ಹಲ್ಲಿ ನೋಡಿ ಹಳ್ಳಕ್ಕೆ ಬೀಳುವ ಮುನ್ನ ಓದಿ ಬಿಡಿ ಗೌಲಿ ಶಾಸ್ತ್ರ

By Suvarna NewsFirst Published Jan 8, 2020, 11:53 AM IST
Highlights

 ಹಲ್ಲಿ ನಮ್ಮೊಂದಿಗೆ ಮನೆಯಲ್ಲೇ ವಾಸಿಸುವ ನಿರುಪದ್ರವಿ ಜೀವಿಯಾದರೂ ಅದನ್ನು ಮುಟ್ಟಿ ನೋಡುವ ಧೈರ್ಯ ಮಕ್ಕಳಿಂದ ಹಿಡಿದು ಹಿರಿಯರ ತನಕ ಯಾರಿಗೂ ಇಲ್ಲ. ಹಲ್ಲಿ ಎಂದರೆ ಅಸಹ್ಯ ಮಿಶ್ರಿತ ಭಯ ಕಾಡುತ್ತದೆ.
ಆದರೆ, ಹಲ್ಲಿ ಕುರಿತು ಒಂದು ಶಾಸ್ತ್ರವೇ ಇದೆ ಎಂಬುದು ನಿಮಗೆ ಗೊತ್ತಾ?

ಮನೆಯ ಗೋಡೆ ಮೇಲೆ ಹಲ್ಲಿ ಕಂಡರೆ ಸಾಕು, ಮೈ ಮೇಲಿನ ರೋಮವೆಲ್ಲ ನೆಟ್ಟಗೆ ನಿಂತು ಬಿಡುತ್ತದೆ. ಇನ್ನು ಗೋಡೆ ಮೇಲೆ ಹರಿದಾಡುವಾಗ ಬ್ಯಾಲೆನ್ಸ್ ತಪ್ಪಿ ಹಲ್ಲಿ ಏನಾದ್ರೂ ಮೈ ಮೇಲೆ ಬಿದ್ದರೆ ಮುಗಿಯಿತು. ಕೆಲವರಂತೂ ಆಕಾಶ
ಭೂಮಿ ಒಂದು ಮಾಡುವಷ್ಟು ಜೋರಾಗಿ ಕಿರುಚಿಕೊಂಡು ಡ್ಯಾನ್ಸ್ ಮಾಡಲಾರಂಭಿಸುತ್ತಾರೆ. ಊಟ ಮಾಡಲು ಒಲ್ಲೆ ಎನ್ನುವ ಮಕ್ಕಳಿಗೆ ಅಮ್ಮ ಹಲ್ಲಿ ಹೆಸರು ಹೇಳಿದ್ರೆ ಸಾಕು, ಅರೆಘಳಿಗೆಯಲ್ಲಿ ತಟ್ಟೆ ಖಾಲಿಯಾಗುತ್ತದೆ. ಒಟ್ಟಾರೆ
ಮಕ್ಕಳಿಂದ ದೊಡ್ಡವರ ತನಕ ಹಲ್ಲಿ ಅಂದ್ರೆ ಏನೋ ಅಸಹ್ಯ, ಭಯ. ಆದ್ರೆ ಹಲ್ಲಿಗೆ ಭಾರತೀಯ ಸಂಪ್ರದಾಯದಲ್ಲಿ ವಿಶಿಷ್ಟ ಸ್ಥಾನವಿದೆ. ಹಲ್ಲಿಯನ್ನು ಕೆಲವು ಭಾಗಗಳಲ್ಲಿ ದೇವರೆಂದು ಪೂಜಿಸಲಾಗುತ್ತದೆ ಕೂಡ. ಅಷ್ಟೇ ಅಲ್ಲ,ಹಲ್ಲಿಯನ್ನು
ಕೊಂದರೆ ಪಾಪ ತಟ್ಟುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಹೀಗೆ ಹಲ್ಲಿಯ ಕುರಿತು ನಮ್ಮಲ್ಲಿ ಎಷ್ಟೊಂದು ನಂಬಿಕೆಗಳು, ಆಚರಣೆಗಳಿವೆ ಗೊತ್ತಾ?

