Suvarna News   | Asianet News
Published : Jul 05, 2022, 10:07 AM ISTUpdated : Jul 05, 2022, 12:34 PM IST

Karnataka Rain Live Updates: ಹೆಚ್ಚಾಯ್ತು ಜಲಾಶಯಗಳ ಒಳಹರಿವು, ಡ್ಯಾಮ್‌ಗಳ ಇಂದಿನ ನೀರಿನ ಮಟ್ಟ ಎಷ್ಟು?

ಸಾರಾಂಶ

Karnataka Rain Havoc: ರಾಜ್ಯದ ಎಲ್ಲೆಡೆ ಬಿಡದೇ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಚಿಕ್ಕಮಗಳೂರು, ಉತ್ತರ ಕನ್ನಡದಲ್ಲಿ ವರುಣನ ಅಬ್ಬರ ಹೆಚ್ಚಾಗಿದ್ದು, ಕೆಲವೆಡೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮತ್ತೆ ಕೆಲವೆಡೆ ಗುಡ್ಡ ಕುಸಿತ ಸಂಭವಿಸಿದೆ. ಕೊಡಗಿನಲ್ಲಿಯೂ ಮಳೆರಾಯ ತನ್ನ ಆರ್ಭಟ ಹೆಚ್ಚಿಸಿದ್ದು, ರಸ್ತೆಗಳು ಕುಸಿದಿವೆ. ಎಲ್ಲೆಲ್ಲಿ ಮಳೆಯ ಅನಾಹುತಗಳಿಂದ ಏನಾಗಿವೆ. ರಾಜ್ಯದ ಪರಿಸ್ಥಿತಿಗೆ ಹೇಗಿದೆ ಎಂದು ತಿಳಿಯಲು ಸುವರ್ಣನ್ಯೂಸ್.ಕಾಮ್ ಲೈವ್‌ ಬ್ಲಾಗ್ ಕ್ಲಿಕ್ಕಿಸಿ 

Karnataka Rain Live Updates: ಹೆಚ್ಚಾಯ್ತು ಜಲಾಶಯಗಳ ಒಳಹರಿವು, ಡ್ಯಾಮ್‌ಗಳ ಇಂದಿನ ನೀರಿನ ಮಟ್ಟ ಎಷ್ಟು?

12:34 PM (IST) Jul 05

ಜಲಾಶಯಕ್ಕೆ ಭಾರೀ ಒಳ ಹರಿವು: ಇಂದಿನ ನೀರಿನ ಮಟ್ಟ ಎಷ್ಟಿದೆ

ತುಂಗಾ ಜಲಾಶಯ:

ದಿನಾಂಕ: 05/07/2022

ಇಂದಿನ ಮಟ್ಟ: 588.24 ಅಡಿ

ಗರಿಷ್ಠ ಮಟ್ಟ : 588.24 ಅಡಿ

ಒಳಹರಿವು: 32085 cusecs

ಹೊರಹರಿವು: 32085 cusecs

ನೀರು ಸಂಗ್ರಹ: 2.411 Tmc

ಸಾಮರ್ಥ್ಯ: 3.24 Tmc

ಕಳೆದ ವರ್ಷ ಈ ದಿನ ನೀರು ಸಂಗ್ರಹ: 588.24  ಅಡಿ

ಲಿಂಗನಮಕ್ಕಿ ಜಲಾಶಯ

ದಿನಾಂಕ: 05/07/2022

ಇಂದಿನ ಮಟ್ಟ: 1762.10 ಅಡಿ

ಗರಿಷ್ಠ ಮಟ್ಟ : 1819 ಅಡಿ

ಒಳಹರಿವು: 39262 cusecs

ಹೊರಹರಿವು: 903.96 cusecs

ನೀರು ಸಂಗ್ರಹ: 29.98 Tmc

ಸಾಮರ್ಥ್ಯ: 151.64 Tmc
ಕಳೆದ ವರ್ಷ ಈ ದಿನ ನೀರು ಸಂಗ್ರಹ: 1784.60  ಅಡಿ

ಭದ್ರಾ ಜಲಾಶಯ

ದಿನಾಂಕ: 05/07/2022

ಇಂದಿನ ಮಟ್ಟ: 158'6" ಅಡಿ

ಗರಿಷ್ಠ ಮಟ್ಟ : 186 ಅಡಿ

ಒಳಹರಿವು: 30167 cusecs

ಹೊರಹರಿವು: 133 cusecs

ನೀರು ಸಂಗ್ರಹ: 41.536 Tmc

ಸಾಮರ್ಥ್ಯ: 71.535 Tmc
ಕಳೆದ ವರ್ಷ ಈ ದಿನದ ನೀರು ಸಂಗ್ರಹ 155'3" ಅಡಿ

12:31 PM (IST) Jul 05

ಉಡುಪಿ - ಮಡಿಕೇರಿಯಲ್ಲಿ ಭಾರೀ ಮಳೆ

ಉಡುಪಿ: ಉಡುಪಿ ಜಿಲ್ಲೆ ಮರವಂತೆಯಲ್ಲಿ ವ್ಯಾಪಕ ಕಡಲು ಕೊರೆತ 

ಸಮುದ್ರದ ಅಬ್ಬರಕ್ಕೆ ತೀರ ಪ್ರದೇಶದ ತೆಂಗಿನ ಮರಗಳು ಸಮುದ್ರಪಾಲು

ಮೀನುಗಾರಿಕೆ ಸಲಕರಣೆಗಳು ಕೂಡಾ ನೀರುಪಾಲು

ಸಮುದ್ರ ಕೊರೆತ ತಡೆಯಲು ಹಾಕಿದ್ದ ಕಲ್ಲುಗಳು ಸಮುದ್ರ ಪಾಲಾದ ಹಿನ್ನೆಲೆ

ತೀರಕ್ಕೆ ಅಪ್ಪಳಿಸುತ್ತಿರುವ ಭಾರಿ ಗಾತ್ರದ ಅಲೆಗಳು 

ಅಧಿಕಾರಿಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ

ಬ್ರಹ್ಮಾವರ ತಾಲೂಕಿನಲ್ಲೂ ವ್ಯಾಪಕ ಮಳೆ

ತುಂಬಿ ಹರಿಯುತ್ತಿರುವ ಸೀತಾ ನದಿ

ಬ್ರಹ್ಮಾವರದ ಮಟಪಾಡಿ, ನೀಲಾವರ, ಹನೇಹಳ್ಳಿ ಪರಿಸರದಲ್ಲಿ ನೀರಿನ ಮಟ್ಟ ಹೆಚ್ಚಳ

ಮಟಪಾಡಿಯ ಗದ್ದೆಗಳಲ್ಲಿ ತುಂಬಿರುವ ನೀರು

ಭತ್ತದ ಗದ್ದೆಗಳಲ್ಲಿ ತುಂಬಿದ ನೆರೆ ನೀರು

ಬಾವಲಿ ಕುದ್ರು, ನಂದನ ಕುದ್ರು, ರಾಮನ ಕುದ್ರು ತೆಂಗಿನ ತೋಟಕ್ಕೆ ನುಗ್ಗಿದ ನದಿ ನೀರು

ಕೊಡಗು: ಜಿಲ್ಲೆಯಲ್ಲಿ ಮುಂದುವರಿದ‌ ಮಳೆ ಅವಾಂತರ

ಅಪಾಯಕಾರಿಯಾಗಿ ಉಬ್ಬಿ ಬರುತ್ತಿರೋ ರಾಷ್ಟ್ರೀಯ ಹೆದ್ದಾರಿ

ಮಡಿಕೇರಿ-ಮದೆನಾಡು ಬಳಿ ಘಟನೆ

ಬೆಟ್ಟದ ಮೇಲಿನಿಂದ ಮಣ್ಣಿನ‌ ಒತ್ತಡ ಹೆಚ್ಚಾಗಿ ಉಬ್ಬುತ್ತಿರೋ ರಸ್ತೆ

ಕ್ಷಣಕ್ಣಕ್ಕೂ ಹೆಚ್ಚುತ್ತಿರೋ ರಸ್ತೆ ಉಬ್ಬು

ರಸ್ತೆ ಬಿರುಕು ಬಿಟ್ಟ ಸ್ಥಳಕ್ಜೆ NDRF ತಂಡ‌ಭೇಟಿ

ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮ

12:09 PM (IST) Jul 05

ಮನೆಯ ಮೇಲೆ ಕುಸಿದ ಗುಡ್ಡ

ಭಾರೀ ಮಳೆಗೆ ಮನೆ ಮೇಲೆ ಗುಡ್ಡ ಕುಸಿತವಾಗಿದೆ. ಕೇರಳ - ಕರ್ನಾಟಕ ಗಡಿ ಭಾಗದ ವರ್ಕಾಡಿ ಗ್ರಾಮ ಪೆದಾಮಲೆಯಲ್ಲಿ ಈ ಘಟನೆ ನಡೆದಿದೆ. ಧಾರಾಕಾರವಾಗಿ ಸುರಿದ ಮಳೆಗೆ ಗುಡ್ಡ ಕುಸಿದು ಮನೆಯ ಮೇಲೆ ಬಿದ್ದಿದೆ. ಮನೆಗೆ ಸಂಪೂರ್ಣ ಹಾನಿಯಾಗಿದ್ದು, ಮನೆಯೊಳಗೆ ನೀರು ನುಗ್ಗಿ ಸಂಪೂರ್ಣ ನಾಶವಾಗಿದೆ. ಅದೃಷ್ಟವಶಾತ್‌ ಯಾವುದೇ ಸಾವು ಸಂಭವಿಸಿಲ್ಲ. 

12:07 PM (IST) Jul 05

ಮಗಳನ್ನು ನೆನೆದು ಬಿಕ್ಕಿದ ಅಮ್ಮ

ನನಗೂ ಹುಷಾರಿರಲಿಲ್ಲ, ನಿನ್ನೆ ಮಗಳು ಹೊರಡುವಾಗ ಆಕೆಯ ತಲೆ ಒಂದನ್ನು ಬಾಚಿದ್ದೇನೆ. ಶಾಲೆಗೆ ಹೋಗುವಾಗ ಮಗಳ ಮುಖವನ್ನೂ ಸರಿಯಾಗಿ ನೋಡಲಿಲ್ಲ. ಮಗಳಿಗೆ ಜ್ವರವಿತ್ತು ಹಾಗಾಗಿ ಒಂದು ವಾರ ಶಾಲೆಗೆ ಕಳುಹಿಸಿರಲಿಲ್ಲ. ನಾಳೆ ಶಾಲೆಗೆ ಹೋಗುತ್ತೇನೆ ಎಂದು ಭಾನುವಾರವೇ ಮಗಳು ಸಿದ್ಧತೆ ಮಾಡಿಕೊಂಡಿದ್ದಳು. ಶಾಲೆಯಿಂದ ಬರುವಾಗ ಛತ್ರಿಯನ್ನ ಇಟ್ಟು ಹಳ್ಳಕ್ಕೆ ಕಾಲು ತೊಳೆಯಲು ಹೋಗಿದ್ದಾಳೆ. ಆ ವೇಳೆ ಛತ್ರಿ ಹಾರಿ ಹೋಗಿದ್ದನ್ನು ಹಿಡಿಯಲು ಹೋಗಿ ನೀರಲ್ಲಿ ಕೊಚ್ಚಿ ಹೋಗಿದ್ದಾಳೆ, ಎಂದು ಆರು ವರ್ಷದ ಮಗುವನ್ನು ಕಳೆದುಕೊಂಡಿರುವ ತಾಯಿ ಗೌಟಿ ಏಷ್ಯಾನೆಟ್‌ ನ್ಯೂಸ್‌ಗೆ ತಮ್ಮ ನೋವು ತೋಡಿಕೊಂಡಿದ್ದಾರೆ. ಮಳೆಯಲ್ಲಿ ತಂಗಿ ಕೊಚ್ಚಿಹೋದ ಬಗ್ಗೆ ಅಣ್ಣ ಸೈಮನ್‌ ತನ್ನ ತೊದಲು ನುಡಿಯಲ್ಲೇ ಮಾಹಿತಿ ನೀಡಿದ್ದಾನೆ. ಮಳೆಯ ಭೀಬತ್ಸ ರೂಪಕ್ಕೆ ರಾಜ್ಯಾದ್ಯಂತ ದುರಂತ ಘಟನೆಗಳು ನಡೆದಿವೆ.

11:20 AM (IST) Jul 05

ಚಾರ್ಮಾಡಿ ಘಾಟ್‌ನಲ್ಲಿ ಪ್ರವಾಸಿಗರಿಂದ ಟ್ರಾಫಿಕ್‌ ಜಾಮ್‌

ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರಿಂದ ಟ್ರಾಫಿಕ್ ಜಾಮ್ ಆಗಿದ್ದು, ಉತ್ತಮ ಮಳೆಯಿಂದ ಮಿನಿ‌‌ ಜಲಪಾತಗಳ ಸೃಷ್ಟಿಯಾಗಿವೆ. ಇದನ್ನು ವೀಕ್ಷಿಸಲು ಮುಗಿಬಿದ್ದಿರುವ ಪ್ರವಾಸಿಗರು ಮತ್ತು ಪ್ರಯಾಣಿಕರಿಂದ ಟ್ರಾಫಿಕ್‌ ಜಾಮ್‌ ಆಗಿದೆ. ಪ್ರಕೃತಿ ಸೌಂದರ್ಯ ಸವಿಯುವ ನೆಪದಲ್ಲಿ ಟ್ರಾಫಿಕ್ ಜಾಮ್ ಆಗಿದೆ. ತುರ್ತು ಕಾರ್ಯಗಳಿಗೆ ತೆರಳುವ ಪ್ರಯಾಣಿಕರಿಗೆ ಇದರಿಂದ ತೊಂದರೆಯಾಗುತ್ತಿದ್ದರೂ, ಫಾಲ್ಸ್  ಸೌಂದರ್ಯ ಸವಿಯುವ ಜೊತೆಗೆ ಸೆಲ್ಫಿಗಳಿಗೆ ಪ್ರವಾಸಿಗರು ಮುಗಿಬಿದ್ದಿದ್ದಾರೆ. ಫಾಲ್ಸ್ ಮುಂದೆ ಪ್ರವಾಸಿಗರು ಪೋಟೋ, ಟಿಕ್ ಟಾಕ್ ವಿಡಿಯೋ ಮಾಡುತ್ತಿದ್ದಾರೆ. ಫಾಲ್ಸ್ ನೋಡಲು ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸಿದ ಕಾರಣ ಇತರೆ ಸವಾರರಿಗೆ ತೊಂದರೆಯಾಗುತ್ತಿದೆ. ಉತ್ತಮ ಮಳೆಯಿಂದ ಚಾರ್ಮಾಡಿ ಘಾಟ್  ಪ್ರಕೃತಿ ಸೌಂದರ್ಯ ಇಮ್ಮಡಿಗೊಂಡಿದೆ. ಮುಂಗಾರು ಮಳೆಯಲ್ಲಿ ಹೊಸ ಮಿನಿ ಜಲಪಾತಗಳು ಅನಾವರಣಗೊಂಡಿವೆ. ದಕ್ಷಿಣಕನ್ನಡ ಮತ್ತು ಮಲೆನಾಡಿನ ಸಂಪರ್ಕ ಕೊಂಡಿ ಚಾರ್ಮಾಡಿ ಘಾಟ್. 

11:15 AM (IST) Jul 05

ಶಿರಸಿಯಲ್ಲಿ ಧರೆಗುರುಳಿದ ಮನೆಗಳು

ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಬಹುತೇಕ ತಗ್ಗು ಪ್ರದೇಶ ಜಲಾವೃತವಾಗಿದೆ. ಕೆಲವು ಕಡೆಗಳಲ್ಲಿ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿದ್ದು ಅಣಶಿ ಘಾಟಿನಲ್ಲಿ ಗುಡ್ಡ ಕುಸಿದಿದೆ. ಶಿರಸಿಯಲ್ಲಿ ಮಳೆಯ ಆರ್ಭಟಕ್ಕೆ ಮನೆಗಳು ಕುಸಿದಿವೆ. ಶಿರಸಿಯ ಓಣಿಕೇರಿ ಗ್ರಾಮದ ದೇವತೆಮನೆಯ ಗಣಪತಿ ಭಟ್ ಎಂಬವರ ಮನೆ ಕುಸಿತಗೊಂಡಿದ್ದು ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ. ಶಿರಸಿ ನಗರದ ಮುಸ್ಲಿಂ ಗಲ್ಲಿಯ ಹನಿಫಾಬಿ ಅಬ್ದುಲ್ ಎಂಬವರ ಮನೆಯ ಮೇಲ್ಛಾವಣಿ ಕುಸಿತಗೊಂಡಿದೆ. 

11:12 AM (IST) Jul 05

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ

ಉತ್ತರಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಶಿರಸಿ- ಕುಮಟಾ ರಸ್ತೆ ಹೀಪನಳ್ಳಿ ಕತ್ರಿ ಬಳಿ‌ ರಸ್ತೆಗೆ ಉರುಳಿದ ಬೃಹತ್ ಮರ ಉರುಳಿ ಬಿದ್ದಿದೆ. ಇದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು ಕಳೆದ ಒಂದು ತಾಸಿನಿಂದ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಮರವನ್ನು ತುಂಡರಿಸಿ ಸಂಚಾರ ವ್ಯವಸ್ಥೆ ಸರಿಪಡಿಸಲು ಯತ್ನಿಸುತ್ತಿದ್ದಾರೆ. ಮಳೆಯ ನಡುವೆ ರಸ್ತೆ ಬ್ಲಾಕ್ ಆಗಿದ್ದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

10:39 AM (IST) Jul 05

ಕೇರಳ - ಕರ್ನಾಟಕ ರಸ್ತೆ ಸಂಪರ್ಕ ಸ್ಥಗಿತ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆ, ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಾರಡ್ಕ ಚೆಕ್ ಪೋಸ್ಟ್ ಬಳಿ ಗುಡ್ಡ ಕುಸಿತವಾಗಿದ್ದು, ಕೇರಳದ ಕಾಸರಗೋಡಿಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಬಂದಾಗಿದೆ. ಸದ್ಯ ಮಣ್ಣು ತೆರವು ಕಾರ್ಯಾಚರಣೆ ಆರಂಭವಾಗಿದ್ದು, ಇನ್ನೂ ಕೆಲ ಗಂಟೆಗಳ ಕಾಲ ಸಂಚಾರ ಆರಂಭವಾಗುವ ಲಕ್ಷಣಗಳಿಲ್ಲ. ಜತೆಗೆ ಮಳೆಯ ಆರ್ಭಟ ಹೆಚ್ಚುತ್ತಲೇ ಇರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚಾರ ಕಷ್ಟವಾಗಲಿದೆ. 

10:28 AM (IST) Jul 05

ಮಳೆಯಲ್ಲಿ ಕೊಚ್ಚಿಹೋದ 6 ವರ್ಷದ ಕಂದಮ್ಮ

ಹಳ್ಳದಲ್ಲಿ ಆರು ವರ್ಷದ ಮಗು ಕೊಚ್ಚಿ ಹೋಗಿದ್ದು ಬಾಲಕಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಕಾಲು ಕೆಸರಾಯ್ತು ಎಂದು ಕಾಲು ತೊಳೆಯಲು ತೆರಳಿದ್ದ ಬಾಲಕಿ, ಮಳೆಯಿಂದ ಮೈದುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾಳೆ. ನಿನ್ನೆ ಸಂಜೆ ಶಾಲೆ ಬಿಟ್ಟು ಮನೆಗೆ ತೆರಳುವಾಗ ಹಳ್ಳದಲ್ಲಿ ಬಾಲಕಿ ಕೊಚ್ಚಿ ಹೋಗಿದ್ದಾಳೆ. ಅಣ್ಣನ ಜೊತೆ ಶಾಲೆ ಮುಗಿಸಿ ಬರುವಾಗ ಕೊಚ್ಚಿ ಹೋಗಿರುವ ಸುಪ್ರೀತಾ, ಒಂದನೇ ತರಗತಿ ಓದುತ್ತಿದ್ದಳು. ಸುಪ್ರೀತಾ, ಹೊಸಪೇಟೆ ಕಿರಿಯ ಪ್ರಾರ್ಥಮಿಕ ಶಾಲೆಯ ವಿದ್ಯಾರ್ಥಿನಿ. ಅಗ್ನಿಶಾಮಕ ಸಿಬ್ಬಂದಿ, ಧರ್ಮಸ್ಥಳ ವಿಪತ್ತು ನಿರ್ವಹಣಾ ಸದಸ್ಯರಿಂದ ಬಾಲಕಿಗಾಗಿ ಶೋಧ ನಡೆಯುತ್ತಿದೆ. 6 ತಂಡಗಳಾಗಿ ಕಾರ್ಯಚಾರಣೆಗೆ ಮಾಡಲಾಗುತ್ತಿದೆ. 

10:16 AM (IST) Jul 05

ಉತ್ತರ ಕನ್ನಡ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ದಿನಾಂಕ 05/07/ 2022ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಶಾಲೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ಮುಂತಾದ ಶೈಕ್ಷಣಿಕ ಸಂಸ್ಥೆಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ  ಘೋಷಿಸಿ ಮಾನ್ಯ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

10:14 AM (IST) Jul 05

ತುಂಗಾ ಡ್ಯಾಮ್ ಪ್ರದೇಶದಲ್ಲಿ ಒಳಹರಿವು ಹೆಚ್ಚಳ

ಶಿವಮೊಗ್ಗ: ಎಡೆಬಿಡದೆ ಸುರಿಯುತ್ತಿರುವ ಅರಿದ್ರಾ ಮಳೆ. ತುಂಗಾ ಡ್ಯಾಮ್ ಪ್ರದೇಶದಲ್ಲಿ ಒಳಹರಿವು ಹೆಚ್ಚಳ. ನಿನ್ನೆ ತಡರಾತ್ರಿಯಿಂದಲೇ ಡ್ಯಾಮ್ ನಿಂದ 44,000 ಕ್ಯೂಸೆಕ್ ನೀರು, ಹೊರಕ್ಕೆ. ಸುರಿಯುತ್ತಿರುವ ವಿಪರೀತ ಮಳೆಯಿಂದ ಜನಜೀವನ ವ್ಯಸ್ತವ್ಯಸ್ತವಾಗಿದೆ. 

10:13 AM (IST) Jul 05

ಕೇರಳ-ಕರ್ನಾಟಕ ಗಡಿಯಲ್ಲಿ ಗುಡ್ಡ ಕುಸಿತ

ಕೇರಳ ಕರ್ನಾಟಕ ಗಡಿ ಸಾರಡ್ಕದಲ್ಲಿ ಭೂಕುಸಿತವಾಗಿ ವಿಟ್ಲದಿಂದ ಪೆರ್ಲ ಭಾಗಕ್ಕೆ ಸಂಪರ್ಕ ಕಡಿತವಾಗಿದೆ. ರಾಜ್ಯ ಹೆದ್ದಾರಿಯಾದ ಈ ರಸ್ತೆ ಕರ್ನಾಟಕ ಮತ್ತು ಕೇರಳವನ್ನು ಸಂಪರ್ಕಿಸುತ್ತದೆ. ಕೇರಳಕ್ಕೆ ತೆರಳುವವರಿಗೆ ಸ್ವಲ್ಪ ತೊಂದರೆಯಾಗಿದ್ದು, ಪ್ರಯಾಣಿಕರು ಗಮನಿಸದರೆ ಒಳಿತು. 

 

 

10:09 AM (IST) Jul 05

ದಕ್ಷಿಣ ಕನ್ನಡದಲ್ಲಿ ಬಿಡದ ವರುಣನ ಆರ್ಭಟ, ಶಾಲೆಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕಶಾಲೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ, Diploma/ITI ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಸಾರಲಾಗಿದೆ


More Trending News