Asianet Suvarna News Asianet Suvarna News

ಹಿಂದೂ ಮೀಟಿ ಸಮುದಾಯ, ಆದಿವಾಸಿ ಕ್ರೈಸ್ತರ ನಡುವೆ ಸಂಘರ್ಷ: ಬೂದಿ ಮುಚ್ಚಿದ ಕೆಂಡವಾದ ಮಣಿಪುರ ಹಿಂಸೆಗೆ 54 ಬಲಿ!

ಮಣಿಪುರದಲ್ಲಿ ಹಿಂಸಾಚಾರ ಹತ್ತಿಕ್ಕಲು ಸೇನೆ ಹಾಗೂ ಅಸ್ಸಾಂ ರೈಫಲ್ಸ್‌ನ 10 ಸಾವಿರಕ್ಕೂ ಅಧಿಕ ಯೋಧರನ್ನು ನಿಯೋಜಿಸಲಾಗಿದೆ. ಎಲ್ಲೆಂದರಲ್ಲಿ ಯೋಧರೇ ಕಾಣುತ್ತಿದ್ದು, ನಿಧಾನವಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

manipur violence at least 54 dead imphal valley returning to normalcy ash
Author
First Published May 7, 2023, 6:29 AM IST

ಇಂಫಾಲ (ಮೇ 7, 2023): ಎರಡು ಜನಾಂಗಗಳ ನಡುವೆ ಕಳೆದ ವಾರ ಸಂಭವಿಸಿದ ಹಿಂಸಾಚಾರಕ್ಕೆ ಈಶಾನ್ಯ ರಾಜ್ಯ ಮಣಿಪುರದಲ್ಲಿ 54 ಮಂದಿ ಬಲಿಯಾಗಿ, 200ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದು ಇದೀಗ ದೃಢಪಟ್ಟಿದೆ. ಸಾವಿನ ಸಂಖ್ಯೆ ನೂರನ್ನು ದಾಟಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಸುದ್ದಿ ಖಚಿತಪಟ್ಟಿಲ್ಲ. ಈ ನಡುವೆ, ಹಿಂಸೆಯಿಂದ ಹೆದರಿರುವ ಸಾವಿರಾರು ಜನರು ಅಸ್ಸಾಂಗೆ ವಲಸೆ ಹೋಗುತ್ತಿದ್ದಾರೆ. ಏತನ್ಮಧ್ಯೆ ಐವರು ಬಂಡುಕೋರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಅಲ್ಲದೆ ಮತ್ತೆ ಹಿಂಸೆ ನಡೆಸುವ ಪ್ರಯತ್ನಗಳನ್ನು ವಿಫಲಗೊಳಿಸಿವೆ.

ಮಣಿಪುರದಲ್ಲಿ ಹಿಂಸಾಚಾರ ಹತ್ತಿಕ್ಕಲು ಸೇನೆ ಹಾಗೂ ಅಸ್ಸಾಂ ರೈಫಲ್ಸ್‌ನ 10 ಸಾವಿರಕ್ಕೂ ಅಧಿಕ ಯೋಧರನ್ನು ನಿಯೋಜಿಸಲಾಗಿದೆ. ಎಲ್ಲೆಂದರಲ್ಲಿ ಯೋಧರೇ ಕಾಣುತ್ತಿದ್ದು, ನಿಧಾನವಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಇಂಫಾಲ ಕಣಿವೆಯಲ್ಲಿ ಶನಿವಾರ ಅಂಗಡಿ ಹಾಗೂ ಮಾರುಕಟ್ಟೆಗಳು ಪುನಾರಂಭಗೊಂಡಿದ್ದು, ಕಾರುಗಳು ಓಡಾಡಲಾರಂಭಿಸಿವೆ. ಜನರು ತರಕಾರಿ ಸೇರಿದಂತೆ ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದಿದ್ದಾರೆ. ಆದರೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಶುಕ್ರವಾರ ರಾತ್ರಿ ಐವರು ಬಂಡುಕೋರರನ್ನು ಯೋಧರು ಕೊಂದಿದ್ದಾರೆ. ಅಲ್ಲದೆ ವಿವಿಧೆಡೆ ಮತ್ತೆ ಬೆಂಕಿ ಹಚ್ಚುವ, ಹಿಂಸಾಚಾರ ನಡೆಸುವ ಪ್ರಯತ್ನಗಳು ನಡೆದವಾದರೂ ಯೋಧರ ತಕ್ಷಣದ ಪ್ರವೇಶದಿಂದಾಗಿ ಅದು ತಪ್ಪಿದೆ.

