
ಬೆಂಗಳೂರು (ಜು.15) ಬೆಂಗಳೂರಿನಲ್ಲಿ ಜೀವನ ಸಾಗಿಸುವುದು ದುಸ್ತರವಾಗಿದೆ. ಅದರಲ್ಲೂ ಆಟೋ, ಕ್ಯಾಬ್ ಪ್ರಯಾಣ ಇದೀಗ ಬಲು ದುಬಾರಿಯಾಗಿದೆ. ಮತ್ತೊಂದೆಡೆ ಬೈಕ್ ಟ್ಯಾಕ್ಸಿ ನಿಷೇಧಗೊಂಡಿದೆ. ಹೀಗಾಗಿ ಆಟೋ ಪ್ರಯಾಣ ದರಗಳು ಏರಿಕೆಯಾಗಿದೆ. ಇದರ ನಡುವೆ ಬೆಂಗಳೂರು ಮೂಲದ ಎಥರ್ ಎನರ್ಜಿ ಸ್ಕೂಟರ್ ಸ್ಟಾರ್ಟ್ ಅಪ್ ಕಂಪನಿ ಸಹ ಸಂಸ್ಥಾಪಕ ಸ್ವಪ್ನಿಲ್ ಜೈನ್ ದುಬಾರಿ ಪ್ರಯಾಣ ದರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಭಾರಿ ಚರ್ಚೆಯಾಗುತ್ತಿದೆ. ದುಬಾರಿ ಬೆಲೆಗೆ ಪ್ರತಿಭಟನಾ ಸೂಚಕವಾಗಿ 175 ರೂಪಾಯಿ ಆಟೋ ಬುಕಿಂಗ್ ಕ್ಯಾನ್ಸಲ್ ಮಾಡಿ ಕೇವಲ 12 ರೂಪಾಯಿ ನೀಡಿ ಬಿಎಂಟಿಸಿಯಲ್ಲಿ ಪ್ರಯಾಣ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
4 ಕಿಲೋಮೀಟರ್ ದೂರಕ್ಕೆ 175 ರೂಪಾಯಿ
ಸ್ವಪ್ನಿಲ್ ಜೈನ್ ತಮ್ಮ ಕಚೇರಿಗೆ ತೆರಳಲು ಆಟೋ ಅಥವಾ ಕ್ಯಾಬ್ ಬುಕ್ ಮಾಡಲು ಮುಂದಾಗಿದ್ದಾರೆ. ಆದರೆ ಎಲ್ಲವೂ ಬಲು ದುಬಾರಿ. ಕೇವಲ 4 ಕಿಲೋಮೀಟರ್ ದೂರದಲ್ಲಿರುವ ಕಚೇರಿಗೆ ತೆರಳಲು ಆಟೋದಲ್ಲಿ 175 ರೂಪಾಯಿ. ಇನ್ನು ಕ್ಯಾಬ್ ಬೆಲೆ ಮತ್ತಷ್ಟು ದುಬಾರಿಯಾಗಿದೆ.ಈ ದುಬಾರಿ ಪ್ರಯಾಣ ದರದಿಂದ ಸ್ವಿಪ್ನಿಲ್ ಜೈನ್ ಆಕ್ರೋಶಗೊಂಡಿದ್ದಾರೆ. ಹೀಗಾಗಿ ಆಟೋ ಬುಕ್ ಮಾಡದೇ ಬಿಎಂಎಟಿಸಿ ಸಾರಿಗೆ ಬಸ್ನಲ್ಲಿ ಪ್ರಯಾಣಿಸಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.
