United we stand: ರಾಷ್ಟ್ರ ರಾಜಕಾರಣದ ಗೇಮ್‌ ಚೇಂಜರ್‌ ಸಭೆ: ಕೆಸಿ ವೇಣುಗೋಪಾಲ

By Kannadaprabha NewsFirst Published Jul 18, 2023, 7:30 AM IST
Highlights

‘ದೇಶದಲ್ಲಿ ಅಪಾಯದಲ್ಲಿರುವ ಪ್ರಜಾಪ್ರಭುತ್ವ, ಸಾಂವಿಧಾನಿಕ ಹಕ್ಕು, ಸ್ವಾಯತ್ತ ಸಂಸ್ಥೆಗಳ ರಕ್ಷಣೆಯ ಸದುದ್ದೇಶದಿಂದ ವಿರೋಧಪಕ್ಷಗಳು ಒಂದಾಗಿವೆ.ಬೆಂಗಳೂರಿನ ವಿರೋಧಪಕ್ಷದ ನಾಯಕರ ಸಭೆ ರಾಷ್ಟ್ರ ರಾಜಕಾರಣದಲ್ಲಿ ಗೇಮ್‌ ಚೇಂಜರ್‌ ಆಗಲಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಹೇಳಿದ್ದಾರೆ.

ಬೆಂಗಳೂರು (ಜು.18) :  ‘ದೇಶದಲ್ಲಿ ಅಪಾಯದಲ್ಲಿರುವ ಪ್ರಜಾಪ್ರಭುತ್ವ, ಸಾಂವಿಧಾನಿಕ ಹಕ್ಕು, ಸ್ವಾಯತ್ತ ಸಂಸ್ಥೆಗಳ ರಕ್ಷಣೆಯ ಸದುದ್ದೇಶದಿಂದ ವಿರೋಧಪಕ್ಷಗಳು ಒಂದಾಗಿವೆ. ಅಧಿಕಾರ ನಮ್ಮ ಗುರಿಯಲ್ಲ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಬೆಂಗಳೂರಿನ ವಿರೋಧಪಕ್ಷದ ನಾಯಕರ ಸಭೆ ರಾಷ್ಟ್ರ ರಾಜಕಾರಣದಲ್ಲಿ ಗೇಮ್‌ ಚೇಂಜರ್‌ ಆಗಲಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಹೇಳಿದ್ದಾರೆ.

ಜು. 20ರಿಂದ ಸಂಸತ್‌ ಅಧಿವೇಶನ ಆರಂಭವಾಗಲಿದೆ. ಸದನ ಹೊರಗೆ ಹಾಗೂ ಒಳಗೆ ಬಿಜೆಪಿ ವಿರುದ್ಧ ಯಾವ ರೀತಿ ಹೋರಾಟ ಮಾಡಬೇಕು. ಬಿಜೆಪಿಯ ಸಂವಿಧಾನ ವಿರೋಧಿ ಹಾಗೂ ಜನವಿರೋಧಿ ನಡೆಗಳಿಂದ ಉಂಟಾಗಿರುವ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಂತ್ರಗಾರಿಕೆ ರೂಪಿಸಲಾಗುವುದು ಎಂದು ಹೇಳಿದರು.

ರಾಜ್ಯ ಸಚಿವರ ಜತೆ ಇಂದಿನ ರಾಹುಲ್‌ ಸಭೆ ಮತ್ತೆ ಮುಂದೂಡಿಕೆ!

ತಾಜ್‌ವೆಸ್ಟೆಂಡ್‌ ಹೋಟೆಲ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ರಾಜ್ಯಸಭೆ ಸದಸ್ಯ ಜೈರಾಂ ರಮೇಶ್‌ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಜು.17, 18ರ ವಿರೋಧಪಕ್ಷಗಳ ನಾಯಕರ ಸಭೆಯ ಬಗ್ಗೆ ವಿವರಣೆ ನೀಡಿದರು.

