ಬೆಂಗಳೂರಿನ ಕಸ ನಮಗೆ ಬೇಡ: ಬೆಟ್ಟಹಲಸೂರಿನಲ್ಲಿ BSWML ತ್ಯಾಜ್ಯ ಘಟಕಕ್ಕೆ ಗ್ರಾಮಸ್ಥರ ಭಾರಿ ವಿರೋಧ!

Published : Jul 24, 2026, 06:06 PM IST
Bettahalasuru residents protest

ಸಾರಾಂಶ

ಮೂಲದಲ್ಲೇ ಕಸ ವಿಂಗಡಿಸಿ ಮಾದರಿಯಾಗಿರುವ ಬೆಟ್ಟಹಲಸೂರು ಗ್ರಾಮದಲ್ಲಿ, BSWML ಸ್ಥಾಪಿಸಲು ಉದ್ದೇಶಿಸಿರುವ ಬೃಹತ್ ಒಣತ್ಯಾಜ್ಯ ಮರುಸಂಸ್ಕರಣಾ ಘಟಕಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜು.24): ಮೂಲದಲ್ಲೇ ಕಸ ವಿಂಗಡಣೆ ಮಾಡಿ ಮಾದರಿ ಎನಿಸಿಕೊಂಡಿದ್ದ ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (BSWML) ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಒಣತ್ಯಾಜ್ಯ ಮರುಸಂಸ್ಕರಣಾ ಘಟಕದ (MRF) ಯೋಜನೆಗೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಲ್ಲಿನ ಕ್ವಾರಿಯಲ್ಲಿ ತ್ಯಾಜ್ಯ ಘಟಕ ಸ್ಥಾಪಿಸುವ ಬದಲು, ಆ ಜಾಗವನ್ನು ಜಲಸಂಗ್ರಹಾಗಾರ ಮತ್ತು ಅಂತರ್ಜಲ ಮರುಪೂರಣ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

BSWML ಯೋಜನೆಯ ಪ್ರಕಾರ, ತರಹುಣಸೆಯಲ್ಲಿ ₹48 ಕೋಟಿ ವೆಚ್ಚದಲ್ಲಿ ಬೃಹತ್ ಶೆಡ್ ನಿರ್ಮಿಸಿ, ಇಡೀ ಬೆಂಗಳೂರು ನಗರದಿಂದ ಸಾಗಿಸಲಾಗುವ ಒಣತ್ಯಾಜ್ಯವನ್ನು ಪ್ರತ್ಯೇಕಿಸಲು ನಿರ್ಧರಿಸಲಾಗಿದೆ. ಈ ಘಟಕದಲ್ಲಿ ಪ್ರತಿದಿನ ಸುಮಾರು 826 ಟನ್ ಒಣತ್ಯಾಜ್ಯವನ್ನು ಸಂಸ್ಕರಿಸುವ ಸಾಮರ್ಥ್ಯವಿರಲಿದೆ.

ಸುಮಾರು 30 ಕಿಲೋಮೀಟರ್ ದೂರದಿಂದ ಬೆಂಗಳೂರಿನ ಕಸವನ್ನು ತಂದು ಬೆಟ್ಟಹಲಸೂರಿನಲ್ಲಿ ಸುರಿಯುವುದರಿಂದ, ಕಳೆದ ಒಂದು ದಶಕದಿಂದ ತಾವು ಕಷ್ಟಪಟ್ಟು ರೂಪಿಸಿಕೊಂಡು ಬಂದಿರುವ ತ್ಯಾಜ್ಯ ನಿರ್ವಹಣಾ ಮಾದರಿ ಹಾಳಾಗಲಿದೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಕಸವನ್ನು ತಮ್ಮ ಗ್ರಾಮಕ್ಕೆ ಏಕೆ ತರಬೇಕು ಎಂದು ಪ್ರಶ್ನಿಸಿರುವ ಅವರು, ಇದರಿಂದ ಸ್ಥಳೀಯ ಅಂತರ್ಜಲ, ಸಾರ್ವಜನಿಕ ಆರೋಗ್ಯ ಮತ್ತು ಕೃಷಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಆತಂಕ ಹೊರಹಾಕಿದ್ದಾರೆ.

"ನಾವು ಕಳೆದ 10 ವರ್ಷಗಳಿಂದ 'ಇಕೋ ಗ್ರಾಂ' (EcoGram) ಯೋಜನೆಯನ್ನು ಜಾರಿಗೆ ತಂದಿದ್ದು, ಶೇ. 96 ಕ್ಕಿಂತ ಹೆಚ್ಚು ಕಸವನ್ನು ಮೂಲದಲ್ಲೇ ವಿಂಗಡಿಸುತ್ತಿದ್ದೇವೆ. ಈವರೆಗೆ 1,500 ಟನ್‌ಗೂ ಹೆಚ್ಚು ಒಣತ್ಯಾಜ್ಯವನ್ನು ಮರುಸಂಸ್ಕರಣೆ ಮಾಡಿದ್ದೇವೆ. ನಮ್ಮ ಈ ಸಾಧನೆಗೆ 'ಗಾಂಧಿ ಗ್ರಾಮೀಣ ಪುರಸ್ಕಾರ' ಲಭಿಸಿದ್ದು, ದೇಶಾದ್ಯಂತ 180ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಮತ್ತು ಸಂಸ್ಥೆಗಳು ನಮ್ಮ ಮಾದರಿಯನ್ನು ಅಧ್ಯಯನ ಮಾಡಿವೆ," ಎಂದು ಸ್ಥಳೀಯ ನಿವಾಸಿ ಪವಿತ್ರಾ ಟಿ.ಆರ್. ತಿಳಿಸಿದ್ದಾರೆ.

