ಕಾರು ತಯಾರಿಕೆ ನಿಲ್ಲಿಸಿ ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಮಹೀಂದ್ರ!

By Suvarna NewsFirst Published Mar 26, 2020, 4:11 PM IST
Highlights

ಕೊರೋನಾ ವೈರಸ್ ಚೀನಾದಲ್ಲಿ ಆರಂಭವಾದಾಗಲೇ ಭಾರತ ಸೇರಿದಂತೆ ವಿಶ್ವದ ಎಲ್ಲಾ ವಾಹನ ಉತ್ಪಾದನಾ ಕಂಪನಿಗಳಿ ಹೊಡೆತ ಬಿದ್ದಿತು. ಕೊರೋನಾ ಗಂಭೀರ ಸ್ವರೂಪ ಪಡೆಯುತ್ತಿದ್ದಂತ  ಇದೀಗ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಆಗಿವೆ. ಇದೀಗ ಕರೋನಾ ವೈರಸ್ ವಿರುದ್ಧ ಹೋರಾಡಲು ಮಹೀಂದ್ರ ಮುಂದಾಗಿದೆ.

ನವದೆಹಲಿ(ಮಾ.26):  ಕೊರೋನಾ ವೈರಸ್ ಹುಟ್ಟಿಕೊಂಡಾಗಲೇ ಚೀನಾದಲ್ಲಿ ವಾಹನ ಬಿಡಿ ಭಾಗ ತಯಾರಿಕಾ ಕಂಪನಿ ಸೇರಿದಂತೆ ಆಟೋಮೊಬೈಲ್ ಕಂಪನಿಗಳು ಬಾಗಿಲು ಮುಚ್ಚಿತು. ಇದರಿಂದ ಭಾರತದ ವಾಹನ ತಯಾರಿಕೆ ಮೇಲೆ ಹೊಡೆತ ಬಿದ್ದಿತು. ಇದೀಗ ಭಾರತವೇ ಸಂಪೂರ್ಣ ಲಾಕ್‌ಡೌನ್ ಆಗಿದೆ. ಎಲ್ಲಾ ವಾಹನ ತಯಾರಿಕಾ ಕಂಪನಿಗಳು ಬಾಗಿಲು ಮುಚ್ಚಿದೆ. ಇದೀಗ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಸರ್ಕಾರಕ್ಕೆ ನೆರವಾಗಲು ಮಹೀಂದ್ರ ಕಂಪನಿ ಮುಂದಾಗಿದೆ.  

ಭಾರತ ಲಾಕ್‌ಡೌನ್; ಟೋಲ್ ಸಂಗ್ರಹ ಕುರಿತು ಹೆದ್ದಾರಿ ಪ್ರಾಧಿಕಾರದಿಂದ ಮಹತ್ವದ ನಿರ್ಧಾರ!

ಮಹೀಂದ್ರ ಭಾರತದಲ್ಲಿ ಕಾರು ಉತ್ಪಾದನೆ ಸ್ಥಗಿತಗೊಳಿಸಿ ಇದೀಗ ವೆಂಟೀಲೇಟರ್ ತಯಾರಿಕೆ ಮಾಡಲು ಮುಂದಾಗಿದೆ. ಸದ್ಯ ಕೊರೋನಾ ಸೋಂಕಿತರ ಚಿಕಿತ್ಸೆಗೆ ವೆಂಟಿಲೇಟರ್ ಅಗತ್ಯವಿದೆ.   ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಅಭಾವ ಉಂಟಾಗುವುದು ಖಚಿತ. ಈಗಾಗಲೇ ಇಟಲಿಯಲ್ಲಿ ವೆಂಟಿಲೇಟರ್ ಕೊರತೆಯಿಂದ ಕೊರೋನಾ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಎಚ್ಚರಿಕೆ ವಹಿಸಿರುವ ಭಾರತ ಕೇಂದ್ರ ಸರ್ಕಾರ ವೆಂಟಿಲೇಟರ್ ಅಭಾವ ಸೃಷ್ಟಿಯಾಗದಂತೆ ನೋಡಿಕೊಳ್ಳಲು ಹಲವು ಕಂಪನಿಗಳ ಜೊತೆ ಮಾತುಕತೆ ನಡೆಸಿದೆ. 

ಭಾರತ ಲಾಕ್‌ಡೌನ್; ರೋಡಿಗಿಳಿದ 2000ಕ್ಕೂ ಹೆಚ್ಚು ವಾಹನಕ್ಕೆ ದುಬಾರಿ ಫೈನ್!.

ಕೇಂದ್ರ ಸರ್ಕಾರದ ಮಾತುಕತೆ ಬೆನ್ನಲ್ಲೇ ಮಹೀಂದ್ರ ಈಗಾಗಲೇ ವೆಂಟಿಲೇಟರ್ ಉತ್ಪಾದನೆಗೆ ಇಳಿದಿದೆ. ಮಹೀಂದ್ರ ಹಾಲಿಡೇ ವಿಭಾಗ ತನ್ನ ರೆಸಾರ್ಟ್‌ಗಳನ್ನು ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ನೀಡುವುದಾಗಿ ಹೇಳಿದೆ. ಈ ಮೂಲಕ ಭಾರತದ ಮಹೀಂದ್ರ ಕಂಪನಿ ಮಹತ್ವದ ಹೆಜ್ಜೆ ಇಟ್ಟಿದೆ.

ಇತ್ತಭಾರತದ ಅತೀ ದೊಡ್ಡ ಕಾರು ತಯಾರಿಕಾ ಕಂಪನಿ  ಮಾರುತಿ ಸುಜುಕಿ ಇನ್ನೆರಡು ದಿನಗಳಲ್ಲಿ ವೆಂಟಿಲೇಟರ್ ಉತ್ಪಾದನೆ ಕುರಿತು ಸ್ಪಷ್ಟ ಚಿತ್ರಣ ನೀಡುವುದಾಗಿ ಹೇಳಿದೆ. ಕಾರಣ ಕಾರು ತಯಾರಿಕೆಗೂ ವೆಂಟಿಲೇಟರ್ ಉತ್ಪಾದನೆಗೂ ಅಜಗಜಾಂತರ ವ್ಯತ್ಯಾಸವಿದೆ. ಇಷ್ಟೇ ಅಲ್ಲ ಜೀವ ಉಳಿಸುವ ವೆಂಟಿಲೇಟರ್ ಕುರಿತು ತಜ್ಞರು ಹಾಗೂ ನಿರ್ಮಾಣ ಕಂಪನಿಗಳ ಜೊತೆ ಮಾತುಕತೆ ನಡೆಸಿ ತಯಾರಿಕೆಗೆ ಮುಂದಾಗುವುದಾಗಿ ಹೇಳಿದೆ.
 

click me!