ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು 3 ವರ್ಷದಲ್ಲಿ 5500 ಕೋಟಿ ಖರ್ಚು - ತೇಜಸ್ವಿ ಸೂರ್ಯ ಬಿಚ್ಚಿಟ್ರು ಸತ್ಯ

Published : Sep 05, 2026, 05:34 PM IST
mp tejaswi surya and minister krishan byregowda

ಸಾರಾಂಶ

ಬೆಂಗಳೂರು ಅಭಿವೃದ್ಧಿ ಸಭೆಯಲ್ಲಿ, ಸಂಸದ ತೇಜಸ್ವಿ ಸೂರ್ಯ ಕಳೆದ 3 ವರ್ಷಗಳಲ್ಲಿ ರಸ್ತೆ ಗುಂಡಿ ಮುಚ್ಚಲು ಖರ್ಚಾದ 5,500 ಕೋಟಿ ರೂ.ಗಳ ಬಗ್ಗೆ ಶ್ವೇತಪತ್ರಕ್ಕೆ ಆಗ್ರಹಿಸಿದ್ದಾರೆ. ದುಬಾರಿ ದರ ಹಾಗೂ ಪದೇ ಪದೇ ತಾಂತ್ರಿಕ ದೋಷಗಳಿಂದ ಸ್ಥಗಿತಗೊಳ್ಳುತ್ತಿರುವ 'ನಮ್ಮ ಮೆಟ್ರೋ' ವ್ಯವಸ್ಥೆಯನ್ನೂ ಅವರು ತೀವ್ರವಾಗಿ ಟೀಕಿಸಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ಹಾಗೂ ಮೂಲಸೌಕರ್ಯಗಳ ಕುರಿತಾದ ಚರ್ಚೆ ಈಗ ಮತ್ತೊಮ್ಮೆ ತಾರಕಕ್ಕೇರಿದೆ. ನೂತನ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಾ ಬೈರೇಗೌಡ ಅವರು ಇತ್ತೀಚೆಗೆ ಬೆಂಗಳೂರಿನ ಎಲ್ಲಾ ಸಂಸದರು ಹಾಗೂ ಶಾಸಕರ ಪ್ರಮುಖ ಸಭೆಯೊಂದನ್ನು ಕರೆದಿದ್ದರು. ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿ ಹಾಗೂ ಪ್ರಮುಖ ನಾಗರಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಈ ಸಭೆ ಆಯೋಜಿಸಲಾಗಿತ್ತು.

ಈ ಮಹತ್ವದ ಸಭೆಯಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ದಿನೇಶ್ ಗುಂಡೂರಾವ್, ಗೋಪಾಲಯ್ಯ, ಎಸ್.ಆರ್. ವಿಶ್ವನಾಥ್, ಬೈರತಿ ಬಸವರಾಜ್, ಮುನಿರತ್ನ, ಎಂ. ಕೃಷ್ಣಪ್ಪ, ಮಂಜುಳಾ ಲಿಂಬಾವಳಿ, ಗೋವಿಂದರಾಜ್ ಹಾಗೂ ನಾಗರಾಜ್ ಯಾದವ್ ಸೇರಿದಂತೆ ಹಲವು ಪ್ರಮುಖ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಯ ನಂತರ ಸಂಸದ ತೇಜಸ್ವಿ ಸೂರ್ಯ ಮಾಧ್ಯಮಗಳ ಮುಂದೆ ಬಿಚ್ಚಿಟ್ಟ ಅಂಕಿ-ಅಂಶಗಳು ಈಗ ಇಡೀ ಬೆಂಗಳೂರಿನ ತೆರಿಗೆದಾರರನ್ನು ಬೆಚ್ಚಿಬೀಳಿಸಿದೆ!

ಶ್ವೇತಪತ್ರಕ್ಕೆ ಬೇಡಿಕೆ!

