
ಶ್ರೀನಗರ (ಫೆ. 24) : ಅಮೆರಿಕದ (America) ಪಡೆಗಳು ಅಫ್ಘಾನಿಸ್ತಾನವನ್ನು (Afghanistan) ಬಿಟ್ಟು ಹೊರಟ ಬಳಿಕ ಅಲ್ಲಿ ಉಳಿದ ಶಸ್ತ್ರಾಸ್ತ್ರಗಳು ಕಾಶ್ಮೀರದಲ್ಲಿ (Kashmir) ಸಕ್ರಿಯವಾಗಿರುವ ಪಾಕಿಸ್ತಾನ ಪರ ಉಗ್ರರ ಪಾಲಾಗಬಹುದು ಎಂಬ ಆತಂಕ ನಿಜವಾಗಿದೆ. ಅಷ್ಘಾನಿಸ್ತಾನದಲ್ಲಿ ಅಮೆರಿಕ ಸೇನೆ ಬಳಕೆ ಮಾಡುತ್ತಿದ್ದ ಉಪಗ್ರಹ ಫೋನುಗಳು ಕಳೆದ ವಾರ ಜಮ್ಮು-ಕಾಶ್ಮೀರದ ವಿವಿಧ ಭಾಗಗಳಲ್ಲಿ ಏಕಕಾಲಕ್ಕೆ ಸಕ್ರಿಯವಾಗಿದ್ದವು ಎಂದು ಗುಪ್ತಚರ ಇಲಾಖೆ ಆತಂಕಕಾರಿ ಮಾಹಿತಿ ಹೊರಗೆಡವಿದೆ.
ಅಮೆರಿಕದ ಇರಿಡಿಯಂ ಕಂಪನಿಯ 8 ಉಪಗ್ರಹ ಫೋನುಗಳು ಫೆ.13ರಿಂದ ಜಮ್ಮು-ಕಾಶ್ಮೀರದ ಬದ್ಗಾಂ, ಬಂಡೀಪೋರ, ಕುಪ್ವಾರಾ, ಪುಲ್ವಾಮಾ ಮತ್ತು ಬಾರಾಮುಲ್ಲಾ ಪ್ರದೇಶಗಳಲ್ಲಿ ಸಕ್ರಿಯವಾಗಿವೆ. ಫೆ.14ರಂದು ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲೂ ಸಕ್ರಿಯವಾಗಿದ್ದವು. ಪುಲ್ವಾಮಾ ದಾಳಿಗೆ 3 ವರ್ಷ ತುಂಬುವ ಮುನ್ನಾ ದಿನವೇ ಈ ಎಲ್ಲಾ ಫೋನ್ಗಳು ಸಕ್ರಿಯವಾಗಿದ್ದು ವಿಶೇಷ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Army HPCL Kashmir Super 50: ಕಾಶ್ಮೀರ್ ಮಕ್ಕಳ ವೈದ್ಯ ಶಿಕ್ಷಣಕ್ಕೆ ಸೇನೆ ನೆರವು
ಅಷ್ಘಾನಿಸ್ತಾನದಲ್ಲಿ ಸಕ್ರಿಯವಾಗಿರುವ ವಿವಿಧ ಉಗ್ರ ಸಂಘಟನೆಗಳು ಅಥವಾ ಅಲ್ಲಿ ಸಕ್ರಿಯವಾಗಿರುವ ಪಾಕ್ ಮೂಲದ ಸಂಘಟನೆಗಳು ಈ ಉಪಗ್ರಹ ಫೋನ್ಗಳನ್ನು ಕಾಶ್ಮೀರಕ್ಕೆ ರವಾನಿಸಿರಬಹುದು ಎಂದು ಗುಪ್ತಚರ ಸಂಘಟನೆಗಳು ಹೇಳಿವೆ.
ಅಷ್ಘಾನಿಸ್ತಾನದಲ್ಲಿ ಬೀಡುಬಿಟ್ಟಿದ್ದ ತನ್ನ ಪಡೆಗಳನ್ನು ಕಳೆದ ವರ್ಷ ಆಗಸ್ಟ್ನಲ್ಲಿ ಅಮೆರಿಕ ವಾಪಸ್ ಕರೆಸಿಕೊಂಡಿತ್ತು. ಈ ವೇಳೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಅಲ್ಲಿಯೇ ಬಿಟ್ಟುಹೋಗಿತ್ತು. ಅವೆಲ್ಲಾ ತಾಲಿಬಾನ್ ಸೇರಿದಂತೆ ವಿವಿಧ ಉಗ್ರ ಸಂಘಟನೆಗಳ ಪಾಲಾಗಿದ್ದವು.
ಎಲ್ಲಿಂದ ಬಂದವು?
