
ಸತ್ಯ ಹೆಚ್ . ಜಿ
ಮಹಾವಿಷ್ಣುವು ಮನ್ವಂತರ ಒಂದರಲ್ಲಿ ವಿಕುಂಠೆ ಎಂಬುವಳ ಪುತ್ರನಾಗಿ ಅವತರಿಸಿದ್ದನು.ವಿಕುಂಠೆಯ ಮಗನಾದುದರಿಂದ ವಿಷ್ಣುವಿಗೆ ಮತ್ತು,ಅವನ ವಾಸಸ್ಥಾನಕ್ಕೆ "ವೈಕುಂಠ" ಎಂಬ ಹೆಸರು ಬಂದಿತು. ಇನ್ನೊಂದು ಪ್ರಸಂಗ ಹೀಗಿದೆ.ಭಾಗವತೋತ್ತಮನಾದ ನಂದಗೋಪನು ಶ್ರೀಕೃಷ್ಣನ ಸಾನಿಧ್ಯದಲ್ಲಿ,ಏಕಾದಶಿಯ ಉಪವಾಸ ಹಾಗೂ ದ್ವಾದಶಿಯ ಪಾರಣೆಗಳನ್ನು ತಪ್ಪದೆ ಆಚರಿಸುತ್ತಿದ್ದನು. ಒಮ್ಮೆ ಏಕಾದಶಿ ವ್ರತ ಆಚರಿಸಿ,
ಮರುದಿನ ದ್ವಾದಶಿ ಬಹು ಸ್ವಲ್ಪಕಾಲ ಮಾತ್ರ ಇದ್ದುದ್ದರಿಂದ ಬೆಳಗಿನ ಝಾವಕ್ಕೆ ಮೊದಲೇ ಎದ್ದು ಯಮುನಾನದಿಯಲ್ಲಿ ಸ್ನಾನಕ್ಕಿಳಿದನು. ಅದು ರಾಕ್ಷಸರ ಸಂಚಾರದ ಕಾಲವಾದ್ದರಿಂದ ವರುಣದೇವನ ಸೇವಕನಾದ ರಾಕ್ಷಸನು,ನಂದಗೋಪನನ್ನು ಬಂಧಿಸಿ ವರುಣನ ಬಳಿಗೆ ಎಳೆದೊಯ್ದನು. ಇತ್ತ ಸ್ನಾನಕ್ಕೆಂದು ಹೋದ ನಂದನು ಎಷ್ಟು ಹೊತ್ತಾದರೂ ಬಾರದಿರಲು, ಗೋಪಾಲಕುಲದವರೆಲ್ಲಾ, ಚಿಂತೆಗೀಡಾಗಿ,ಬಲರಾಮ, ಕೃಷ್ಣರಿಗೆ ಸುದ್ಧಿ ಮುಟ್ಟಿಸಿದರು. ಸರ್ವಜ್ಞನಾದ ಶ್ರೀಕೃಷ್ಣನು ಅವರಿಗೆಲ್ಲಾ ಅಭಯವಿತ್ತು ತಂದೆಯವರನ್ನು ಕರೆತರುವುದಾಗಿ ಹೇಳಿ, ವರುಣಲೋಕಕ್ಕೆ ಬಂದನು. ದೇವದೇವನಾದ ಶ್ರೀಕೃಷ್ಣನಿಗೆ ನಮಿಸಿದ ವರುಣನು ತನ್ನ ಸೇವಕನಿಂದಾದ ಅಪರಾಧವನ್ನು ಮನ್ನಿಸಬೇಕೆಂದು ಪ್ರಾರ್ಥಿಸಿ, ನಂದಗೋಪನನ್ನು ಶ್ರೀಕೃಷ್ಣನಿಗೆ ಒಪ್ಪಿಸಿದನು. ಶ್ರೀಕೃಷ್ಣನು ವರುಣನನ್ನು ಆಶೀರ್ವದಿಸಿ ತಂದೆಯೊಡನೆ ಗೋಕುಲಕ್ಕೆ ಹಿಂದಿರುಗಿದನು.
