ಜಿ. ಪರಮೇಶ್ವರ್ ಅಥವಾ ಡಿಕೆಶಿ, ಯಾರಾಗ್ತಾರೆ ಮುಂದಿನ ಸಿಎಂ: ಕೋಡಿಹಳ್ಳಿ ಸ್ವಾಮೀಜಿ ಭವಿಷ್ಯವೇನು?

Published : Feb 19, 2026, 12:26 PM IST
Kodimutt

ಸಾರಾಂಶ

ಕರ್ನಾಟಕದ ರಾಜಕಾರಣ ಹಾಗೂ ಜಗತ್ತಿನ ಬಗ್ಗೆ ಆಗಾಗ ಭವಿಷ್ಯ ನುಡಿಯುವ ಕೋಡಿಹಳ್ಳಿ ಶ್ರೀಗಳು ಇದೀಗ ರಾಜ್ಯ ರಾಜಕಾರಣದ ಬಗ್ಗೆ ಮತ್ತೊಮ್ಮೆ ತಮ್ಮ ಭವಿಷ್ಯ ನುಡಿದಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಆಪತ್ತಿಲ್ಲ ಎಂದಿದ್ದಾರೆ.

ಚಿಕ್ಕಬಳ್ಳಾಪುರ: ಸಾಮಾನ್ಯವಾಗಿ ಮಳೆ, ಬೆಳೆ ಹಾಗೂ ಕರ್ನಾಟಕ, ದೇಶ ಹಾಗೂ ಜಗತ್ತಿನ ಭವಿಷ್ಯ ಹೇಳುವ  ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಇದೀಗ ಕರ್ನಾಟಕದ ರಾಜಕಾರಣದ ಭವಿಷ್ಯವನ್ನೂ ನುಡಿದಿದ್ದು, ಹಿಂದೆ ಹೇಳಿದಂತೆಯೇ ಆಗಲಿದೆ ಎಂದಿದ್ದಾರೆ.

ಕರ್ನಾಟಕ ಸರ್ಕಾರಕ್ಕೆ ಯಾವುದೇ ಆಪತ್ತಿಲ್ಲ

ಕರ್ನಾಟಕದ ರಾಜಕಾರಣಕ್ಕೆ ಯಾವುದೂ ಆಪತ್ತಿಲ್ಲ ಎಂದು ಹೇಳಿರುವ ಶ್ರೀಗಳು, ಜಿ.ಪರಮೇಶ್ವರ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರಲ್ಲಿ ಒಬ್ಬರು ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದರೂ, ಸಿದ್ದರಾಮಯ್ಯ ಈಗಲೇ ಕುರ್ಚಿ ಬಿಟ್ಟು ಕೊಡುತ್ತಾರೆಯೇ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ನೀಡಲಿಲ್ಲ. ಸಂಕ್ರಾಂತಿ ನಂತರ ಬಜೆಟ್ ಮಂಡಿಸಲಾಗುತ್ತದೆ. ಆಮೇಲೆ ಸ್ವಲ್ಪ ರಾಜಕಾರಣದಲ್ಲಿ ಬದಲಾವಣೆಯಾದರೂ, ಸಿದ್ದರಾಮಯ್ಯ ಕುರ್ಚಿ ಬಿಟ್ಟರೆ ಮಾತ್ರ ಅಧಿಕಾರ ಬದಲಾವಣೆಯಾಗಲಿದೆ ಎಂದಿದ್ದಲ್ಲದೇ, ರಾಜ್ಯ ರಾಜಕಾರಣದಲ್ಲಿ ಅಂಥದ್ದೇನೂ ಮಹತ್ವದ ಬದಲಾವಣೆ ಇಲ್ಲ ಎಂಬ ಸುಳಿವನ್ನೂ ನೀಡಿದ್ದಾರೆ.

ಕರ್ನಾಟಕದಲ್ಲಿ ಮಳೆ, ಬೆಳೆಗೆ ಯಾವುದೇ ತೊಂದರೆ ಇಲ್ಲವೆಂದು ಅಭಯ ನೀಡಿರುವ ಶ್ರೀಗಳು, ಮಹಾ ಶಿವರಾತ್ರಿಯಂದು ಕಾಶಿ ವಿಶ್ವನಾಥನ ದರ್ಶನ ಮಾಡ್ಕೊಂಡು ಬಂದಿದ್ದು, ಕರ್ನಾಟಕದ ಜನತೆಗೆ ಒಳ್ಳೇಯದಾಗಲೆಂದು ಪ್ರಾರ್ಥಿಸಿಕೊಂಡು ಬಂದಿದ್ದೇನೆಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಕೋಡಿಹಳ್ಳಿ ಶ್ರೀಗಳು ಉತ್ತರಿಸಿದ್ದಾರೆ.

