
ಬೆಂಗಳೂರು (ಮಾ.30): ರಾಜಧಾನಿ ಬೆಂಗಳೂರಲ್ಲಿ ಜೀವಂತ ವ್ಯಕ್ತಿಗೇ ಮರಣ ಪ್ರಮಾಣ ಪತ್ರ ನೀಡಿದ ವಿಚಿತ್ರ ಪ್ರಕರಣಕ್ಕೆ ಈಗ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಬಿಬಿಎಂಪಿ (BBMP) ಅಧಿಕಾರಿಗಳ ಎಡವಟ್ಟು ಎಂದು ಭಾವಿಸಲಾಗಿದ್ದ ಈ ಘಟನೆಯ ಹಿಂದೆ ಸ್ವತಃ ಆ ವ್ಯಕ್ತಿಯ ಪತ್ನಿಯೇ ಮಾಡಿದ ನಂಬಲಾಗದ ವಂಚನೆಯ ಜಾಲ ಬಯಲಾಗಿದೆ. ಅಕೆ ತನ್ನ ಗಂಡನಿಗೆ ಮಾತ್ರವಲ್ಲ, ಬಿಪಿಎಲ್ ಕಾರ್ಡ್ನಿಂದ ಬರುವ ಲಾಭಕ್ಕಾಗಿ ಕಿದ್ವಾಯಿ ಆಸ್ಪತ್ರೆಯನ್ನೂ ವಂಚಿಸಿದ್ದಾಳೆ.
ಬೆಂಗಳೂರಿನ 39 ವರ್ಷದ ಮೆಹೆಬೂಬ್ ಬಾಷಾ ಎಂಬುವವರು ತಾವು ಬದುಕಿದ್ದರೂ ಬಿಬಿಎಂಪಿ ತಮಗೆ ಮರಣ ಪತ್ರ ನೀಡಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದರು. 2025ರ ಏಪ್ರಿಲ್ 23ರಂದು ಬಾಷಾ ಮೃತಪಟ್ಟಿದ್ದಾರೆ ಎಂದು ಚಿಕ್ಕಪೇಟೆಯ ಜನನ ಮತ್ತು ಮರಣ ನೋಂದಣಾಧಿಕಾರಿ ಪ್ರಮಾಣ ಪತ್ರ ನೀಡಿದ್ದರು. ಈ ಕಾರಣದಿಂದ ಬಾಷಾ ಅವರ ಬಿಪಿಎಲ್ (BPL) ಕಾರ್ಡ್ ರದ್ದಾಗಿತ್ತು. ಇದರಿಂದ ಆಘಾತಕ್ಕೊಳಗಾದ ಬಾಷಾ, ಮರಣ ಪತ್ರ ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
ಕೋರ್ಟ್ ನಿರ್ದೇಶನದಂತೆ ಬಿಬಿಎಂಪಿ ಸಿಬ್ಬಂದಿ ತನಿಖೆ ನಡೆಸಿದಾಗ ಬಾಷಾ ಪತ್ನಿ ಶಬಾನಾ ಮಾಡಿದ ಅಸಲಿ 'ಖತರ್ನಾಕ್' ಕೆಲಸ ಬೆಳಕಿಗೆ ಬಂದಿದೆ. ಶಬಾನಾ ತನ್ನ ಪತಿ ಮೆಹೆಬೂಬ್ ಬಾಷಾ ಹೆಸರಿನಲ್ಲಿದ್ದ ಬಿಪಿಎಲ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಬಳಸಿ ಕಿದ್ವಾಯಿ ಆಸ್ಪತ್ರೆಯಲ್ಲಿ ಬೇರೊಬ್ಬ ವ್ಯಕ್ತಿಗೆ (ಅನ್ಯ ವ್ಯಕ್ತಿ) ಚಿಕಿತ್ಸೆ ಕೊಡಿಸಿದ್ದರು. ಆಸ್ಪತ್ರೆಯ ಪ್ರತಿಯೊಂದು ಹಂತದ ತಪಾಸಣೆಯಲ್ಲೂ ಪತಿ ಬಾಷಾ ಅವರ ದಾಖಲೆಗಳನ್ನೇ ನೀಡಿ ನಂಬಿಸಿದ್ದರು. ಆದರೆ ಚಿಕಿತ್ಸೆ ಪಡೆಯುತ್ತಿದ್ದದ್ದು ಮಾತ್ರ ಬಾಷಾ ಅಲ್ಲ, ಬೇರೆ ವ್ಯಕ್ತಿ.
2025ರ ಏಪ್ರಿಲ್ 23ರಂದು ಆಸ್ಪತ್ರೆಯಲ್ಲಿದ್ದ ಆ ಅನ್ಯ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ದಾಖಲೆಗಳೆಲ್ಲವೂ ಬಾಷಾ ಹೆಸರಿನಲ್ಲಿದ್ದ ಕಾರಣ ಆಸ್ಪತ್ರೆ ಮತ್ತು ಬಿಬಿಎಂಪಿ ಸಹಜವಾಗಿಯೇ ಬಾಷಾ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ವಿತರಿಸಿದ್ದವು. ಮೃತಪಟ್ಟ ಅನ್ಯ ವ್ಯಕ್ತಿಯ ಮೃತದೇಹವನ್ನು ಸಹ ಶಬಾನಾ ಅವರೇ 'ತನ್ನ ಪತಿ' ಎಂದು ಸಹಿ ಹಾಕಿ ಆಸ್ಪತ್ರೆಯಿಂದ ಪಡೆದುಕೊಂಡಿದ್ದರು.
ದಾಖಲೆಗಳ ಆಧಾರದ ಮೇಲೆ ಮರಣ ಪತ್ರ ನೀಡಿದ್ದ ಬಿಬಿಎಂಪಿಗೆ ಈಗ ಅಸಲಿ ಸತ್ಯ ತಿಳಿದುಬಂದಿದೆ. ಪತಿ ಬದುಕಿದ್ದರೂ ಬೇರೊಬ್ಬ ವ್ಯಕ್ತಿಯ ಚಿಕಿತ್ಸೆಗಾಗಿ ಪತಿಯ ದಾಖಲೆಗಳನ್ನು ಬಳಸಿ ಮರಣ ಪತ್ರ ಬರುವಂತೆ ಮಾಡಿದ ಪತ್ನಿಯ ಕೃತ್ಯ ಈಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ.