ಫಾರ್ಚೂನರ್ ಕಾರ್‌ಗಿಂತ ಹೆಚ್ಚು ಬೆಲೆಯ ಎತ್ತುಗಳು; ಲಕ್ಷಾಂತರ ಹಣ ನೀಡಿ ರೈತರು ಪ್ರೀತಿಯಿಂದ ಸಾಕಾಗೋದೇಕೆ?

By Mahmad RafikFirst Published Sep 28, 2024, 10:43 AM IST
Highlights

ರೈತರು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಬಲಿಷ್ಠ ಎತ್ತುಗಳನ್ನು ಖರೀದಿಸುತ್ತಾರೆ. ಕೆಲ ರೈತರು 36 ಲಕ್ಷ ಬೆಲೆಗ ಜೋಡಿ ಎತ್ತುಗಳನ್ನು ಹೊಂದಿದ್ದಾರೆ.

ಬಾಗಲಕೋಟೆ: ಓರ್ವ ರೈತ ಒಂದು ಜೋಡಿ ಎತ್ತುಗಳನ್ನು ಖರೀದಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡ್ತಾರೆ ಎಂದರೆ ನೀವು ನಂಬಲೇಬೇಕು. ಸುಮಾರು ಮೂರ್ನಾಲ್ಕು ದಶಕಗಳ ಹಿಂದೆ ಪ್ರತಿಯೊಬ್ಬ ರೈತನ ಮನೆಯಲ್ಲಿ ಜೋಡಿ ಎತ್ತುಗಳಿರುತ್ತಿದ್ದವು. ಆದ್ರೆ ಕೃಷಿಯಲ್ಲಿ ಯಂತ್ರೋಪಕರಣಗಳು ಬಂದ ಹಿನ್ನೆಲೆ ಎತ್ತುಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಬಿತ್ತನೆ, ಉಳುಮೆ, ಕಸ ತೆಗೆಯಲು, ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಟ್ರ್ಯಾಕ್ಟರ್ ನಂತರ ಅತ್ಯಾಧುನಿಕ ವಾಹನ ಮತ್ತು ಸಲಕರಣೆಗಳು ಬಂದಿವೆ. ಆದರೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ  ಇಂದಿಗೂ ಲಕ್ಷಾಂತರ ರೂಪಾಯಿ ನೀಡಿ ಎತ್ತುಗಳನ್ನು ಖರೀದಿಸಿ, ಅವುಗಳ ನಿರ್ವಹಣೆಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡ್ತಾರೆ. ಕೃಷಿ ಕೆಲಸಕ್ಕೆ ಅತ್ಯಾಧುನಿಕ ಉಪಕರಣಗಳು ಬಂದರೂ ಎತ್ತುಗಳನ್ನು ಸಾಕುವ ಹವ್ಯಾಸವನ್ನು ಆಧುನಿಕ/ಮಾದರಿ ರೈತರು  ಬೆಳೆಸಿಕೊಂಡಿದ್ದಾರೆ. ಈ ಎತ್ತುಗಳ ಬೆಲೆ ಫ್ಯಾರ್ಚೂನರ್ ಕಾರ್‌ಗಿಂತ ಅಧಿಕವಾಗಿರುತ್ತದೆ.

ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಎತ್ತಿನ ಬಂಡಿ ಸ್ಪರ್ಧೆಗಳು ನಡೆಯುತ್ತವೆ. ರೈತರು ತಮ್ಮ ಎತ್ತುಗಳ ಜೊತೆಯಲ್ಲಿ ಭಾಗಿಯಾಗಿ, ಗೆದ್ದು ದೊಡ್ಡ ಮೊತ್ತವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಈ ಸ್ಪರ್ಧೆಯಲ್ಲಿ ಭಾಗಿಯಾಗುವ ಜೋಡಿ ಎತ್ತುಗಳ ಬೆಲೆ 12 ರಿಂದ 14 ಲಕ್ಷ ರೂಪಾಯಿ ಆಗಿರುತ್ತದೆ. ಗ್ರಾಮೀಣ ಭಾಗದಲ್ಲಿ ಜಾತ್ರೆಗಳ ವೇಳೆ ಎತ್ತಿನ ಬಂಡಿಗಳ ಸ್ಪರ್ಧೆಗಳನ್ನು ಆಯೋಜನೆ  ಮಾಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ಭಾಗಿಯಾಗಲು ದೂರ ದೂರದ ಪ್ರದೇಶಗಳಿಂದ ಸ್ಪರ್ಧಿಗಳು ತಮ್ಮ ಎತ್ತುಗಳ ಜೊತೆ ಇಲ್ಲಿಗೆ ಆಗಮಿಸುತ್ತಾರೆ. 

