Asianet Suvarna News Asianet Suvarna News

ವರದಕ್ಷಿಣೆ ಕಿರುಕುಳದಲ್ಲಿ ದೇಶಕ್ಕೇ ಬೆಂಗಳೂರು ನಂ.1!

ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ 2018ನೇ ವರ್ಷದ ಅಪರಾಧ ಕುರಿತ ಅಂಕಿಅಂಶಗಳನ್ನು ಮೊನ್ನೆ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟದಲ್ಲಿ 2018ರಲ್ಲಿ ಯಾವ ಪ್ರಮಾಣದಲ್ಲಿ ಅಪರಾಧಗಳು ನಡೆದಿವೆ, ಮಹಿಳೆ ಮತ್ತು ಮಕ್ಕಳಿಗೆ ಬೆಂಗಳೂರು ಎಷ್ಟುಸೇಫ್‌ ಎಂಬ ವಿವರ ಇಲ್ಲಿದೆ.

NCRB Crime in India 2018 Bengaluru had most dowry deaths
Author
Bangalore, First Published Jan 11, 2020, 11:37 AM IST

 

ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ನಂ.2

ದೇಶದಲ್ಲಿ ದಿನಗೂಲಿ ನೌಕರರು, ಸಾಧಾರಣ ಶಿಕ್ಷಣ ಪಡೆದವರು, 1 ಲಕ್ಷ ರು. ಒಳಗೆ ವಾರ್ಷಿಕ ಆದಾಯ ಇರುವವರಲ್ಲಿ ಆತ್ಮಹತ್ಯೆಯ ಪ್ರಮಾಣ ಹೆಚ್ಚಿದೆ. ಹೀಗಾಗಿ, ಆತ್ಮಹತ್ಯೆಗೂ ಬಡತನಕ್ಕೂ ನೇರ ಸಂಬಂಧ ಇದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗವು ವರದಿಯಲ್ಲಿ ಉಲ್ಲೇಖಿಸಿದೆ. ಮತ್ತೊಂದು ಗಮನಾರ್ಹ ಅಂಶವೆಂದರೆ ದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ನಡೆದ ಕ್ಷೇತ್ರವೆಂದರೆ ಕೃಷಿ. 2018ನೇ ಸಾಲಿನಲ್ಲಿ 1,34,516 ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಈ ಪೈಕಿ ವಾರ್ಷಿಕ 1 ಲಕ್ಷ ರು.ಗಿಂತ ಕಡಿಮೆ ಆದಾಯ ಹೊಂದಿರುವವರೇ ಹೆಚ್ಚು.

ಇದೇ ವ್ಯಾಪ್ತಿಯಲ್ಲಿ ಶಿಕ್ಷಣ ಪಡೆದವರ ಅಂಶದ ಲೆಕ್ಕಾಚಾರ ತೆಗೆದುಕೊಂಡರೆ, ಸಾಧಾರಣ ಶಿಕ್ಷಣ ಪಡೆದವರು ಮತ್ತು ದಿನಗೂಲಿ ನೌಕರರು ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆಯಲ್ಲಿ ಹೆಚ್ಚಿದ್ದಾರೆ ಎನ್ನುತ್ತಿದೆ ವರದಿ. ಇನ್ನು 2018ರಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ 10,349 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 5,763 ಮಂದಿ ಬೆಳೆಗಾರರು ಮತ್ತು 4,586 ಮಂದಿ ಕೃಷಿ ಕಾರ್ಮಿಕರು. ಮಹಾರಾಷ್ಟ್ರ ಮತ್ತು ಕರ್ನಾಟಕ ರೈತರ ಆತ್ಮಹತ್ಯೆಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿವೆ. ಅಂದರೆ ಈ ರಾಜ್ಯಗಳಲ್ಲಿ ಕ್ರಮವಾಗಿ 3,594 ಮತ್ತು 2,405 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಮೇಘಾಲಯ, ದಿಯು ಮತ್ತು ದಮನ್‌ ಮತ್ತು ದೆಹಲಿಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ.

ಅಕ್ರಮ ವಲಸಿಗರಿಂದಾಗುವ ಅಪರಾಧ ಇಳಿಕೆ

ವಿದೇಶಿಗರಿಂದ ನಡೆಯುವ ಅಪರಾಧಗಳಲ್ಲಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದ್ದರೆ ನಂತರದ ಸ್ಥಾನದಲ್ಲಿ ಕರ್ನಾಟಕ ಇದೆ ಎಂದು ಎನ್‌ಸಿಆರ್‌ಬಿ ತನ್ನ ವರದಿಯಲ್ಲಿ ಹೇಳಿದೆ. 2018ರಲ್ಲಿ ಕರ್ನಾಟಕದಲ್ಲಿ ವಿದೇಶಿಗರಿಂದ 175 ಅಪರಾಧಗಳು ನಡೆದರೆ, ಪ.ಬಂಗಾಳದಲ್ಲಿ 744, ಹಿಮಾಚಲ ಪ್ರದೇಶದಲ್ಲಿ 147 ಅಪರಾಧ ಪ್ರಕರಣಗಳು ದಾಖಲಾಗಿವೆ. ಆದರೆ ಕ್ರೈಂ ಡೇಟಾ ಪ್ರಕಾರ ಫಾರಿನ್‌ ರಿಜಿಸ್ಪ್ರೇಶನ್‌ ಮತ್ತು ಪಾಸ್‌ಪೋರ್ಟ್‌ ಕಾಯ್ದೆಯಡಿ 2018ರಲ್ಲಿ ಕೇವಲ ದೇಶದಲ್ಲಿ 1000 ವಿದೇಶಿಗರನ್ನು ಮಾತ್ರ ಬಂಧಿಸಲಾಗಿದೆ. 2017ರ ಅಂಕಿಅಂಶಗಳಿಗೆ ಹೋಲಿಕೆ ಮಾಡಿದರೆ ಇದು ತೀರಾ ಕಡಿಮೆ. ಅಕ್ರಮ ವಲಸಿಗರ ಗಡೀಪಾರಿಗೆ ಸಂಬಂಧಿಸಿದಂತೆ ಎನ್‌ಆರ್‌ಸಿ ಬಗ್ಗೆ ಬಾರೀ ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿ ಅಕ್ರಮ ವಲಸಿಗರ ಪ್ರಕರಣಗಳು ಇಳಿಕೆಯಾಗಿರುವುದು ಅಚ್ಚರಿ ಮೂಡಿಸಿದೆ.

ಅತ್ಯಾಚಾರ: ಶೇ. 25 ಅಪ್ರಾಪ್ತೆಯರೇ ಗುರಿ, ಪರಿಚಯಿಸ್ಥರಿಂದಲೇ ಶೇ.94 ರಷ್ಟು ರೇಪ್‌!

ವರದಕ್ಷಿಣೆ ಪ್ರಕರಣಗಳು ಬೆಂಗಳೂರಲ್ಲೇ ಅತಿ ಹೆಚ್ಚು!

