ಭವಿಷ್ಯದಲ್ಲಿ 100 ಚಿನ್ನದ ಪದಕ ಗೆಲ್ಲಲು ಚೋಪ್ರಾ ಪ್ರೇರಣೆ: ಎಂಎಲ್‌ಸಿ ಕೆ ಗೋವಿಂದರಾಜು

By Kannadaprabha NewsFirst Published Aug 8, 2021, 3:17 PM IST
Highlights

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಜಾವಲಿನ್ ಥ್ರೋ ಪಟು ನೀರಜ್ ಚೋಪ್ರಾ

* ಇದು ಸುವರ್ಣಾಕ್ಷರದಲ್ಲಿ ಬರೆದಿಡಬಹುದಾದ ದಿನವೆಂದು ಬಣ್ಣಿಸಿದ ಕೆ. ಗೋವಿಂದರಾಜು

* ಕರ್ನಾಟಕ ಒಲಿಂಪಿಕ್‌ ಅಸೋಷಿಯೇಷನ್‌ ಅಧ್ಯಕ್ಷ ಕೆ. ಗೋವಿಂದರಾಜ್‌ 

ಬೆಂಗಳೂರು(ಆ.08): ಇದು ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕಾದ ಸಾಧನೆ. ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಜಾವೆಲಿನ್‌ ಪಟು ನೀರಜ್‌ ಚೋಪ್ರಾ ಭಾರತ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯರು ಆದ ಕರ್ನಾಟಕ ಒಲಿಂಪಿಕ್‌ ಅಸೋಷಿಯೇಷನ್‌ ಅಧ್ಯಕ್ಷ ಕೆ. ಗೋವಿಂದರಾಜ್‌ ಅವರು ಶ್ಲಾಘಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ನೀರಜ್‌ ಅವರ ಈ ಸಾಧನೆ ದೇಶದ ಯುವ ಜನಾಂಗಕ್ಕೆ ಮಾದರಿಯಾಗಬೇಕು. ಭವಿಷ್ಯದಲ್ಲಿ ಇಂತಹ ನೂರು ಚಿನ್ನದ ಪದಕಗಳು ಭಾರತದ ಪಾಲಾಗುವಂತೆ ಮುಂದಿನ ಪೀಳಿಗೆಗೆ ಪ್ರೇರಣೆ ನೀಡಬೇಕು ಎಂದು ಹೇಳಿದ್ದಾರೆ.

ನೀರಜ್‌ ಜೋಪ್ರಾ ಅವರ ಈ ಮಹಾನ್‌ ಸಾಧನೆ ದೇಶಕ್ಕೆ ಹೆಮ್ಮೆ ತಂದಿದೆ. ಅಂತೆಯೇ ದೇಶಾದ್ಯಂತ ಇರುವ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಿದೆ. ನೀರಜ್‌ ಅವರ ಈ ಚಿನ್ನದ ಪದಕದ ಸಾಧನೆ ದೇಶದ ಕ್ರೀಡಾ ಕ್ಷೇತ್ರದಲ್ಲಿ ಸಂಚಲಕ್ಕೆ ಕಾರಣವಾಗಿದೆ. ಭವಿಷ್ಯದಲ್ಲಿ ದೇಶದ ಕ್ರೀಡಾಪಟುಗಳು ವಿಶ್ವದ ದೊಡ್ಡ ಕ್ರೀಡಾ ಕೂಟಗಳಲ್ಲಿ ಮಹತ್ತರ ಸಾಧನೆ ಮಾಡಲು ಪ್ರೇರಣೆಯಾಗಿದೆ. ನೀರಜ್‌ ಅವರ ಈ ಸಾಧನೆಗೆ ಇಡೀ ದೇಶದ ಸಂಭ್ರಮಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

2013ರಲ್ಲೇ ಒಲಿಂಪಿಕ್ಸ್ ಭವಿಷ್ಯ ನುಡಿದಿದ್ದ ಮೋದಿ: ಸಾಕಾರಗೊಳಿಸಿದ ನೀರಜ್ ಚೋಪ್ರಾ!

ರಾಜ್ಯದಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಕೊರತೆ ಇಲ್ಲ. ನೀರಜ್‌ ಅವರ ಈ ಸಾಧನೆಯಿಂದ ಮತ್ತಷ್ಟು ಸ್ಫೂರ್ತಿ ಪಡೆದು ಮುಂದಿನ ಒಲಿಂಪಿಕ್‌ ಕ್ರೀಡಾಕೂಟಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ವಿಶ್ವಾಸವಿದೆ. ಒಲಿಂಪಿಕ್‌ನಲ್ಲಿ ಚಿನ್ನ ಗೆದ್ದು ಇಡೀ ದೇಶವೇ ಗೆಲುವಿನ ಹೊನಲಲ್ಲಿ ಮುಳುಗುವಂತೆ ಮಾಡಿರುವ ನೀರಜ್‌ ಜೋಪ್ರಾಗೆ ಅಭಿನಂದನೆಗಳು ಎಂದು ಗೋವಿಂದರಾಜ್‌ ಮನದುಂಬಿ ಹಾರೈಸಿದ್ದಾರೆ.

ಅಂತೆಯೆ ಒಲಿಂಪಿಕ್‌ನಲ್ಲಿ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿರುವ ಭಾರತದ ಮೀರಾಬಾಯಿ ಚಾನು, ಬ್ಯಾಡ್ಮಿಂಟನ್‌ನಲ್ಲಿ ಕಂಚು ಗೆದ್ದಿರುವ ಪಿ.ವಿ.ಸಿಂಧು, ಬಾಕ್ಸಿಂಗ್‌ನಲ್ಲಿ ಕಂಚು ಗೆದ್ದ ಲವ್ಲೀನಾ ಬೊರ್ಗೊಹೈನ್‌, ಕುಸ್ತಿಯಲ್ಲಿ ಬೆಳ್ಳಿಗೆದ್ದ ರವಿಕುಮಾರ್‌ ದಹಿಯಾ, ಕಂಚು ಗೆದ್ದಿರುವ ಭಜರಂಗ್‌ ಪೂನಿಯಾ ಹಾಗೂ ಹಾಕಿಯಲ್ಲಿ ಕಂಚು ಗೆದ್ದಿರುವ ಭಾರತೀಯ ಹಾಕಿ ತಂಡದ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

click me!