
ಪ್ಲಾಸ್ಟಿಕ್ ತ್ಯಾಜ್ಯ ಇಂದು ಪರಿಸರಕ್ಕೆ ದೊಡ್ಡ ಸವಾಲಾಗಿದೆ. ಆದರೆ ಇದೇ ಸಮಸ್ಯೆಯನ್ನು ಉದ್ಯಮದ ಅವಕಾಶವನ್ನಾಗಿ ಮಾಡಿಕೊಂಡಿದ್ದಾರೆ ಕೇರಳದ ಮೂವರು ಉದ್ಯಮಿಗಳು. ಸಿದ್ಧಾರ್ಥ್ ಎ.ಕೆ., ಪ್ರೊಫೆಸರ್ ಸೂರಜ್ ವರ್ಮಾ ಮತ್ತು ಎಲ್ವಿನ್ ಜಾರ್ಜ್ ಸೇರಿ ಆರಂಭಿಸಿರುವ ‘ಕಾರ್ಬನ್ ಆ್ಯಂಡ್ ವೇಲ್’ ಎಂಬ ಸ್ಟಾರ್ಟಪ್ ಪ್ಲಾಸ್ಟಿಕ್ ಕಸವನ್ನು ಉಪಯುಕ್ತ ಫರ್ನಿಚರ್ ಆಗಿ ಪರಿವರ್ತಿಸುತ್ತಿದೆ.
ಸಮುದ್ರ ತೀರ ಮತ್ತು ಇತರ ಪ್ರದೇಶಗಳಲ್ಲಿ ಕಾಣಸಿಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ ಸಿದ್ಧಾರ್ಥ್ ಎ.ಕೆ. ಮತ್ತು ಪ್ರೊಫೆಸರ್ ಸೂರಜ್ ವರ್ಮಾ 2022ರಲ್ಲಿ ಈ ಸ್ಟಾರ್ಟಪ್ ಆರಂಭಿಸಿದರು. 2023ರಲ್ಲಿ ಎಲ್ವಿನ್ ಜಾರ್ಜ್ ಕೂಡ ತಂಡ ಸೇರಿಕೊಂಡರು.
ಕೇವಲ ಪ್ಲಾಸ್ಟಿಕ್ ಸಂಗ್ರಹಿಸುವ ಬದಲು ಅದಕ್ಕೆ ಆರ್ಥಿಕ ಮೌಲ್ಯ ನೀಡುವುದು ಇವರ ಉದ್ದೇಶವಾಗಿತ್ತು. ಅಂದರೆ ತ್ಯಾಜ್ಯವನ್ನು ಮರುಬಳಕೆ ಮಾಡಿ ಹೊಸ ಉತ್ಪನ್ನಗಳನ್ನು ತಯಾರಿಸುವ ಮೂಲಕ ‘ಸರ್ಕ್ಯುಲರ್ ಎಕಾನಮಿ’ ಮಾದರಿಯನ್ನು ನಿರ್ಮಿಸಲು ತಂಡ ಮುಂದಾಯಿತು.
ಆರಂಭದಲ್ಲಿ ಪ್ಲಾಸ್ಟಿಕ್ ಬಳಸಿ ಟೈಲ್ಸ್ ತಯಾರಿಸಲು ಪ್ರಯತ್ನಿಸಿದರು. ಆದರೆ ತಯಾರಾದ ವಸ್ತುವಿಗೆ ಅಗತ್ಯವಾದಷ್ಟು ಬಲ ಸಿಗಲಿಲ್ಲ. ಹೀಗಾಗಿ ಆ ಪ್ರಯೋಗ ಯಶಸ್ವಿಯಾಗಲಿಲ್ಲ.
