Asianet Suvarna News Asianet Suvarna News

ದುಬೈ ನಿವಾಸಿಯ ಖಾಸ್‌ಬಾತ್‌!

ಎಷ್ಟೋ ಜನ ನಾವು ದುಬೈಗೆ ಬರಬೇಕು , ಕೆಲಸ ಸಿಗುತ್ತಾ ಎಂದು ಕೇಳುತ್ತಾರೆ . ಗಗನ ಚುಂಬಿ ಕಟ್ಟಡಗಳು, ಲೈಟ್‌ಗಳಿಂದ ಜಗಮಗಿಸುವ ಕಟ್ಟಡಗಳು, ಎಲ್ಲ ರೀತಿಯ ವೈಭೋಗ ಸಿಗುವ ರಸಮಯ ರಾತ್ರಿಗಳು, ಸುಂದರ ಸಮುದ್ರದ ಕಿನಾರೆಗಳು, ಒಳ್ಳೆಯ ಭದ್ರತೆ, ಮಾಲಿನ್ಯರಹಿತ ಜೀವನ , ಮಾಲ್‌ಗಳು, ಚಿನ್ನದ ಸೌಕ್‌ಗಳು, ದುಡ್ಡು, ಕಾಸು! ಯಾರಿಗೆ ಬೇಡ?

Sri Krishna shares about different lifestyle and living of Dubai
Author
Bangalore, First Published Aug 25, 2019, 8:56 AM IST

ನಿಜವಾದ ಪರಿಸ್ಥಿತಿ ಹೇಗಿದೆ? ಅದು ಇಷ್ಟೇನೂ ಆಕರ್ಷಕವಾಗಿ ಇಲ್ಲ ಎಂದೇ ಹೇಳಬೇಕು. ಈಗಿನ ಬದಲಾದ ಪರಿಸ್ಥಿತಿಯಲ್ಲಿ ಒಳ್ಳೆ ಕೆಲಸ ಸಿಗುವದು ಅಷ್ಟುಸುಲಭ ಅಲ್ಲ . ಸ್ಪರ್ಧೆ ಬಹಳ ತೀವ್ರ ಆಗಿದೆ. ಬೇರೆ ಬೇರೆ ದೇಶಗಳಿಂದ ಕಮ್ಮಿ ದುಡ್ಡಿಗೆ ಜನ ಕೆಲಸಕ್ಕೆ ಬರುತ್ತಾರೆ. ಎಷ್ಟೊಂದು ಕೆಲಸಗಳನ್ನು ಹೊರ ಗುತ್ತಿಗೆ ಕೊಡುವುದಿದೆ. ಮುಖ್ಯವಾಗಿ ಇಲ್ಲಿ ಕೆಲಸ ಮಾಡಲು ಒಂದಷ್ಟುವರ್ಷ ಅನುಭವ ಬೇಕು. ಒಳ್ಳೆ ಕೆಲಸ ಮಾಡಿ ಅನುಭವ ಇದ್ದರೆ, ಉತ್ತಮ ಸಂಬಳ ಸಿಗುವುದು ಸಾಧ್ಯ. ಇಲ್ಲವಾದರೆ ಉಳಿತಾಯ ಬಹಳ ಕಷ್ಟ. ಎಷ್ಟೇ ವರ್ಷ ಇಲ್ಲಿ ಇದ್ದರೂ , ಇಲ್ಲಿ ಪೌರತ್ವ ಪಡೆದು ಇರುವಂತಿಲ್ಲ. ವಯಸ್ಸಾದ ಮೇಲೆ ಊರಿಗೆ ಹೊರಡಲೇ ಬೇಕು .

