ಸೌಜನ್ಯ ಕೇಸ್‌ನಲ್ಲಿ ತಪ್ಪು ಮಾಡಿಲ್ಲವೆಂದು ಅಣ್ಣಪ್ಪ ಸ್ವಾಮಿ ಮುಂದೆ ಆಣೆ; ಈ ದೈವದ ಬಗ್ಗೆ ನಿಮಗೆಷ್ಟು ಗೊತ್ತು?

By Sushma HegdeFirst Published Aug 28, 2023, 2:11 PM IST
Highlights

ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ತಪ್ಪು ಮಾಡಿಲ್ಲ. ತಪ್ಪಿತಸ್ಥರನ್ನು ಶಿಕ್ಷಿಸು ಎಂದು ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ದೇಗುಲದ ಮುಂದೆ ನಿಂತು ಧೀರಜ್ ಕೆಲ್ಲಾ, ಮಲ್ಲಿಕ್ ಮತ್ತು ಉದಯ್ ಜೈನ್ ಪ್ರಮಾಣ ಮಾಡಿದ್ದಾರೆ. ಅಷ್ಟಕ್ಕೂ ಈ ಪವರ್ ಫುಲ್ ಅಣ್ಣಪ್ಪ ದೈವದ ಬಗ್ಗೆ ನಿಮಗೆ ತಿಳಿದಿರದ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ.

ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ತಪ್ಪು ಮಾಡಿಲ್ಲ. ತಪ್ಪಿತಸ್ಥರನ್ನು ಶಿಕ್ಷಿಸು ಎಂದು ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ದೇಗುಲದ ಮುಂದೆ ನಿಂತು ಧೀರಜ್ ಕೆಲ್ಲಾ, ಮಲ್ಲಿಕ್ ಮತ್ತು ಉದಯ್ ಜೈನ್ ಪ್ರಮಾಣ ಮಾಡಿದ್ದಾರೆ. ಅಷ್ಟಕ್ಕೂ ಈ ಪವರ್ ಫುಲ್ ಅಣ್ಣಪ್ಪ ದೈವದ ಬಗ್ಗೆ ನಿಮಗೆ ತಿಳಿದಿರದ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ.

ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ ಇದೀಗ ಮುಂಜುನಾಥನ ಸನ್ನಿಧಿ ಬಳಿಯಲ್ಲಿರುವ ಅಣ್ಣಪ್ಪನ ಬೆಟ್ಟದವರೆಗೂ ಹೋಗಿದ್ದು, ಪ್ರಕರಣದಲ್ಲಿ ಆರೋಪಿಗಳು ಎಂದು ಆರೋಪಿಸಲಾಗುತ್ತಿರುವ ಧೀರಜ್ ಕೆಲ್ಲಾ, ಮಲ್ಲಿಕ್ ಜೈನ್ ಮತ್ತು ಉದಯ್ ಜೈನ್ ಪ್ರಮಾಣ ಮಾಡಿ ತಾವು ಏನೂ ತಪ್ಪು ಮಾಡಿಲ್ಲ. ತಪ್ಪಿತಸ್ಥರನ್ನು ಶಿಕ್ಷಿಸುವಂತೆ ದೇವರ ಮುಂದೆ ಪ್ರಾರ್ಥನೆ ಮಾಡಿದ್ದಾರೆ. ಅಷ್ಟಕ್ಕೂ ಅಣ್ಣಪ್ಪ ದೈವದ ಮಹತ್ವವೇನು ಎಂಬ ಮಾಹಿತಿ ಇಲ್ಲಿದೆ.

ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ಲಿಂಗ ನೆಲೆಸಲು ಅಣ್ಣಪ್ಪ ದೈವವೇ ಕಾರಣ. ಇದು ತುಂಬಾ ಶಕ್ತಿಶಾಲಿ ದೈವ ಆಗಿದ್ದು, ಶ್ರೀ ಕ್ಷೇತ್ರದ ರಕ್ಷಕನಾಗಿ ಕಾಪಾಡುತ್ತಿದ್ದಾನೆ ಅಣ್ಣಪ್ಪ. ಮಂಜುನಾಥನ ಜತೆಗೆ ಅಣ್ಣಪ್ಪನ ದರ್ಶನವನ್ನೂ ಭಕ್ತರು ಪಡೆಯುತ್ತಾರೆ. ಯಾವುದೇ ವಿಚಾರವಿರಲಿ ಇಲ್ಲಿ ಆಣೆ-ಪ್ರಮಾಣ ನಡೆಯುತ್ತವೆ. ತಪ್ಪಿತಸ್ಥರಿಗೆ ಅಣ್ಣಪ್ಪ ಶಿಕ್ಷಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಅಣ್ಣಪ್ಪ ಸ್ವಾಮಿಯ ಮಹತ್ವ ಏನು ಹಾಗೂ ಇಲ್ಲಿ ಮಂಜುನಾಥ ಸ್ವಾಮಿ ನೆಲೆಸಿದ್ದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಭೂಮಿಗೆ ಬಂದ ನಾಲ್ವರು ಪ್ರಮಥ ಗಣಗಳು

ಒಮ್ಮೆ ಈಶ್ವರ ದೇವರಿಗೆ, ಭೂಮಿಯ ಮೇಲೆ ಧರ್ಮ ನಾಶವಾಗುತ್ತಿದೆ ಎಂದು ಅರಿವು ಉಂಟಾಯಿತು. ಇದು ಹೌದೇ ಎಂಬುದನ್ನು ಪರೀಕ್ಷೆ ಮಾಡಲು ಅವರು ನಾಲ್ವರು ಪ್ರಮಥ ಗಣಗಳನ್ನು ಕಳಿಸಿದರು. ಇವರೇ ಕಾಳರಾಹು, ಕುಮಾರಸ್ವಾಮಿ, ಕಾಳರ್ಕಾಯ್ ಹಾಗೂ ಕನ್ಯಾಕುಮಾರಿ. ಇವರು ಮಾರುವೇಷದಲ್ಲಿ ಭೂಮಿಯಲ್ಲಿ ತಿರುಗಾಡುತ್ತ, ಧರ್ಮ ಕರ್ಮ ಮಾನವೀಯತೆಗಳನ್ನು ಮರೆತವರನ್ನು ಶಿಕ್ಷಿಸುತ್ತ, ದಕ್ಷಿಣ ಕನ್ನಡದ ನೇತ್ರಾವತಿ ನದಿ ತೀರದ ಕುಡುಮ ಎಂಬಲ್ಲಿಗೆ ಬಂದರು. ಅಲ್ಲಿದ್ದ ನೆಲ್ಯಾಡಿ ಬೀಡಿನ ಒಡೆಯರಾದ ಬಿರ್ಮಣ್ಣ ಹೆಗ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎಂಬ ದಂಪತಿಗಳನ್ನೂ ಹೀಗೇ ಪರೀಕ್ಷಿಸಿದರು. ಬಿರ್ಮಣ್ಣ ಹೆಗ್ಗಡೆ ದಂಪತಿಯ ದಾನ- ಧರ್ಮಶೀಲತೆಗಳನ್ನು ಕಂಡು ಸಂತುಷ್ಟರಾದರು. ಅಂದು ರಾತ್ರಿ ನೆಲ್ಯಾಡಿ ಬೀಡಿನಲ್ಲೇ ಮಲಗಿದರು.

ಶನಿ ದೇವನಿಂದ 4 ರಾಶಿಯವರಿಗೆ ಸಂಪತ್ತು ಹಾಗೂ ಗೌರವ ಹೆಚ್ಚಳ..!

 

