26 ವರ್ಷ ತಲೆಮರೆಸಿಕೊಂಡಿದ್ದವ ಉಡುಪಿ ಪೊಲೀಸರ ಕೈಗೆ ಸಿಕ್ಕಿಬಿದ್ದ ರೋಚಕ ಕತೆ

By Web DeskFirst Published Mar 29, 2019, 11:08 PM IST
Highlights

ಪೊಲೀಸ್ ಇಲಾಖೆಯಲ್ಲಿ ಇಂಥ ಸಾಧನೆಗಳು ಆಗಾಗ್ಗೆ  ನಡೆಯುತ್ತಿರುತ್ತದೆ. ಉಡುಪಿ ಪೊಲೀಸರು ಮಾಡಿರುವ ಸಾಧನೆಯನ್ನು ಒಮ್ಮೆ ನೋಡಲೇಬೇಕು.

ಉಡುಪಿ(ಮಾ. 29]  ಪೊಲೀಸರು ಮನಸ್ಸು ಮಾಡಿದರೇ ಎಂತಹ ಪ್ರಕರಣವನ್ನೂ ಪತ್ತೆ ಮಾಡುತ್ತಾರೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ, ಬರೋಬ್ಬರಿ 26 ವರ್ಷಗಳಿಂದ ತಲೆಮರೆಸಿಕೊಡಿದ್ದ  ದರೋಡೆಕೋರನನ್ನು ಉಡುಪಿ ಪೊಲೀಸರು ಕೇರಳದಲ್ಲಿ ಪತ್ತೆ ಮಾಡಿ ಹೆಡೆಮುರಿ ಕಟ್ಟಿ ಕರೆತಂದಿದ್ದಾರೆ. ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಓಡಾಡಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣಾ ಪ್ರಯುಕ್ತ ನಡೆದ ಈ ವಿಶೇಷ ಕಾರ್ಯಾಚರಣೆಯಲ್ಲಿ, ಉಡುಪಿ ಜಿಲ್ಲಾ ಪೊಲೀಸರು, ಜಿಲ್ಲೆಯ ವಿವಿಧ ಠಾಣೆಗಳಲ್ಲಿ ವಾರೆಂಟ್ ಇರುವ ಹೊರ ಜಿಲ್ಲೆ - ರಾಜ್ಯಗಳ 27 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. 

ಚುನಾವಣೆ ಖರ್ಚಿಗೆ ಉಡುಪಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಿಂದ ದೇಣಿಗೆ ಸಂಗ್ರಹ

ಜಿಲ್ಲೆಯಲ್ಲಿ ಹತ್ತಾರು ವರ್ಷಗಳಿಂದ ಬಾಕಿ ವಾರಂಟುಗಳನ್ನು ಪರಿಶೀಲಿಸಿ, ಅವುಗಳಲ್ಲಿ ತಲೆಮರೆಸಿಕೊಂಡ ಆರೋಪಿಗಳನ್ನು ಪಟ್ಟಿ ಮಾಡಲಾಯಿತು. ಅವರನ್ನು ಪತ್ತೆ ಹಚ್ಚುವುದಕ್ಕಾಗಿ ಡಿವೈಎಸ್ಪಿಗಳ ನೇತೃತ್ವದಲ್ಲಿ 3 ತಂಡಗಳನ್ನು, ಎಸೈಗಳ ನೇತೃತ್ವದಲ್ಲಿ 5 ತಂಡಗಳನ್ನು ರಚಿಸಲಾಯಿತು. ಅದರಂತೆ ವಿವಿಧ ಮಾಹಿತಿಗಳ ಅಧಾರದಲ್ಲಿ ಕಾರ್ಯಾಚರಣೆ ನಡೆಸಿ ತಲೆಮರೆಸಿಕೊಂಡಿದ್ದ 27 ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.

ಮಧ್ಯಪ್ರದೇಶದ ಇಂದೋರ್‌ನಿಂದ ಇಬ್ಬರು, ಮಹಾರಾಷ್ಟ್ರದ ಸಾಂಗ್ಲಿಯಿಂದ ಓರ್ವ ಮತ್ತು ಕೇರಳದಿಂದ ಮೂವರನ್ನು, ಹೊರಜಿಲ್ಲೆಗಳಿಂದ 21 ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 

ಕೇರಳದ ಕಾಸರಗೋಡಿನಲ್ಲಿ ದಸ್ತಗಿರಿಯಾದ ಆರೋಪಿ ಅಮೀರ್ ಆಲಿ ಎಂಬಾತನು ಕಳೆದ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಬೈಂದೂರು ಠಾಣಾ ವ್ಯಾಪ್ತಿಯ ಭಾರೀ ಕಳವು ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದಾನೆ. ಈತನನ್ನು ಮಣಿಪಾಲ ಠಾಣೆಯ ಪಿಎಸೈ ಶ್ರೀಧರ ನಂಬಿಯಾರ್‌ ಅವರ ತಂಡ ಕಾಸರಗೋಡಿನಲ್ಲಿ ಬಂಧಿಸಿ ಕರೆತಂದಿದೆ. ಇದೇ ಪ್ರಕರಣದ ಇನ್ನೊಬ್ಬ ಆರೋಪಿ ಕೆ.ಪಿ.ಯೂಸುಫ್ ಎಂಬಾತನು ಮೃತಪಟ್ಟಿರುವುದು ಖಚಿತವಾಗಿದೆ. 

ಈ ತಂಡಗಳ ನಿರ್ವಹಣೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಶಾ ಜೇಮ್ಸ್, ಎಎಸ್ಪಿ ಕುಮಾರಚಂದ್ರ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

click me!