುದೇ ಆಯ್ಕೆಯನ್ನೂ ಉಪಯೋಗಿಸಿಲ್ಲ. ಹೀಗಾಗಿ ಮತ್ತಷ್ಟು ಚರ್ಚೆ ನಡೆಸಲು ನಿರ್ಧರಿಸಲಾಗಿದೆ.
ಅ.12ರಂದು ಮತ್ತೆ ಸಭೆ ಸೇರುತ್ತೇವೆ ಎಂದು ತಿಳಿಸಿದರು. 2022ರ ಜೂನ್ ಬಳಿಕವೂ ರಾಜ್ಯಗಳಿಗೆ ನಷ್ಟಪರಿಹಾರ ನೀಡಲು ಜಿಎಸ್ಟಿ ಸೆಸ್ ಸಂಗ್ರಹ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದರು. ಇಸ್ರೋ, ಆ್ಯಂಟ್ರಿಕ್ಸ್ ಕಂಪನಿಗಳ ಉಪಗ್ರಹ ಉಡಾವಣೆ ಸೇವೆಗೆ ಜಿಎಸ್ಟಿ ವಿನಾಯಿತಿ ನೀಡಲು ಸಭೆ ನಿರ್ಧರಿಸಿತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.