Latest Videos

ಇದೊಂದು ಗ್ರಾಮೀಣ ಕ್ರೀಡೆಯಾಗಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿಗೂ ಜೀವಂತವಾಗಿದೆ. ಈ ಸ್ಪರ್ಧೆಯಲ್ಲಿ ಭಾಗಿಯಾಗೋದು ರೈತರಿಗೆ ಗೌರವದ ಪ್ರಶ್ನೆಯಾಗಿರುತ್ತದೆ. ಬಲಿಷ್ಠ ಎತ್ತುಗಳನ್ನು ಹೊಂದಿರುವ ರೈತರನ್ನು ಇಡೀ ಊರಿಗೆ ಊರು ಗುರುತಿಸುತ್ತದೆ. ಎತ್ತುಗಳು ಹೆಮ್ಮೆಯ ಪ್ರತೀಕವಾಗಿರುತ್ತವೆ. ಸ್ಪರ್ಧೆಯಲ್ಲಿ ಗೆಲ್ಲುವ ರೈತರು 50 ರಿಂದ 1 ಲಕ್ಷ ರೂಪಾಯಿವರೆಗೂ ನಗದು ಬಹುಮಾನ ಪಡೆದುಕೊಳ್ಳುತ್ತಾರೆ. ಅದೇ ರೀತಿ ಸ್ಪರ್ಧೆಗಳಿಲ್ಲದ ಸಮಯದಲ್ಲಿ ಎತ್ತುಗಳನ್ನು ಕೃಷಿ ಕಾರ್ಯಗಳಿಗೂ ಬಳಸಿಕೊಳ್ಳಲಾಗುತ್ತದೆ. ಎತ್ತುಗಳಿಂದ ಬಿತ್ತನೆ ಕಾರ್ಯ ಆರಂಭಿಸಿದ್ರೆ ಉತ್ತಮ ಫಸಲು ಬರುತ್ತೆ ಎಂಬ ನಂಬಿಕೆ ಇದೆ. ಕಾರ ಹುಣ್ಣಿಮೆ ಮತ್ತು ಬಸವೇಶ್ವರ ಜಯಂತಿಯಂದು ಎತ್ತುಗಳಿಗೆ ಸ್ನಾನ ಮಾಡಿಸಿ, ಬಣ್ಣಗಳಿಂದ ಅಲಂಕರಿಸಿ ಪೂಜಿಸಲಾಗುತ್ತದೆ.