ಕಳೆದ ವರ್ಷದ ವೇಸ್ಟ್ ಮುಂದಿನ ವರ್ಷಕ್ಕೆ ಬೇಕಾ? ಮನೆ ಕ್ಲೀನಿಂಗ್‍ಗೆ ಇದೇ ರೈಟ್ ಟೈಮ್!

ಶಕುನ ನುಡಿಯುವ ಹಲ್ಲಿ: ದೇವರು ಅನೇಕ ರೂಪಗಳಲ್ಲಿ ಭಕ್ತರೊಂದಿಗೆ ಸಂವಹನ ನಡೆಸುತ್ತಾನೆ ಎಂಬ ನಂಬಿಕೆ ಭಾರತೀಯರಲ್ಲಿದೆ. ನಮ್ಮ ಸುತ್ತಮುತ್ತಲಿರುವ ಪ್ರಾಣಿ, ಪಕ್ಷಿ ಸೇರಿದಂತೆ ಕೆಲವೊಂದು ಜೀವಿಗಳ ರೂಪದಲ್ಲಿ ದೇವರು
ಮಾರ್ಗದರ್ಶನ ನೀಡುತ್ತಾನೆ ಎಂಬ ಭಾವನೆ ಆಸ್ತಿಕರಲ್ಲಿದೆ. ಅಂಥ ನಂಬಿಕೆಗಳಲ್ಲಿ ಹಲ್ಲಿ ಲೋಚಗುಟ್ಟುವುದನ್ನು ಆಧರಿಸಿ ಶುಭ, ಅಶುಭಗಳನ್ನು ಹುಡುಕುವುದು ಕೂಡ ಒಂದು. ದೇವರು ಹಾಗೂ ದೈವಾಧೀನರಾಗಿರುವ ಕುಟುಂಬದ
ಹಿರಿಯ ಸದಸ್ಯರು ಹಲ್ಲಿ ರೂಪದಲ್ಲಿ ಮನೆಯಲ್ಲಿ ನೆಲೆಸಿರುತ್ತಾರೆ. ಅವರು ಮನೆಯ ಸದಸ್ಯರು ಮಾಡುವ ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಗಮನಿಸುವ ಜೊತೆಗೆ ಪ್ರಮುಖ ಸಂದರ್ಭಗಳಲ್ಲಿ ಶುಭ ಹಾಗೂ ಅಶುಭದ ಸೂಚನೆ
ನೀಡುತ್ತಾರೆ ಎಂಬ ನಂಬಿಕೆ ಇಂದಿಗೂ ಅನೇಕ ಸಮುದಾಯದಲ್ಲಿದೆ. ಹಲ್ಲಿಯು ಮನೆಯ ಸದಸ್ಯರ ದೇಹದ ಯಾವ ಭಾಗದ ಮೇಲೆ ಬಿತ್ತು, ಹಲ್ಲಿ ಹೇಗೆ ಲೋಚಗುಟ್ಟಿತು ಎಂಬ ಆಧಾರದಲ್ಲಿ ಶುಭ ಹಾಗೂ ಅಶುಭ ಸಂದೇಶಗಳನ್ನು
ಅರ್ಥೈಸಿಕೊಳ್ಳಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಹಲ್ಲಿ ಶಾಸ್ತ್ರ ಎಂಬ ಪ್ರಕಾರವಿದ್ದು, ಇದಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ. ಇದಕ್ಕೆ ಗೌಲಿ ಶಾಸ್ತ್ರ ಎಂದು ಕೂಡ ಕರೆಯಲಾಗುತ್ತದೆ. 

