
ಬೆಂಗಳೂರು (ನ.23) ರೈಲು ಹಳಿ ದಾಡುತ್ತಿದ್ದ ಮೆಡಿಕಲ್ ವಿದ್ಯಾರ್ಥಿಗಳಿಬ್ಬರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಡಿಕ್ಕಿಯಾಗಿ ಮೃತಪಟ್ಟ ಘಟನೆ ಚಿಕ್ಕಬಾಣವಾರದಲ್ಲಿ ನಡೆದಿದೆ. ಓರ್ವ ವಿದ್ಯಾರ್ಥಿನಿ ಹಾಗೂ ಯುವಕ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರೈಲು ಡಿಕ್ಕಿಯಾದ ರಭಸಕ್ಕೆ ದೇಹ ಛಿದ್ರಗೊಂಡಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಪ್ರಕರಣ ದಾಖಲಾಗಿದೆ. ಇತ್ತ ಇಬ್ಬರು ವಿದ್ಯಾರ್ಥಿಗಳ ಮಾಹಿತಿ ಪಡೆದು ಪೋಷಕರಿಗೆ ಮಾಹಿತಿ ನೀಡಲಾಗಿದೆ.
ಬೆಂಗಳೂರಿನಲ್ಲಿ ಮೆಡಿಕಲ್ ವ್ಯಾಸಾಂಗ ಮಾಡುತ್ತಿದ್ದ ಕೇರಳ ಮೂಲದ 20 ವರ್ಷದ ವಿದ್ಯಾರ್ಥಿ ಹಾಗೂ 19 ವರ್ಷದ ವಿದ್ಯಾರ್ಥಿನಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ ಇಬ್ಬರು ರೈಲು ದಾಟುತ್ತಿದ್ದಂತೆ ವೇಗವಾಗಿ ರೈಲು ಆಗಮಿಸಿದೆ. ವಿದ್ಯಾರ್ಥಿಗಳಿಗೆ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರೈಲಿಗೆ ಡಿಕ್ಕಿಯಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಚಿಕ್ಕಬಾಣಾವರ ರೈಲ್ವೆ ಸ್ಟೇಷನ್ ಬಳಿ ಘಟನೆ ನಡೆದಿದೆ.
ವಿಜಯನಗರದಲ್ಲಿ ಇತ್ತೀಚೆಗೆ ರೈಲ್ವೇ ನೌಕರನೊಬ್ಬ ರೈಲ್ವೇ ಹಳಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕು ಅನಂತನಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ದಾವಣಗೆರೆಯಿಂದ ಹೊಸಪೇಟೆ ಕೆಡೆ ತೆರಳುವ ಪ್ಯಾಸೆಂಜರ್ ರೈಲಿಗೆ ಬಿದ್ದು ಸುಂದರ ನಾಯಕ್ (38) ಎನ್ನುವ ಒರಿಸ್ಸಾ ಮೂಲದ ನೌಕರ ಮೃತಪಟ್ಟಿದ್ದಾನೆ. ಕೊಟ್ಟೂರು ಪಟ್ಟಣದಲ್ಲಿ ವಾಸ ಮಾಡುತ್ತಿದ್ದ ಸುಂದರ ನಾಯಕ, ರೈಲಿನ ಎಲೆಕ್ಟ್ರಿಕಲ್ ವಿಭಾಗದ ಮೇಸ್ತ್ರಿ ಆಗಿ ಕೆಲಸ ಮಾಡುತ್ತಿದ್ದು. ರೈಲು ಹಳಿ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ.
ರೈಲ್ವೇ ಕ್ರಾಸಿಂಗ್ ಬಳಿ ಅತೀವ ಎಚ್ಚರಿಕೆ ಅಗತ್ಯ. ರಸ್ತೆ ಹಾಗೂ ರೈಲು ಹಳಿ ಮಾರ್ಗದ ನಡುವೆ ಇರುವ ಕ್ರಾಸಿಂಗ್ ಬಳಿ ಸೂಕ್ತ ಸಲಹೆ, ಸೂಚನೆ ಪಾಲನೆ ಮಾಡುವುದು ಅತ್ಯವಶ್ಯಕತ. ರೈಲ್ವೇ ಕ್ರಾಸಿಂಗ್ ಗೇಟ್ ಬಿದ್ದ ಬಳಿಕ ದಾಟುವುದು ಉಚಿತವಲ್ಲ. ಹಲವು ಬಾರಿ ಕ್ರಾಸಿಂಗ್ ಗೇಟು ಬೀಳುತ್ತಿದ್ದಂತೆ ಆತುರದಲ್ಲಿ ದಾಟುವ ಪ್ರಯತ್ನ ಮಾಡಿ ದುರಂತಕ್ಕೆ ಸಿಲುಕಿದ ಹಲವು ಘಟನೆಗಳಿವೆ. ರೈಲು ಹಳಿಗೆ ವಾಹನ ಸಿಲುಕಿ ಕೊನೆಗೆ ಅಪಘಾತಕ್ಕೀಡಾದ ಘಟನೆ ಸಾಕಷ್ಟಿವೆ.