
ವಿಜಯಪುರ: ಪಟ್ಟಣ ನಾಗರಿಕರ ಬೇಡಿಕೆ ಬಹುದಿನಗಳ ಬಳಿಕ ಪಟ್ಟಣದಿಂದ ದೇವನಹಳ್ಳಿ, ಯಲಹಂಕ ಮಾರ್ಗವಾಗಿ ಬೆಂಗಳೂರಿನ ಮೆಜೆಸ್ಟಿಕ್ಗೆ ಬಿಎಂಟಿಸಿ ವೇಗದೂತ ಬಸ್ಗಳ ಸಂಚಾರ ಪ್ರಾರಂಭಿಸಿದೆ.
ಪಟ್ಟಣದಿಂದ ಪ್ರತಿದಿನ ಬೆಳಗ್ಗೆ ೭ರಿಂದ ೧೦ರೊಳಗೆ ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧೆಡೆಗೆ ಪ್ರಯಾಣಿಸುವ ಖಾಸಗಿ, ಸರ್ಕಾರಿ ನೌಕರರಿಂದ ಬಸ್ಸುಗಳು ಕಿಕ್ಕಿರಿದು ತುಂಬಿರುತ್ತಿದ್ದವು. ಇದರಿಂದಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಬಸ್ ಹತ್ತಲು ಸಾಧ್ಯವಾಗದೆ ತೀವ್ರ ಪರದಾಡುವಂತಾಗಿತ್ತು. ಈ ಸಾರ್ವಜನಿಕ ಸಮಸ್ಯೆ ಕುರಿತು ಪ್ರಮುಖ ಪತ್ರಿಕೆಗಳಲ್ಲಿ ಸರಣಿ ವರದಿಗಳನ್ನು ಪ್ರಕಟಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.
ಪ್ರಸ್ತುತ ಆರಂಭಿಸಿರುವ ಎಕ್ಸ್ಪ್ರೆಸ್ ಬಸ್ಸುಗಳಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಇದರೊಂದಿಗೆ, ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಕಾರ್ಯಾಚರಣೆ ನಡೆಸುತ್ತಿರುವ ಮಾದರಿಯಲ್ಲೇ ಇಲ್ಲೂ ಸಹ ವಾಯುವಜ್ರ ಬಸ್ಸುಗಳನ್ನು ಬಿಡಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.
ಸದ್ಯ ಬೆಂಗಳೂರು ಮೆಜೆಸ್ಟಿಕ್ನಿಂದ ನಂದಿ ಕ್ರಾಸ್ವರೆಗೆ ಸಂಚರಿಸುವ ಬಿಎಂಟಿಸಿ ಬಸ್ಸುಗಳನ್ನು ಚಿಕ್ಕಬಳ್ಳಾಪುರ ರಸ್ತೆ ಮೂಲಕ ವಿಜಯಪುರಕ್ಕೆ ವಿಸ್ತರಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಹೀಗೆ ಮಾಡಿದರೆ ದೇವನಹಳ್ಳಿ ಮತ್ತು ವಿಜಯಪುರದಿಂದ ನಾಗಾರ್ಜುನ ಕಾಲೇಜು ಹಾಗೂ ಬಿಜಿಎಸ್ ಕಾಲೇಜಿಗೆ ತೆರಳುವ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ವಿಜಯಪುರದಿಂದ ಮುದ್ದೇನಹಳ್ಳಿ, ನಾರಾಯಣಪುರ, ಬಿಜ್ಜವಾರ, ಹೊಲೆರಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಉತ್ತಮ ಸಾರಿಗೆ ಸಂಪರ್ಕ ಸಿಗುತ್ತದೆ.
ಹೊಸ ಬಸ್ಸುಗಳ ಚಾಲನೆ ಸಂದರ್ಭದಲ್ಲಿ ಬಿಎಂಟಿಸಿ ಸಂಚಾರ ನಿಯಂತ್ರಕರಾದ ರಂಗಪ್ಪ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.