ಆಂತರಿಕ ಕಚ್ಚಾಟದಿಂದಲೇ ಸಿಎಂ ಸಿದ್ದರಾಮಯ್ಯ ಅಧಿಕಾರ ತ್ಯಾಗ ಮಾಡ್ತಾರೆ: ಕಾಲಜ್ಞಾನಿ ಕೊಡೇಕಲ್‌ ಬಸವಣ್ಣ ಭವಿಷ್ಯ!

Published : Nov 12, 2023, 06:55 PM IST
ಆಂತರಿಕ ಕಚ್ಚಾಟದಿಂದಲೇ ಸಿಎಂ ಸಿದ್ದರಾಮಯ್ಯ ಅಧಿಕಾರ ತ್ಯಾಗ ಮಾಡ್ತಾರೆ: ಕಾಲಜ್ಞಾನಿ ಕೊಡೇಕಲ್‌ ಬಸವಣ್ಣ ಭವಿಷ್ಯ!

ಸಾರಾಂಶ

ಆಂತರಿಕ ಕಚ್ಚಾಟದಿಂದ ಸರ್ಕಾರದ ಮುಖ್ಯಮಂತ್ರಿ ಅಧಿಕಾರ ತ್ಯಾಗ ಮಾಡಬೇಕಾಗುತ್ತದೆ ಎಂದು ಕಾಲಜ್ಞಾನಿ ಕೊಡೇಕಲ್‌ ಬಸವಣ್ಣ ಭವಿಷ್ಯ ನುಡಿದಿದ್ದಾರೆ.

ಯಾದಗಿರಿ (ನ.12): ರಾಜ್ಯ ರಾಜಕಾರಣದ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದಿರುವ ಯಾದಗಿರಿ ಜಿಲ್ಲೆಯ ಕಾಲಜ್ಞಾನಿ ಕೊಡೇಕಲ್‌ ಬಸವಣ್ಣ ಅವರು ಎಲ್ಲ ಪಕ್ಷಗಳಲ್ಲೂ ಆಂತರಿಕ ಕಚ್ಚಾಟ ಶುರುವಾಗಲಿದೆ. ಆಂತರಿಕ ಕಚ್ಚಾಟದಿಂದ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಅಧಿಕಾರ ತ್ಯಾಗ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. 