ವಿಶ್ವನಗರಿ ದುಬೈನ ವಿನಮ್ರ ಪ್ರಜೆಯಾಗಿ

ಬೇಕುಗಳನ್ನೂ ಬ್ರೇಕ್‌ ಹಾಕದೆ, ಸಿಕ್ಕಿದ್ದೆಲ್ಲ ಬೇಕೆನ್ನುವ ಬದುಕಲ್ಲಿ ಏನಿದ್ದರೂ ಕಡಿಮೆಯೇ. ಎಷ್ಟೋ ಸಲ ಒಂದು ಮನೆ ಮಾಡುವ, ಒಂದಷ್ಟುಸಾಲ ತೀರಿಸುವ, ತಂಗಿಯ ಮದುವೆ ಮಾಡುವ ಎಂದು ಬಂದು ಬಿಡುವ ಜನ, ವರ್ಷಾನುಗಟ್ಟಲೆ ಉಳಿದು ಬಿಡುತ್ತಾರೆ. ಅಪರಿಚಿತರಾಗುವ ಮಕ್ಕಳು, ಪ್ರತೀ ಸಲ ದುಡ್ಡು ಕೇಳುವ ಹೆಂಡತಿ, ದುಡ್ಡಿಗಾಗಲಿ ಹಿಂಡುವ ಬಾಂಧವರು, ಖರ್ಚು ಮಾಡಿಸುವ ಊರಿನ ಗೌಜಿಗಳು- ಹೀಗೆ ಊರಿನಿಂದ ವಾಪಾಸ್‌ ಹೋಗುವ ಸಂದರ್ಭದಲ್ಲಿ ಕಿಸೆ ಖಾಲಿಯಾಗಿ ಬಿಡುತ್ತದೆ . ಪರಿಚಯಸ್ತನೊಬ್ಬ , ಊರಿನಿಂದ ಹೊರಡುವಾಗ ತನ್ನ ಮಗಳು ‘ಹೋಗ ಬೇಡ ಅಪ್ಪ’ ಎಂದು ಕಾಲು ಹಿಡಿದು ಅತ್ತದ್ದನ್ನು ಕೇಳಿದಾಗ ಮನಸ್ಸಿಗೆ ನೋವಾಗಿತ್ತು. 50 ಲಕ್ಷ ದುಡ್ಡಾದರೆ ಊರಿಗೆ ಹೋಗುತ್ತೇನೆ ಎಂದ ನಾನು ಇನ್ನೂ ಇಲ್ಲಿಯೇ ಇದ್ದೇನೆ .

ಇಲ್ಲಿಗೆ ಬರುವ ಜನ ಊರಲ್ಲಿ ಕಷ್ಟಅನುಭವಿಸಿ ಒಳ್ಳೆ ಬದುಕು ಕಟ್ಟಲು ಬರುವವರು. ಇಲ್ಲಿ ಸೂಪರ್‌ ಮಾರ್ಕೆಟ್‌ ಗಳಲ್ಲಿ ಸೇಲ್ಸ್‌ ಮಾಡುವವರು, ಡಾಕ್ಯುಮೆಂಟ್‌ ಕಂಟ್ರೊಲರ್‌ಗಳು , ರೂಟೀನ್‌ ಕೆಲಸ ಮಾಡುವವರು- ಫಿಲಿಪೈನ್ಸ್‌ ದೇಶದವರು ಜಾಸ್ತಿ. ಇಲ್ಲಿನ ಕಟ್ಟಡ ನಿರ್ಮಾಣ , ತೈಲಾಗಾರ ದಲ್ಲಿ ಕಷ್ಟಕರ ಕೆಲಸ ಮಾಡುವವರು ಹೆಚ್ಚಾಗಿ ಪಾಕಿಸ್ತಾನ , ಬಾಂಗ್ಲಾ , ಒಂದಷ್ಟುಜನ ಭಾರತೀಯರು. ಸೆಕ್ಯುರಿಟಿಯವರಾಗಿ ನೇಪಾಳಿಗಳು ಜಾಸ್ತಿ . ಭಾರ ಎತ್ತುವ ಕೆಲಸ ಮಾಡುವುದರಲ್ಲಿ ಎತ್ತಿದ ಕೈ ಪಾಕಿಸ್ತಾನಿಯರು ಅಥವಾ ಅಫಘನಿಸ್ತಾನದ ಪಠಾಣರು .