ಬೆಂಗಳೂರಿನ ರಸ್ತೆಗಳ ದುಸ್ಥಿತಿಯ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದರು. ಕಳೆದ ಕೇವಲ ಮೂರು ವರ್ಷಗಳಲ್ಲಿ ಬೆಂಗಳೂರು ನಗರವೊಂದರಲ್ಲೇ ರಸ್ತೆ ಗುಂಡಿ ಮುಚ್ಚಲು ಮತ್ತು ರಸ್ತೆ ದುರಸ್ತಿಗಾಗಿ ಬರೋಬ್ಬರಿ 5,500 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ]. ಇಷ್ಟೊಂದು ಬೃಹತ್ ಮೊತ್ತದ ಹಣ ತೆರಿಗೆದಾರರ ಜೇಬಿನಿಂದ ಹೋದರೂ ಬೆಂಗಳೂರಿನ ರಸ್ತೆಗಳ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ ಎಂದು ಅವರು ಆರೋಪಿಸಿದರು. ಅಷ್ಟೇ ಅಲ್ಲದೆ ಈಗ ಸರ್ಕಾರ ಮತ್ತೆ ರಸ್ತೆ ಕಾಮಗಾರಿಗಳ ಹೆಸರಿನಲ್ಲಿ ಸುಮಾರು 8,000 ಕೋಟಿ ರೂಪಾಯಿ ಖರ್ಚು ಮಾಡಲು ಮುಂದಾಗಿದೆ. ಕಳೆದ ಮೂರು ವರ್ಷಗಳಲ್ಲಿ ಖರ್ಚಾದ 5,500 ಕೋಟಿ ರೂಪಾಯಿಗಳ ಲೆಕ್ಕ ಎಲ್ಲಿದೆ? ಆ ಹಣ ಯಾವ ರಸ್ತೆಗೆ, ಯಾರಿಗೆ ಹೋಯಿತು ಎಂಬ ಸರಿಯಾದ ಮಾಹಿತಿಯೇ ಇಲ್ಲ. ಆದ್ದರಿಂದ ಸರ್ಕಾರ ತಕ್ಷಣವೇ ಈ ವೆಚ್ಚದ ಬಗ್ಗೆ ಶ್ವೇತಪತ್ರ (White Paper) ಹೊರಡಿಸಬೇಕು ಎಂದು ಸಭೆಯಲ್ಲಿ ಸಚಿವರಿಗೆ ಲಿಖಿತ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

ರಸ್ತೆಗಳ ಜೊತೆಗೆ ಬೆಂಗಳೂರಿನ ಜೀವನಾಡಿಯಾಗಿರುವ 'ನಮ್ಮ ಮೆಟ್ರೋ'ದ ಅವ್ಯವಸ್ಥೆಯ ವಿರುದ್ಧವೂ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಪ್ರತಿದಿನ 12 ಲಕ್ಷಕ್ಕೂ ಅಧಿಕ ಮಂದಿ ಮೆಟ್ರೋ ಬಳಸುತ್ತಾರೆ. ಆದರೆ ದೇಶದ ಇತರ ಮೆಟ್ರೋ ನಗರಗಳಿಗೆ ಹೋಲಿಸಿದರೆ ನಮ್ಮ ಬೆಂಗಳೂರು ಮೆಟ್ರೋ ಪ್ರಯಾಣ ದರ ಅತ್ಯಂತ ದುಬಾರಿಯಾಗಿದೆ. ಇಷ್ಟು ಗರಿಷ್ಠ ದರ ವಸೂಲಿ ಮಾಡಿದರೂ ಕಳೆದ ಕೇವಲ 12 ತಿಂಗಳುಗಳಲ್ಲಿ ವಿವಿಧ ತಾಂತ್ರಿಕ ದೋಷಗಳಿಂದಾಗಿ ನಮ್ಮ ಮೆಟ್ರೋ ಸೇವೆ ಬರೋಬ್ಬರಿ 21 ಬಾರಿ ಸ್ಥಗಿತಗೊಂಡಿದೆ. ಹೈಯೆಸ್ಟ್ ರೇಟ್ ಪಡೆದರೂ ನಮ್ಮ ಮೆಟ್ರೋ ನೀಡುತ್ತಿರುವುದು ಡಕೋಟಾ ಎಕ್ಸ್‌ಪ್ರೆಸ್ ಸರ್ವೀಸ್ ಎಂದು ಸಂಸದರು ಲೇವಡಿ ಮಾಡಿದರು. ಸದ್ಯ ಪ್ರಗತಿಯಲ್ಲಿರುವ ಮೆಟ್ರೋ ಆರೆಂಜ್ ಲೈನ್ ಹಾಗೂ ರೆಡ್ ಲೈನ್ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿದರೆ ಲಕ್ಷಾಂತರ ಜನಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದು ಅವರು ಸಭೆಯಲ್ಲಿ ಒತ್ತಾಯಿಸಿದರು.