ಭಾರತದ ಅತಿ ಹೆಚ್ಚು ಜನಸಂಖ್ಯೆ ಇರುವ ಒಟ್ಟು 20 ನಗರಗಳ ಪೈಕಿ ಬೆಂಗಳೂರಿನಲ್ಲಿ 2018ರಲ್ಲಿ ಮಹಿಳೆಯರ ಮೇಲಿನ ಒಟ್ಟು ದೌರ್ಜನ್ಯಗಳ ಪೈಕಿ 81% ಪ್ರಕರಣಗಳು ವರದಕ್ಷಿಣೆ ಕಿರುಕುಳ ಪ್ರಕರಣಗಳಾಗಿದ್ದವು. 1961ರ ವರದಕ್ಷಿಣೆ ನಿಷೇಧ ಕಾಯ್ದೆಯಡಿ ದಾಖಲಾದ ಒಟ್ಟು 851 ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ ಮಾತ್ರವೇ 692 ಪ್ರಕರಣಗಳು ದಾಖಲಾಗಿವೆ. ಉಳಿದ 19 ಪ್ರಮುಖ ನಗರಗಳಲ್ಲಿ ದೆಹಲಿ, ಮುಂಬೈ, ಹೈದರಾಬಾದ್‌, ಚೆನ್ನೈ ಮತ್ತು ಕೊಲ್ಕತ್ತಾದಲ್ಲಿ 159 ವರದಕ್ಷಿಣೆ ಪ್ರಕರಣಗಳು ದಾಖಲಾಗಿವೆ. ಇನ್ನು ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದಿದ್ದರೆ, ದೆಹಲಿ ಮತ್ತು ಮುಂಬೈ ಮೊದಲನೇ ಮತ್ತು ಎರಡನೇ ಸ್ಥಾನದಲ್ಲಿವೆ. ಪೋಕ್ಸೋ ಕಾಯ್ದೆಯಡಿ 2018ರಲ್ಲಿ ಒಟ್ಟು 5,598 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ದೆಹಲಿಯಲ್ಲಿ 1,455, ಮುಂಬೈನಲ್ಲಿ 1,144 ಮತ್ತು ಕರ್ನಾಟಕದಲ್ಲಿ 406 ಪ್ರಕರಣಗಳು ದಾಖಲಾಗಿವೆ.

ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ 5ನೇ ಸ್ಥಾನ

2018ರಲ್ಲಿ ದೇಶದಲ್ಲಿ 1,34,516 ಆತ್ಮಹತ್ಯೆಗಳು ನಡೆದಿವೆ ಎಂದು ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ) ವರದಿ ಹೇಳಿದೆ. ಇದು 2017ರ ಪ್ರಮಾಣಕ್ಕಿಂತ ಶೇ.3.6ರಷ್ಟುಅಧಿಕ. ದೇಶದಲ್ಲಿ ಸಂಭವಿಸಿದ ಆತ್ಮಹತ್ಯೆಗಳಲ್ಲಿ ಕರ್ನಾಟಕ 5ನೇ ಸ್ಥಾನ ಪಡೆದಿದೆ ಎಂಬುದೂ ಇನ್ನೊಂದು ಆತಂಕಕಾರಿ ವಿಚಾರ. 2018ರಲ್ಲಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಆತ್ಮಹತ್ಯೆಗಳು ನಡೆದಿದ್ದು, ಅಲ್ಲಿ 17,972 ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನಗಳಲ್ಲಿ ತಮಿಳುನಾಡು (13,896), ಪಶ್ಚಿಮ ಬಂಗಾಳ (13,255), ಮಧ್ಯಪ್ರದೇಶ (11,775) ಹಾಗೂ ಕರ್ನಾಟಕ (11,561) ಇವೆ. ಈ ಐದು ರಾಜ್ಯಗಳು ಒಟ್ಟಾರೆ ಆತ್ಮಹತ್ಯೆಗಳಲ್ಲಿ ಶೇ.50.9ರಷ್ಟುಪಾಲು ಪಡೆದಿವೆ. ಇನ್ನು ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿಯಲ್ಲಿ 2,526 ಆತ್ಮಹತ್ಯೆಗಳು ದಾಖಲಾಗಿದ್ದು, ಅತಿ ಹೆಚ್ಚು ಪ್ರಕರಣ ಇಲ್ಲಿ ದಾಖಲಾಗಿವೆ.

ಇದು ಭಾರತದ ಅತ್ಯಂತ ಸುರಕ್ಷಿತ ನಗರ: NCRB ವರದಿ!

ದೇಶದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣ ಏರಿಕೆ

ದೇಶದಲ್ಲಿ 2016ರಲ್ಲಿ ಮಹಿಳೆಯರ ಮೇಲೆ 3,38,954 ದೌರ್ಜನ್ಯ ಪ್ರಕರಣ ಹಾಗೂ 2017ರಲ್ಲಿ 3,59,849 ಪ್ರಕರಣ ನಡೆದಿದ್ದವು. ಆದರೆ 2018ರಲ್ಲಿ ಇವುಗಳ ಸಂಖ್ಯೆ 3,78,277ಕ್ಕೇರಿದೆ. 2016ರಲ್ಲಿ 38,947 ಅತ್ಯಾಚಾರ, 2017ರಲ್ಲಿ 32,559 ಅತ್ಯಾಚಾರ ನಡೆದಿದ್ದವು. 2018ರಲ್ಲಿ 33,356 ಅತ್ಯಾಚಾರ ಸಂಭವಿಸಿವೆ. ಮಹಿಳೆಯರ ವಿರುದ್ಧದ ಅಪರಾಧಗಳ ಪೈಕಿ ಉತ್ತರ ಪ್ರದೇಶ (55,445)ದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅನಂತರದಲ್ಲಿ ಮಹಾರಾಷ್ಟ್ರ (35,497), ಪಶ್ಚಿಮ ಬಂಗಾಳ (30,394), ಅಸ್ಸಾಂ (166), ದೆಹಲಿ (149)ಯಲ್ಲಿ ಅತಿ ಹೆಚ್ಚು ಮಹಿಳಾ ದೌರ್ಜನ್ಯಗಳು ನಡೆದಿವೆ.

5 ವರ್ಷದಲ್ಲಿ ವಿದ್ಯಾರ್ಥಿ ಪ್ರತಿಭಟನೆಗಳು ಹೆಚ್ಚಳ

ಇತ್ತೀಚೆಗೆ ವಿದ್ಯಾರ್ಥಿ ಪ್ರತಿಭಟನೆಗಳು ಹೆಚ್ಚು ಸದ್ದು ಮಾಡುತ್ತಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿಅಂಶಗಳೂ ಇದಕ್ಕೆ ಇಂಬು ನೀಡುವಂತಿವೆ. ಅದರಲ್ಲಿ 2014ರಿಂದ 2018ರ ಅವಧಿಯಲ್ಲಿ ವಿದ್ಯಾರ್ಥಿ ಪ್ರತಿಭಟನೆಗಳು ಹೆಚ್ಚಾಗಿವೆ ಎಂದು ವರದಿ ಹೇಳುತ್ತಿದೆ. ಅದರಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ, ಹರಾರ‍ಯಣ, ಉತ್ತರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶದಲ್ಲಿ ಒಟ್ಟು ವಿದ್ಯಾರ್ಥಿ ಪ್ರತಿಭಟನೆಗಳ ಪೈಕಿ 40% ಪ್ರತಿಭಟನೆಗಳು ನಡೆದಿವೆ. 2014ರಲ್ಲಿ ಭಾರತದಾದ್ಯಂತ ಒಟ್ಟು 261 ವಿದ್ಯಾರ್ಥಿ ಪ್ರತಿಭಟನೆಗಳು ನಡೆದಿದ್ದರೆ 2018ರಲ್ಲಿ ಒಟ್ಟು 507 ವಿದ್ಯಾರ್ಥಿ ಚಳವಳಿಗಳು ನಡೆದಿವೆ. ಇನ್ನು ಕರ್ನಾಟಕದಲ್ಲಿ 2014ರಲ್ಲಿ 6, 2015ರಲ್ಲಿ 20, 2016ರಲ್ಲಿ 10 ಮತ್ತು 2017ರಲ್ಲಿ 21 ಹಾಗೂ 2018ರಲ್ಲಿ 15 ವಿದ್ಯಾರ್ಥಿ ಪ್ರತಿಭಟನೆಗಳು ನಡೆದಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ದೇಶದಲ್ಲಿ ಅಪರಾಧಗಳ ಸಂಖ್ಯೆ ಏರಿಕೆ

