
ವಿದರ್ಭ (ಮೇ.21) ಕರ್ನಾಟಕ ಸೇರಿದಂತೆ ಭಾರತದ ಕೆಲವು ರಾಜ್ಯಗಳಲ್ಲಿ ಅಲ್ಲೊಂದು ಇಲ್ಲೊಂದು ಮಳೆಯಾಗುತ್ತಿದೆ. ಆದರೆ ಹಲವೆಡೆ ರಣಬಿಸಿಲು, ಬಿಸಿಗಾಳಿಯಿಂದ ಆತಂಕ ಸೃಷ್ಟಿಯಾಗಿದೆ. ಎಲ್ಲೆಡೆ ನೀರು ಬತ್ತಿದೆ. ಕಾಡುಗಳಲ್ಲೂ ನೀರಿಲ್ಲ. ಹೀಗಾಗಿ ಪ್ರಾಣಿಗಳು ಬಾಯಾರಿ, ಬಸವಳಿದ ನೀರು ಹುಡುಕುತ್ತಾ ನಾಡಿಗೆ, ರಸ್ತೆಗೆ ಬರುತ್ತಿದೆ. ಹೀಗೆ ಕೋತಿಗಳು ಬಾಯಾರಿ ಕೊನೆಗೆ ಯಾವುದೇ ದಾರಿ ಕಾಣದೆ ಸಾರಿಗೆ ಬಸ್ ನಿಲ್ಲಿಸಿ ನೀರು ಕೇಳಿದ ಘಟನೆ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ನಡೆದಿದೆ.
ಖಂಡಾಲಾ ಘಾಟ್ನ ಪುಸಾದ್ ಬಳಿ ಮಧ್ಯಾಹ್ನ 3 ಗಂಟೆ ವೇಳೆಗೆ ಮಹಾರಾಷ್ಟ್ರ ಸಾರಿಗೆ ಬಸ್ನ್ನು ಹಲವು ಕೋತಿಗಳು ತಡೆದು ನೀರಿಗಾಗಿ ಪರಿತಪಿಸಿದ ಘಟನೆ ನಡೆದಿದೆ. ಬಸ್ನಲ್ಲಿದ್ದ ಪ್ರಯಾಣಿಕರು ಘಟನೆ ವಿವರಿಸಿದ್ದಾರೆ. ವಾಶಿಂನಿಂದ ಪುಸಾದ್ಗೆ ಪ್ರಯಾಣಿಕರ ಹೊತ್ತು ತೆರಳಿದ್ದ ಬಸ್ ಖಂಡಾಲಾ ಘಾಟ್ನಲ್ಲಿ ಪ್ರಯಾಣಿಸುತ್ತಿತ್ತು. ಕಾಡುಗಳಿಂದ ಕೂಡಿದ ಘಾಟ್ ವಲಯದಲ್ಲಿ ಒಂದೆರಡು ಕೋತಿಗಳು ದಿಢೀರ್ ಆಗಿ ಸಾರಿಗೆ ಬಸ್ ಎದುರಿಗೆ ಬಂದಿದೆ. ರಸ್ತೆಯಲ್ಲಿ ನಿಂತಿದೆ. ಬಸ್ ಹಾರ್ನ್ ಹೊಡೆದರು ಹತ್ತಿರ ಬಂದರೂ ಕೋತಿಗಳು ಕದಲಿಲ್ಲ. ಬಸ್ನ್ನೇ ನೋಡುತ್ತಾ ರಸ್ತೆಯಲ್ಲೇ ನಿಂತಿದೆ.
ಬಸ್ ಡ್ರೈವರ್ ತಕ್ಷಣವೇ ಬ್ರೇಕ್ ಹಾಕಿ ಬಸ್ ನಿಲ್ಲಿಸಿದ್ದಾರೆ. ಬಳಿಕ ಹಾರ್ನ್ ಹೊಡೆದು ಕೋತಿಗಳನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ. ಕಂಡಕ್ಟರ್ ಕೂಡ ಕೋತಿಗಳನ್ನು ಓಡಿಸಲು ಶಬ್ದ ಮಾಡಿದ್ದಾರೆ. ಆದರೆ ರಣ ಬಿಸಿಲಿನಲ್ಲಿ ಕೋತಿಗಳು ಬಸ್ ಪಕ್ಕಕ್ಕೆ ಬಂದಿದೆ. ತಕ್ಷಣವೇ ಪ್ರಯಾಣಿಕರು ಕೋತಿಗಳು ತೀವ್ರ ಅಸ್ವಸ್ಥಗೊಂಡಿರುವುದು ಗಮನಿಸಿದ್ದಾರೆ. ಹೀಗಾಗಿ ಒಂದು ಕೋತಿಗೆ ಪ್ರಯಾಣಿಕನೊಬ್ಬ ನೀರಿನ ಬಾಟಲಿ ನೀಡಿದ್ದಾನೆ.
