ಬಾದಾಮಿ ತಾಲೂಕಿನ ಕರ್ಲಕೊಪ್ಪೆ ಗ್ರಾಮ ದತ್ತು ಪಡೆದ '3rd ಕ್ಲಾಸ್' ಚಿತ್ರತಂಡ!

Kannadaprabha News   | Asianet News
Published : Jan 19, 2020, 10:36 AM ISTUpdated : Jan 19, 2020, 10:37 AM IST
ಬಾದಾಮಿ ತಾಲೂಕಿನ ಕರ್ಲಕೊಪ್ಪೆ ಗ್ರಾಮ ದತ್ತು ಪಡೆದ  '3rd ಕ್ಲಾಸ್' ಚಿತ್ರತಂಡ!

ಸಾರಾಂಶ

ಸಾಮಾನ್ಯವಾಗಿ ಪ್ರತಿಯೊಂದು ಸಿನೆಮಾ ತಂಡದವರು ತಮ್ಮ ಸಿನೆಮಾ ರಿಲೀಸ್‌ಗೂ ಮುನ್ನ ತಮ್ಮ ಚಿತ್ರದ ಪ್ರಮೋಷನ್‌ಗಾಗಿ ಹತ್ತು ಹಲವು ವಿಭಿನ್ನ ಪ್ರಚಾರದ ಗಿಮಿಕ್‌ಗಳನ್ನು ಮಾಡುವುದು ಸಹಜ. ಆದರೆ ಇಲ್ಲೊಂದು ಚಿತ್ರತಂಡ ತಮ್ಮ ಚಿತ್ರದ ರಿಲೀಸ್‌ಗೂ ಮುನ್ನ ಕಟಿಂಗ್ಸ್, ಬ್ಯಾನರ್ಸ್‌, ಪೋಸ್ಟರ್ಸ್‌ ಎಂದು ಲಕ್ಷ ಲಕ್ಷ ಖರ್ಚು ಮಾಡದೇ ಸಾಮಾಜಿಕ ಕಾರ್ಯಗಳ ಮೂಲಕ ಪ್ರೇಕ್ಷಕರ ಮನಗೆಲ್ಲಲು ಹೊರಟಿದೆ.  

ಈಶ್ವರ ಶೆಟ್ಟರ 

ಸಾಲದ್ದಕ್ಕೆ ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಗ್ರಾಮವೊಂದನ್ನು ದತ್ತು ಪಡೆದು, ಗ್ರಾಮ ವಾಸ್ತವ್ಯಕ್ಕೂ ಮುಂದಾಗಿದೆ. ಮಾಜಿ ಸಿಎಂ, ವಿಪ ನಾಯಕ ಸಿದ್ದರಾಮಯ್ಯನವರ ಸ್ವಕ್ಷೇತ್ರ ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮವನ್ನು ದತ್ತು ತೆಗೆದುಕೊಂಡು ತಮಗಾದಷ್ಟು ಅಭಿವೃದ್ಧಿಪಡಿಸಲು ಹೊರಟಿರುವ ‘ಥರ್ಡ್ ಕ್ಲಾಸ್’ ಎಂಬ ಚಿತ್ರ ತಂಡದ ಮುಖ್ಯಸ್ಥರ ಸಾಮಾಜಿಕ ಕಳಕಳಿ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ.