ಸಲ್ಮಾನ್‌ಗೆ ಕ್ಯಾರೇ ಎನ್ನದ ದುಬೈ ಮಂದಿ!

ಟ್ರಕ್‌ ಡ್ರೈವರ್‌ಗಳಾಗಿರುವ ಸಿಖ್ಖರೂ ಇದ್ದಾರೆ . ಮನೆ ಶುಚಿ ಮಾಡಲು ಹೆಚ್ಚು ಬರುವವರು ಬಾಂಗ್ಲಾ ದೇಶೀಯರು. ಮನೆಯಲ್ಲಿ ಅಡುಗೆ ಮಾಡಲು ರಾಜಸ್ತಾನಿಯರು ಸಿಗುತ್ತಾರೆ. ಇಲ್ಲಿ ಕಿರಾಣಿ ಅಂಗಡಿಗಳ ಬದಲಾಗಿ ಬಕಾಲ ಅಂಗಡಿಗಳಿವೆ. ಮಲೆಯಾಳಿಗಳು ಇಲ್ಲಿ ಬಕಾಲ, ಕೆಫೆಟೇರಿಯಾ, ಒಂದಷ್ಟುರಿಯಲ್‌ ಎಸ್ಟೇಟ್‌- ಹೀಗೆ ಹತ್ತು ಹಲವು ವ್ಯವಹಾರ ನಡೆಸುತ್ತಾರೆ . ಕಡಿಮೆ ದುಡ್ಡಿಗೆ ಚಹಾ ತಿಂಡಿ ಊಟ ನೀಡುವ ಕ್ಯಾಫಟೇರಿಯ ಇವೆ. ಭಾರತೀಯ ಚಹಾ ’ಕರಕ್‌’ ಚಹಾ ಆಗಿ ಇಲ್ಲಿ ಪ್ರಸಿದ್ಧ. ಇಲ್ಲಿ ಭಾರತೀಯ ರೆಸ್ಟೋರೆಂಟ್‌ ಗಳು ಬಹಳಷ್ಟಿವೆ . ಲುಲು ನಂತಹ ಸೂಪರ್‌ ಮಾರ್ಕೆಟ್‌ ನಲ್ಲಿ ಭಾರತೀಯ ಎಲ್ಲ ತರಕಾರಿಗಳು ಸಿಗುತ್ತವೆ . ಅಲ ಆದಿಲ್‌ನಂತಹ ಅಂಗಡಿಗಳಲ್ಲಿ ಎಲ್ಲ ಮಸಾÇ ಗಳು ಸಿಗುತ್ತವೆ . ಅದೇ ರೀತಿ ಬೇರೆ ಬೇರೆ ದೇಶಗಳ ಮಾರುಕಟ್ಟೆಇದೆ. ಎಲ್ಲ ಕಡೆಯ ಬ್ರಾಂಡ್‌ಗಳು, ಎಲ್ಲ ದೇಶಗಳ ವಸ್ತುಗಳೂ ಇಲ್ಲಿ ಸಿಗುತ್ತವೆ. ಶಾಪಿಂಗ್‌ ಮಾಡುವವರ ಸ್ವರ್ಗ.