ನಂತರ ಪಾಲಿಮರ್ ಸೈನ್ಸ್ ಪರಿಣಿತರಾದ ಪ್ರೊಫೆಸರ್ ಸೂರಜ್ ವರ್ಮಾ ಅವರ ತಾಂತ್ರಿಕ ಜ್ಞಾನವನ್ನು ಬಳಸಿಕೊಂಡು ತಂಡ ಹೊಸ ರೀತಿಯ ಕಾಂಪೋಸಿಟ್ ವಸ್ತುವನ್ನು ಅಭಿವೃದ್ಧಿಪಡಿಸಿತು. ಪ್ಲಾಸ್ಟಿಕ್, ಕೆಲವು ಅಡಿಟಿವ್ಸ್ ಮತ್ತು ಫಿಲ್ಲರ್ಸ್ ಬಳಸಿ ತಯಾರಿಸಿದ ಈ ವಸ್ತು ನೋಡಲು ಮರದಂತಿದ್ದು, ಹೆಚ್ಚು ಬಾಳಿಕೆ ಬರುವಂತಿದೆ.
ಕಸ ಸಂಗ್ರಹಿಸುವವರು ಮತ್ತು ರಿಸೈಕ್ಲಿಂಗ್ ಪಾಲುದಾರರ ಸಹಾಯದಿಂದ ಪ್ಲಾಸ್ಟಿಕ್ ಸಂಗ್ರಹಿಸಲಾಗುತ್ತದೆ. ನಂತರ ಅದನ್ನು ಸಣ್ಣ ತುಂಡುಗಳಾಗಿ ಸಂಸ್ಕರಿಸಿ, ಎಕ್ಸ್ಟ್ರೂಷನ್ ವ್ಯವಸ್ಥೆಯ ಮೂಲಕ ವಿವಿಧ ಉತ್ಪನ್ನಗಳಾಗಿ ರೂಪಿಸಲಾಗುತ್ತದೆ.
ಬೆಂಚ್, ಟೇಬಲ್, ಕಿಯೋಸ್ಕ್ ಮತ್ತು ಶೆಲ್ಟರ್ಗಳಂತಹ ಹೊರಾಂಗಣ ಫರ್ನಿಚರ್ಗಳನ್ನು ತಯಾರಿಸಲಾಗುತ್ತಿದೆ. ಈ ಉತ್ಪನ್ನಗಳು ನೀರು ನಿರೋಧಕ, ಗೆದ್ದಲು ನಿರೋಧಕ ಮತ್ತು ಯುವಿ ಕಿರಣಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆ ಎಂದು ಕಂಪನಿ ತಿಳಿಸಿದೆ.
ಇದುವರೆಗೆ ಸ್ಟಾರ್ಟಪ್ ಸುಮಾರು 80,000 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸಿದೆ. ರೆಸಾರ್ಟ್ಗಳು, ಹೋಟೆಲ್ಗಳು ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ 800ಕ್ಕೂ ಹೆಚ್ಚು ಯೂನಿಟ್ಗಳನ್ನು ಮಾರಾಟ ಮಾಡಿದೆ.
2025-26ನೇ ಹಣಕಾಸು ವರ್ಷದಲ್ಲಿ ಕಂಪನಿ ₹2 ಕೋಟಿ ಆದಾಯ ಗಳಿಸಿದೆ. ಮುಂದಿನ ದಿನಗಳಲ್ಲಿ ತಿಂಗಳಿಗೆ 50ರಿಂದ 70 ಟನ್ಗಳಷ್ಟು ಪ್ಲಾಸ್ಟಿಕ್ ಅಪ್ಸೈಕಲ್ ಮಾಡುವ ಸಾಮರ್ಥ್ಯವನ್ನು ಬೆಳೆಸುವ ಗುರಿ ಹೊಂದಿದೆ. ಕೇರಳದ ಜೊತೆಗೆ ಕರ್ನಾಟಕ ಮತ್ತು ತಮಿಳುನಾಡಿಗೂ ವಿಸ್ತರಿಸುವ ಯೋಜನೆ ಇದೆ.
ಪರಿಸರದ ಸಮಸ್ಯೆಯನ್ನು ಕೇವಲ ಸಮಸ್ಯೆಯಾಗಿ ನೋಡದೆ, ಅದಕ್ಕೆ ಪರಿಹಾರ ಹುಡುಕುತ್ತಲೇ ಉದ್ಯಮ ಕಟ್ಟಬಹುದು ಎಂಬುದಕ್ಕೆ ‘ಕಾರ್ಬನ್ ಆ್ಯಂಡ್ ವೇಲ್’ ಕಥೆ ಒಂದು ಉದಾಹರಣೆಯಾಗಿದೆ.