‘ಉಪಚುನಾವಣೆ ವೇಳೆ ನಾನೂ ಬಿಜೆಪಿಯಲ್ಲಿ ಇರುತ್ತೇನೆ’

By Suvarna NewsFirst Published Oct 8, 2019, 8:34 AM IST
Highlights

ರಾಜ್ಯದಲ್ಲಿ ಶೀಘ್ರ ಉಪ ಚುನಾವಣೆ ನಡೆಯಲಿದ್ದು, ಬಿಜೆಪಿ ಬೆಂಬಲಿಸುತ್ತಿರುವ ಅನರ್ಹ ಶಾಸಕರಿಗೆ ಬೆಂಬಲ ನೀಡಿ ಬಿಜೆಪಿ ಪಕ್ಷದೊಂದಿಗೆ ಇರುವುದಾಗಿ ಮುಖಂಡರೀರ್ವರು ಹೇಳಿದ್ದಾರೆ. 

ಹೊಸಕೋಟೆ [ಅ.08]:  ಬಿಜೆಪಿ ಸಿದ್ಧಾಂತ ಹಾಗೂ ಮೋದಿ ಅವರ ಕಾರ್ಯವೈಖರಿಗೆ ಮೆಚ್ಚಿ ತಮ್ಮ ಸಚಿವ ಸ್ಥಾನವನ್ನು ತ್ಯಾಗ ಮಾಡಿದ ಎಂಟಿಬಿ ನಾಗರಾಜ್‌ ಅವರಿಗೆ ನಮ್ಮ ಬೆಂಬಲ ಘೋಷಿಸುತಿದ್ದೇನೆ ಎಂದು ತಿಗಳ ಕ್ಷತ್ರಿಯ ಸಂಘದ ರಾಜ್ಯಾಧ್ಯಕ್ಷ ಡಾ.ಸಿ.ಜಯರಾಜ್‌ ತಿಳಿಸಿದರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜಿದ್ದಾಜಿದ್ದಿಯಾಗಿರುವ ಹೂಸಕೋಟೆ ಉಪಚುನಾವಣಾ ಕಣದಲ್ಲಿ ಪಕ್ಷದಲ್ಲಿರುವ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸ್ವಪಕ್ಷೀಯರನ್ನೇ ಹಣೆಯುವ ಕೆಲಸ ನೆಡೆಯುತ್ತಿದ್ದು, ಇದರಿಂದ ಬೇಸತ್ತ ನಾನು ಯಾವ ಪಕ್ಷಕ್ಕೂ ಸೇರ್ಪಡೆಯಾಗಿಲ್ಲ. ಸ್ವಪಕ್ಷದಲ್ಲಿಯೆ ಇರುತ್ತೇನೆ ಎಂದು ಸ್ಪಷ್ಟ​ಪ​ಡಿ​ಸಿ​ದ​ರು.

ಹೊಸಕೋಟೆ ವಿಧಾನಸಭಾ ಕ್ಷೇತ್ರ ಸಮ್ಮಿಶ್ರ ಸರ್ಕಾರ ಪತನಕ್ಕೆ ಪ್ರಮುಖ ಕಾರಣವಾಗಿದ್ದು, ಪ್ರತಿಯೊಂದು ಪಕ್ಷದ ಮುಖಂಡರು ಕಾರ್ಯಕರ್ತರಲ್ಲಿ ಗೊಂದಲ ಮೂಡಿದ್ದು, ಪ್ರಭಾವಿ ನಾಯಕರನ್ನು ತಮ್ಮ ಪಕ್ಷದ ಪರ ಸೆಳೆಯುವ ಕಾರ್ಯ ಸದ್ದಿಲ್ಲದೆ ನೆಡೆಯುತ್ತಿದೆ. ಬದಲಾದ ರಾಜಕೀಯ ವಿದ್ಯಾಮಾನಗಳ ಪ್ರಕಾರ ಕಾಂಗ್ರೆಸ್‌ ಪಕ್ಷದ ಶಾಸಕರಾಗಿದ್ದ ಎಂಟಿಬಿ ನಾಗರಾಜ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಪರೋಕ್ಷವಾಗಿ ಬಿಜೆಪಿ ಅಧಿ​ಕಾರಕ್ಕೇರುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಬಿಜೆಪಿಗೆ ಸೇರ್ಪಡೆಯಾಗಿ ಅವರು ಮುಂದಿನ ಉಪ ಚುನಾವಣೆಗೆ ಅಭ್ಯರ್ಥಿಯಾದಲ್ಲಿ ಅವರನ್ನು ನಾನು ಬೆಂಬಲಿಸುತಿದ್ದೇನೆ. ಅಲ್ಲ​ದೇ ಬಿಜೆಪಿ​ಯಿಂದ ಯಾರೇ ಅಭ್ಯರ್ಥಿಯಾದರೂ ನಾನು ಅವರನ್ನು ಬೆಂಬಲಿಸುತ್ತೇನೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನನ್ನ ತೇಜೋ​ವಧೆ ಮಾಡಲು ಯತ್ನ:  ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನಾನು ಶರತ್‌ ಬಚ್ಚೇಗೌಡರ ಪರ ಪ್ರಚಾರಕ್ಕೆ ತೆರಳಲಾಗಿಲ್ಲ, ನಮ್ಮ ಸಮುದಾಯದ ಅಭ್ಯರ್ಥಿ ಪರ ಬೇರೆ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೊಡಗಿದ್ದೆ. ಆದರೆ ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ನಾನು ಬಿ.ಎನ್‌.ಬಚ್ಚೇಗೌಡರ ಪರ ಪ್ರಾಮಾಣಿಕವಾಗಿ ಪ್ರಚಾರದಲ್ಲಿ ಭಾಗವಹಿಸಿದ್ದೆ. ಆದರೆ, ನನ್ನ ತೇಜೊವಧೆ ಮಾಡಿ ನಮ್ಮ ಪಕ್ಷದಲ್ಲಿರುವ ಕೆಲವರು ನನ್ನನ್ನು ಕಟ್ಟಿಹಾಕಲು ಪ್ರಯತ್ನ ನೆಡೆಸುತ್ತಿದ್ದಾರೆ ಎಂದು ಆರೋ​ಪಿ​ಸಿ​ದ​ರು.