ವಿರೋಧಪಕ್ಷಗಳ ಮೈತ್ರಿಕೂಟದ ಸಭೆಯಿಂದ ಬಿಜೆಪಿ, ಪ್ರಧಾನಿಗಳು ಗಾಬರಿಯಾಗಿದ್ದಾರೆ. ಮೈತ್ರಿಕೂಟ ಪಾಟ್ನಾದಲ್ಲಿ ಸಭೆ ನಡೆಸುವವರೆಗೂ ಎಲ್ಲಾ ವಿರೋಧ ಪಕ್ಷಗಳನ್ನು ಏಕಾಂಗಿಯಾಗಿ ಎದುರಿಸಬಲ್ಲೆವು ಎಂದು ಬೀಗುತ್ತಿದ್ದ ಬಿಜೆಪಿಯವರು ಈಗ ಬೇರೆ ಪಕ್ಷಗಳ ಜತೆ ಮೈತ್ರಿಗೆ ಮುಂದಾಗಿದ್ದಾರೆ. ಹಠಾತ್ತನೆ ಎನ್‌ಡಿಯ ಮೈತ್ರಿಕೂಟವನ್ನು ನೆನೆಸಿಕೊಂಡಿದ್ದಾರೆ. ಇದು ವಿರೋಧ ಪಕ್ಷಗಳ ಒಗ್ಗಟ್ಟಿನ ನಿಜವಾದ ಯಶಸ್ಸು ಎಂದು ಹೇಳಿದರು.

ಬಿಜೆಪಿ ಸರ್ಕಾರ ವಿರೋಧ ಪಕ್ಷಗಳ ಧ್ವನಿ ಅಡಗಿಸಲು ಸಾಂವಿಧಾನಿಕ ಸಂಸ್ಥೆಗಳಾದ ಇಡಿ, ಸಿಬಿಐ, ಐಟಿ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸುತ್ತಿದೆ. ರಾಹುಲ್‌ಗಾಂಧಿ ಅನರ್ಹತೆ, ಮಹಾರಾಷ್ಟ್ರ ಬೆಳವಣಿಗೆ ಇದಕ್ಕೆ ದೊಡ್ಡ ಉದಾಹರಣೆ. ಹೀಗಾಗಿ ಸಂವಿಧಾನಾತ್ಮಕ ಸಂಸ್ಥೆಗಳ ರಕ್ಷಣೆ ಹಾಗೂ ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳಲು ಒಟ್ಟಾಗಿದ್ದೇವೆ ಎಂದು ಹೇಳಿದರು.

ಪಿಎಂ ಮೌನ ಆಘಾತಕಾರಿ:

ಮಣಿಪುರ ಕಳೆದ 75 ದಿನಗಳಿಂದ ಹೊತ್ತಿ ಉರಿಯುತ್ತಿದೆ. ಈ ಬಗ್ಗೆ ದೇಶದ ಪ್ರಧಾನಮಂತ್ರಿಗಳು ಒಂದೇ ಒಂದು ಮಾತನಾಡಿಲ್ಲ. ಇದು ಆಘಾತಕಾರಿ ಬೆಳವಣಿಗೆ. ಕನಿಷ್ಠ ಮಣಿಪುರ ಜನತೆಗೆ ಶಾಂತಿಯ ಕರೆ ಕೊಟ್ಟಿಲ್ಲ. ಇದು ಬಹುದೊಡ್ಡ ಆಘಾತಕಾರಿ. ಜನಸಾಮಾನ್ಯರು ಇಂತಹವುಗಳಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಇನ್ನು ದೇಶದ ಜನ ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸಮಯ ಬಂದಾಗ ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ದಕ್ಷಿಣದಿಂದ ಯಾವ ಸಂದೇಶ ನೀಡಲು ಹೊರಟಿದ್ದೀರಿ ಎಂಬ ಪ್ರಶ್ನೆಗೆ, ಈ ಸಭೆಯಲ್ಲಿ ಯಾವ ವಿಚಾರ ಚರ್ಚೆ ಮಾಡಲಾಗುವುದು ಎಂದು ಈಗ ಹೇಳಲು ಸಾಧ್ಯವಿಲ್ಲ. ಇಲ್ಲಿ ಕೇವಲ ಕಾಂಗ್ರೆಸ್‌ ತೀರ್ಮಾನ ಮಾತ್ರವಲ್ಲ. ಎಲ್ಲ ಪಕ್ಷಗಳೂ ಸೇರಿ ತೀರ್ಮಾನ ಮಾಡಲಿದ್ದಾರೆ. ಸೋನಿಯಾ ಗಾಂಧಿ ಅವರ ಅನುಭವ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಶಕ್ತಿ ತುಂಬಲಿದೆ ಎಂದು ತಿಳಿಸಿದರು.

