
ಜಿನೇವಾ(ಏ.28): ಪ್ರತೀ ನಿತ್ಯ 3.50 ಲಕ್ಷಕ್ಕೂ ಹೆಚ್ಚು ಹೊಸ ಕೋವಿಡ್ ಕೇಸ್ಗಳು ಹಾಗೂ ಸಾವಿನ ಸಂಖ್ಯೆ 3 ಸಾವಿರದ ಹತ್ತಿರಕ್ಕೆ ತಲುಪುತ್ತಿರುವ ಭಾರತದ ಸ್ಥಿತಿಯು ಅತೀ ಹೃದಯ ವಿದ್ರಾವಕವಾದದ್ದು ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಈ ಬಗ್ಗೆ ಪತ್ರಕರ್ತರ ಜೊತೆ ಮಾತನಾಡಿದ ಡಬ್ಲ್ಯುಎಚ್ಒ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಘೇಬ್ರಿಯೇಸಸ್ ಅವರು, ‘ಕೊರೋನಾ ವೈರಸ್ ಸೃಷ್ಟಿಸಿದ ಮಹಾ ದುರಂತದಿಂದಾಗಿ ಭಾರತದ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರು ಹಾಗೂ ಸ್ಮಶಾನಗಳು ಸಹ ತುಂಬಿ ತುಳುಕುತ್ತಿವೆ. ಈ ಕೊರೋನಾ ಬಿಕ್ಕಟ್ಟಿನ ವಿರುದ್ಧದ ಭಾರತದ ಹೋರಾಟಕ್ಕೆ ಕೈ ಜೋಡಿಸುವುದಾಗಿ’ ಹೇಳಿದ್ದಾರೆ.
ಅಲ್ಲದೆ ಸೋಂಕಿನ ವಿರುದ್ಧದ ಹೋರಾಟಕ್ಕೆ ಅಗತ್ಯವಿರುವ ಸಾವಿರಾರು ಸಂಖ್ಯೆಯ ಆಮ್ಲಜನಕ ಪೂರೈಕೆ ವ್ಯವಸ್ಥೆ, ಸುಲಭವಾಗಿ ಸಾಗಿಸಬಹುದಾದ ಆಸ್ಪತ್ರೆಯ ವ್ಯವಸ್ಥೆ, ಪ್ರಯೋಗಾಲಯದ ಸಲಕರಣೆಗಳು ಸೇರಿದಂತೆ ಎಲ್ಲಾ ವೈದ್ಯಕೀಯ ನೆರವುಗಳನ್ನು ನೀಡಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
130 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಭಾರತವು ಕೊರೋನಾದ ಹಾಟ್ಸ್ಪಾಟ್ ರಾಷ್ಟ್ರವಾಗಿ ಪರಿವರ್ತನೆಯಾಗಿದ್ದು, ಆಮ್ಲಜನಕ ಸಿಲಿಂಡರ್, ರೆಮ್ಡೆಸಿವಿರ್ ಔಷಧ, ಕೊರೋನಾ ಲಸಿಕೆಗಳ ಭಾರೀ ಕೊರತೆ ಉದ್ಭವವಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಕುಟುಂಬಸ್ಥರು ಟ್ವೀಟರ್ ಸೇರಿ ಇನ್ನಿತರ ಸಾಮಾಜಿಕ ವೇದಿಕೆಗಳಲ್ಲಿ ಆಸ್ಪತ್ರೆಗಳ ಹಾಸಿಗೆ, ಆಮ್ಲಜನಕ ಸಿಲಿಂಡರ್, ಲಸಿಕೆ ಸೇರಿದಂತೆ ಇನ್ನಿತರ ನೆರವಿನ ನಿರೀಕ್ಷೆ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