ಅ.1ರಂದು ಸಂಸದ ಬಿ.ಎನ್‌ ಬಚ್ಚೇಗೌಡರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಮನೆಗೆ ತೆರಳಿ ಹೂವಿನ ಹಾರ ಹಾಕಿ ಅಲ್ಲಿಯೇ ಅವರಿಗೆ ಶುಭಾಶಯ ಕೋರಿದ್ದೆ. ನಂತರ ಮರುದಿನ ನಮ್ಮ ಸಂಬಂಧಿಕರ ಮದುವೆ ಸಂದರ್ಭದಲ್ಲಿ ​ಭಾಗಿಯಾಗಿದ್ದ ಎಂಟಿಬಿ ನಾಗರಾಜ್‌ ಅವರಿಗೆ ಹೂವಿನ ಹಾರ ಹಾಕಿ ಸ್ವಾಗತ ಕೋರಿದ್ದೆ. ಆದರೆ ಕೆಲವರು ಎರಡೂ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ನನ್ನ ತೇಜೋವ​ಧೆ ಮಾಡು​ತ್ತಿ​ದ್ದು, ಈ ಬಗ್ಗೆ ಸ್ಪಷ್ಟನೆ ನೀಡಲು ಪತ್ರಿಕಾಗೋಷ್ಠಿ ಕರೆಯಲಾಗಿದೆ ಎಂದರು.

ಪೊಲೀ​ಸ​ರಿಗೆ ದೂರು:  ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಎರಡು ಪಕ್ಷದಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳಿಗೆ ತೆರೆ ಎಳೆಯುವ ಸಲುವಾಗಿ ನಾನು ಹಾಗೂ ನಮ್ಮ ಬೆಂಬಲಿಗರು ಸೇರಿ ಈ ಸ್ಪ​ಷ್ಟನೆ ನೀಡುತಿದ್ದೇವೆ ಎಂದರು.

ನನ್ನ ಫೋಟೊಗಳನ್ನು ಕೆಂಪು ಬಣ್ಣದಲ್ಲಿ ಮಾರ್ಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ನನ್ನ ಮನಸ್ಸಿಗೆ ನೋವು ಹಾಗೂ ನನ್ನ ಬೆಂಬಲಿಗರಲ್ಲಿ ಗೊಂದಲ ಹಾಗೂ ಕಳವಳ ಮೂಡಿಸಿರುವವರ ವಿರುದ್ಧ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡುತ್ತೇನೆ ಎಂದು ತಿಳಿಸಿದರು.

ಈ ವೇಳೆ ನಗರಸಭೆ ಮಾಜಿ ಸದಸ್ಯರಾದ ರವಿ, ಸುಶೀಲ, ಮುಖಂಡರಾದ ಮಂಜುನಾಥ್‌, ಉಮಾಶಂಕರ್‌ ಮೊದಲಾದವರು ಭಾಗಿಯಾಗಿದ್ದರು.

click me!