ನೀರು ಸಿಕ್ಕ ಖುಷಿಯಲ್ಲಿ ಕೋತಿ ಬಾಟಲಿ ಎತ್ತಿ ಕುಡಿದಿದೆ. ಇತ್ತ ಹಲವು ಕೋತಿಗಳು ಈ ಬಾಟಲಿ ನೀರಿಗಾಗಿ ಜಗಳವಾಡಿದೆ. ಇದೇ ವೇಳೆ ಹಲವು ಪ್ರಯಾಣಿಕರು ತಮ್ಮ ಬಳಿ ಇದ್ದ ನೀರಿನ ಬಾಟಲಿಯ ಮುಚ್ಚಳ ತೆಗೆದು ಕೋತಿಗಳಿಗ ನೀಡಿದ್ದಾರೆ. ಕೋತಿಗಳು ಈ ಬಾಟಲಿ ಪಡೆದು ನೀರು ಕುಡಿದಿದೆ. ರಣಬಿಸಿಲಿನಿಂದ ಕಂಗಾಲಾಗಿದ್ದ ಕೋತಿಗಳು ಬಾಯಾರಿ ಬಸವಳಿದಿತ್ತು. ಕೋತಿಗಳಿಗೆ ನೀರು ಸಿಗುವ ಯಾವುದೇ ದಾರಿ ಉಳಿದಿರಲಿಲ್ಲ. ಪ್ರಯಾಣಿಕರು ನೀರಿನ ಬಾಟಲಿ ಹಿಡಿದು ತೆರಳುತ್ತಿರುವುದನ್ನು ಕೋತಿಗಳು ಗಮನಿಸಿದೆ. ಹೀಗಾಗಿ ದಾರಿ ಬದಿಯಲ್ಲೇ ಕೋತಿಗಳು ನೀರಿಗಾಗಿ ಪರಿತಪಿಸುತ್ತಾ ನಿಂತಿದೆ.
ಕೆಲವೇ ಕ್ಷಣಗಳಲ್ಲಿ ಕಾಡಿನಿಂತ, ಸುತ್ತ ಮುತ್ತಲಿನಿಂದ ಹಲವು ಕೋತಿಗಳು ಆಗಮಿಸಿದೆ. ಪ್ರಯಾಣಿಕರು ತಮ್ಮಲ್ಲಿದ್ದ ಎಲ್ಲಾ ನೀರಿನ ಬಾಟಲಿಗಳನ್ನು ನೀಡಿದ್ದಾರೆ. ಕೆಲ ಪ್ರಯಾಣಿಕರು ಕೋತಿಗಳಿಗೆ ಬಾಟಲಿ ಮೂಲಕ ಕೋತಿಗಳ ಬಾಯಿಗೆ ನೀರು ಸುರಿದಿದ್ದಾರೆ. ಎಲ್ಲಾ ಕೋತಿಗಳು ನೀರು ಕುಡಿದಿದೆ. ಇದೇ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ತಮ್ಮ ಬಾಟಲಿ ನೀರುಗಳನ್ನು ಕೋತಿಗಳಿಗೆ ನೀಡಿದ್ದಾರೆ.
ಈ ಘಟನೆ ಭಾರಿ ಎಚ್ಚರಿಕೆ ಸಂದೇಶ ರವಾನಿಸಿದೆ. ದೇಶದ ಹಲವೆಡೆ ರಣಬಿಸಿಲಿನಿಂದ ಪ್ರಾಣಿಗಳು, ಪಕ್ಷಿಗಳು ಕಂಗೆಟ್ಟಿದೆ. ಪ್ರಾಣಿ ಪಕ್ಷಿಗಳು ನೀರಿಲ್ಲದಂ ಕಂಗಾಲಾಗಿದೆ. ಕಾಡು, ತೀರ ಪ್ರದೇಶ, ನದಿ ಎಲ್ಲೂ ನೀರಿಲ್ಲ. ಹೀಗಾಗಿ ಪ್ರಾಣಿಗಳು ಅಸ್ವಸ್ಥಗೊಳ್ಳುತ್ತಿದೆ,ಸಾಯುತ್ತಿದೆ. ಇತ್ತ ಮಳೆ ಕೂಡ ವಿಳಂಬವಾಗುತ್ತಿರುವುದು ಮಾತ್ರವಲ್ಲ, ಭಾರಿ ಕೊರತೆ ಎದುರಾಗಿದೆ.