
ಉಡುಪಿ: ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ನಟ ದಳಪತಿ ವಿಜಯ್ ಅವರು ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಮಳೆಯ ನಡುವೆಯೂ ದೇವಸ್ಥಾನಕ್ಕೆ ಆಗಮಿಸಿದ ವಿಜಯ್ ಅವರಿಗೆ ದೇವಾಲಯದ ವತಿಯಿಂದ ಪೂರ್ಣಕುಂಭ ಕಲಶದೊಂದಿಗೆ ಭವ್ಯ ಸ್ವಾಗತ ಕೋರಲಾಯಿತು.
ದೇವಾಲಯದ ಮುಂಭಾಗದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಬು ಹೆಗ್ಡೆ ಹಾಗೂ ಸಮಿತಿ ಸದಸ್ಯರು ವಿಜಯ್ ಅವರನ್ನು ಬರಮಾಡಿಕೊಂಡರು. ಬಳಿಕ ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರು ದೇವಾಲಯದ ಸಂಪ್ರದಾಯದಂತೆ ಸ್ವಾಗತಿಸಿ ವಿಶೇಷ ಪೂಜೆಯ ಸಂಕಲ್ಪ ನೆರವೇರಿಸಿದರು.
ದೇವಾಲಯ ಪ್ರವೇಶಕ್ಕೂ ಮುನ್ನ ವಿಜಯ್ ಅವರು ದೇವಾಲಯದ ಧ್ವಜಸ್ತಂಭಕ್ಕೆ ನಮಸ್ಕರಿಸಿ ಭಕ್ತಿಭಾವದಿಂದ ಒಳ ಪ್ರವೇಶಿಸಿದರು. ಅರ್ಚಕರ ಸಮ್ಮುಖದಲ್ಲಿ ಸಂಕಲ್ಪ ಮಾಡಿ ವಿಶೇಷ ಪೂಜೆ ಸಲ್ಲಿಸಿದ ಅವರು, ಮೂಕಾಂಬಿಕಾ ದೇವಿಯ ಆಶೀರ್ವಾದ ಪಡೆದರು.
ಪೂಜೆಯ ನಂತರ ವಿಜಯ್ ಅವರು ದೇವಾಲಯದ ಸುತ್ತು ಪೌಳಿಯಲ್ಲಿರುವ ವಿವಿಧ ಉಪದೇವತೆಗಳ ದೇಗುಲಗಳಿಗೂ ಭೇಟಿ ನೀಡಿದರು. ವೀರಭದ್ರ, ಆಂಜನೇಯ ಹಾಗೂ ಗಣಪತಿ ದೇವಸ್ಥಾನಗಳಲ್ಲಿ ನಮಸ್ಕರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಸೇರಿದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಭಕ್ತರು ಹಾಗೂ ಅಭಿಮಾನಿಗಳ ಗಮನ ಸೆಳೆದ ವಿಜಯ್ ಅವರ ಈ ಭೇಟಿ, ದೇವಾಲಯದ ಆವರಣದಲ್ಲಿ ವಿಶೇಷ ಸಂಚಲನ ಮೂಡಿಸಿತು.
ಮೂಕಾಂಬಿಕಾ ದೇವಿಯ ಮೇಲಿನ ಭಕ್ತಿಯಿಂದ ಕೊಲ್ಲೂರಿಗೆ ಆಗಮಿಸಿದ ಸಿಎಂ ವಿಜಯ್ ಅವರ ದರ್ಶನ ಮತ್ತು ವಿಶೇಷ ಪೂಜೆ ಇದೀಗ ಭಕ್ತರ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.