ಮೋದಿಗೆ ಯಾಕೆ ಪ್ರಶ್ನಿಸಲ್ಲ?:

ವಿರೋಧ ಪಕ್ಷಗಳ ಮೈತ್ರಿಯ ನಾಯಕ ಯಾರು ಎಂಬ ಪ್ರಶ್ನೆಗೆ, ‘ನಾಯಕತ್ವದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ದೇಶದ ಸಮಸ್ಯೆ ಬಗ್ಗೆ ಗಮನಹರಿಸಿ. ಪ್ರತಿನಿತ್ಯ ಪ್ರಜಾಪ್ರಭುತ್ವಸ ಮೇಲೆ ದಾಳಿಯಾಗುತ್ತಿದೆ. ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಮಾತನಾಡುತ್ತಿಲ್ಲ. ಚೀನಾ ಅತಿಕ್ರಮಣ ಸಮರ್ಥನೆ ಮಾಡಿಕೊಳ್ಳುವುದು ಯಾವ ನಾಯಕತ್ವ? ಈ ಬಗ್ಗೆ ಮೋದಿಯನ್ನು ಯಾಕೆ ಪ್ರಶ್ನೆ ಮಾಡುವುದಿಲ್ಲ ನೀವು?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷಗಳ ಸಂಖ್ಯೆ 26ಕ್ಕೆ ಏರಿದೆ:

ಜೈರಾಮ್‌ ರಮೇಶ್‌ ಮಾತನಾಡಿ, ಹಿಂದಿನ ಪಾಟ್ನಾ ಸಭೆಯಲ್ಲಿ 24 ಪಕ್ಷಗಳಿದ್ದ ಬಲ ಈಗ 26 ರಷ್ಟಾಗಿದೆ. ಮುಂದೆ ಇನ್ನೂ ಹೆಚ್ಚು ಪಕ್ಷಗಳು ನಮ್ಮ ಜತೆ ಸೇರಲಿವೆ. ರಾಹುಲ… ಗಾಂಧಿ ನಮ್ಮ ಪಕ್ಷದ ಮಾಸ್‌ ನಾಯಕ. ಕಳೆದ ಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ರಾಹುಲ…ಗಾಂಧಿ ಭಾರತ ಜೋಡೋ ಯಾತ್ರೆಯನ್ನು ಶ್ಲಾಘಿಸಿದ್ದಾರೆ. ನಾಯಕತ್ವದ ಬಗ್ಗೆಯಾಗಲಿ, ಮೈತ್ರಿಕೂಟದ ಹೆಸರಾಗಲಿ ಎಲ್ಲರೂ ಕೂಡಿ ನಿರ್ಧಾರ ಮಾಡುತ್ತಾರೆ. ಇದಿನ್ನು ಎರಡನೇ ಸಭೆ ಇನ್ನೂ ಹಲವು ಸಭೆ ನಡೆಯಲಿವೆ ಎಂದರು.