ಇದನ್ನು ಓದಿ: ಮಣಿಪುರ ಸ್ಥಿತಿ ಶಾಂತ: ಕೆಲವು ಕಡೆ ಭದ್ರತಾ ಪಡೆ-ಬಂಡುಕೋರರ ಚಕಮಕಿ; 2 ದಿನದ ಹಿಂಸೆಯಲ್ಲಿ 13 ಜನ ಬಲಿ

ಈ ನಡುವೆ ಮಣಿಪುರದ ಹಿಂಸಾಚಾರವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಇನ್ನೂ 1000 ಅರೆಸೇನಾ ಪಡೆಗಳನ್ನು ರವಾನೆ ಮಾಡಿದೆ. ಶುಕ್ರವಾರದಿಂದ ಮಣಿಪುರಕ್ಕೆ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

1100 ಜನರು ಅಸ್ಸಾಂಗೆ:
ಈ ನಡುವೆ ಮಣಿಪುರ ಜಿರಿಬಾಮ್‌ ಜಿಲ್ಲೆಯ 1100 ಜನರು ಅಸ್ಸಾಂಗೆ ವಲಸೆ ಬಂದಿದ್ದಾರೆ. ಅವರಿಗೆ ಅಸ್ಸಾಂ ಸರ್ಕಾರ ಆಹಾರ, ವಸತಿ ಸೌಕರ್ಯವನ್ನು ಕಲ್ಪಿಸಿದೆ. ಶಾಲೆ, ಸಮುದಾಯ ಭವನಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದೆ. ಪಡಿತರ ಸಾಮಗ್ರಿಯನ್ನು ವಿತರಿಸಿದೆ. ವಲಸಿಗರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಮಣಿಪುರದಲ್ಲಿ ಕಂಡಲ್ಲಿ ಗುಂಡು ಆದೇಶ: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರಚಾರ ದಿಢೀರ್‌ ರದ್ದು!

ಮಣಿಪುರ ಜನಸಂಖ್ಯೆಯಲ್ಲಿ ಶೇ. 53ರಷ್ಟಿರುವ ಮೀಟಿ ಸಮುದಾಯಕ್ಕೆ ಪರಿಶಿಷ್ಟ ಮೀಸಲು ನೀಡಲು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಹೈಕೋರ್ಟ್‌ ಆದೇಶಿಸಿದ್ದನ್ನು ಖಂಡಿಸಿ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಕುಕಿ ಹಾಗೂ ನಾಗಾ ಸಮುದಾಯದ ಜನರು ಕಳೆದ ಬುಧವಾರ ಪ್ರತಿಭಟನಾ ಮೆರವಣಿಗೆ ಆಯೋಜಿಸಿದ್ದರು. ಈ ವೇಳೆ ಪ್ರತಿಭಟನಾ ನಿರತರ ಗುಂಪೊಂದು ಮೀಟಿ ಸಮುದಾಯದ ಜನರ ಮೇಲೆ ದಾಂಧಲೆ ನಡೆಸಿತ್ತು. ಇದಕ್ಕೆ ಮೀಟಿ ಜನರು ಪ್ರತೀಕಾರಕ್ಕೆ ಇಳಿದಿದ್ದರಿಂದ ವ್ಯಾಪಕ ಹಿಂಸಾಚಾರ ಸಂಭವಿಸಿ ಮಣಿಪುರ ಹೊತ್ತಿ ಉರಿದಿತ್ತು.