- ಕಳೆದ ವರ್ಷ ಆಫ್ಘನ್ನಿಂದ ಸೇನೆ ಹಿಂದಕ್ಕೆ ಕರೆಸಿಕೊಂಡ ಅಮೆರಿಕ
- ಆಗ ಅಮೆರಿಕದ ಪಡೆಗಳು ಕೆಲ ಶಸ್ತ್ರಾಸ್ತ್ರಗಳನ್ನು ಬಿಟ್ಟು ಹೋಗಿದ್ದವು
- ಅವು ತಾಲಿಬಾನ್ ಹಾಗೂ ಇತರ ಭಯೋತ್ಪಾದಕರ ಕೈಸೇರಿದ್ದವು
- ಅವರಿಂದ ಪಾಕಿಸ್ತಾನ, ಕಾಶ್ಮೀರ ಇತ್ಯಾದಿ ಪ್ರದೇಶಗಳಿಗೆ ರವಾನೆ
ಇದನ್ನೂ ಓದಿ: Kodagu: ಶ್ರೀನಗರದಲ್ಲಿ ಹಿಮಪಾತದಡಿ ಸಿಲುಕಿ ವಿರಾಜಪೇಟೆ ಯೋಧ ಸಾವು
ಕಾಶ್ಮೀರ ವಿವಾದದಲ್ಲಿ ಹಸ್ತಕ್ಷೇಪ ಮಾಡಲ್ಲ: ಕಾಶ್ಮೀರವನ್ನು (Kashmir) ಮತ್ತೊಂದು ಪ್ಯಾಲೆಸ್ತೀನ್ (Palestine) ಎಂದು ರಷ್ಯಾ ಸರ್ಕಾರ ಹೇಳಿದೆ ಎಂದು ಸ್ಥಳೀಯ ಮಾಧ್ಯಮವೊಂದು ಮಾಡಿದ್ದ ವರದಿಯನ್ನು ರಷ್ಯಾ ಸರ್ಕಾರ (Russia Government) ಸ್ಪಷ್ಟವಾಗಿ ತಳ್ಳಿಹಾಕಿದೆ. ಕಾಶ್ಮೀರವು ಭಾರತ ಹಾಗೂ ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯವಾಗಿದ್ದು, ಅದರಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತನ್ನ ನಿಲುವನ್ನು ಮತ್ತೊಮ್ಮೆ ಪುನರುಚ್ಛರಿಸಿದೆ.
1972ರ ಶಿಮ್ಲಾ ಒಪ್ಪಂದ ಹಾಗೂ 1999 ರ ಲಾಹೋರ್ ಘೋಷಣೆಯ ಮೂಲಕ ಭಾರತ ಹಾಗೂ ಪಾಕ್ ಕಾಶ್ಮೀರದ ವಿಷಯ ಬಗೆಹರಿಸಿಕೊಳ್ಳಲು ಪ್ರಯತ್ನ ನಡೆಸಿವೆ. ರಷ್ಯಾದ ಮಾಧ್ಯಮ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಕ್ಕೆ ಸರ್ಕಾರವು ಅದೇ ನಿಲುವನ್ನು ಹೊಂದಿದೆ ಎಂದರ್ಥವಲ್ಲ ಎಂದು ರಾಯಭಾರ ಇಲಾಖೆ ಸ್ಪಷ್ಟಪಡಿಸಿದೆ. ದ್ವಿಪಕ್ಷೀಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಿರುವ ನೀತಿಯನ್ನು ಮಾಸ್ಕೋ ಮುಂದುವರಿಸಿದೆ ಎಂದು ರಷ್ಯಾದ ರಾಯಭಾರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಈ ಮಾಧ್ಯಮವು ಜಮ್ಮು ಮತ್ತು ಕಾಶ್ಮೀರದ ಸಾಕ್ಷ್ಯಚಿತ್ರದಲ್ಲಿ, ಕೇಂದ್ರಾಡಳಿತ ಪ್ರದೇಶವು "ವಸಾಹತುಶಾಹಿ ರಾಜ್ಯ" ಆಗುತ್ತಿದೆ ಎಂದು ಹೇಳಿದೆ. ವಿಡಿಯೋಗೆ "ಕಾಶ್ಮೀರ್: ಪ್ಯಾಲೆಸ್ಟೈನ್ ಇನ್ ದಿ ಮೇಕಿಂಗ್" ಎಂಬ ಶೀರ್ಷಿಕೆ ನೀಡಲಾಗಿದೆ. "ಆಡಳಿತ ಬಂಡವಾಳಶಾಹಿ ವ್ಯವಸ್ಥೆಗೆ ಪರ್ಯಾಯವನ್ನು ನಿರ್ಮಿಸಲು ಪ್ರಪಂಚದಾದ್ಯಂತ ತಳಮಟ್ಟದ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ" ಜನರ ಸಹಯೋಗದೊಂದಿಗೆ ಸಣ್ಣ ಮತ್ತು ಆಳವಾದ ಸಾಕ್ಷ್ಯಚಿತ್ರಗಳನ್ನು ನಿರ್ಮಿಸುವಲ್ಲಿ ಪರಿಣತಿ ಹೊಂದಿರುವ ಬಹು ಪ್ರಶಸ್ತಿ ವಿಜೇತ ಡಿಜಿಟಲ್ ಕಂಟೆಂಟ್ ಸೃಷ್ಟಿಕರ್ತ ಎಂದು ಸ್ಥಳೀಯ ಮಾಧ್ಯಮ ರೆಡ್ಫಿಶ್ ಚಾನೆಲ್ ಹೇಳುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