ಅಮೆರಿಕ, ದುಬೈನಲ್ಲಿ ನಾಗರಹಾವು

ಇಲ್ಲಿ ಕೆಲಸ ಮಾಡುವುದಕ್ಕೂ, ಭಾರತದಲ್ಲಿ ಕೆಲಸ ಮಾಡುವುದಕ್ಕೂ ವ್ಯತ್ಯಾಸ ಇದೆ. ಇಲ್ಲಿನ ಜನ ಸ್ನೇಹ ಶೀಲರು. ಮೊದಲು ವೈಯಕ್ತಿಕ ಕ್ಷೇಮ ವಿಚಾರಿಸಿ ಆಮೇಲೆ ವ್ಯವಹಾರ ಮಾತನಾಡಬೇಕು. ಸ್ಥಳೀಯರ ಬಳಿ ಗೌರವದಿಂದ ಮಾತನಾಡಿಸಬೇಕು . ನೋಡು ನೋಡುತ್ತಿದ್ದಂತೆ ಕೈಫ್‌ ಅಲ್‌ಹಾಲ್‌, ಹಮ್ದುಲ್ಲ, ಇನ್ಶಲ್ಲಾಹ್‌, ಖಲಾಸ್‌, ತಾಲ್‌, ಲಾ, ಮಾಸ್ಸಲಾಮ್‌, ಶುಕ್ರನ್‌, ಹಬೀಬಿ ಪದಗಳು ಅರಿವಿಲ್ಲದೆ ಪರಿಚಿತವಾಗಿ ಬಿಡುತ್ತವೆ. ಚಳಿಗಾಲದಲ್ಲಿ ಹೊರಗಡೆ ಓಡಾಟ, ವೇಗವಾಗಿ ಡ್ರೈವಿಂಗ್‌, ಈದ್‌ ಬಂದಾಗ ಸಿಗುವ ರಜೆಗಳು , ಸ್ತ್ರೀಯರೆಂದರೆ ಗೌರವ -ಇಷ್ಟವಾಗಿ ಬಿಡುತ್ತವೆ. ಕಂದೂರ ಹಾಕಿದ ಜನ, ನಿಯಮ ಪಾಲನೆ ರೀತಿ ರಿವಾಜ್‌ ಒಂದೊಂದಾಗಿ ತಿಳಿಯುತ್ತ ಹೋಗುತ್ತವೆ .

ಕೆಲವೊಂದು ಏಜೆಂಟ್‌ಗಳು ಕೆಲಸ ಕೊಡಿಸುವ ನೆಪದಲ್ಲಿ ಮೋಸ ಮಾಡುವವರು ಇದ್ದಾರೆ . ತಮ್ಮ ಆಸ್ತಿ ಒತ್ತೆ ಇಟ್ಟು ಏಜೆಂಟ್‌ಗಳಿಗೆ ದುಡ್ಡು ಕೊಟ್ಟು ಕೆಲ ಜನ ಬರುತ್ತಾರೆ. ಏಜೆಂಟ್‌ ಮೂಲಕ ಬರುವವರಿಗೆ, ಕೆಲಸ ಸಿಗುವ ಮುಂಚೆ ಸಿಗುವ ಆಶ್ವಾಸನೆಗಳೇ ಬೇರೆ, ಆಮೇಲೆ ಸಿಗುವುದೇ ಬೇರೆ. ಇಲ್ಲಿನ ಕಾನೂನುಗಳು ಬಹಳ ಕಟ್ಟು ನಿಟ್ಟಾಗಿವೆ. ಊರಿಡೀ ಬೇರೆ ಬೇರೆ ರೀತಿಯ ಕ್ಯಾಮೆರಾ ಇವೆ . ಇಲ್ಲಿ ಎಲ್ಲರಿಗೂ ಮೆಡಿಕಲ್‌ ಇನ್ಶೂರೆನ್ಸ್‌ ಕಂಪೆನಿಯವರು ಕೊಡಲೇಬೇಕು. ಆಯಾ ದೇಶಗಳ ರಾಯಭಾರ ಕಚೇರಿಗಳು ಸಹಾಯ ಮಾಡುವ ನಿಟ್ಟಿನಲ್ಲಿ ಬಹಳ ಕೆಲಸ ಮಾಡುತ್ತವೆ .

ಬುರ್ಜ್‌ ಖಲೀಫಾ ಮೇಲೆ ನ್ಯೂಜಿಲ್ಯಾಂಡ್ ಪ್ರಧಾನಿ ಫೋಟೋ!