ನಾಲ್ಕು ದೈವಗಳಿಗೆ ನಾಲ್ಕು ದೇವಸ್ಥಾನ
 
ಆ ದಿನ ರಾತ್ರಿ ಹೆಗ್ಗಡೆಯವರಿಗೆ ಕನಸು ಬಿತ್ತು. ತಾವು ಪ್ರಮಥ ಗಣಗಳೆಂದೂ, ತಮಗಿಲ್ಲಿ ನೆಲೆಸಲು ಇಷ್ಟವೆಂದೂ, ಈ ಮನೆಯನ್ನು ತಮಗೆ ಬಿಟ್ಟುಕೊಟ್ಟು ಬೇರೆ ಮನೆ ಕಟ್ಟಿಕೊಳ್ಳುವಂತೆಯೂ ಆದೇಶಿಸಿದರು. ಮರುದಿನ ಬೆಳಗ್ಗೆ ಎದ್ದು ನೋಡುವಾಗ ದೈವಗಳು ಮಾಯವಾಗಿ, ಆಯುಧಗಳು ಉಳಿದುಕೊಂಡಿದ್ದವು. ಹೆಗ್ಗಡೆಯವರು ದೈವಗಳ ಆದೇಶದಂತೆ ನಾಲ್ಕೂ ದೈವಗಳಿಗೆ ನಾಲ್ಕು ಗುಡಿ ಕಟ್ಟಿಸಿದರು. ನೆಲ್ಯಾಡಿ ಬೀಡನ್ನು ಬಿಟ್ಟುಕೊಟ್ಟರು. ಈ ನಡುವೆ, ಶಿವನ ಪ್ರಮಥ ಗಣಗಳಲ್ಲಿ ಒಬ್ಬನಾದ ಗಣಮಣಿ ಎಂಬಾತ ಕೂಡ ಶಿವನಿಂದ ನಿರ್ದೇಶಿತನಾಗಿ ಭೂಮಿಗೆ ಬಂದವನು, ನೆಲ್ಯಾಡಿ ಬೀಡಿನಲ್ಲಿ ಅಣ್ಣಪ್ಪ ಎಂಬ ಹೆಸರಿನಲ್ಲಿ ಸೇವಕನ ರೂಪದಲ್ಲಿ ವೇಶ ಮರೆಸಿಕೊಂಡು ನೆಲೆಸಿದ್ದನು.

ನೆಲ್ಯಾಡಿ ಬೀಡಿನಲ್ಲಿ ಶಿವಲಿಂಗ ಪ್ರತಿಷ್ಠಾಪನೆ

ಇದಾದ ಬಳಿಕ ಒಮ್ಮೆ ಶಿವಯೋಗಿಗಳು ಹೆಗ್ಗಡೆಯವರ ಬೀಡಿಗೆ ಭೇಟಿ ನೀಡಿದರು. ಇವರು ಶಿವನೇ ಎಂದೂ ಹೇಳುತ್ತಾರೆ. ಶಿವಪೂಜೆಯಿಲ್ಲದೆ ತಾನು ಭೋಜನ ಸ್ವೀಕರಿಸುವುದಿಲ್ಲವೆಂದು ಅವರು ಹೇಳಿದಾಗ, ಹತ್ತಿರದಲ್ಲೆಲ್ಲೂ ಶಿವ ಸಾನಿಧ್ಯವಿಲ್ಲದುದರಿಂದ ಜೈನ ಮೂಲದವರಾದ ಹೆಗ್ಗಡೆ ದಂಪತಿಗಳು ಸಹಜವಾಗಿಯೇ ಚಿಂತಿತರಾದರು. ಅಂದು ರಾತ್ರಿ, ಧರ್ಮದೇವತೆಗಳು ಹೆಗ್ಗಡೆ ಕನಸಿನಲ್ಲಿ ಬಂದು, ಅಣ್ಣಪ್ಪನನ್ನು ಕದ್ರಿಗೆ ಕಳಿಸಿ ಶಿವಲಿಂಗವನ್ನು ತರಿಸುವಂತೆ ಪ್ರೇರಣೆ ನೀಡಿದರು. ಹಾಗೆಯೇ ಹೆಗ್ಗಡೆಯವರು ಅಣ್ಣಪ್ಪನನ್ನು ಕದ್ರಿಗೆ ಕಳಿಸಿದರು. ಕದ್ರಿಯಲ್ಲಿ ಕಾವಲಿದ್ದ ನೂರಾರು ಪ್ರಮಥ ಗಣಗಳು ಲಿಂಗವನ್ನು ಒಯ್ಯುವ ಅಣ್ಣಪ್ಪನ ಉದ್ದೇಶಕ್ಕೆ ತಡೆಯೊಡ್ಡಿದರು. ಅವರನ್ನೆಲ್ಲ ಬಗ್ಗು ಬಡಿದ ಅಣ್ಣಪ್ಪ, ರಾತ್ರಿ ಬೆಳಗಾಗುವುದರೊಳಗೆ ಶಿವಲಿಂಗವನ್ನು ತಂದು ನೆಲ್ಯಾಡಿ ಬೀಡಿನಲ್ಲಿ ಪ್ರತಿಷ್ಠಾಪಿಸಿದನು.

