
ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) ವರ್ಷದಿಂದ ವರ್ಷಕ್ಕೆ ತನ್ನ ವಿಸ್ತಾರವನ್ನು ವಿಸ್ತರಣೆ ಮಾಡಿಕೊಳ್ಳುತ್ತಿದೆ. ಒಂದು ವೇಳೆ ನೀವು ಈ ಮಹಾನಗರದಲ್ಲಿ ಬಾಡಿಗೆ ಅಥವಾ ಸ್ವಂತಕ್ಕೆ ಮನೆ ತೆಗೆದುಕೊಳ್ಳುತ್ತಿದ್ದರೆ ತಮ್ಮದೇ ಈ ನಕ್ಷೆಯನ್ನು ನೋಡಿಕೊಳ್ಳಿ. ಇದರಿಂದ ಮುಂದಾಗುವ ಅನಾಹುತಗಳಿಂದ ಪಾರಾಗಬಹುದು. ಹೌದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ (Social Media) 1983ರ ಬೆಂಗಳೂರು ನಗರದ ನಕ್ಷೆಯ ಫೋಟೋವೊಂದು (1983's Bengaluru Map) ವೈರಲ್ ಆಗುತ್ತಿದೆ. ಈ ನಕ್ಷೆಯ ಪ್ರಕಾರ, 1983ರ ವೇಳೆ ಬೆಂಗಳೂರು ನಗರ ಇಂದಿನ ಹೆಚ್ಎಸ್ಆರ್ ಲೇಔಟ್ ಮತ್ತು ಇಂದಿರಾ ನಗರವನ್ನೇ ಹೊಂದಿರಲಿಲ್ಲ. ಅಂದು ಜಯನಗರ ಬೆಂಗಳೂರಿನ ಕೇಂದ್ರಬಿಂದುವಾಗಿತ್ತು.
ದ್ರಾವಿಶಾ ಎಂಬವರು ಎಕ್ಸ್ ಖಾತೆಯಲ್ಲಿ ಸುಮಾರು 42 ವರ್ಷಗಳ ಹಿಂದಿನ ನಕ್ಷೆಯನ್ನು ಹಂಚಿಕೊಂಡಿದ್ದಾರೆ. ನಾವು ಕಲೆಕ್ಟರ್ ಅವರಿಂದ 1983ರ ಬೆಂಗಳೂರಿನ ಮ್ಯಾಪ್ ಪಡೆದುಕೊಂಡೆವು. ಈ ಮ್ಯಾಪ್ನಲ್ಲಿ ಇಂದಿನ ಹೆಚ್ಎಸ್ಆರ್ ಮತ್ತು ಇಂದಿರಾನಗರವೇ ಕಾಣಿಸುತ್ತಿಲ್ಲ. ಬಹುತೇಕ ಅಂದು ಜಯನಗರವೇ ಬೆಂಗಳೂರಿನ ಸೆಂಟರ್ ಆಗಿತ್ತು. ಇದರಲ್ಲಿ ನಿಮ್ಮ ನೆಚ್ಚಿನ ಸ್ಥಳ ಎಲ್ಲಿ ಎಂದು ಹುಡುಕಿ. ಆ ಸಮಯದಲ್ಲಿ ನಿಮ್ಮ ಸ್ಥಳ ಬೆಂಗಳೂರಿನಲ್ಲಿತ್ತಾ ಎಂದು ನೋಡಿ ಎಂದು ದ್ರಾವಿಶಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮೆಟ್ರೋ ಹಳದಿ ಮಾರ್ಗ: ನಾಲ್ಕನೇ ರೈಲು ಸಂಚಾರ ಶೀಘ್ರ!
