
ನವದೆಹಲಿ(ಅ.10): ಅಮೆರಿಕದೊಂದಿಗಿನ ವಾಣಿಜ್ಯ ಸಮರದಿಂದ ಚೀನಾ ತುಸು ಹೈರಾಣಾದಂತೆ ಕಂಡು ಬರುತ್ತಿದೆ. ಅಮೆರಿಕದ ಜೊತೆಗಿನ ಪ್ರತಿಷ್ಠೆಯ ದಿನ ನಿತ್ಯದ ವಾಣಿಜ್ಯ ಜಗಳದಿಂದಾಗಿ ಚೀನಾ ಬಳಲಿದೆ. ಇದೇ ಕಾರಣಕ್ಕೆ ಭಾರತದತ್ತ ಆಸೆಗಣ್ಣಿನಿಂದ ನೋಡುತ್ತಿರುವ ಚೀನಾ, ವಾಣಿಜ್ಯ ಒಪ್ಪಂದಗಳ ಮೂಲಕ ಸಂಬಂಧ ವೃದ್ಧಿಯ ಮಾತನಾಡುತ್ತಿದೆ.
ಅಮೆರಿಕ-ಚೀನಾ ವಾಣಿಜ್ಯ ಸಮರ ಜಾಗತಿಕ ಆರ್ಥಿಕತೆ ಮೇಲೂ ಪರಿಣಾಮ ಬೀರುತ್ತಿರುವುದು ಸುಳ್ಳಲ್ಲ. ಇದರಿಂದ ಭಾರತಕ್ಕೂ ಕೊಂಚ ಎಫೆಕ್ಟ್ ಆಗಿದ್ದು ಹೌದಾದರೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಫಲಪ್ರದ ಆರ್ಥಿಕ ನೀತಿಗಳಿಂದ ಈ ವಾಣಿಜ್ಯ ದಾಳಿಯನ್ನು ಬಹುಮಟ್ಟಿಗೆ ತಡೆಯುವಲ್ಲಿ ಭಾರತ ಯಶಸ್ವಿಯಾಗಿದೆ.
ಇನ್ನು ಆರಂಭದಲ್ಲಿ ಬಹಳ ಉತ್ಸಾಹದಿಂದಲೇ ವಾಣಿಜ್ಯ ಸಮರದಲ್ಲಿ ಪಾಲ್ಗೊಂಡ ಚೀನಾ, ಇದೀಗ ತುಸು ಬಳಲಿದೆ. ಅಮೆರಿದೊಂದಿಗಿನ ನಿತ್ಯದ ಈ ಕೋಳಿ ಜಗಳ ಚೀನಾಗೆ ಸಾಕಾಗಿ ಹೋಗಿದೆ. ಹೀಗಾಗಿ ಅಮೆರಿಕದ ಜೊತೆ ಬಡಿದಾಡುವುದಕ್ಕಿಂತ ಭಾರತದೊಂದಿಗೆ ವ್ಯಾಪಾರ ಸಂಬಂಧ ಗಟ್ಟಿಗೊಳಿಸುವುದೇ ಉತ್ತಮ ಎಂಬ ನಿಧಾರ್ಧಾರಕ್ಕೆ ಚೀನಾ ಬಂದಂತಿದೆ.
ಚೀನಾ ರಾಯಭಾರ ಕಚೇರಿ ಹೇಳಿದ್ದೇನು?:
ಇದಕ್ಕೆ ಪುಷ್ಠಿ ಎಂಬಂತೆ ಅಮೆರಿಕದ ಅನ್ಯಾಯದ ವಾಣಿಜ್ಯ ನೀತಿಗೆ ವಿರುದ್ಧವಾಗಿ ಭಾರತ ಮತ್ತು ಚೀನಾ ತನ್ನ ವ್ಯಾಪಾರ ಸಂಬಂಧವನ್ನು ಮತ್ತಷ್ಟು ಉತ್ತಮಗೊಳಿಸಬೇಕಿದೆ ಎಂದು ಚೀನಾದ ಭಾರತೀಯ ರಾಯಭಾರ ಕಚೇರಿ ಹೇಳಿದೆ. ನಾವು ವಾಣಿಜ್ಯ ಸಂಬಂಧ ಗಟ್ಟಿ ಮಾಡಿಕೊಂಡರೆ ಭವಿಷ್ಯವನ್ನು ನಿರ್ಧರಿಸುವ ಶಕ್ತಿಗಳಾಗಿ ಬೆಳೆಯಲು ಸಾಧ್ಯ ಎಂದು ಅದು ಅಭಿಪ್ರಾಯಪಟ್ಟಿದೆ.
ವಿಶ್ವದ ಎರಡು ಉದಯೋನ್ಮುಖ ಆರ್ಥಿಕತೆ ಹೊಂದಿರುವ ರಾಷ್ಟ್ರಗಳು ವಾಣಿಜ್ಯ ಒಪ್ಪಂದಗಳ ಮೂಲಕ ಮತ್ತಷ್ಟು ಹತ್ತಿರವಾಗಬಹುದು ಎಂದು ರಾಯಭಾರ ಕಚೇರಿ ಹೇಳಿದೆ. ಈ ಮೂಲಕ ವಾಣಿಜ್ಯ ಸಮರದ ಮೂಲಕ ವಿಶ್ವವವನ್ನು ಬೆದರಿಸುತ್ತಿರುವ ಅಮೆರಿಕವನ್ನು ನಿಯಂತ್ರಿಸಲೂಬಹುದು ಎಂಬುದು ಚೀನಾ ಲೆಕ್ಕಾಚಾರವಾಗಿದೆ.
ಇನ್ನು ಚೀನಾದ ಈ ಮನವಿಗೆ ಭಾರತ ಇನ್ನೂ ಸ್ಪಂದಿಸಬೇಕಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ತೈಲದರ ಏರಿಕೆ ಮುಂತಾದ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಭಾರತ ಏನು ನಿರ್ಧಾರ ಕೈಗೊಳ್ಳಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.