ಲೋಕಸಭೆ ಗೆಲ್ಲಲು ಕೆಲಸ-ಡಿಕೆಶಿ:

ಡಿ.ಕೆ.ಶಿವಕುಮಾರ್‌, ದೇಶದ ಹಿತಾಸಕ್ತಿ ಕಾಯಲು ವಿರೋಧಪಕ್ಷಗಳು ಒಂದುಗೂಡುತ್ತಿರುವುದು ಉತ್ತಮ ಆರಂಭ. ಜತೆಗೂಡುವುದು ಆರಂಭ, ಜತೆಗೂಡಿ ಆಲೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ದೇಶದ ಭವಿಷ್ಯವನ್ನು ಹೇಗೆ ರೂಪಿಸಬೇಕು ಎಂಬುದರ ಬಗ್ಗೆ ನಾಳೆ ದೊಡ್ಡ ಮಟ್ಟದ ಸಭೆ ನಡೆಯಲಿದೆ. ಒಗ್ಗಟ್ಟು ಮುಂದುವರೆಸಿ ಕರ್ನಾಟಕ ವಿಧಾನಸಭೆ ಫಲಿತಾಂಶವನ್ನೇ ಲೋಕಸಭೆಯಲ್ಲೂ ಪಡೆಯಲು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಜೆಡಿಎಸ್‌ ನಿಲುವು ಗೊತ್ತಾಗಿದೆ: ವೇಣು

ಜೆಡಿಎಸ್‌ಗೆ ಏಕೆ ಆಹ್ವಾನವಿಲ್ಲ ಎಂಬ ಪ್ರಶ್ನೆಗೆ, ಕೇಂದ್ರದ ವಿರುದ್ಧ ಹೋರಾಡುವ ಧೈರ್ಯ ಇರುವವರು ಜತೆ ಬರುತ್ತಾರೆ. ಪ್ರತ್ಯೇಕ ಆಹ್ವಾನ ಅಗತ್ಯವಿಲ್ಲ. ಇನ್ನು ಅವರು (ಜೆಡಿಎಸ್‌) ಕಳೆದ ವಿಧಾನಸಭೆ ಚುನಾವಣೆಯಲ್ಲಿ ತನ್ನ ನಿಲುವು ಸಾಬೀತುಪಡಿಸಿದ್ದಾರೆ ಎಂದು ವೇಣುಗೋಪಾಲ್‌ ತಿಳಿಸಿದರು.

ದನಿಗೂಡಿಸಿದ ಜೈರಾಂ ರಮೇಶ್‌, ‘ಇನ್ನು ತ್ರಿಶಂಕು ಸ್ಥಿತಿಯಲ್ಲಿ ಇರಲು ಸಾಧ್ಯವಿಲ್ಲ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ಬಯಸುತ್ತಾರೋ ಇಲ್ಲವೋ ನಿರ್ಧರಿಸುವುದು ಅವರಿಗೆ ಬಿಟ್ಟವಿಚಾರ’ ಎಂದರು.

ಪ್ರತಿಪಕ್ಷ ವಿರೋಧ ನಡುವೆ ಎಪಿಎಂಸಿ ತಿದ್ದುಪಡಿ ಪಾಸ್‌ !

ಆಹ್ವಾನವಿಲ್ಲದ ಶಾಸಕರು, ಸಚಿವರು ಬರುವಂತಿಲ್ಲ: ಡಿಕೆಶಿ

ಸಭೆಗೆ ಹೆಚ್ಚಿನ ಭದ್ರತೆ ನೀಡಲಾಗಿದ್ದು, ನಿಯೋಜಿತ ನಾಯಕರ ಹೊರತಾಗಿ ಬೇರೆ ಯಾವುದೇ ನಾಯಕರು ಸಭೆ ನಡೆಯುವ ಹೋಟೆಲ್‌ ಹಾಗೂ ಬೇರೆ ಪಕ್ಷಗಳ ನಾಯಕರ ಆಹ್ವಾನಕ್ಕೆ ವಿಮಾನ ನಿಲ್ದಾಣಗಳಿಗೆ ಆಗಮಿಸುವಂತಿಲ್ಲ. ಶಾಸಕರು, ಸಚಿವರು, ನಾಯಕರು ಎಲ್ಲರಿಗೂ ಇದು ಅನ್ವಯ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

click me!