
ಆನೇಕಲ್ (ಡಿ.21) ಬೆಂಗಳೂರಿನ ಹೊರವಲಯದಲ್ಲಿ ಭೀಕರ ಸರಣಿ ಅಪಘಾತ ನಡೆದಿದೆ. ಬೃಹತ್ ಕಂಟೈನರ್ ಚಾಲಕ ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಮಾಡಿದ್ದಾರೆ. ವೇಗವಾಗಿ ಬಂದು ನಿಲ್ಲಿಸಿದ್ದ ವಾಹನ, ಸಾಗುತ್ತಿದ್ದ ವಾಹನಗಳ ಮೇಲೆ ಕಂಟೈನರ್ ಹರಿದಿದೆ. 20ಕ್ಕೂ ಹೆಚ್ಚು ವಾಹನಗಳಿಗೆ ಕಂಟೈನರ್ ಡಿಕ್ಕಿಯಾಗಿದ್ದು, 2ಕ್ಕೂ ಹೆಚ್ಚು ಸಾವಾಗಿದೆ. ಇನ್ನು ಹಲವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. ವಾಹನ ಡಿಕ್ಕಿಯಾದರೂ ನಿಲ್ಲಿಸದೆ ತೆರಳಿದ ಚಾಲಕನನ್ನ ಪೊಲೀಸರು 14 ಕಿಲೋಮೀಟರ್ ಚೇಸ್ ಮಾಡಿದ್ದಾರೆ. ಬಳಿಕ ಸ್ಥಳೀಯರು ಕಲ್ಲೆಸೆದು ವಾಹನ ನಿಲ್ಲಿಸಿದ ಘಟನೆ ವರದಿಯಾಗಿದೆ.
ಅನೇಕಲ್ ಪಟ್ಟಣ ಸಮೀಪದ ಬೆಸ್ತಮಾನಹಳ್ಳಿಯಿಂದ ಚಂದಾಪುರದವರೆಗೆ ಅಪಘಾತ ನಡೆದಿದೆ. ಕಂಟೈನರ್ ಚಾಲಕ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ, ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ವೇಗವಾಗಿ ಸಾಗಿದ್ದಾನೆ. ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನು ಐದಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಸ್ಥಳೀಯ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಠವಶಾತ್ ಹೆಚ್ಚಿನ ವಾಹನಗಳು ಪಾರ್ಕ್ ಮಾಡಿದ್ದ ವಾಹನಗಳಾಗಿತ್ತು. ಈ ವಾಹನಗಳಲ್ಲಿ ಯಾರೂ ಇರದ ಕಾರಣ ಸಾವಿನ ನೋವಿನ ಸಂಖ್ಯೆ ತಗ್ಗಿದೆ. ಈ ರೀತಿ ಅಪಘಾತಕ್ಕೆ ಕಾರಣವೇನು ಅನ್ನೋದು ತಿಳಿದುಬಂದಿಲ್ಲ.
ಸರಣಿ ಅಪಘಾತ ನಡೆಸಿ ಅತೀ ವೇಗವವಾಗಿ ಸಾಗುತ್ತಿದ್ದ ಕಂಟೈನರ್ನ್ನು ಪೊಲೀಸರು ಚೇಸ್ ಮಾಡಿದ್ದಾರೆ. ಆದರೆ ಚಾಲಕನ ಮಾತ್ರ ನಿಲ್ಲಿಸಲೇ ಇಲ್ಲ. ಹೊಸೂರು ಹೆದ್ದಾರಿ ಚಂದಾಪುರದಲ್ಲಿ ಸಾರ್ವಜನಿಕರು ಕಲ್ಲುಗಳನ್ನ ತೂರಿದ್ದಾರೆ. ಸತತವಾಗಿ ಕಲ್ಲು ತೂರಿದ ಕಾರಣ ಚಾಲಕ ಗಾಯಗೊಂಡಿದ್ದಾನೆ. ಹೀಗಾಗಿ ವಾಹನ ನಿಲ್ಲಿಸಿದ್ದಾನೆ.
ಚಾಲಕನ ಹಿಡಿದು ಹೊರಗೆಳೆದು ಸಾರ್ವಜನಿಕರು ಥಳಿಸಿದ್ದಾರೆ. ಹಲವು ಬಡಿಗೆ, ಕಲ್ಲುಗಳಿಂದ ಚಾಲಕನ ಮೇಲೆ ದಾಳಿ ಮಾಡಲಾಗಿದೆ. 14 ಕಿಲೋಮೀಟರ್ ಚೇಸ್ ಮಾಡಿ ಸ್ಥಳಕ್ಕೆ ಬಂದ ಪೊಲೀಸರು ಚಾಲಕನ ವಶಕ್ಕೆ ಪಡೆದಿದ್ದಾರೆ. ಥಳಿಸುತ್ತಿದ್ದಂತೆ ಮಧ್ಯಪ್ರವೇಶಿಸಿದ ಪೊಲೀಸರು ಚಾಲಕನ ವಶಕ್ಕೆ ಪಡೆದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಚಾಲಕನ ಆಸ್ಪತ್ರೆ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಚಾಲಕನ ಹಿನ್ನಲೆ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಭೀಕರ ಅಪಘಾತ ನಡೆಸಿರುವ ಚಾಲಕನ ಪರಿಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.