ಭೂಕಂಪದಿಂದ ಬಚಾವಾಗಿ ಹೊರಬಂದ ಉದ್ಯೋಗಿ, ಮನುಷ್ಯತ್ವ ಮರೆತ ಕಂಪನಿ ಸೂಚನೆಯಂತೆ ಅಂಗಡಿಯೊಳಗೆ ಹಣ ತರಲು ಹೋಗಿ ಯುವತಿ ಸಾವು!

Published : Aug 28, 2026, 05:25 PM IST
Japan Earthquake

ಸಾರಾಂಶ

ಜಪಾನ್‌ನ ಪ್ರಬಲ ಭೂಕಂಪದಿಂದ ಸುರಕ್ಷಿತವಾಗಿ ಪಾರಾಗಿದ್ದ 22 ವರ್ಷದ ಯುವತಿಯೊಬ್ಬಳು, ಕಂಪನಿಯ ಒತ್ತಾಯದ ಮೇರೆಗೆ ನಗದು ತರಲು ಮತ್ತೆ ಮಾಲ್‌ಗೆ ಹಿಂತಿರುಗಿದಳು. ನಂತರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಆಕೆ ತನ್ನ ಸಹೋದ್ಯೋಗಿಯೊಂದಿಗೆ ಪ್ರಾಣ ಕಳೆದುಕೊಂಡಳು. ಈ ದುರಂತಕ್ಕೆ ಕಾರಣವಾದ ತಮ್ಮ ತಪ್ಪನ್ನು ಕಂಪನಿ ಒಪ್ಪಿಕೊಂಡು ಕ್ಷಮೆಯಾಚಿಸಿದೆ.

ಜಪಾನ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಸಂದರ್ಭದಲ್ಲಿ ಕಟ್ಟಡದಿಂದ ಸುರಕ್ಷಿತವಾಗಿ ಹೊರಬಂದಿದ್ದ 22 ವರ್ಷದ ಯುವತಿಯೊಬ್ಬಳು, ಕಂಪನಿಯ ಒತ್ತಾಯಕ್ಕೆ ಮಣಿದು ನಗದು ತರಲು ಮತ್ತೆ ಒಳಗೆ ಹೋಗಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಜೀವ ಕಳೆದುಕೊಂಡ ದಾರುಣ ಘಟನೆ ಬೆಳಕಿಗೆ ಬಂದಿದೆ. ಜುಲೈ 28 ರಂದು ಜಪಾನ್‌ನ ಕುಮಾಮೊಟೊ ಪ್ರಾಂತ್ಯದಲ್ಲಿ 7.1 ತೀವ್ರತೆಯ ಭೀಕರ ಭೂಕಂಪ ಸಂಭವಿಸಿತು. ಕಾಶಿಮಾದಲ್ಲಿರುವ 'ಅಯೋನ್ ಮಾಲ್ ಕುಮಾಮೊಟೊ' ಒಳಗಿದ್ದ ಸಾರ್ವಜನಿಕರು ಹಾಗೂ ಸಿಬ್ಬಂದಿಯನ್ನು ತಕ್ಷಣವೇ ಸುರಕ್ಷಿತವಾಗಿ ಹೊರಗೆ ಸ್ಥಳಾಂತರಿಸಲಾಯಿತು.

ಸುರಕ್ಷಿತ ಪ್ರದೇಶದಿಂದ ಮತ್ತೆ ಸಾವಿನ ದವಡೆಗೆ!

ಮಾಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 'ಹ್ಯಾಬಿಟಾ' ಎಂಬ ಚಿಲ್ಲರೆ ಮಾರಾಟ ಮಳಿಗೆಯ 22 ವರ್ಷದ ಉದ್ಯೋಗಿ 'ಕುರುಮಿ ಒಟಾಕೆ' ಮತ್ತು ಆಕೆಯ ಮಹಿಳಾ ಸಹೋದ್ಯೋಗಿ, ಭೂಕಂಪ ಸಂಭವಿಸಿದ ಕೂಡಲೇ ಗ್ರಾಹಕರು ಹೊರಹೋಗಲು ನೆರವಾಗಿ, ತಾವೂ ಸುರಕ್ಷಿತವಾಗಿ ಪಾರ್ಕಿಂಗ್ ಪ್ರದೇಶಕ್ಕೆ ತಲುಪಿದ್ದರು. ಅಲ್ಲಿ ಕುರುಮಿ ತಮ್ಮ ಸಂಬಂಧಿಕರನ್ನು ಭೇಟಿಯಾಗಿದ್ದರು. ಆದರೆ, ಕಂಪನಿಯ ಮೇಲಾಧಿಕಾರಿಗಳಿಂದ ಬಂದ ಕಟ್ಟುನಿಟ್ಟಿನ ಸೂಚನೆಯಂತೆ, ದಿನದ ಮಾರಾಟದ ನಗದನ್ನು ಭದ್ರತಾ ತಿಜೋರಿಗೆ (Safe) ಸ್ಥಳಾಂತರಿಸಲು ತಾನು ಮತ್ತೆ ಮಾಲ್ ಒಳಗೆ ಹೋಗಬೇಕಾಗಿದೆ ಎಂದು ಕುರುಮಿ ಸಂಬಂಧಿಕರಿಗೆ ತಿಳಿಸಿದರು. ಸಾಯಂಕಾಲ 5:35 ರ ಸುಮಾರಿಗೆ, ಪ್ರವೇಶದ್ವಾರದಲ್ಲಿದ್ದ ಸಿಬ್ಬಂದಿಯ ಎಚ್ಚರಿಕೆಯನ್ನೂ ಮೀರಿ ಅವರಿಬ್ಬರೂ ಮಾಲ್ ಒಳಗೆ ಪ್ರವೇಶಿಸಿದರು.

ಭೀಕರ ಅನಿಲ ಸೋರಿಕೆ ಸ್ಫೋಟ

ಇಬ್ಬರು ಉದ್ಯೋಗಿಗಳು ಎರಡನೇ ಮಹಡಿಯಲ್ಲಿದ್ದ ನಗದನ್ನು ಸಂಗ್ರಹಿಸಿ, ಮೊದಲನೇ ಮಹಡಿಯಲ್ಲಿದ್ದ ಸೇಫ್‌ನಲ್ಲಿಡಲು ತೆರಳಿದ ಕೆಲವೇ ನಿಮಿಷಗಳಲ್ಲಿ, ಅಂದರೆ ಸಂಜೆ 5:50 ರ ಸುಮಾರಿಗೆ ಮಾಲ್‌ನಲ್ಲಿ ಭೀಕರ ಸ್ಫೋಟ ಸಂಭವಿಸಿತು. ಭೂಕಂಪದ ತೀವ್ರತೆಗೆ ಕಟ್ಟಡದ ಅನಿಲ ಪೈಪ್‌ಲೈನ್ ಸೋರಿಕೆಯಾಗಿದ್ದೇ ಈ ಸ್ಫೋಟಕ್ಕೆ ಕಾರಣ ಎಂದು ಶಂಕಿಸಲಾಗಿದೆ.

ಈ ದುರಂತದಲ್ಲಿ ಮಾಲ್‌ನ ವಿವಿಧ ಅಂಗಡಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 7 ಜನರು ಸ್ಥಳದಲ್ಲೇ ಜೀವ ಕಳೆದುಕೊಂಡರೆ, 26ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡರು. ಮೃತಪಟ್ಟವರಲ್ಲಿ 22 ವರ್ಷದ ಕುರುಮಿ ಹಾಗೂ ಆಕೆಯ ಸಹೋದ್ಯೋಗಿಯೂ ಸೇರಿದ್ದರು.

ಕಂಪನಿಯ ತಪ್ಪೊಪ್ಪಿಗೆ ಮತ್ತು ಕ್ಷಮೆಯಾಚನೆ

ಆಗಸ್ಟ್ 2 ರಂದು ಕುರುಮಿ ಅವರ ಅಂತ್ಯಕ್ರಿಯೆಗೆ ಕುಟುಂಬಸ್ಥರು ಸಿದ್ಧತೆ ನಡೆಸುತ್ತಿದ್ದಾಗ, 'ಹ್ಯಾಬಿಟಾ' ಕಂಪನಿಯ ಅಧ್ಯಕ್ಷೆ ಕೀಮಾ ಉಯೆನೊ ಮತ್ತು ಮಾರಾಟ ವ್ಯವಸ್ಥಾಪಕ ಕೋಜಿ ಯುಸೆ ಕುಟುಂಬವನ್ನು ಭೇಟಿ ಮಾಡಿ ಲಿಖಿತ ವಿವರಣೆಯೊಂದಿಗೆ ಕ್ಷಮೆಯಾಚಿಸಿದರು.