ಜಲಾವೃತವಾಗಿದ್ದ ಗ್ರಾಮ: ಕರ್ಲಕೊಪ್ಪ ಗ್ರಾಮ ಇತ್ತೀಚಿಗೆ ಪ್ರವಾಹ ಬಂದಾಗ ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿ ಇಡೀ ಗ್ರಾಮವೇ ಜಲಾವೃತವಾಗಿತ್ತು. ಇಲ್ಲಿದ್ದ ನೂರಾರು ಜನ ಗ್ರಾಮಸ್ಥರು ತಮ್ಮ ಕುಟುಂಬಸಹಿತ ಜನ ಜಾನುವಾರುಗಳೊಂದಿಗೆ ಊರ ಹೊರಗೆ ಜಿಲ್ಲಾಡಳಿತ ಹಾಕಿಕೊಟ್ಟ ಶೆಡ್‌ಗಳಲ್ಲಿ ಬಂದು ವಾಸವಾಗಿದ್ದರು. ಗ್ರಾಮದ ಶಾಲೆಯು ಸಹ ಬಿದ್ದು ಹೋಗಿ ಮಕ್ಕಳು ಅತಂತ್ರ ಪರಿಸ್ಥಿತಿ ಎದುರಿಸುವಂತಾಗಿತ್ತು. ಇದರ ಬೆನ್ನಲ್ಲೇ ಸಾಮಾಜಿಕ ಕಳಕಳಿಗೆ ಮುಂದಾಗಿರುವ ನಟ ಜಗದೀಶ್ ಮತ್ತು ನಟಿ ರೂಪಿಣಿ ನಟಿಸಿರುವ ಥರ್ಡ್ ಕ್ಲಾಸ್ ಚಿತ್ರತಂಡವು ಪ್ರವಾಹ ಪೀಡಿತ ಗ್ರಾಮವೊಂದನ್ನು ದತ್ತು ಪಡೆದು ಅಭಿವೃದ್ಧಿ ಮಾಡುವ ನಿರ್ಧಾರ ಮಾಡಿದೆ. ಮೊದಲ ಹಂತದಲ್ಲಿ ಈ ಗ್ರಾಮದ ಸರ್ಕಾರಿ ಶಾಲೆಗೆ ಅಗತ್ಯವಿರುವ ಕೊಠಡಿಗಳನ್ನು ಕಟ್ಟಿಸಿಕೊಡಲು ಚಿತ್ರತಂಡ ಮುಂದಾಗಿದೆ.

 

ಇತ್ತೀಚಿನ ಪ್ರವಾಹದಲ್ಲಿ ಹಲವು ಗ್ರಾಮಗಳು ಜಲಾವೃತವಾಗಿ ಬದುಕನ್ನೇ ಕಳೆದುಕೊಂಡ ಸಂದರ್ಭವನ್ನು ಗಮನಿಸಿ ನಮ್ಮ ಚಿತ್ರತಂಡ ಸಾಧ್ಯವಾದಷ್ಟು ಸಂತ್ರಸ್ತರ ನೆರವಿಗೆ ನಿಲ್ಲುವ ಪ್ರಯತ್ನ ಮಾಡುತ್ತಿದೆ. ಆ ಕಾರಣಕ್ಕಾಗಿ ನೆರೆ ಪೀಡಿತ ಕರ್ಲಕೊಪ್ಪ ಗ್ರಾಮವನ್ನು ದತ್ತು ಪಡೆಯಲಾಗಿದೆ. - ಜಗದೀಶ್ ಥರ್ಡ್ ಕ್ಲಾಸ್ ಚಿತ್ರ ತಂಡದ ನಟ, ನಿರ್ಮಾಪ

ಬನಶಂಕರಿ ಜಾತ್ರೆಯಲ್ಲಿ ಸೊಂಟ ಬಳಕಿಸಿದ ನಟಿ ರಾಗಿಣಿ: ಹುಚ್ಚೆದ್ದು ಕುಣಿದ ಫ್ಯಾನ್ಸ್‌!

ಚಿತ್ರ ತಂಡದ ಆಶಯ: ಥರ್ಡ್ ಕ್ಲಾಸ್ ಚಿತ್ರಕ್ಕೆ ಕಥೆ ಬರೆದು ಮೊದಲ ಬಾರಿಗೆ ನಟಿಸಿರುವ ಜಗದೀಶ ಸ್ವತಃ ನಿರ್ಮಾಪಕರಾಗಿದ್ದಾರೆ. ಅಶೋಕ ದೇವ ನಿರ್ದೇಶ ಕರಾಗಿದ್ದು ಜಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ. ಚೆನ್ನೈ ಮೂಲದ ಶ್ಯಾಮ್ ರಾಜ್ ಕ್ಯಾಮೆರಾ ವರ್ಕ್ ಮಾಡಿದ್ದು, ಫೆಬ್ರುವರಿ ೭ರಂದು ತೆರೆಕಾಣಲಿದೆ. ಗ್ರಾಮ ದತ್ತು ಪಡೆದಿರುವ ಚಿತ್ರತಂಡ ಭಾನುವಾರ ಕರ್ಲಕೊಪ್ಪ ಗ್ರಾಮದಲ್ಲಿಯೇ ಗ್ರಾಮ ವಾಸ್ತವ್ಯ ಮಾಡುವುದಕ್ಕೆ ಮುಂದಾಗಿದೆ. ಜನರೊಂದಿಗೆ ಸೇರಿ ಅಲ್ಲಿಯೇ ವಾಸ್ತವ್ಯ ಮಾಡಿ ಅವರ ಸಮಸ್ಯೆ ಕೇಳಿ ಅವರ ಗ್ರಾಮಕ್ಕೆ ಅಗತ್ಯವಿರುವ ಸೌಲಭ್ಯ ಒದಗಿಸಿಕೊಡಬೇಕೆನ್ನುವ ವಿಚಾರದಲ್ಲಿದೆ.

