
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ (Renukaswamy Case) ಜೈಲು ಸೇರಿರುವ ನಟ ದರ್ಶನ್ ಭೇಟಿಗೆ ಅವರ ಕುಟುಂಬ ಆಗಮಿಸಿತ್ತು.
ಇಂದು ಬೆಳಿಗ್ಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ (Vijayalakshmi) ಮತ್ತು ತಾಯಿ ಮೀನಾ (Meena) ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದರು. ಮಗನ ಆರೋಗ್ಯ ಮತ್ತು ಜೈಲಿನ ಸ್ಥಿತಿಗತಿ ವಿಚಾರಿಸಲು ತಾಯಿ ಮೀನಾ ಅವರು ಕಾರಿನಲ್ಲಿ ಆಗಮಿಸಿದರೆ ಪತ್ನಿ ವಿಜಯಲಕ್ಷ್ಮೀ ಅವರು ಚೆಕ್ ಪೋಸ್ಟ್ನಿಂದ ನಡೆದುಕೊಂಡೇ ಜೈಲು ಆವರಣದತ್ತ ತೆರಳಿದರು. ಇದೇ ಸಮಯದಲ್ಲಿ ಸ್ಯಾಂಡಲ್ವುಡ್ ನಟ ಧನ್ವೀರ್ (Dhanveer) ಕೂಡ ಜೈಲಿಗೆ ಆಗಮಿಸಿದ್ದು ಹಲವು ಚರ್ಚೆಗಳಿಗೆ ಕಾರಣವಾಗಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ಗೆ ಸತತ ಹಿನ್ನಡೆ ಆಗ್ತಿದೆ. ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ಬದುಕುತ್ತಿರುವ ದರ್ಶನ್, ಕಾನೂನು ಹೋರಾಟದಲ್ಲಿ ಮತ್ತೆ ಮತ್ತೆ ಫೇಲ್ ಆಗುತ್ತಿದ್ದಾರೆ. ಇದರ ಮಧ್ಯೆ ಅವರ ಗ್ಯಾಂಗ್ನಲ್ಲಿರುವ ಕೆಲವು ಸದಸ್ಯರು ದರ್ಶನ್ ವಿರುದ್ಧವೇ ಸಾಕ್ಷ್ಯ ಹೇಳಲು ತಿರುಗಿಬಿದ್ದಿದ್ದಾರೆ. ಇದು ದರ್ಶನ್ಗೆ ದೊಡ್ಡ ಆಘಾತ ತಂದಿದೆ.
ಜೊತೆಗೆ ದರ್ಶನ್ ಅವರು ಜೈಲಿನಲ್ಲಿ ಕೆಲವು ವ್ಯವಸ್ಥೆಗಳನ್ನ ಕೇಳಿದ್ದರು. ಜೈಲಿನ ಕಠಿಣ ನಿಯಮಗಳ ಪ್ರಕಾರ ಅದೂ ಕೂಡ ಅವರಿಗೆ ಸಿಕ್ಕಿಲ್ಲ. ಇದರ ಮಧ್ಯೆ ಸೊಳ್ಳೆ ಕಾಟದಿಂದ ನಿದ್ದೆ ಕೂಡ ಬರುತ್ತಿಲ್ಲ. ಇದರಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂಬ ವರದಿಗಳಿವೆ. ಇದೀಗ ಕುಟುಂಬಸ್ಥರ ಭೇಟಿ ಹಿನ್ನೆಲೆಯಲ್ಲಿ ದರ್ಶನ್ಗೆ ಕೊಂಚ ಸಮಾಧಾನ ತಂದಿದೆ.