ದೀಪಾವಳಿ ಹಬ್ಬದಂದು ಯಾದಗರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಕಾಲಜ್ಞಾನಿ ಬಸವಣ್ಣ ಅವರು ರಾಜ್ಯ ರಾಜಕಾರಣ ಮತ್ತು ಸರ್ಕಾರದ ಬಗ್ಗೆ ನುಡಿದಿರುವ ಭವಿಷ್ಯ ಎಲ್ಲರಿಗೂ ಅಚ್ಚರಿ ತಂದಿದೆ. ರಾಜ್ಯದ ಎಲ್ಲಾ ಪಕ್ಷಗಳಲ್ಲೂ ಆಂತರಿಕ ಕಚ್ಚಾಟ ಆರಂಭವಾಗಿದೆ. ಕೂಡಲೇ ತಮ್ಮ ತಮ್ಮ ಪಕ್ಷಗಳಲ್ಲಿನ ಗೊಂದಲಗಳನ್ನು ಸರಿಪಡಿಸಿಕೊಳ್ಳದಿದ್ದರೆ ಸರ್ಕಾರಕ್ಕೆ ಕಂಟಕವಾಗಲಿದೆ. ಒಂದು ವೇಳೆ ಎಲ್ಲರೂ ವಿಶ್ವಾಸದಿಂದ ಹೋಗದಿದ್ದರೆ ಅಧಿಕಾರ ತ್ಯಾಗ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಪಕ್ಷದಲ್ಲಿನ ಆಂತರಿಕ ಕಚ್ಚಾಟದಿಂದ ಇಂಡಿ ಮೈತ್ರಿ ಒಕ್ಕೂಟದಲ್ಲೂ ಗೊಂದಲ ಸೃಷ್ಟಿಯಾಗುವ ಸಾಧ್ಯತೆಯಿದೆ. ಇದರಿಂದಾಗಿ ಇಂಡಿ ಒಕ್ಕೂಟದಿಂದ ಹಲವರು ಹೊರಬರಬಹುದು. ಹಲವು ಪಕ್ಷಗಳು ಇಂಡಿ ಒಕ್ಕೂಟವನ್ನು ಸೇರಿ ಅಧಿಕಾರ ಪಡೆಯಲು ಯತ್ನ ಮಾಡುತ್ತಿವೆ. ಹಲವರು ಸೇರಿ ಅಧಿಕಾರ ಪಡೆಯಲು ಮುಂದಾಗಿರುವವರು ಸಹ ಎಚ್ಚರಿಕೆ ಹೆಜ್ಜೆ ಇಡಬೇಕು. ಇಲ್ಲದಿದ್ದರೆ ಅವರವರೇ ಘಾತಕತನ (ಮೋಸ) ಮಾಡುತ್ತಾರೆ. ರಾಜಕೀಯದಲ್ಲಿ ಮುಂದಿನ ದಿ‌ನಗಳಲ್ಲಿ ಯಾರನ್ನು ನಂಬದಂತಹ ದಿನಮಾನಗಳು ನಡೆಯುತ್ತವೆ ಎಂಬ ಸುಳಿವನ್ನು ನೀಡಿದ್ದಾರೆ. 
ಕಾಲಜ್ಞಾನಿ ಬಸವಣ್ಣ ಅವರ ಭವಿಷ್ಯದಂತೆ ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಆಂತರಿಕ ಕಲಹಗಳು ಶುರುವಾಗಿರುವುದು ಗೋಚರವಾಗುತ್ತಿದೆ. ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ದಲಿತ ಮುಖ್ಯಮಂತ್ರಿ ಕೂಗು ಹಾಗೂ ಮೂರು ಡಿಸಿಎಂ ಕೂಗು ಜೋರಾಗಿ ಸದ್ದು ಮಾಡುತ್ತಿದೆ. ಇನ್ನು ಸರ್ಕಾರದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಹಲವರು ಮಾತನಾಡಿದ್ದು, ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿ ಎಂದು ಕೆಲವರು ಹೇಳಿದರೆ, ಇನ್ನು ಎರಡು ವರ್ಷಗಳಲ್ಲಿ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಆಗ್ತಾರೆ ಎಂದು ಮತ್ತೆ ಕೆಲವರು ಹೇಳಿದ್ದಾರೆ. ಮತ್ತೊಂದೆಡೆ ಸತೀಶ್‌ ಜಾರಕಿಹೊಳಿ ಅವರ ನಡೆಯೂ ಕೂಡ ವಿಭಿನ್ನ ಹಾದಿಯಲ್ಲಿ ಸಾಗುತ್ತಿದೆ. ಇದು ಆಡಳಿತಾರೂಢ ಕಾಂಗ್ರೆಸ್‌ಗೆ ದೊಡ್ಡ ಪೆಟ್ಟು ನೀಡಬಹುದು.

ಮತ್ತೊಂದೆಡೆ ಬಿಜೆಪಿಯಲ್ಲಿ ಕಳೆದೆರಡು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಗ ಶಾಸಕ ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಇದರಿಂದ ಮೇಲ್ನೋಟಕ್ಕೆ ಕೆಲವರು ಸುಮ್ಮನಿದ್ದರೂ ಒಳಗೊಳಗೆ ಬೇಗುದಿ ಬೇಯುತ್ತಿದ್ದಾರೆ. ಇನ್ನು ಮಾಜಿ ಸಚಿವ ವಿ. ಸೋಮಣ್ಣ ಅವರು ಕೂಡ ವಿಜಯೇಂದ್ರ ಅವರ ಆಯ್ಕೆಯ ಬಗ್ಗೆ ಸಿಡಿದೇಳುವ ಸಾಧ್ಯತೆಯಿದೆ. ಇನ್ನು ರಾಜ್ಯದಲ್ಲಿ ಹಲವು ಹಿರಿಯ ನಾಯಕರಿದ್ದರೂ ಬಿಎಸ್‌ವೈ ಮಗನಿಗೆ ರಾಜ್ಯಧ್ಯಕ್ಷ ಪಟ್ಟ ಕೊಟ್ಟಿದ್ದಕ್ಕೆ ಆಂತರಿಕ ಕಚ್ಚಾಟ ಆರಂಭವಾಗುವ ಸಾಧ್ಯತೆ ನಿಚ್ಚಳವಾಗಿ ಕಾಣಿಸುತ್ತಿದೆ.

PREV
Read more Articles on
click me!

Recommended Stories

Financial success by date of birth: ನಿಮ್ಮ ಜನ್ಮಸಂಖ್ಯೆ ನಿಮ್ಮ ಸಂಪತ್ತಿನ ರಹಸ್ಯವೇ?
ಡಿಸೆಂಬರ್ 8 ರಿಂದ 14 ಲಕ್ಷ್ಮಿ ನಾರಾಯಣ ರಾಜಯೋಗ, 5 ರಾಶಿಗೆ ಸಂಪತ್ತಿನ ಲಾಭ-ಉತ್ತಮ ಯಶಸ್ಸು