ಬಿಎಂಟಿಸಿ ಪ್ರಯಾಣ ಆರಾಮದಾಯಕ
ಕೆಲ ಕಾರಣಗಳಿಂದ ನನ್ನ ಎರಡೂ ವಾಹನ ಕಚೇರಿಯಲ್ಲಿ ಪಾರ್ಕ್ ಮಾಡಲಾಗಿತ್ತು. ಹೀಗಾಗಿ ನನಗೆ ಕಚೇರಿಗೆ ತೆರಳಲು ನನ್ನ ಬಳಿ ಯಾವುದೇ ವಾಹನ ಇರಲಿಲ್ಲ. ಹೀಗಾಗಿ ಕೇವಲ 4 ಕಿಲೋಮೀಟರ್ ದೂರದಲ್ಲಿರುವ ಕಚೇರಿಗೆ ತೆರಳಲು ಆಟೋ ಸೂಕ್ತ ಎಂದು ಬುಕಿಂಗ್ ಮಾಡಲು ಮುಂದಾದೆ. ಆದರೆ ಪ್ರಯಾಣ ದರ ನೋಡಿ ದಂಗಾದೆ. ಕಾರಣ 4 ಕಿಲೋಮೀಟರ್ ದೂರದ ಪ್ರಯಾಣಕ್ಕೆ ಆಟೋದಲ್ಲಿ 175 ರೂಪಾಯಿ ನಿಗದಿ ಮಡಲಾಗಿತ್ತು. ಹೀಗಾಗಿ ಆಟೋ ಬುಕ್ ಮಾಡದೇ ಬಿಎಂಟಿಸಿ ಬಸ್ನಲ್ಲಿ 12 ರೂಪಾಯಿ ಕೊಟ್ಟು ಕಚೇರಿಗೆ ಪ್ರಯಾಣ ಬೆಳೆಸಿದೆ. ಇದು ದುಬಾರಿ ಆಟೋ ಪ್ರಯಾಣ ದರಕ್ಕೆ ನನ್ನ ಪ್ರತಿಭಟನೆ ಎಂದು ಸ್ವಪ್ನಿಲ್ ಜೈನ್ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಬಿಎಂಟಿಸಿ ಸೇವೆ ಕುರಿತು ಸ್ವಪ್ನಿಲ್ ಜೈನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಬಿಎಂಟಿಸಿಯಲ್ಲಿ ಚಿಲ್ಲರೆಗಾಗಿ ಜಗಳ ಮಾಡಬೇಕಿಲ್ಲ. ಕಾರಣ ಯುಪಿಐ ಮೂಲಕ ಟಿಕೆಟ್ ದರ ಪಾವತಿ ಮಾಡಲು ಸಾಧ್ಯವಿದೆ. ಇದೇ ವೇಳೆ ಸ್ವಿಚ್ ಮೊಬಿಲಿಟಿ ಎಲೆಕ್ಟ್ರಿಕ್ ಬಸ್ ಪ್ರಯಾಣ ಆರಾಮದಾಯಕವಾಗಿದೆ. ಕೆಲ ತಾಂತ್ರಿಕ ಸಮಸ್ಯೆಗಳು, ಲೋಡ್ ಸೇರಿದಂತೆ ಇತರ ಸಮಸ್ಯಗಳಿದ್ದರೂ ಪ್ರಯಾಣ ಆರಾಮದಾಯಕ ಎಂದು ಸ್ವಪ್ನಿಲ್ ಜೈನ್ ಹೇಳಿದ್ದಾರೆ.
ಸ್ವಪ್ನಿಲ್ ಮಾತಿಗೆ ಧನಿಗೂಡಿಸಿದ ಬೆಂಗಳೂರಿಗರು
ಹಲವರು ಸ್ವಪ್ನಿಲ್ ಮಾತಿಗೆ ಧನಿಗೂಡಿಸಿದ್ದಾರೆ. ಕಳೆದ ಕೆಲ ವರ್ಷದಿಂದ ಆಟೋ ಬುಕಿಂಗ್ ಬಿಟ್ಟು ಬಿಎಂಟಿಸಿಯಲ್ಲಿ ಪ್ರಯಾಣ ಮಾಡುತ್ತಿರುವುದಾಗಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಬುಕಿಂಗ್ ಆಟೋ ಪ್ರಯಾಣವೇ ದುಬಾರಿ. ಇನ್ನು ಬುಕಿಂಗ್ ಮಾಡಿಲ್ಲ ಎಂದರೆ ಕೇಳುವುದೇ ಬೇಡ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ದುಬಾರಿ ಆಟೋಗೆ ಪರ್ಯಾಯ ಬೇಕಿದೆ ಎಂದು ಹಲವರು ಆಗ್ರಹಿಸಿದ್ದಾರೆ. ಇದೇ ವೇಳೆ ಕೆಲವರು ಬಿಎಂಟಿಸಿ ಕೆಲ ಮಾರ್ಗಗಳ ಪ್ರಯಾಣ ಮಾತ್ರ ಆರಾಮದಾಯಕ, ಆದರೆ ಎಲ್ಲಾ ಮಾರ್ಗ ಪ್ರಯಾಣ ದುಸ್ತರವಾಗಿದೆ. ಒಂದೆಡೆ ಕಿಕ್ಕಿರಿದು ತುಂಬಿದ ಪ್ರಯಾಣಿಕರು, ಬಸ್ಗಾಗಿ ಕಾಯಬೇಕು, ಸಾಹಸ ಮಾಡಿ ಹತ್ತಬೇಕು. ಇವೆಲ್ಲೂ ಸುಲಭದ ಮಾತಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.