ದೇಶದಲ್ಲಿ 2018ರಲ್ಲಿ 50,74,634 ಕಾಗ್ನಿಜೆಬಲ್‌ ಪ್ರಕರಣಗಳು (ದಂಡಾಧಿಕಾರಿಯ ಅಪ್ಪಣೆ ಇಲ್ಲದೇ ಪೊಲೀಸರು ಬಂಧಿಸಬಹುದಾದ ಪ್ರಕರಣ) ನಡೆದಿವೆ. ಇವುಗಳಲ್ಲಿ 31,32,954 ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿ ದಾಖಲಾದ ಪ್ರಕರಣಗಳಾದರೆ 19,41,680 ವಿಶೇಷ ಹಾಗೂ ಸ್ಥಳೀಯ ಕಾನೂನಿನ ಮೂಲಕ ದಾಖಲಾದ ಪ್ರಕರಣಗಳು. 2017ರಲ್ಲಿ 50,07,044 ಪ್ರಕರಣ ದಾಖಲಾಗಿದ್ದವು. ಒಟ್ಟಾರೆ ಅಪರಾಧ ಪ್ರಕರಣಗಳ ಸಂಖ್ಯೆ (50,07,044) ಗಮನಿಸಿದಾಗ 2017ಕ್ಕಿಂತ ಶೇ.1.3ರಷ್ಟುಇವುಗಳ ಪ್ರಮಾಣ ಹೆಚ್ಚಾಗಿದೆ. ಆದರೆ ಪ್ರತಿ 1 ಲಕ್ಷ ಜನಸಂಖ್ಯೆಗೆ ಹೋಲಿಸಿದಾಗ 2017ರಲ್ಲಿ 388.6 ಪ್ರಕರಣ ನಡೆದಿದ್ದರೆ 2018ರಲ್ಲಿ 383.5 ಪ್ರಕರಣ ನಡೆದಿವೆ.

ದೇಶದಲ್ಲಿ ದಿನಕ್ಕೆ 80 ಕೊಲೆ, 289 ಕಿಡ್ನ್ಯಾಪ್‌, 91 ರೇಪ್‌!

ನಗರಗಳು ಮಹಿಳೆಯರಿಗೆ ಸೇಫ್‌ ಅಲ್ಲ!

ಮೆಟ್ರೋಪಾಲಿಟನ್‌ ನಗರಗಳ ಪೈಕಿ ಹೈದರಾಬಾದ್‌ನಲ್ಲಿ ಅತಿ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ಅಪರಾಧ ಪ್ರಕರಣಗಳ ಪೈಕಿ 5.5% ಅಪರಾಧ ಪ್ರಕರಣಗಳು ಹೈದರಾಬಾದ್‌ನಲ್ಲಿ ದಾಖಲಾಗಿವೆ. ಅನಂತರ ಕೊಲ್ಕತ್ತಾ ಮತ್ತು ಜೈಪುರದಲ್ಲಿ ಕ್ರಮವಾಗಿ 5.2% ಮತ್ತು 4.8% ಪ್ರಕರಣಗಳು ದಾಖಲಾಗಿವೆ. ನಗರ ಪ್ರದೇಶಗಳಲ್ಲಿ ಮಹಿಳೆಯದ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳು 2.68%ನಷ್ಟುಹೆಚ್ಚಾಗಿದೆ. ಇನ್ನು ಮಕ್ಕಳ ಮೇಲಿನ ದೌರ್ಜನ್ಯಗಳು ಕಳೆದ ವರ್ಷಕ್ಕೆ ಹೋಲಿಸಿದರೆ 27.53%ನಷ್ಟುಏರಿಕೆಯಾಗಿವೆ. ಇನ್ನು ಹಿರಿಯ ನಾಗರಿಕರಿಗೆ ಮೆಟ್ರೋಪಾಲಿಟನ್‌ ಸಿಟಿಗಳಲ್ಲಿ ಒಂದಾದ ಮುಂಬೈ ಸೇಫ್‌ ಅಲ್ಲ ಎನ್ನುತ್ತಿದೆ ಎನ್‌ಸಿಆರ್‌ಬಿ ವರದಿ. 2018ರಲ್ಲಿ ಹಿರಿಯ ನಾಗರಿಕರ ವಿರುದ್ಧ ನಡೆದ ಅಪರಾಧಗಳ ಪೈಕಿ ಮುಂಬೈವೊಂದರಲ್ಲಿಯೇ 24,7% ಪ್ರಕರಣಗಳು ದಾಖಲಾಗಿವೆ. ಇನ್ನು ದೆಹಲಿಯಲ್ಲಿ 18.2% ಪ್ರಕರಣಗಳು ದಾಖಲಾಗಿವೆ.

