ವಾಹನ ಸವಾರರೇ ಎಚ್ಚರ !ಬೀಳುತ್ತೆ ಭಾರೀ ದಂಡ

By Web DeskFirst Published Jul 19, 2019, 8:32 AM IST
Highlights

ವಾಹನ ಸವಾರರೆ ಎಚ್ಚರ, ಯಾವುದೇ ರೀತಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದಲ್ಲಿ ಬೀಳುತ್ತೆ ಭಾರಿ ದಂಡ. ಜುಲೈ 20 ರಿಂದ ಹೊಸ ನಿಯಮ ಜಾರಿಯಾಗುತ್ತಿದೆ. 

ಬೆಂಗಳೂರು [ಜು.19] :  ಇತ್ತೀಚೆಗೆ ಪರಿಷ್ಕೃತವಾಗಿದ್ದ ಪ್ರಮುಖ ನಾಲ್ಕು ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳ ದಂಡದ ನಿಯಮವು ಶನಿವಾರದಿಂದ ನಗರ ವ್ಯಾಪ್ತಿ ಜಾರಿಗೆ ಬರಲಿದೆ.

ಈ ಸಂಬಂಧ ಸಾರ್ವಜನಿಕರಲ್ಲಿ ಜಾಗೃತಿ ಅಭಿಯಾನ ನಡೆಸಿದ ಸಂಚಾರ ಪೊಲೀಸರು, ಹೊಸ ನಿಯಮಾನುಸಾರ ದಂಡ ಪ್ರಯೋಗಕ್ಕೆ ಸಿದ್ಧತೆ ನಡೆಸಿದ್ದಾರೆ.

ಅತಿವೇಗದ ಚಾಲನೆ, ಮೊಬೈಲ್‌ನಲ್ಲಿ ಸಂಭಾಷಣೆ ನಿರತ ವಾಹನ ಚಾಲನೆ, ವಿಮೆ ಇಲ್ಲದ ವಾಹನಗಳ ಚಾಲನೆ ಹಾಗೂ ನಿಲುಗಡೆ ನಿಷೇಧಿತ ಪ್ರದೇಶದಲ್ಲಿ ವಾಹನಗಳ ನಿಲುಗಡೆ ಪ್ರಕರಣಗಳ ದಂಡ ಮೊತ್ತವನ್ನು ರಾಜ್ಯ ಸಾರಿಗೆ ಇಲಾಖೆಗೆ ಪರಿಷ್ಕೃತಗೊಳಿಸಿತ್ತು.

ಹೊಸ ದಂಡ ವಿಚಾರವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗಿದೆ. ಠಾಣೆಗಳ ಮಟ್ಟದಲ್ಲಿ ಆಟೋ, ಕ್ಯಾಬ್‌, ಬಸ್‌, ಶಾಲಾ ವಾಹನಗಳು, ಸರಕು ಸಾಗಾಣಿಕೆ ವಾಹನಗಳ ಚಾಲಕರು, ನಾಗರಿಕ ಹಿತರಕ್ಷಣಾ ಸಮಿತಿಗಳ ಹಾಗೂ ಜನ ಸಂಪರ್ಕ ಸಭೆ ಕರೆದು ಮಾಹಿತಿ ನೀಡಲಾಯಿತು. ಅಲ್ಲದೆ ಕರ ಪತ್ರಗಳ ಹಂಚಿಕೆ, ಪ್ರದರ್ಶನ ಅಳವಡಿಕೆ ಸೇರಿದಂತೆ ಎಲ್ಲಾ ರೀತಿಯ ಪ್ರಚಾರವನ್ನು ನಡೆಸಲಾಗಿದ್ದು, ಜ.20ರಿಂದ ಪರಿಷ್ಕೃತ ದಂಡನ್ವಯ ದಂಡ ವಿಧಿಸಲಾಗುತ್ತದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌ ತಿಳಿಸಿದರು.

ಈಗಾಗಲೇ ದಂಡ ಹೆಚ್ಚಳವಾಗಿರುವ ವಿವರ ಹಾಗೂ ಶನಿವಾರದಿಂದ ಜಾರಿಗೆ ಬರುವ ಬಗ್ಗೆ ಮಾಹಿತಿಯುಳ್ಳ ಫಲಕಗಳನ್ನು ಸಾರ್ವಜನಿಕರ ಮಾಹಿತಿಗಾಗಿ ನಗರದ ಹಲವು ಪ್ರಮುಖ ವೃತ್ತಗಳ ಬಳಿ ಅಳವಡಿಸಲಾಗಿದೆ.

ಸರ್ಕಾರದ ಪರಿಷ್ಕೃತ ದಂಡದ ವಿವರ ಹೀಗಿದೆ

ಪ್ರಕರಣ    ಪ್ರಸ್ತುತ ದರ    ಪರಿಷ್ಕೃತ ದರ [ರು.ಗಳಲ್ಲಿ]

ಅತಿವೇಗದ ಚಾಲನೆ    100 ರು.    1000 ರು.    

ಮೊಬೈಲ್‌ ಬಳಕೆ, ಅಪಾಯಕಾರಿ ಸರಕು ಸಾಗಣೆ     300 ರು.        1ನೇ ಬಾರಿಗೆ 1000, 2ನೇ ಬಾರಿಗೆ 2000 ರು.    

ವಿಮೆ ಇಲ್ಲದೆ ವಾಹನ ಚಾಲನೆ    500ರು.    1000ರು.    

ನೋ ಪಾರ್ಕಿಂಗ್‌    100ರು.    1000 ರು.    

click me!