ಕುಡಿದು ವಾಹನ ಚಲಾಯಿಸುವ ಮುನ್ನ 10 ಸಾವಿರ ಜೇಬಿನಲ್ಲಿಟ್ಟುಕೊಳ್ಳಿ!

By Web DeskFirst Published Jul 16, 2019, 11:07 AM IST
Highlights

ಮೋಟಾರ್‌ ವಾಹನ ಕಾಯ್ದೆ ಮತ್ತಷ್ಟು ಕಠಿಣ! ಯಾವ ತಪ್ಪಿಗೆ ಎಷ್ಟು ದಂಡ| ಲೋಕಸಭೆಯಲ್ಲಿ ಮಸೂದೆ ಮಂಡಿಸಿದ ಸರ್ಕಾರ

ನವದೆಹಲಿ[ಜು.16]: ದೇಶಾದ್ಯಂತ ನಡೆಯುತ್ತಿರುವ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಕಠಿಣವಾದ ಅಂಶಗಳನ್ನು ಒಳಗೊಂಡ ಮೋಟಾರು ವಾಹನ ಕಾಯ್ದೆ ಮಸೂದೆಯನ್ನು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸಿದೆ. ಕಳೆದ ವರ್ಷ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ಮಸೂದೆ, ವಿಪಕ್ಷಗಳ ವಿರೋಧಗಳ ಕಾರಣ ರಾಜ್ಯಸಭೆಯಲ್ಲಿ ಅಂಗೀಕಾರವಾಗದೇ ಹಾಗೆಯೆ ಉಳಿದುಕೊಂಡಿತ್ತು. ಹೀಗಾಗಿ ಅದಕ್ಕೆ ಕೆಲ ತಿದ್ದುಪಡಿಗಳನ್ನು ಮಾಡಿ ಪರಿಷ್ಕೃತ ಮಸೂದೆಯನ್ನು ಕೇಂದ್ರ ಸರ್ಕಾರ ಇದೀಗ ಮಂಡಿಸಿದೆ.

ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳ ಹಕ್ಕುಗಳನ್ನು ಕಿತ್ತುಕೊಳ್ಳಲು ಯತ್ನಿಸುತ್ತಿದೆ ಸೇರಿದಂತೆ ಮಸೂದೆಯಲ್ಲಿನ ಹಲವು ಅಂಶಗಳ ಬಗ್ಗೆ ಹಲವು ಸಂಸದರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ, ರಾಜ್ಯಗಳ ಹಕ್ಕುಗಳನ್ನು ಕಿತ್ತುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ. ಬದಲಾಗಿ ಸಾವಿರಾರು ಮಂದಿಯ ರಕ್ಷಣೆಗೆ ಅಗತ್ಯವಿರುವ ಮಸೂದೆ ಪಾಸಾಗಲು ಅನುವು ಮಾಡಿಕೊಡಬೇಕು ಎಂದು ವಿನಂತಿಸಿಕೊಂಡರು.

ಪರಿಷ್ಕೃತ ಮಸೂದೆ ಅನ್ವಯ ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ 5 ಲಕ್ಷ ರು., ತೀವ್ರವಾಗಿ ಗಾಯಗೊಂಡವರಿಗೆ 2.5 ಲಕ್ಷ ರು. ಪರಿಹಾರ ನೀಡಲಾಗುವುದು. ಸಂಚಾರ ನಿಯಮ ಉಲ್ಲಂಘನೆಗೆ ಹೆಚ್ಚು ದಂಡ, ರಸ್ತೆ ಅಪಘಾತದಲ್ಲಿ ಸಿಲುಕಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವವರನ್ನು ಆಸ್ಪತ್ರೆಗೆ ಸೇರಿಸುವವರ ರಕ್ಷಣೆ ಸೇರಿದಂತೆ ಇನ್ನಿತರ ಮಹತ್ವದ ಅಂಶಗಳನ್ನು ಮಸೂದೆ ಒಳಗೊಂಡಿದೆ.

ಮಸೂದೆಯಲ್ಲಿರುವ ಪ್ರಮುಖ ಅಂಶಗಳು

-ವಾಹನ ನೋಂದಣಿ, ವಾಹನ ಚಾಲನಾ ಪರವಾನಗಿಗೆ ಆಧಾರ್‌ ಕಡ್ಡಾಯ

-ಕಳಪೆ ಗುಣಮಟ್ಟರಸ್ತೆಗಳಿಂದ ಆಗುವ ಅಪಘಾತಗಳಿಗೆ ಪೌರಾಡಳಿತ ಸಂಸ್ಥೆಗಳು, ಗುತ್ತಿಗೆದಾರರನ್ನೇ ಜವಾಬ್ದಾರರನ್ನಾಗಿಸುವುದು

-2016ರ ಮಸೂದೆಯಲ್ಲಿದ್ದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ 3ನೇ ವ್ಯಕ್ತಿಯ ವಿಮೆ ಮೊತ್ತವು 10 ಲಕ್ಷ ರು., ಹಾಗೂ ಅಪಘಾತಕ್ಕೆ 5 ಲಕ್ಷ ಪರಿಹಾರ ನೀಡಬೇಕೆಂಬ ನಿಯಮದಲ್ಲಿ ವಿನಾಯ್ತಿ

-ವಾಹನ ಪರವಾನಗಿ ನವೀಕರಣದ ಅವಧಿಯನ್ನು ಒಂದು ತಿಂಗಳಿನಿಂದ 1 ವರ್ಷದೊಳಗೆ ವಿಸ್ತರಣೆ

-ರಸ್ತೆ ಅಪಘಾತದಲ್ಲಿ ಸಿಲುಕಿದವರನ್ನು ಆಸ್ಪತ್ರೆಗೆ ಸೇರಿಸುವವರ ರಕ್ಷಣೆಗೆ ನೂತನ ಮಸೂದೆಯಲ್ಲಿ ಅವಕಾಶ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವವರು ತಮ್ಮ ಗುರುತನ್ನು ಇಚ್ಛಿಸಿದಲ್ಲಿ ಮಾತ್ರ ಬಹಿರಂಗಪಡಿಸಬಹುದಾದ ಆಯ್ಕೆ. ರಸ್ತೆ ಅಪಘಾತದ ಸಂತ್ರಸ್ತರ ನೆರವಿಗೆ ಬರುವವರ ಗೋಪ್ಯತೆ ಕಾಪಾಡುವುದು

click me!