ತಮ್ಮ ನಿರ್ಧಾರ ಸಂಪೂರ್ಣ ತಪ್ಪು ಎಂದು ಒಪ್ಪಿಕೊಂಡ ಮಾರಾಟ ವ್ಯವಸ್ಥಾಪಕ ಕೋಜಿ ಯುಸೆ, "ಅಂದು ನಾನು ಮಾರಾಟದ ಹಣವನ್ನು ತಿಜೋರಿಗೆ ಇಡುವ ವಿಷಯವನ್ನೇ ಎತ್ತದಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ. ಎಷ್ಟೇ ಹಣವಿದ್ದರೂ ಅದು ಮನುಷ್ಯನ ಜೀವಕ್ಕಿಂತ ಮೌಲ್ಯಯುತವಾದದ್ದಲ್ಲ ಎಂಬ ಸತ್ಯ ಅರಿವಾಗುತ್ತಿದೆ. ಅಂದಿನ ನನ್ನ ಸೂಚನೆ ತೀರಾ ಕೆಟ್ಟದಾಗಿತ್ತು ಎಂದು ಕಣ್ಣೀರಿಡುತ್ತಾ ವಿಷಾದ ವ್ಯಕ್ತಪಡಿಸಿದರು. ಈ ಘಟನೆಯ ಕುರಿತು ಆಂತರಿಕ ತನಿಖೆ ನಡೆಸುವುದಾಗಿ ಕಂಪನಿ ಭರವಸೆ ನೀಡಿದೆ.

ಮೃತ ಕುರುಮಿ ಅತ್ಯಂತ ಜವಾಬ್ದಾರಿಯುತ, ನಗುಮೊಗದ ಹಾಗೂ ನಂಬಿಕಸ್ಥ ಯುವತಿಯಾಗಿದ್ದರು ಎಂದು ಆಕೆಯ ಕುಟುಂಬ ಮತ್ತು ಶಾಲಾ ದಿನಗಳ ಗೆಳೆಯರು ನೆನಪಿಸಿಕೊಂಡಿದ್ದಾರೆ. ಹೈಸ್ಕೂಲ್‌ನಲ್ಲಿ ವಾಲಿಬಾಲ್ ತಂಡದ ನಾಯಕಿಯಾಗಿದ್ದ ಆಕೆ, ನೀಡಿದ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸುತ್ತಿದ್ದಳು. ಕಂಪನಿಯ ಸಣ್ಣ ತಪ್ಪು ನಿರ್ಧಾರ ಮತ್ತು ಹಣದ ಮೇಲಿನ ವ್ಯಾಮೋಹಕ್ಕೆ ಬಲಿಯಾದ ಈ ಯುವತಿಯ ದುರಂತ ಅಂತ್ಯಕ್ಕೆ ಜಪಾನ್‌ನಾದ್ಯಂತ ತೀವ್ರ ಆಕ್ರೋಶ ಮತ್ತು ಸಂತಾಪ ವ್ಯಕ್ತವಾಗಿದೆ.

PREV
Read more Articles on
click me!

Recommended Stories

ಅಮ್ಮನಿಗೆ ದುಡ್ಡು ಕೊಡಬೇಕಿತ್ತು, ಆದರೆ... 'ಹಾಸ್ಪಿಟಲ್ ಎಮರ್ಜೆನ್ಸಿ' ಅಂತ ಹೇಳಿ ರಾಪಿಡೋ ಡ್ರೈವರ್‌ಗೆ ವಂಚನೆ!
Layoffs ಬಳಿಕ ಸಿಗದ ಜಾಬ್, ನೆಮ್ಮದಿಗಾಗಿ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿದ ಯುವಕ, ವೇತನ ಗಂಟೆಗೆ 1000 ರೂ!