ವರುಣನ ಲೋಕದ ವೈಭವ ಹಾಗೂ ತನ್ನ ಮಗನಾದ ಶ್ರೀಕೃಷ್ಣನಿಗೆ ಸಿಕ್ಕ ಭವ್ಯಸ್ವಾಗತ ಮುಂತಾದವುಗಳನ್ನು ನೋಡಿ ನಂದಗೋಪನಿಗೆ ಬಹಳ ಸಂತೋಷವಾಯಿತು. ವರುಣಲೋಕದ ವೈಭವ, ಕೃಷ್ಣನಿಗೆ ವರುಣನಿಂದ ಆದ ಸತ್ಕಾರವನ್ನು ಎಳೆಎಳೆಯಾಗಿ, ಗೋಪಾಲರಿಗೆ ವರ್ಣಿಸಿದನು. ಗೋಪಾಲರಿಗೆಲ್ಲಾ ಹೆಮ್ಮೆ ಎನಿಸಿತಾದರೂ ಶ್ರೀಕೃಷ್ಣನು ಸಾಕ್ಷಾತ್ ಪರಮೇಶ್ವರನೇ, ಆದರೆ ಅವನ ನಿಜ ರೂಪ ನಾವು ಅರಿಯಲಾರೆವು ಎಂದು ಪರಿತಪಿಸಿದರು.ಇದನ್ನರಿತ ಕೃಷ್ಣ, ಎಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿ ಬರುವಂತೆ ತಿಳಿಸಿದನು. ಅದರಂತೆ ಅವರೆಲ್ಲಾ ಹಾಗೆಯೇ ಮಾಡಿದಾಗ, ಅವರ ಕಣ್ಣಿಗೆ ಅಲ್ಲಿ ವೈಕುಂಠ ಕಾಣಿಸಿ,ಅವರ ಮನಸ್ಸು ತೃಪ್ತಿಯನ್ನು ಹೊಂದಿತು, ಶ್ರೀಕೃಷ್ಣನು ಪರದೈವವೆಂಬ ಅವರ ನಂಬಿಕೆ ಸ್ಥಿರವಾಯಿತು. ಏಕಾದಶಿಯ ದಿನವೇ ಗೋಪರಿಗೆ ವೈಕುಂಠ ದರ್ಶನವಾದ ಕಾರಣಕ್ಕೆ ಏಕಾದಶಿಯನ್ನು “ವೈಕುಂಠಏಕಾದಶಿ” ಎಂದು ಕರೆದಿದ್ದಾರೆ.
ಒಂದಾನೊಂದು ಕಾಲದಲ್ಲಿ ವೈಖಾನಸನೆಂಬ ರಾಜರ್ಷಿಯು ಗೋಕುಲವೆಂಬ ನಗರದಲ್ಲಿ ವಾಸವಾಗಿದ್ದನು.ಒಮ್ಮೆ ಸ್ವಪ್ನದಲ್ಲಿ ತನ್ನ ತಂದೆಯು, ಮರಣಾನಂತರ ಪ್ರೇತತ್ವ ನಿವಾರಣೆಯಾಗದೆ ನರಕವನ್ನು ಅನುಭವಿಸುತ್ತಿರುವುದಾಗಿ ಗೋಚರವಾಗುತ್ತದೆ. ತನ್ನ ತಂದೆಯ ಆತ್ಮವನ್ನು ನರಕದಿಂದ ಪಾರು ಮಾಡುವ ಬಗೆಯನ್ನು ಪಂಡಿತೋತ್ತಮರಲ್ಲಿ ವಿಚಾರಿಸಲು, ಪುಷ್ಯ ಮಾಸದ ಶುಕ್ಷ ಪಕ್ಷದ ಏಕಾದಶಿ ಆಚರಣೆಯನ್ನು ಮಾಡುವುದರಿಂದ ತನ್ನ ತಂದೆಗೆ ಮೋಕ್ಷ ದೊರೆಯುವುದಾಗಿ ತಿಳಿಸಿದರು. ರಾಜನು ಅಂತೆಯೇ ಪುಷ್ಯ ಶುಕ್ಲ ಪಕ್ಷದ ಏಕಾದಶಿ ವ್ರತವನ್ನು ಆಚರಿಸಿ ಸೂಕ್ತ ದಾನಾದಿಗಳನ್ನು ಮಾಡಿದಾಗ, ಆತನ ತಂದೆಯ ಆತ್ಮವು ನರಕದಿಂದ ಮುಕ್ತಿಹೊಂದಿ, ಸ್ವರ್ಗವನ್ನು ಸೇರುತ್ತದೆ ಎಂಬುದಾಗಿ ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಲೋಕೋಪಕಾರಕ್ಕಾಗಿ ವ್ಯಾಸರು ಹದಿನೆಂಟು ಪುರಾಣಗಳನ್ನು ರಚಿಸಿದರು.ಇಂತಹ ಪುರಾಣಗಳಲ್ಲಿ "ನಾರದೀಯ ಪುರಾಣವೂ" ಒಂದು.ನಾರದರ ಪ್ರೇರಣೆಯಿಂದಲೇ ಅನೇಕ ಪವಿತ್ರ ಗ್ರಂಥಗಳ,ಪೂಜೆ ಪುನಸ್ಕಾರಗಳು, ವ್ರತಕಥೆಗಳೂ,ಈ ಜಗತ್ತಿಗೆ ಬಂದಿದೆ ಎಂದರೆ ಅತಿಶಯೋಕ್ತಿಯಾಗಲಾರದು,
ಇಂತಹ ಪವಿತ್ರ ವ್ರತಗಳಲ್ಲಿ ಅತ್ಯಂತ ಶ್ರೇಷ್ಠವಾದ, ಶ್ರೇಯಸ್ಕರವಾದ, ಸಕಲರೂ ಸುಲಭದಲ್ಲಿ ಆಚರಿಸಲು ಯೋಗ್ಯವಾದ ವ್ರತವೆಂದರೆ "ಏಕಾದಶಿ ವ್ರತ".
ಕೃಷ್ಣಾಮೃತಮಹಾರ್ಣವದ ಪ್ರಕಾರ,ಸಕಲ ತೀರ್ಥಕ್ಷೇತ್ರಗಳಿಂದ,ಸಕಲ ಪುಣ್ಯಕ್ಷೇತ್ರಗಳಿಂದ ಗಳಿಸಿದ ಪುಣ್ಯವು ಏಕಾದಶಿ ವ್ರತದ ಪುಣ್ಯಕ್ಕೆ ಸಮನಾಗಲಾರದು. ವಸಿಷ್ಠರ ಪ್ರಕಾರ, ಹನ್ನೊಂದು ಇಂದ್ರಿಯಗಳಿಂದ ಗಳಿಸಿದ ಸಕಲ ಪಾಪಗಳನ್ನು ಹನ್ನೊಂದನೆಯ ತಿಥಿಯಾದ ಏಕಾದಶಿಯು ಪರಿಹರಿಸುತ್ತದೆ, ಆದ್ದರಿಂದ ಏಕಾದಶಿಗೆ ಸಮವಾದುದು, ಪಾವನವಾದದ್ದು ಯಾವುದೂ ಇಲ್ಲ.