ವರ್ಷಕ್ಕೊಮ್ಮೆ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳು ಪ್ರಕಟವಾಗುತ್ತವೆ. ಕಾಗದದ ಮೇಲೆ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳೂ ನಡೆಯುತ್ತವೆ. ಆದರೆ ಮಳೆ ಬಂದಾಗ ಬೆಂಗಳೂರಿನ ರಸ್ತೆಗಳು ಕೆರೆಯಂತಾಗುವುದು ಹಾಗೂ ಗುಂಡಿಗಳಿಂದಾಗಿ ಸವಾರರು ಪ್ರಾಣ ಕಳೆದುಕೊಳ್ಳುವುದು ಮಾತ್ರ ತಪ್ಪಿಲ್ಲ. ಸಂಸದ ತೇಜಸ್ವಿ ಸೂರ್ಯ ಬಿಚ್ಚಿಟ್ಟಿರುವ ಈ 5,500 ಕೋಟಿ ರೂಪಾಯಿಗಳ ವೆಚ್ಚದ ಅಸಲಿ ಸತ್ಯದ ಬೆನ್ನಲ್ಲೇ ಈಗ ಬೆಂಗಳೂರಿಗರು ಪ್ರಶ್ನೆ ಎತ್ತುತ್ತಿದ್ದಾರೆ. ನಿಮ್ಮ ಏರಿಯಾದಲ್ಲಿ ರಸ್ತೆ ಗುಂಡಿಗಳು ಮುಚ್ಚಲ್ಪಟ್ಟಿವೆಯೇ? ಇಷ್ಟೊಂದು ಕೋಟಿ ಹಣ ಖರ್ಚಾದರೂ ನಿಮ್ಮ ರಸ್ತೆಗಳು ಸುಧಾರಿಸಿದ್ದಾವೆಯೇ? ಎನ್ನುವುದನ್ನು ನೀವೇ ಯೋಚಿಸಬೇಕಿದೆ. ಸಚಿವರು ಈ ಸಭೆಯ ಬಳಿಕ ರಸ್ತೆ ಸುಧಾರಣೆಗೆ ನೀಡಿರುವ ಹೊಸ ಡೆಡ್‌ಲೈನ್‌ಗಳನ್ನಾದರೂ ಕಾಪಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

PREV
Read more Articles on
click me!

Recommended Stories

Gowrishankar SRG: ಕನ್ನಡದ ಅತ್ಯುತ್ತಮ ನಟ ಪ್ರಶಸ್ತಿ, 'ಕೆರೆಬೇಟೆ' ಸಿನಿಮಾ ನಾಯಕನಿಗೆ ಫಿಲ್ಮ್‌ಫೇರ್
ಬೆಂಗಳೂರಲ್ಲಿ ಭಯಾನಕ ಹಾರರ್ : ಮಧ್ಯರಸ್ತೆಯಲ್ಲಿ ಗಂಡನ ಎದುರಲ್ಲೇ ನಡೀತು ಲೈಂ*ಕ ದೌರ್ಜನ್ಯ