ಭೂಸಮೀಕ್ಷೆಯ ಕಿಚ್ಚು
ಈ ನಡುವೆ, ಚುರಾಚಂದಪುರ ಜಿಲ್ಲೆಯಲ್ಲಿ ಕಳೆದ ವಾರ ಸರ್ಕಾರದ ಉದ್ದೇಶಿತ ಭೂಸಮೀಕ್ಷೆಯ ವಿರುದ್ಧ ಮೀಟಿ ಸಮುದಾಯದ ವಿರೋಧಿಗಳಾಗಿರುವ ಕುಕಿ ಆದಿವಾಸಿಗಳು ಪ್ರತಿಭಟನೆ ನಡೆಸಿದ್ದರು. ಭೂಸಮೀಕ್ಷೆ ಮೂಲಕ ತಮ್ಮನ್ನು ಒಕ್ಕಲೆಬ್ಬಿಸುವ ತಂತ್ರವನ್ನು ಸರ್ಕಾರ ಹೂಡಿದೆ ಎಂಬುದು ಅವರ ಆರೋಪವಾಗಿತ್ತು. ಈ ಕಾರಣವೂ ಸೇರಿದಂತೆ ಮೀಟಿ ಸಮುದಾಯದ ಎಸ್‌ಟಿ ಸ್ಥಾನಮಾನ ನೀಡಿಕೆ ವಿಷಯವು ಹಿಂಸೆಗೆ ಮತ್ತಷ್ಟು ಕುಮ್ಮಕ್ಕು ನೀಡಿದೆ. ಕುಕಿಗಳು ಈಗ ಪ್ರತಿಭಟನೆಗೆ ಇಳಿದಿರುವ ವಿದ್ಯಾರ್ಥಿಗಳ ಒಕ್ಕೂಟದ ಸದಸ್ಯರೂ ಹೌದು.

ಇದನ್ನೂ ಓದಿ: ಹೊತ್ತಿ ಉರಿಯುತ್ತಿದೆ ಮಣಿಪುರ: ದಯವಿಟ್ಟು ಸಹಾಯ ಮಾಡಿ ಎಂದು ಮೋದಿ, ಅಮಿತ್ ಶಾ ನೆರವು ಕೇಳಿದ ಮೇರಿ ಕೋಮ್

ಸಂಘರ್ಷಕ್ಕೆ ಇಳಿದ ಎರಡೂ ಸಮುದಾಯಗಳ ಜನರು ಪರಸ್ಪರ ಮಾತುಕತೆಗೆ ಮುಂದಾಗಬೇಕು ಮತ್ತು ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸಲು ನೆರವಾಗಬೇಕು. ಸಂಘರ್ಷದಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಮೀಟಿಗಳಾಗಲೀ ಅಥವಾ ಕುಕಿ ಸಮುದಾಯದವರಾಗಲೀ ಒಂದೇ ರಾಜ್ಯಕ್ಕೆ ಸೇರಿದವರಾಗಿದ್ದು, ಅಲ್ಲೇ ಒಂದಾಗಿ ಬಾಳಿ ಬದುಕಬೇಕು. ಶಾಂತಿ ನೆಲೆಸಿದಾಗ ಮಾತ್ರ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯ.
ಕಿರಣ್‌ ರಿಜಿಜು, ಕೇಂದ್ರ ಸಚಿವ

ಏಕೆ ಹಿಂಸಾಚಾರ?
ಹಿಂದೂ ಮೀಟಿ ಸಮುದಾಯಕ್ಕೆ ಮೀಸಲು ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಇತ್ತೀಚೆಗೆ ಹೈಕೋರ್ಟ್‌ ಮಣಿಪುರ ಸರ್ಕಾರಕ್ಕೆ ಸೂಚಿಸಿತ್ತು. ಇದಕ್ಕೆ ಆದಿವಾಸಿ ಕ್ರೈಸ್ತ ಸಮುದಾಯ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಎರಡೂ ಕಡೆ ಅಪಾರ ಸಾವುನೋವು ಸಂಭವಿಸುತ್ತಿದೆ. 53% ಇರುವ ಬಹುಸಂಖ್ಯಾತ ಮೀಟಿಗಳಿಗೆ ಮೀಸಲು ನೀಡಿದರೆ ತಮ್ಮ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ ಎಂಬುದು ಕ್ರೈಸ್ತ ಆದಿವಾಸಿಗಳ ವಾದ.

Follow Us:
Download App:
  • android
  • ios