ಕಾಶಿ ಜೊತೆ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ್ದಾಗಿ ಹೇಳಿರುವ ಶ್ರೀಗಳು ವಿಶ್ವದಲ್ಲಿ ಯುದ್ಧದ ಭೀತಿ ಮುಂದುವರಿಯಲಿದೆ. ಜಗತ್ತಿಗೆ ಒಂದಲ್ಲೊಂದು ಸಮಸ್ಯೆ ಎದುರಾಗಲಿದೆ ಎನ್ನುತ್ತಲೇ, ಕರ್ನಾಟಕ ಸುರಕ್ಷಿತವಾಗಲಿದೆ ಎಂಬ ಅಭಯ ನೀಡಿದ್ದಾರೆ.

ಈ ಹಿಂದೆ ಕರ್ನಾಟಕದ ಬಗ್ಗೆ ಏನು ಭವಿಷ್ಯ ನುಡಿದಿದ್ದರು ಶ್ರೀಗಳು?

ರಾಜ್ಯದಲ್ಲಿ ಕಳೆದ ಸೆಪ್ಟೆಂಬರ್‌ನಿಂದ ರಾಜಕಾರಣದ ಕಿಚ್ಚು ಜೋರಾಗಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಸಿಎಂ ಗಾದಿ ಸಿಗಬೇಕೆಂಬ ಕೂಗು ಕೇಳಿ ಬರುತ್ತಿದೆ. ತೆರೆ ಮರೆಯಲ್ಲಿ ಪವರ್​ ಶೇರಿಂಗ್ ಕಸರತ್ತು ನಡೆಯುತ್ತಲೇ ಇದ್ದು, ತಣ್ಣಗಾಗಿದೆ ಎಂದೆನಿಸದರೂ ಆಗಾಗ ಮತ್ತೆ ಜೋರಾಗುತ್ತಿದೆ. ಈ ಹಿಂದೆ ಕೋಡಿಮಠದ ಶ್ರೀಗಳು, ಈ ಮುಂಚೆಯೂ ಸಿದ್ದರಾಮಯ್ಯ ಅಧಿಕಾರದ ಬಿಟ್ಟು ಕೊಟ್ಟು ಬಿಟ್ಟರೆ ಮಾತ್ರ ಡಿಕೆಶಿ ಸಿಎಂ ಆಗಲಿದ್ದಾರೆ ಎಂದಿದ್ದರು. ಬಿಡಿಸಿಕೊಳ್ಳುವುದು ಅಷ್ಟು ಸುಲಭವೂ ಅಲ್ಲವೆಂದಿದ್ದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 20 ತಿಂಗಳು ಅಗುತ್ತಿದ್ದಂತೆಯೇ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ಕುರ್ಚಿ ಬಿಟ್ಟು ಕೊಡಬೇಕು ಎಂದು ಡಿಕೆಶಿ ಬೆಂಬಲಿಗರು ಆಗ್ರಹಿಸುತ್ತಿದ್ದರು. ಅಲ್ಲದೇ ಕಳೆದ ವರ್ಷ ನವರಾತ್ರಿಯಲ್ಲಿ ಡಿ.ಕೆ. ಶಿವಕುಮಾರ್ ಅವರು ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಸದ್ಗುರು ಜಗ್ಗಿ ವಾಸುದೇವ, ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡಿದ್ದೂ ದೊಡ್ಡ ಸುದ್ದಿ ಮಾಡಿತ್ತು. ಈ ನಡೆ ಕಾಂಗ್ರೆಸ್‌ನಲ್ಲೂ ಸಂಚಲನ ಸೃಷ್ಟಿಸಿದ್ದು, ರಾಜ್ಯ ರಾಜಕಾರಣದಲ್ಲಿ ಎಂದೂ ಕೇಳರಿಯದ ಬದಲಾವಣೆ ಆಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಅಂಥ ಯಾವುದೇ ದೊಡ್ಡ ಬದಲಾವಣೆ ಆಗದೇ ಹೋದರೂ, ಡಿಕೆಶಿ ಇಂದಿಗೂ ಕುರ್ಚಿಗಾಗಿ ಯತ್ನಿಸುತ್ತಿರುವುದು ಸುಳ್ಳಲ್ಲ.

PREV
Read more Articles on
click me!

Recommended Stories

ಶುಕ್ರ ಗ್ರಹವು ಎರಡು ಬಾರಿ ತನ್ನ ಕೆಳ ರಾಶಿಯಲ್ಲಿ, ಈ 3 ರಾಶಿಗೆ ಬ್ಯಾಂಕ್ ಬ್ಯಾಲೆನ್ಸ್ ಡಬಲ್, ಹೊಸ ಮನೆ
5 ರಾಶಿಗೆ ಸುವರ್ಣ ಸಮಯ ಪ್ರಾರಂಭ, ಶುಕ್ರ ಮತ್ತು ಮಂಗಳನ ವಿಶೇಷ ಸಂಯೋಗದಿಂದ ದೊಡ್ಡ ಅದೃಷ್ಟ