ಹೋದ ವರ್ಷ ಅಮ್ನೆಸ್ಟಿಕಾರ್ಯಕ್ರಮ ಆಗಿತ್ತು. ಇಲ್ಲಿ ಬಂದು ವೀಸಾ ಮುಗಿದು ಹೋಗಿ ಅನಧಿಕೃತವಾಗಿ ಇರುವವರನ್ನು ಗೌರವಯುತವಾಗಿ ಭಾರತಕ್ಕೆ ಕಳಿಸುವ ಕಾರ್ಯಕ್ರಮ . ಇದಕ್ಕೆ ಒಂದಷ್ಟುಸ್ವ ಸಹಾಯ ಗುಂಪುಗಳು, ಉದ್ಯೋಗಿಗಳು ವಾಪಾಸ್‌ ಹೊರಡುವ ವರಿಗೆ ವಿಮಾನ ಟಿಕೆಟ್‌ ನ್ನು ಪ್ರಾಯೋಜಕ ಕತ್ವ ಸಹಾಯ ನೀಡಿದರು. ಅಬುಧಾಬಿ ರಾಯಭಾರಿ ಕಚೇರಿಯಲ್ಲಿರುವ ಮೈಸೂರಿನ ಗಾಯತ್ರಿ ಎಂಬ ಹೆಣ್ಣುಮಗಳು-ಈ ನಿಟ್ಟಿನಲ್ಲಿ ಬಹಳ ಕೆಲಸ ಮಾಡಿದ್ದಾರೆ. ಅವರು ಹೇಳಿದಂತೆ ಇದರಲ್ಲಿ ಆಂಧ್ರ , ತಮಿಳು ನಾಡು , ಕೇರಳ, ಉತ್ತರ ಪ್ರದೇಶದವರು ಜಾಸ್ತಿ. ಕನ್ನಡವರು ತುಂಬಾ ಕಮ್ಮಿ. ಸಿಕ್ಕಿದವರು ಇಬ್ಬರೇ ಎಂದರು .

ಬೇಸಿಗೆಯಲ್ಲಿ ರಣ ಬಿಸಿಲು . ಒಳಗೆಲ್ಲ ಹವಾನಿಯಂತ್ರಣ ಇದ್ದರೂ , ಹೊರಗೆ ಕೆಲವೊಮ್ಮೆ ಮದ್ಯಾಹ್ನ 50 ಡಿಗ್ರಿ, ಬೆವರಿಳಿಸುವ ಆದ್ರ್ರತೆ. ಬೇಸಿಗೆಯ ಉತ್ತುಂಗದಲ್ಲಿ , ಕಾರ್ಮಿಕರಿಗೆ ಮದ್ಯಾಹ್ನ ಕಡ್ಡಾಯ ವಿರಾಮ ಇದೆ. ಇಲ್ಲಿ ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೀರು, ಮಜ್ಜಿಗೆ ನೀಡುವ ಕಾರ್ಯಕ್ರಮ, ಕಾರ್ಮಿಕರ ಕ್ಯಾಂಪ್‌ಗೆ ಭೇಟಿ ನೀಡಿ, ಅಗತ್ಯ ಸಹಾಯ ನೀಡುವ ಕೆಲಸ ಸದ್ದಿಲ್ಲದೇ ಮಾಡುತ್ತಾರೆ. ಕಾರ್ಮಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸರಕಾರದ ನಿಯಮಗಳು ಬಲವಾಗಿವೆ. ಹಾಗಿದ್ದರೂ ಕೆಲವೊಮ್ಮೆ ಒಳ್ಳೆಯ ಕೆಲಸ ಸಿಗುವ ಆಸೆ ಯಿಂದ ವಿಸಿಟ್‌ ವೀಸಾದ ಮೇಲೆ ಬಂದು, ಕೆಲಸ ಸಿಗದೇ ಒದ್ದಾಡುತ್ತಾರೆ. ಇಲ್ಲಿ ಇರಲಾರೆ, ಊರಿಗೆ ಹೋಗಲಾರೆ ಅಂತ .

ಎಷ್ಟೋ ಸಲ ದಾರಿಯಲ್ಲಿ ಹೋಗುವಾಗ ಸಹಾಯ ಬೇಕು ಎಂದು ಜನ ಬರುತ್ತಾರೆ. ಆಗ ಸ್ವಲ್ಪ ದುಡ್ಡು ಕೊಟ್ಟು ಬಿಟ್ಟದ್ದು ಇದೆ. ಒಂದು ಸಲ ಒಬ್ಬ ಮೆಡಿಸಿನ್‌ ಸಹಾಯ ಬೇಕು ಅಂತ ಒಬ್ಬ ಬಂದ. ದುಡ್ಡು ಕೊಡದೆ ಮೆಡಿಸಿನ್‌ ಕೊಟ್ಟು ಕಳುಹಿಸಿದ್ದಾಯ್ತು .

ದುಬೈಯ ಬೀದಿಗಳಲ್ಲಿ ಕಂಡದ್ದನ್ನು ಕೊಂಡು ತಿನ್ನುತ್ತಾ...?

ಮತ್ತೊಂದು ಸಲ ಇನ್ನೊಬ್ಬ ‘ನಾನು ವಿಸಿಟ್‌ ವೀಸಾ ಮೇಲೆ ಬಂದಿದ್ದೆ , ಕೆಲಸ ಸ್ವಲ್ಪ ದಿನ ಸಿಕ್ಕಿತ್ತು. ಈಗ ಕೆಲಸ ಇಲ್ಲ, ಊಟ ಮಾಡದೇ ಸುಮಾರು ದಿನ ಆಯ್ತು, ಸಹಾಯ ಮಾಡಿ’ ಅಂತ ಅಂದ. ನಾನು ‘ಅಲ್ಲೇ ಪಕ್ಕದ ರೆಸ್ಟಾರಂಟ್‌ಲ್ಲಿ ಊಟ ಕೊಡಿಸುತ್ತೇನೆ ಊಟ ಮಾಡು’ ಅಂದೆ . ಅದಕ್ಕೆ ‘ಪಾರ್ಸೆಲ್‌ ಮಾಡಿ’ ಅಂದ . ನಾನು ಪಾರ್ಸೆಲ್‌ ಯಾಕೆ ಇಲ್ಲೇ ತಿನ್ನು ಅಂದೆ . ಅದಕ್ಕೆ ವನು ‘ಇವತ್ತು ರಾತ್ರಿ ಅರ್ಧ ಪ್ಯಾಕೆಟ್‌ ತಿನ್ನುತ್ತೇನೆ, ನಾಳೆ ಇನ್ನು ಅರ್ಧ ತಿನ್ನುತ್ತೇನೆ’ ಅಂದ. ಒಂದಷ್ಟುಜೇಬಲ್ಲಿದ್ದ ದುಡ್ಡು ಕೊಟ್ಟು, ಎರಡು ಪ್ಯಾಕೆಟ್‌ ಪಾರ್ಸೆಲ್‌ ಕೊಟ್ಟು ಹೊರ ನಡೆದೆ . ಒಬ್ಬ ಗೆಳೆಯನಿಗೆ ಅವನ ನಂಬರ್‌ ಕೊಟ್ಟು ಸಹಾಯ ಮಾಡಲು ಹೇಳಿದೆ .

ಹಸಿವು, ಹಸಿವು ಕಲಿಸುವ ಪಾಠದ ಮುಂದೆ ಇನ್ನಾವುದು ಇಲ್ಲ. ಯಾಕೋ ಗೊತ್ತಿಲ್ಲ ‘ಇವತ್ತು ರಾತ್ರಿ ಅರ್ಧ ತಿನ್ನುತ್ತೇನೆ, ನಾಳೆ ಇನ್ನರ್ಧ ತಿನ್ನುತ್ತೇನೆ’ ಅನ್ನುವ ಮಾತುಗಳು ಬಹಳ ದಿನ ನನ್ನ ಮನ ತುಂಬಾ ಕಾಡಿದವು.

-ಶ್ರೀ ಕೃಷ್ಣ ಕುಳಾೖ

Follow Us:
Download App:
  • android
  • ios