ವೈಕುಂಠ ಏಕಾದಶಿಯ ದಿನ ಶ್ರೀಮನ್ನಾರಾಯಣನ ದರ್ಶನ ಮಾಡಿ,ವೈಕುಂಠ ದ್ವಾರದ ( ಉತ್ತರ ದಿಕ್ಕಿನ ಬಾಗಿಲು ) ಮೂಲಕ ಹೊರ ಬರಬೇಕು. ಹೀಗೆ ಮಾಡಿದರೆ ಸಪ್ತ ಜನ್ಮದಲ್ಲಿ ಮಾಡಿದ ಪಾಪಗಳೂ ನಾಶವಾಗುತ್ತವೆ ಅನ್ನುವ ನಂಬಿಕೆ ಇದೆ. ಅಲ್ಲದೇ ವೈಕುಂಠ ಏಕಾದಶಿಯ ಪವಿತ್ರ ದಿನ ಅಭ್ಯಂಜನ ಮಾಡಿ, ಶ್ರೀನಿವಾಸ ಉತ್ಸವ ಮೂರ್ತಿಯ ಜೋಕಾಲಿಗೆ ತಲೆ ತಾಕಿಸಿ, ವೈಕುಂಠದ್ವಾರದಿಂದ ಹೊರಬಂದರೆ ಮುಕ್ತಿ ಕಟ್ಟಿಟ್ಟ ಬುತ್ತಿ ಅನ್ನುವ ನಂಬಿಕೆಯೂ ಇದೆ.. ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎನ್ನುತ್ತಾರೆ.
ಸೂರ್ಯನು ಧನುಸ್ಸುನಲ್ಲಿ ಪ್ರವೇಶಿಸಿದ ಅನಂತರ ಮಕರ ಸಂಕ್ರಮಣದವರೆಗೆ ನಡೆಯುವ ಮಾರ್ಗ ಮಧ್ಯದಲ್ಲಿ ಮುಕ್ಕೋಟಿ ಏಕಾದಶಿ ಬರುತ್ತದೆ. ಈ ದಿನ ವೈಕುಂಠದ ಬಾಗಿಲು ತೆರೆದಿರುತ್ತದೆ ಎಂದು ಎಲ್ಲ ವಿಷ್ಣು ದೇವಾಲಯಗಳಲ್ಲಿ ಉತ್ತರ ದ್ವಾರದ ಬಳಿ ಮುಂಜಾನೆಯಿಂದಲೇ ಭಗವಂತನ ದರ್ಶನಕ್ಕಾಗಿ ಭಕ್ತರು ಕಾದಿರುತ್ತಾರೆ. ಈ ದಿನ ಮಹಾವಿಷ್ಣು ಗರುಡ ವಾಹನದ ಮೇಲೆ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕಕ್ಕೆ ಇಳಿದು ಬಂದು ಭಕ್ತರಿಗೆ ದರ್ಶನ ನೀಡುತ್ತಾನೆ. ಆದಕಾರಣ ಇದಕ್ಕೆ ಮುಕ್ಕೋಟಿ ಏಕಾದಶಿ ಎಂಬ ಹೆಸರು ಬಂದಿದೆ. ಈ ಒಂದು ಏಕಾದಶಿಯು ಮೂರು ಕೋಟಿ ಏಕಾದಶಿಗಳಿಗೆ ಸಮವಾದ ಪವಿತ್ರತೆಯನ್ನು ಹೊಂದಿರುವುದರಿಂದ ಇದಕ್ಕೆ ಮುಕ್ಕೋಟಿ ಏಕಾದಶಿ ಎಂಬ ಹೆಸರು ಬಂದಿದೆ.