ಬೆಟ್ಟಹಲಸೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎನ್. ಶ್ರೀನಿವಾಸ್ ಮಾತನಾಡಿ, ಬೆಂಗಳೂರು ನಗರದ ಬೆಳವಣಿಗೆ ನಮ್ಮ ಪಂಚಾಯತಿ ಗಡಿಯವರೆಗೆ ತಲುಪಿದ್ದರೂ, ಇಲ್ಲಿನ ಜನ ಇಂದಿಗೂ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. 30 ಕಿ.ಮೀ ದೂರದಿಂದ ಕಸ ತರುವುದರಿಂದ ಇಲ್ಲಿನ ಜನರ ಜೀವನೋಪಾಯವೇ ನಾಶವಾಗಲಿದೆ," ಎಂದು ಬೇಸರ ವ್ಯಕ್ತಪಡಿಸಿದರು. ಜೊತೆಗೆ, BSWML ನಗರದ ಒಳಗಡೆಯೇ ವಿಕೇಂದ್ರೀಕೃತ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಿ ಎಂದು ಸಲಹೆ ನೀಡಿದರು.

BSWML ನೀಡಿದ ಸ್ಪಷ್ಟನೆ ಏನು?

ಸ್ಥಳೀಯರ ಆತಂಕಕ್ಕೆ ಸ್ಪಂದಿಸಿರುವ BSWML ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಕರೀಗೌಡ, "ಉದ್ದೇಶಿತ ಘಟಕದಲ್ಲಿ ಕೇವಲ ಒಣತ್ಯಾಜ್ಯವನ್ನು ಮಾತ್ರ ಸಂಸ್ಕರಿಸಲಾಗುತ್ತದೆಯೇ ಹೊರತು ಹಸಿತ್ಯಾಜ್ಯವನ್ನಲ್ಲ. ಇದರಿಂದ ಗ್ರಾಮಕ್ಕೆ ಯಾವುದೇ ಅಪಾಯವಿಲ್ಲ," ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಇಂತಹ ಬೃಹತ್ ಘಟಕ ಸ್ಥಾಪಿಸಲು ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಸೂಕ್ತವಾದ ಜಾಗ ಲಭ್ಯವಿಲ್ಲದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಮ ಪಂಚಾಯತಿ ನಿರ್ಣಯ ಹಾಗೂ ಪರ್ಯಾಯ ಪ್ರಸ್ತಾಪ

ಈ ನಡುವೆ, ಬೆಟ್ಟಹಲಸೂರು ಗ್ರಾಮ ಪಂಚಾಯತಿಯು ಈ ಯೋಜನೆಯನ್ನು ವಿರೋಧಿಸಿ ಸರ್ವಾನುಮತದಿಂದ ಅಂಗೀಕರಿಸಿದ್ದು, BSWML ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ಮನವಿ ಸಲ್ಲಿಸಿದೆ. ಯೋಜನೆಯ ಶಾಸನಬದ್ಧ ಅನುಮೋದನೆಗಳು ಮತ್ತು ಪರಿಸರ ಅನುಮತಿಗಳ ವಿವರಗಳನ್ನು ಕೋರಿ ಶೋಕಾಸ್ ನೋಟಿಸ್ ಕೂಡ ಜಾರಿ ಮಾಡಿದೆ.

ತ್ಯಾಜ್ಯ ಘಟಕದ ಬದಲಿಗೆ, ಈ ಕಲ್ಲಿನ ಕ್ವಾರಿಯನ್ನು ಜಲಸಂಗ್ರಹಾಗಾರ ಮತ್ತು ಅಂತರ್ಜಲ ಮರುಪೂರಣ ಕೇಂದ್ರವನ್ನಾಗಿ ಪರಿವರ್ತಿಸಬೇಕು ಎಂದು ಗ್ರಾಮಸ್ಥರು ಪ್ರಸ್ತಾಪಿಸಿದ್ದಾರೆ. ಇಂತಹ ಯೋಜನೆಯಿಂದ ವೇಗವಾಗಿ ನಗರೀಕರಣಗೊಳ್ಳುತ್ತಿರುವ ಉತ್ತರ ಬೆಂಗಳೂರು ಭಾಗದಲ್ಲಿ ನೀರಿನ ಭದ್ರತೆ ಹೆಚ್ಚಲಿದ್ದು, ಅಂತರ್ಜಲ ಮಟ್ಟವೂ ಸುಧಾರಿಸಲಿದೆ ಎಂಬುದು ಗ್ರಾಮಸ್ಥರ ವಾದವಾಗಿದೆ.

PREV
Read more Articles on
click me!

Recommended Stories

ಬಡವರ ಮಕ್ಕಳು ವಿಮಾನ ಹಾರಿಸೋದಕ್ಕೆ ಬೆಸ್ಟ್ ಚಾನ್ಸ್; ಮೈಸೂರು, ಹಾಸನದಲ್ಲೂ ಸ್ಯಾಟಲೈಟ್ ಫ್ಲೈಟ್ ಟ್ರೈನಿಂಗ್ ಸೆಂಟರ್
ಕೊಡಗು ಭಾರೀ ಮಳೆ ಕೈಹಿಡಿದ ಕಾವೇರಿ: ಹಾರಂಗಿ ಜಲಾಶಯ ಬಹುತೇಕ ಭರ್ತಿ, ನಾಳೆ ನದಿಗೆ ನೀರು ಬಿಡುಗಡೆ!