ಭಾರತ ನಿರ್ಮಿಸಿದ ಕಟ್ಟಡಗಳ ಮೇಲೆ ದಾಳಿಗೆ ತಾಲಿಬಾನ್‌ಗೆ ಪಾಕ್‌ ಸೂಚನೆ!

By Suvarna NewsFirst Published Jul 19, 2021, 8:06 AM IST
Highlights

* ಉಗ್ರರ ಮೂಲಕ ಭಾರತದಲ್ಲಿ ದುಷ್ಕೃತ್ಯ ನಡೆಸುವ ಪಾಕಿಸ್ತಾನದ ಕುತಂತ್ರ

* ಭಾರತ ನಿರ್ಮಿಸಿದ ಕಟ್ಟಡಗಳ ಮೇಲೆ ದಾಳಿಗೆ ತಾಲಿಬಾನ್‌ಗೆ ಪಾಕ್‌ ಸೂಚನೆ

* ಆಷ್ಘಾನಿಸ್ತಾನದಲ್ಲಿರುವ ತನ್ನ 10000 ಉಗ್ರರು, ತಾಲಿಬಾನಿಗಳಿಗೆ ಪಾಕ್‌ನಿಂದ ಸೂಚನೆ ರವಾನೆ

ನವದೆಹಲಿ(ಜು.19): ಉಗ್ರರ ಮೂಲಕ ಭಾರತದಲ್ಲಿ ದುಷ್ಕೃತ್ಯ ನಡೆಸುವ ಪಾಕಿಸ್ತಾನ, ಇದೀಗ ಆಷ್ಘಾನಿಸ್ತಾನ ಮರುನಿರ್ಮಾಣದ ನಿಟ್ಟಿನಲ್ಲಿ ಭಾರತ ನಿರ್ಮಿಸಿ ಕೊಟ್ಟಿದ್ದ ಹಲವು ಕಟ್ಟಡಗಳು, ಆಸ್ತಿಗಳ ವಿನಾಶಕ್ಕೆ ಸಂಚು ರೂಪಿಸಿರುವ ವಿಷಯ ಬೆಳಕಿಗೆ ಬಂದಿದೆ.

ಅಮೆರಿಕ ಸೇನೆ ಜಾಗ ತೆರವು ಮಾಡಿದ ಬಳಿಕ ಆಷ್ಘಾನಿಸ್ತಾನದ ಒಂದೊಂದೇ ತಾಣಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಿರುವ ತಾಲಿಬಾನ್‌ ಇದೀಗ ದೇಶದ ಬಹುತೇಕ ಜಾಗವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಮತ್ತೊಂದೆಡೆ ಪಾಕಿಸ್ತಾನ ಕನಿಷ್ಠ 10000 ಜಿಹಾದಿಗಳು ಕೂಡಾ ಕಳೆದ ಕೆಲ ತಿಂಗಳಿನಿಂದ ಆಷ್ಘಾನಿಸ್ತಾನ ಪ್ರವೇಶಿಸುವ ಮೂಲಕ ತಾಲಿಬಾನಿಗಳ ಜೊತೆ ಕೈ ಜೋಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿಮ್ಮ ವಶದಲ್ಲಿರುವ ಪ್ರದೇಶಗಳಲ್ಲಿ, ಭಾರತ ನಿರ್ಮಿಸಿದ ಕಟ್ಟಡಗಳನ್ನು ಮೊದಲು ಧ್ವಂಸಗೊಳಿಸಿ ಎಂದು ಪಾಕಿಸ್ತಾನದ ಕಡೆಯಿಂದ ಜಿಹಾದಿಗಳಿಗೆ ಮತ್ತು ತಾಲಿಬಾನಿ ಉಗ್ರರಿಗೆ ಸಂದೇಶ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆಂತರಿಕ ಸಂಘರ್ಷಕ್ಕೆ ತುತ್ತಾಗಿದ್ದ ಆಷ್ಘಾನಿಸ್ತಾನವನ್ನು ಮರು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಳೆದ 20 ವರ್ಷಗಳಿಂದ ಭಾರತ ಸರ್ಕಾರ, ಆ ದೇಶದಲ್ಲಿ ಸಂಸತ್‌, ಕ್ರಿಕೆಟ್‌ ಸ್ಟೇಡಿಯಂ, ಜಲವಿದ್ಯುದಾಗಾರ, ಹೆದ್ದಾರಿ ಸೇರಿದಂತೆ ನಾನಾ ರೀತಿಯ ಕಾಮಗಾರಿಗಳನ್ನು ನೆರವಿನ ರೂಪದಲ್ಲಿ ಮಾಡಿಕೊಟ್ಟಿದೆ. ಇದು ಅಲ್ಲಿನ ಜನರ ಜೀವನ ಸುಧಾರಿಸುವಲ್ಲಿ ಭಾರೀ ಪ್ರಮುಖ ಪಾತ್ರ ವಹಿಸಿದೆ. 20 ವರ್ಷಗಳಲ್ಲಿ ಭಾರತ ಕನಿಷ್ಠ 22000 ಕೋಟಿ ರು. ಮೌಲ್ಯದ ನೆರವನ್ನು ಆಷ್ಘಾನಿಸ್ತಾನಕ್ಕೆ ಕಲ್ಪಿಸಿದೆ.

ಹೀಗಾಗಿ ಇಂಥ ಆಸ್ತಿಗಳನ್ನೇ ಮೊದಲು ಗುರಿ ಮಾಡಿ ನಾಶ ಮಾಡುವಂತೆ ಉಗ್ರರಿಗೆ ಸಂದೇಶ ರವಾನಿಸಲಾಗಿದೆ

click me!