ಮುಕ್ಕೋಟಿ ಏಕಾದಶಿಯ ದಿನವೇ ಹಾಲಾಹಲ, ಅಮೃತ ಎರಡೂ ಹುಟ್ಟಿದವು. ಶಿವನು ಹಾಲಾಹಲವನ್ನು ಕುಡಿದು ಲೋಕವನ್ನು ರಕ್ಷಿಸಿದ್ದು ಈ ಏಕಾದಶಿಯಂದು. ಮಹಾಭಾರತ ಯುದ್ಧದಲ್ಲಿ ಭಗವದ್ಗೀತೆಯನ್ನು ಕೃಷ್ಣನು ಅರ್ಜುನನಿಗೆ ಇದೇ ದಿನ ಉಪದೇಶಿಸಿದ್ದನು. ಈ ದಿನ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆಗಳು,ಹೋಮ, ಹವನ ಜಪ ,ತಪಗಳು ನಡೆಯುತ್ತವೆ. ವಿಷ್ಣು ಪುರಾಣದಲ್ಲಿ ಲೋಕಕಂಟಕರಾದ ಇಬ್ಬರು ದುಷ್ಟ ರಾಕ್ಷಸರನ್ನು ಮಹಾವಿಷ್ಣುವು ಸಂಹರಿಸುವ ಮುನ್ನ , ಅವರಿಬ್ಬರೂ ವೈಕುಂಠ ಏಕಾದಶಿ ದಿನ ವೈಕುಂಠದ ಬಾಗಿಲನ್ನು ತೆರೆದಿಟ್ಟು,ಈ ಕತೆಯನ್ನ ಕೇಳಿದವರಿಗೆ ಮೋಕ್ಷ ಪ್ರಾಪ್ತಿಯಾಗುವಂತೆ ಬೇಡಿಕೊಂಡಾಗ,ವಿಷ್ಣುವು ತಥಾಸ್ತು ಎಂದು ಅವರನ್ನು ಸಂಹರಿಸಿದನು. ಆದುದರಿಂದ ಎಲ್ಲಾ ವಿಷ್ಣು ದೇವಾಲಯದ ಉತ್ತರದ ಬಾಗಿಲುಗಳನ್ನು ಆ ದಿನ ತೆಗೆದಿರುತ್ತಾರೆ.ಉಳಿದ ದಿನಗಳಲ್ಲಿ ಉತ್ತರ ದ್ವಾರಗಳನ್ನು ಮುಚ್ಚಿರುತ್ತಾರೆ .
ಪದ್ಮ ಪುರಾಣದ ಪ್ರಕಾರ ವಿಷ್ಣುವಿನಿಂದ ಹೊರ ಬಂದ ಶಕ್ತಿಯಿಂದ "ಮೊರಾ" ಎಂಬ ರಾಕ್ಷಸನನ್ನು ಸಂಹರಿಸಿದ ದಿನ.ಅಂದು ಧನುರ್ಮಾಸ ಶುಕ್ಲ ಏಕಾದಶಿಯಾಗಿದ್ದು ಆ ದಿನ ಅಕ್ಕಿಯ ಅನ್ನವನ್ನು ಉಣ್ಣದೆ ಉಪಾಸವಿರಬೇಕು. ಕಾರಣವೇನೆಂದರೆ.. ಮೊರಾಸುರನು ಅಂದು ಅಕ್ಕಿಯಲ್ಲಿ ಅಡಗಿ ಕುಳಿತಿದ್ದನು.ಆದುದರಿಂದ ಅಂದು ಅಕ್ಕಿಯಿಂದ ಮಾಡಿದ ಯಾವುದೇ ಪದಾರ್ಥವನ್ನು ತಿನ್ನ ಬಾರದು ಎಂದು ಹೇಳಿದೆ.
ಮುಕ್ಕೋಟಿ ಏಕಾದಶಿಯ ಒಂದು ದಿನದ ಉಪವಾಸ ಮಿಕ್ಕ 23 ಏಕಾದಶಿಗಳಲ್ಲಿ ಉಪವಾಸ ವಿದ್ದಂತೆ ಎಂದು ವಿಷ್ಣು ಪುರಾಣದಲ್ಲಿ ಹೇಳಿದೆ.ಮೊರಾ ಎಂದರೆ ರಾಜಸಿಕ ಹಾಗೂ ತಾಮಸಿಕ ಗುಣಗಳಿಗೆ ಪ್ರತೀಕ ಅವುಗಳನ್ನು ಉಪವಾಸ ವಿರುವುದರ ಮೂಲಕ ಜಯಿಸಿ ಮುಕ್ತಿಗೆ ಮಾರ್ಗ ದೊರಕಿಸಿಕೊಳ್ಳಬಹುದು.