ಹಲ್ಲಿನ ಏಕೆ ಕೊಲ್ಲಬಾರದು?: ಹಲ್ಲಿಗಳು ದೇವರ ಧೂತರಾಗಿದ್ದು, ಮನೆಯಲ್ಲೇ ನೆಲೆಸಿ ಶುಭ ಹಾಗೂ ಅಶುಭ ಸೂಚನೆಗಳನ್ನು ನೀಡುತ್ತವೆ. ಹೀಗಾಗಿ ಹಲ್ಲಿಗೆ ಯಾವುದೇ ಹಾನಿ ಮಾಡಬಾರದು ಎಂದು ಹೇಳಲಾಗುತ್ತದೆ. ಹಲ್ಲಿಯನ್ನು
ಕೊಂದರೆ ದೊಡ್ಡ ಪಾಪ ಅಂಟಿಕೊಳ್ಳುವ ಜೊತೆಗೆ ಅದು ಏಳೇಳು ಜನ್ಮಕ್ಕೂ ಕಾಡುತ್ತದೆ ಎಂದು ಹೇಳಲಾಗುತ್ತದೆ.  ಹಲ್ಲಿ ಮನೆಯ ಗೋಡೆ ಮೇಲೆ ತನ್ನ ಪಾಡಿಗೆ ತಾನಿರುತ್ತದೆ. ಕೀಟಗಳನ್ನೇ ಆಹಾರವಾಗಿ ಸೇವಿಸುವ ಹಲ್ಲಿ ಮನುಷ್ಯರಿಗೆ ಯಾವುದೇ ಹಾನಿ ಮಾಡುವುದಿಲ್ಲ. ಹೀಗಾಗಿ ಈ ನಿರುಪದ್ರವಿ ಜೀವಿಗಳಿಗೆ ಯಾರೂ ಹಾನಿಮಾಡದಿರಲಿ ಎಂಬ ಕಾರಣಕ್ಕೆ ಹಿರಿಯರು ಹೀಗೆಲ್ಲ ಹೇಳಿರುವ ಸಾಧ್ಯತೆಯೂ ಇದೆ.

 ಒತ್ತಡ ಕಳೆಯೋಕೆ ವಾಸ್ತುವಿನ 20 ನಿಯಮಗಳು!

ದೇವಸ್ಥಾನಗಳಲ್ಲಿ ಪೂಜಿಸಲ್ಪಡುವ ಹಲ್ಲಿ: ಭಾರತದ ಕೆಲವು ದೇವಸ್ಥಾನಗಳಲ್ಲಿ ಹಲ್ಲಿಯನ್ನು ಪೂಜಿಸಲಾಗುತ್ತದೆ. ತಮಿಳುನಾಡಿನ ಶ್ರೀರಂಗಂ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವ ಹಾದಿಯ ಸುತ್ತಲಿನ ಕಂಪೌಂಡ್ ವಾಲ್
ಮೇಲೆ ಹಲ್ಲಿ ಚಿತ್ರವನ್ನು ಕೆತ್ತಲಾಗಿದೆ. ಈ ಹಲ್ಲಿ ದರ್ಶನ ಮಾಡುವುದರಿಂದ ಪುಣ್ಯ ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಕಂಚೀಪುರಂ ವರದರಾಜ ಸ್ವಾಮಿ ದೇವಸ್ಥಾನದಲ್ಲಿ ಗರ್ಭಗುಡಿಯ ಪಕ್ಕದಲ್ಲಿರುವ ಸ್ಥಳದಲ್ಲಿ ಬಂಗಾರ ಹಾಗೂ ಬೆಳ್ಳಿಯ
ಹಲ್ಲಿಗಳ ಚಿತ್ರಗಳಿವೆ. ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಈ ಚಿತ್ರಗಳನ್ನು ಮುಟ್ಟಿದರೆ ಮಾತ್ರ ದರ್ಶನ ಪೂರ್ಣವಾಗುತ್ತದೆ ಎಂದು ಹೇಳಲಾಗುತ್ತದೆ. ಈ ಹಲ್ಲಿಗಳು ಗಂಧರ್ವರಾಗಿದ್ದು, ಈ ದೇವಸ್ಥಾನದಲ್ಲಿ ದೇವರ ಕೃಪೆಯಿಂದ
ಶಾಪಮುಕ್ತರಾದರು ಎಂಬ ಪ್ರತೀತಿಯಿದೆ. ಒಟ್ಟಾರೆ ಮನೆಯ ಗೋಡೆ ಮೇಲೆ ಹರಿದಾಡುವ ಹಲ್ಲಿಗೂ ನಮ್ಮ ಸಂಪ್ರದಾಯದಲ್ಲಿ ಪೂಜನೀಯ ಸ್ಥಾನವಿದೆ. 

click me!