ಮನೆಯಿಂದ ಬಡತನ ಓಡಿಸಲು ಏನು ಮಾಡಬೇಕು?; ಇಲ್ಲಿದೆ ಉಪಾಯ..!

 

ಸೇವಕನಾಗಿ ಅಣ್ಣಪ್ಪನನ್ನು ಆರಿಸಿಕೊಂಡ ಶಿವ

ಹಾಗೆ ಅಣ್ಣಪ್ಪ ತಂದ ಶಿವಲಿಂಗವೇ ಇಂದು ಶ್ರೀ ಮಂಜುನಾಥ ಎಂಬುದಾಗಿ ಪ್ರಸಿದ್ಧವಾಗಿದೆ. ಶಿವನು ಸ್ವತಃ ಬಂದು ನೆಲೆ ನಿಲ್ಲಲು ತನ್ನ ಸೇವಕನಾಗಿ ಅಣ್ಣಪ್ಪನನ್ನು ಆರಿಸಿಕೊಂಡಿದ್ದ. ಇದಾದ ಬಳಿಕ, ಹೆಗ್ಗಡೆಯವರು ಅಣ್ಣಪ್ಪ ಸಾಮಾನ್ಯನಲ್ಲ ಎಂಬುದನ್ನು ಅರಿತು ಅವನಲ್ಲಿ ಪ್ರಶ್ನಿಸಿದರು. ಆಗ ತನ್ನ ನಿಜರೂಪವನ್ನು ತೋರಿಸಿದ ಗಣಮಣಿ, ತನಗೂ ಒಂದು ಗುಡಿ ಕಟ್ಟಿಸುವಂತೆಯೂ, ನಿರಂತರವಾಗಿ ನೆಲ್ಯಾಡಿ ಬೀಡನ್ನೂ ಹೆಗ್ಗಡೆ ಕುಟುಂಬವನ್ನೂ ಕಾಪಾಡಿಕೊಂಡು ಬರುವುದಾಗಿಯೂ ಹೇಳಿದನು. ಹಾಗೆಯೇ ಅಣ್ಣಪ್ಪ ದೈವ ಎಂಬ ರೂಪದಲ್ಲಿ ಅಲ್ಲಿ ನೆಲೆಸಿದನು.
ಈಗ ಧರ್ಮಸ್ಥಳವು ಶ್ರೀ ಮಂಜುನಾಥ ಸ್ವಾಮಿಯ ದೇವಾಲಯದ ಜೊತೆಗೆ ಅಣ್ಣಪ್ಪ ದೈವದ ಗುಡಿ, ನಾಲ್ವರು ಧರ್ಮದೇವತೆಗಳ ಗುಡಿಯಿಂದಾಗಿಯೂ ಪ್ರಸಿದ್ಧವಾಗಿದೆ. ಬಾಹುಬಲಿಯ ಮೂರ್ತಿ ಕೂಡ ಇಲ್ಲಿ ಈಗ ನೆಲೆಯಾಗಿದೆ. ಸರ್ವಧರ್ಮಗಳ ಸಹಿಷ್ಣುತೆಯ ಸಂಗಮ ಸ್ಥಾನವಾಗಿರುವ ಇಲ್ಲಿಗೆ ಭೇಟಿ ನೀಡಿದವರು ಮಂಜುನಾಥ ಸ್ವಾಮಿಯ ಜೊತೆಗೆ ಅಣ್ಣಪ್ಪ ಸ್ವಾಮಿಯ ಆಶೀರ್ವಾದವನ್ನೂ ಪಡೆದರೆ ಅವರ ಯಾತ್ರೆ ಸಂಪೂರ್ಣ ಆದಂತೆ ಎನ್ನುತ್ತಾರೆ.

click me!