‘ಬಿಜೆಪಿಗರು ಸತ್ಯ ಹರಿಶ್ಚಂದ್ರರಾ, ಐಟಿ ದಾಳಿ ಅವರ ಮೇಲೇಕಿಲ್ಲ’

By Web DeskFirst Published Oct 15, 2019, 9:53 AM IST
Highlights

ಐಟಿಯವರು ಕಾಂಗ್ರೆಸಿಗರನ್ನು ಮಾತ್ರ ಟಾರ್ಗೆಟ್ ಮಾಡಿದ್ದಾರೆ ಎಂದ ಶಾಸಕ ಪಿ.ಟಿ. ಪರಮೇಶ್ವರನಾಯ್ಕ| ಬಿಜೆಪಿಯವರು ಸತ್ಯ ಹರಿಶ್ಚಂದ್ರರಾ| ಅವರದ್ದು ಶಿಕ್ಷಣ ಸಂಸ್ಥೆಗಳು. ರಿಯಲ್ ಎಸ್ಟೆಟ್ ಇಲ್ಲವಾ ಅವರ ಮೇಲೆ ಏಕೆ ದಾಳಿ ಮಾಡುತ್ತಿಲ್ಲ| ವಿಧಾನಸಭಾ ಅಧಿವೇಶನದಲ್ಲಿ ಶಾಸಕರಿಗೆ ಲಂಚ ಪ್ರಕರಣವನ್ನು ಕಾಂಗ್ರೆಸ್ ಪಕ್ಷ ಪ್ರಸ್ತಾಪಿಸಿ ಗಂಭೀರ ಆರೋಪ ಮಾಡಿದ್ದನ್ನು ಇಡಿ, ಐಟಿಯವರಿಗೆ ಕಾಣುತ್ತಿಲ್ಲವಾ| ಇಡಿ ಅಧಿಕಾರಿಗಳು
ಡಾ. ಪರಮೇಶ್ವರ ಅವರ ಆಪ್ತ ಸಹಾಯಕ ರಮೇಶ್ ವಿಚಾರದಲ್ಲಿ ನಾವು ವಿಚಾರಣೆ ಮಾಡಿಲ್ಲ| ಅವರ ಮನೆಗೆ ಹೋಗಿಲ್ಲವೆಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ|

ಹರಪನಹಳ್ಳಿ(ಅ.15): ಐಟಿಯವರು ಕಾಂಗ್ರೆಸಿಗರನ್ನು ಮಾತ್ರ ಟಾರ್ಗೆಟ್ ಮಾಡಿದ್ದಾರೆ. ಬಿಜೆಪಿಯವರು ಸತ್ಯ ಹರಿಶ್ಚಂದ್ರರಾ, ಅವರದ್ದು ಶಿಕ್ಷಣ ಸಂಸ್ಥೆಗಳು. ರಿಯಲ್ ಎಸ್ಟೆಟ್ ಇಲ್ಲವಾ ಅವರ ಮೇಲೆ ಏಕೆ ದಾಳಿ ಮಾಡುತ್ತಿಲ್ಲ ಎಂದು ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಅಧಿವೇಶನದಲ್ಲಿ ಶಾಸಕರಿಗೆ ಲಂಚ ಪ್ರಕರಣವನ್ನು ಕಾಂಗ್ರೆಸ್ ಪಕ್ಷ ಪ್ರಸ್ತಾಪಿಸಿ ಗಂಭೀರ ಆರೋಪ ಮಾಡಿದ್ದನ್ನು ಇಡಿ, ಐಟಿಯವರಿಗೆ ಕಾಣುತ್ತಿಲ್ಲವಾ. ಇಡಿ ಅಧಿಕಾರಿಗಳು ಡಾ. ಪರಮೇಶ್ವರ ಅವರ ಆಪ್ತ ಸಹಾಯಕ ರಮೇಶ್ ವಿಚಾರದಲ್ಲಿ ನಾವು ವಿಚಾರಣೆ ಮಾಡಿಲ್ಲ. ಅವರ ಮನೆಗೆ ಹೋಗಿಲ್ಲವೆಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜಕೀಯ ದ್ವೇಷದಿಂದ ಬಿಜೆಪಿಯವರು ಕೇವಲ ಕಾಂಗ್ರೆಸ್ ನಾಯಕರನ್ನು ಇಡಿ, ಐಟಿಯವರ ಮೂಲಕ ಕಿರುಕುಳ ನೀಡಿಸುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ ಅವರು ತಮ್ಮ ತಂದೆಯ ಕಾಲದಿಂದಲೂ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ಸಂಸ್ಥೆಯಲ್ಲಿನ ಹುಳುಕುಗಳನ್ನು ಹುಡುಕಿ ದಾಳಿ ಮಾಡಿಸುತ್ತಿರುವ ಬಿಜೆಪಿಯವರು ಕ್ರಮ ಸರಿಯಲ್ಲ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿ ಸರ್ಕಾರದ ಬಣ್ಣ ಬಯಲಾಗುತ್ತದೆ ಎನ್ನುವ ದೃಷ್ಟಿಯಿಂದ ಮಾಧ್ಯಮದವರನ್ನು ಸದನದಿಂದ ಹೊರಗಿಟ್ಟಿದ್ದು ಎಷ್ಟು ಸರಿ? ಇಂತಹ ಕ್ರಮವನ್ನು ಖಂಡಿಸುತ್ತೇವೆ. ಪತ್ರಿಕಾ ರಂಗ ತನ್ನದೆಯಾದ ಕೊಡುಗೆಯನ್ನು ದೇಶಕ್ಕೆ ನೀಡಿದೆ. ಆದ್ದರಿಂದ ಸರ್ಕಾರ ಮತ್ತು ಸಭಾನಾಯಕರು ಮರು ಪರಿಶೀಲಿಸಿ ಕೂಡಲೇ ಆದೇಶ ಹಿಂಪಡೆಯಬೇಕು ಎಂದರು.

ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲಾ ರಚನೆಗೆ ವಿರೋಧವಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಹೊಸಪೇಟೆಯನ್ನು ಜಿಲ್ಲೆಯಾಗಿ ಮಾಡಲು ತರಾತುರಿ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿಗಳು ಬಳ್ಳಾರಿ ಜಿಲ್ಲೆಯ ಎಲ್ಲ ಶಾಸಕರ ಅಭಿಪ್ರಾಯ ಸಂಗ್ರಹಿಸಲು ನಡೆಸಿದ ಸಭೆಯಲ್ಲಿ ಆಯಾ ತಾಲೂಕಿನ ಶಾಸಕರು ತಮ್ಮ ಕ್ಷೇತ್ರಗಳನ್ನು ಜಿಲ್ಲೆಯಾಗಿ ಮಾಡಿ ಎಂದು ತಿಳಿಸಿದ್ದಾರೆ. 

ಪರಿಣಾಮ ತಾವು ಹೂವಿನಹಡಗಲಿ ಮತ್ತು ಕರುಣಾಕರ ರೆಡ್ಡಿಯವರು ಹರಪನಹಳ್ಳಿಯನ್ನು ಜಿಲ್ಲೆಯಾಗಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದೇವೆ. ಇದಕ್ಕೆ ಮುಖ್ಯಮಂತ್ರಿಗಳು ಪಕ್ಷಾತೀತವಾಗಿ ಜನಪ್ರತಿನಿಧಿಗಳ ಸಲಹೆ ತೆಗೆದುಕೊಂಡು ಚುನಾವಣೆ ನಂತರ ಮತ್ತೊಮ್ಮೆ ಸಭೆ ಮಾಡಿ ಜಿಲ್ಲೆ ವಿಭಜನೆ ಮಾಡಬೇಕೆ, ಬೇಡವೇ ಎಂದು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು. 

ಯಾದಗಿರಿ, ರಾಮನಗರ, ಉಡುಪಿ ಸೇರಿದಂತೆ ಅನೇಕ ಜಿಲ್ಲೆಗಳು ಎರಡು ಅಥವಾ ಮೂರು ತಾಲೂಕುಗಳನ್ನು ಒಳಗೊಂಡಿವೆ. ಆದರಂತೆ ಬಳ್ಳಾರಿ ವಿಭಜಿಸಿ ನೂತನ ಜಿಲ್ಲೆ ಮಾಡುವುದಾದರೆ ಆಡಳಿತಾತ್ಮಕ ದೃಷ್ಠಿಯಿಂದ ಮೂರು ತಾಲೂಕುಗಳನ್ನು ಒಳಗೊಂಡು ಒಂದು ಜಿಲ್ಲೆಯಾಗಿ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದರು.

ಕಾಂಗ್ರೆಸ್ ಮುಖಂಡರಾದ ಸಿ. ಚಂದ್ರಶೇಖರ್ ಭಟ್, ಎಂ. ರಾಜಶೇಖರ್, ಪಿ.ಎಲ್. ಪೋಮ್ಯನಾಯ್ಕ, ಎಚ್.ಕೆ. ಹಾಲೇಶ್, ಪೂಜಾರ ಶಶಿಧರ, ಜಿಪಂ ಸದಸ್ಯ ಎಚ್.ಬಿ. ಪರಶುರಾಮಪ್ಪ, ಮುತ್ತಿಗಿ ಜಂಬಣ್ಣ, ಮಾಜಿ ಪುರಸಭೆ ಉಪಾಧ್ಯಕ್ಷ ನಜೀರ್ ಅಹಮ್ಮದ್, ನಾಲಬಂಧಿ ಮಾಬುಸಾಬ್, ಬೇಲೂರು ಅಂಜಪ್ಪ, ಭರತ್ ಹಾಜರಿದ್ದರು.

click me!