ಆ್ಯಸಿಡ್‌ ದಾಳಿಗಳೂ ನಿಂತಿಲ್ಲ

2013ರಲ್ಲಿ ಸುಪ್ರೀಂಕೋರ್ಟ್‌ ಆ್ಯಸಿಡ್‌ ಮಾರಾಟವನ್ನು ನಿಷೇಧಿಸಿದ್ದರೂ ಆ್ಯಸಿಡ್‌ ದಾಳಿ ಪ್ರಕರಣಗಳು ನಿಂತಿಲ್ಲ. ನ್ಯಾಷನಲ್‌ ಕಮಿಷನ್‌ ಆಫ್‌ ವುಮನ್‌ ಕಳೆದ ವರ್ಷ ಆ್ಯಸಿಡ್‌ ಮಾರುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಷೇಧ ಹೇರಿತ್ತು. ಅದರ ಹೊರತಾಗಿಯೂ ಪಶ್ಚಿಮ ಬಂಗಾಳ (36) ಮತ್ತು ಉತ್ತರ ಪ್ರದೇಶಲ್ಲಿ (32) ಆ್ಯಸಿಡ್‌ ದಾಳಿ ಪ್ರಕರಣಗಳು ನಡೆದಿವೆ. ತೆಲಂಗಾಣ, ಗುಜರಾತ್‌ ಮತ್ತು ಮಧ್ಯಪ್ರದೇಶದಲ್ಲಿ ಕ್ರಮವಾಗಿ 10, 7 ಮತ್ತು 5 ದಾಳಿ ಪ್ರಕರಣಗಳು ನಡೆದಿವೆ ಎಂದು ಎನ್‌ಸಿಆರ್‌ಬಿ ತನ್ನ 2018ರ ವರದಿಯಲ್ಲಿ ಉಲ್ಲೇಖಿಸಿದೆ.

ಕರ್ನಾಟಕದಲ್ಲಿನ ಕೊಲೆಗಳಿಗೆ ಪ್ರೇಮ ಸಂಬಂಧವೇ 2ನೇ ಕಾರಣ!

ಮತ್ತೆ ಹೆಚ್ಚಾದ ರಸ್ತೆ ಅಪಘಾತಗಳು

ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ 2018ರಲ್ಲಿ ದೇಶದಲ್ಲಿ ಒಟ್ಟು 1,35,051 ರಸ್ತೆ ಅಪಘಾತಗಳು ನಡೆದಿವೆ. ಈ ಹಿಂದಿನ 2 ವರ್ಷಗಳ ಅಂಕಿ ಅಂಶಗಳೊಂದಿಗೆ ಹೋಲಿಸಿದರೆ ರಸ್ತೆ ಅಪಘಾತಗಳಲ್ಲಿ ಹೇಳಿಕೊಳ್ಳುವಂತಹ ಬದಲಾವಣೆ ಏನೂ ಕಂಡುಬಂದಿಲ್ಲ. 2017ರಲ್ಲಿ ಒಟ್ಟು 1,34, 803 ರಸ್ತೆ ಅಪಘಾತಗಳು ನಡೆದಿದ್ದರೆ 2016ರಲ್ಲಿ 1,35,656 ಅಪಘಾತಗಳು ನಡೆದಿದ್ದವು.

ಆಘಾತಕಾರಿ ಅಂಶ; ಕೊಲೆ ಪ್ರಕರಣಗಳಲ್ಲಿ ಕರ್ನಾಟಕ ನಂ.1!

Follow Us:
Download App:
  • android
  • ios