ಮೊದಲ ಶೋ ಹಣ ಸಮಾಜ ಕಾರ್ಯಕ್ಕೆ: ಈಗಾಗಲೇ ಈ ಚಿತ್ರತಂಡವು ಧ್ವನಿ ಸುರುಳಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಅತಿಥಿಯಾಗಿ ಆಹ್ವಾನಿಸಿದ 200 ಅಂಧ ಹಾಗೂ ಅನಾಥ ಮಕ್ಕಳಿಗೆ ₹2 ಲಕ್ಷ ಮೊತ್ತದ ಆರೋಗ್ಯ ಮತ್ತು ಜೀವ ವಿಮೆ ಮಾಡಿಸಿದೆ. ಜತೆಗೆ ರಾಜ್ಯದ 150ಕ್ಕೂ ಅಧಿಕ ಅಂಧ ಮತ್ತು ಅನಾಥ ಮಕ್ಕಳ ಶಾಲೆ ದತ್ತು ಪಡೆದು ರಾಜ್ಯಾದ್ಯಂತ ಚಿತ್ರದ ಮೊದಲ ಶೋಧ ಸಂಪೂರ್ಣ ಹಣವನ್ನು ನೀಡಲು ಮುಂದಾಗಿದೆ. 50 ಸಾವಿರಕ್ಕೂ ಅಧಿಕ ಆಟೋ ಮತ್ತು ಕ್ಯಾಬ್ ಚಾಲಕರಿಗೆ 1 ಲಕ್ಷ ಮೊತ್ತದ ಜೀವ ವಿಮೆ ಮಾಡಿಸಿದೆ. ಹೀಗೆ ಸಾಮಾಜಿಕ ಕಳಕಳಿ ಹೊಂದಿರುವ ಚಿತ್ರತಂಡ ಇದೀಗ ಪ್ರವಾಹಕ್ಕೆ ತುತ್ತಾಗಿರುವ ಕರ್ಲಕೊಪ್ಪ ಗ್ರಾಮ ಆಯ್ಕೆ ಮಾಡಿ ದತ್ತು ಪಡೆಯುವ ಮೂಲಕ ಗಮನ ಸೆಳೆದಿದೆ. ಪ್ರತಿಯೊಂದು ನೂತನ ಸಿನೆಮಾಕ್ಕೆ ನಿರ್ಮಾಪಕರು, ನಿರ್ದೇಶಕರು, ನಟರು ರಿಲೀಸ್‌ಗೆ ಮುನ್ನ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವುದರ ಮಧ್ಯೆಯೇ ನೂತನ ‘ಥರ್ಡ್ ಕ್ಲಾಸ್’ ಚಿತ್ರತಂಡವು ಸಾಮಾಜಿಕ ಕಳಕಳಿಯೊಂದಿಗೆ ಪ್ರವಾಹ ಪೀಡಿತ ಗ್ರಾಮ ದತ್ತು ಪಡೆಯುವುದಕ್ಕೆ ಮುಂದಾಗಿರುವುದರಿಂದ ಚಿತ್ರತಂಡದ ಮೂಲಕ ಕರ್ಲಕೊಪ್ಪ ಗ್ರಾಮಕ್ಕೆ ಇನ್ನಷ್ಟು ಸೌಲಭ್ಯ ದೊರೆತು ಸಂತ್ರಸ್ತರಿಗೆ ಇನ್ನಷ್ಟು ನೆರವು ಸಿಗುವಂತಾದರೆ ಸಾಕು.

PREV
click me!

Recommended Stories

ಉಪಚುನಾವಣೆ ಕಣದಲ್ಲಿ ರಾಜಾರೋಷವಾಗಿ ಕಾಂಗ್ರೆಸ್ ಹಣ ಹಂಚಿಕೆ, 500 ರೂ ಸಾಕಾಗೊಲ್ಲ, ವೈರಲ್ ಆಯ್ತು ವಿಡಿಯೋ!
ಬಾಗಲಕೋಟೆ ಉಪಚುನಾವಣೆ: ಮಗನ ಬದಲು ತಂದೆಯ ಹೆಸರಿಗೆ ಮಾರ್ಕ್‌ ಮಾಡಿದ ಚುನಾವಣಾ ಸಿಬ್ಬಂದಿ!