Chikkamagaluru: ಆಧುನಿಕತೆಯ ಭರಾಟೆ ನಡುವೆಯೂ ಜೋಡೆತ್ತಿನ ಗಾಡಿ ಸ್ಪರ್ಧೆ

ಈ ಸ್ಪರ್ಧೆಯ ಕುರಿತು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ರೈತ ಯಲ್ಲನಗೌಡ ಪಾಟೀಲ್, ನಮ್ಮ ಕುಟುಂಬ ಸುಮಾರು ಐದು ದಶಕಗಳಿಂದ  (50 ವರ್ಷ) ಎತ್ತಿನ ಬಂಡಿ ಸ್ಪರ್ಧೆಯಲ್ಲಿ ಭಾಗಿಯಾಗುತ್ತಿದೆ. ಈ ಸ್ಪರ್ಧೆಯಲ್ಲಿ ಭಾಗಿಯಾಗೋದು ನಮ್ಮ ಕುಟುಂಬದ ಸಂಪ್ರದಾಯವಾಗಿದೆ. ಈ  ಸ್ಪರ್ಧೆಯಲ್ಲಿ ಗೆಲ್ಲಲು ನಾವು ಹೆಚ್ಚು ಶಕ್ತಿ ಮತ್ತು ಬಲಿಷ್ಠವಾದ ಎತ್ತುಗಳನ್ನು ಲಕ್ಷಾಂತರ ರೂಪಾಯಿ ನೀಡಿ ಖರೀದಿಸುತ್ತವೆ.  ನನ್ನ ಬಳಿಯಲ್ಲಿರುವ ಒಂದು  ಎತ್ತಿನ ಬೆಲೆ 11 ಲಕ್ಷ ಮತ್ತೊಂದರದ್ದು  14 ಲಕ್ಷ ರೂಪಾಯಿ ಆಗಿದೆ. ಈ ಜೋಡಿ ಹಲವು ಸ್ಪರ್ಧೆಗಳಲ್ಲಿ ಮೊದಲ ಸ್ಥಾನ  ಪಡೆದುಕೊಂಡಿವೆ. ನಮ್ಮ ಕುಟುಂಬದ ಬಳಿ ಒಟ್ಟು 36 ಲಕ್ಷ ಮೌಲ್ಯದ ಎತ್ತುಗಳಿವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ

ನಮ್ಮ ಎತ್ತಿನ ಬಂಡಿ ಕೆಲವು ಸ್ಪರ್ಧೆಗಳಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿವೆ. ಹಾಗಾಗಿ ಮತ್ತೊಂದು ಹೊಸ ಜೋಡಿ ಎತ್ತುಗಳನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದೇವೆ. ಓರ್ವ ರೈತನ ಬಳಿಯಲ್ಲಿರೋ ಜೋಡಿ ಎತ್ತುಗಳು 100 ಸ್ಪರ್ಧೆಗಳನ್ನು ಗೆದ್ದಿದ್ದು, ಅವುಗಳ ಬೆಲೆ 36 ಲಕ್ಷ ರೂಪಾಯಿ ಎಂದು ಗೊತ್ತಾಗಿದೆ. ಆ ಎತ್ತುಗಳು ಅಕ್ಟೋಬರ್ 4ರಂದು ಮುಧೋಳ ಮತ್ತು ಅಕ್ಟೋಬರ್ 15ರಂದು ಯಾದವಾಡದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗಿಯಾಗಲಿವೆ ಎಂದು ಯಲ್ಲನಗೌಡ ಪಾಟೀಲ್ ಮಾಹಿತಿ ನೀಡಿದ್ದಾರೆ.

ದೀಪಾವಳಿ ವಿಶೇಷ "ಹೊಂಡೆಯಾಟ": ಉತ್ತರಕನ್ನಡದಲ್ಲಿ ಗ್ರಾಮೀಣ ಕ್ರೀಡೆ ಇಂದಿಗೂ ಜೀವಂತ..!

ನಮ್ಮದು ಕೃಷಿ ಕುಟುಂಬ. ನಾವು ನಮ್ಮ ತಂದೆ ಬಸಲಿಂಗಪ್ಪಗೌಡರ ಕಾಲದಿಂದಲೂ ಎತ್ತುಗಳನ್ನು ಸಾಕಿಕೊಂಡು ಬಂದಿದ್ದೇವೆ. ಅದು ನನಗೆ ರಕ್ತಗತವಾಗಿ ಬಂದಿದೆ. ನಾನು ಕಳೆದ ವರ್ಷ ಹತ್ತು ಲಕ್ಷ ಕೊಟ್ಟು ಒಂದು ಹೋರಿ ಖರೀದಿಸಿದ್ದೆ. ಎತ್ತುಗಳನ್ನು ಸಾಕುವುದರಲ್ಲಿ ಇರುವ ಪ್ರೀತಿ ಮತ್ತು ಸುಖ ಬೇರೆಲ್ಲೂ ಸಿಗುವುದಿಲ್ಲ ಎಂದು ಯಲ್ಲಣ್ಣಗೌಡ ಪಾಟೀಲ ಹೇಳಿದರು.

click me!