ದ್ರಾವಿಶಾ ಅವರ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ನಕ್ಷೆಯ ಪ್ರಕಾರ, 1983ರಲ್ಲಿಯೂ ಎಂಜಿ ರೋಡ್, ಶಿವಾಜಿನಗರ, ಕಂಟೋನ್ಮೆಂಟ್, ಉಲ್ಸೂರು ಲೇಕ್ ಪ್ರಮುಖ ಲ್ಯಾಂಡ್ಮಾರ್ಕ್ ಆಗಿದ್ದವು. ಹಾಗೆಯೇ ವೈಟ್ಫೀಲ್ಡ್, ಯಲಹಂಕ, ಹೆಬ್ಬಾಳ ಏರಿಯಾಗಳು ನಗರದ ಹೊರವಲಯದಲ್ಲಿರುವ ಗ್ರಾಮೀಣ ಭಾಗಗಳಾಗಿದ್ದವು. ನಕ್ಷೆಯಲ್ಲಿ ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ಚಿಕ್ಕಬಳ್ಳಾಪುರ ರಸ್ತೆಯ ರೂಟ್ ಇರೋದನ್ನು ಸಹ ಗಮನಿಸಬಹುದು. ಬೆಂಗಳೂರು ದಕ್ಷಿಣ ಮತ್ತು ಉತ್ತರ ಭಾಗದಲ್ಲಿರುವ ಇಂದಿನ ಏರಿಯಾಗಳೆಲ್ಲವೂ ಚಿಕ್ಕ ಚಿಕ್ಕ ಹಳ್ಳಿಗಳಾಗಿದ್ದವು.
ಇಂದಿರಾನಗರ ನಕ್ಷೆಯಲ್ಲಿಲ್ಲ ಎಂದಿದ್ದಕ್ಕೆ ಕೆಲ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಅಂದು ಇಷ್ಟು ದೊಡ್ಡಪ್ರಮಾಣದಲ್ಲಿ ಇಂದಿರಾನಗರ ಇರಲಿಲ್ಲ. ಚಿಕ್ಕ ಬಡವಾಣೆಯಾಗಿತ್ತು. ಮ್ಯಾಪ್ನಲ್ಲಿ ಇಂದಿರಾನಗರ ಹೆಸರು ಪುಟ್ಟ ಅಕ್ಷರಗಳಲ್ಲಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಸಂದರ್ಶನವೊಂದರಲ್ಲಿ ತಮ್ಮ ಬಾಲ್ಯವನ್ನು ಇಂದಿರಾ ನಗರದಲ್ಲಿಯೇ ಕಳೆದಿರುವ ಬಗ್ಗೆ ಹೇಳಿಕೊಂಡಿದ್ದರು. ಅಂದು ಇಂದಿರಾನಗರದಲ್ಲಿ ಏನೆಲ್ಲಾ ಇತ್ತು ಎಂಬುದನ್ನು ಹೇಳಿದ್ದರು. ಹಾಗಾಗಿ ಇಂದಿರಾ ನಗರ ಅಂದೂ ಸಹ ಬೆಂಗಳೂರಿನ ಒಂದು ಭಾಗವಾಗಿತ್ತು ಎಂದಿದ್ದಾರೆ.
ಇದನ್ನೂ ಓದಿ: ಜಿಬಿಎ, 5 ಪಾಲಿಕೆಗೆ ಅಧಿಕಾರಿಗಳ ಹುದ್ದೆ ಮರು ವಿನ್ಯಾಸ
ಕೆಲ ನೆಟ್ಟಿಗರು ಈ ನಕ್ಷೆಯಲ್ಲಿರುವ ನದಿ ಮತ್ತು ಕೆರೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಇಂದು ಆ ಪ್ರದೇಶದಲ್ಲಿ ಯಾವ ಏರಿಯಾ ಎಂದು ಕಮೆಂಟ್ ಮಾಡಿದ್ದಾರೆ. ಕೆರೆಗಳನ್ನು ಮುಚ್ಚಿ ಮನೆಗಳನ್ನು ನಿರ್ಮಾಣ ಮಾಡಿದ್ದರಿಂದ ಮಳೆ ಬಂದಾಗ ಆ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಹೆಚ್ಎಸ್ಆರ್ ಲೇಔಟ್, ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ಪ್ರತಿಷ್ಠಿತ ಬಡವಾಣೆಗಳಲ್ಲಿ ಮಳೆ ನೀರು ನುಗ್ಗುತ್ತಿರುತ್ತದೆ. ಆದ್ದರಿಂದ ಜನರು ಬೆಂಗಳೂರಿನಲ್ಲಿ ಹೊಸ ಮನೆ ಅಥವಾ ಬಾಡಿಗೆ ಮನೆ ಪಡೆಯುತ್ತಿದ್ದರೆ ಈ ಮ್ಯಾಪ್ ನೋಡಿಕೊಳ್ಳಿ. ಒಂದು ವೇಳೆ ಕೆರೆ ಇದ್ದ ಜಾಗದಲ್ಲಿ ನಿಮ್ಮ ಮನೆ ಇದ್ರೆ ನೀರು ನುಗ್ಗೋದು ಗ್ಯಾರಂಟಿ.