ನಿಷೇಧದ ಭೀತಿಯಲ್ಲಿ ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಾಲ್

First Published Jun 17, 2018, 7:03 PM IST
Highlights


ವೆಸ್ಟ್ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಲ್ಲಿ ಚೆಂಡು ವಿರೂಪಗೊಳಿಸಿದ ಆರೋಪ ಎದುರಿಸುತ್ತಿರುವ ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಾಲ್‌ಗೆ ಶಿಕ್ಷೆಯ ಭೀತಿ ಶುರುವಾಗಿದೆ. ಆರಂಭದಲ್ಲೇ ಅಂಪೈರ್ ವಿರುದ್ಧವೇ ಪ್ರತಿಭಟನೆ ನಡೆಸಿದ ಚಾಂಡಿಮಾಲ್ ಪ್ರಕರಣದಿಂದ ಪಾರಾಗಲು ಯತ್ನಿಸಿದ್ದರು. ಆದರೆ ಇದೀಗ ಐಸಿಸಿ ಕೆಂಗಣ್ಣು ಚಾಂಡಿಮಾಲ್ ಮೇಲೆ ಬಿದ್ದಿದೆ.

ಗ್ರಾಸ್ ಐಸೆಲೆಟ್: ವೆಸ್ಟ್ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಾಲ್ ಬಾಲ್ ಟ್ಯಾಂಪರಿಂಗ್ ನಡೆಸಿರೋದು ಸಾಬೀತಾಗಿದೆ ಎಂದು ಐಸಿಸಿ ಹೇಳಿದೆ. ಹೀಗಾಗಿ ದಿನೇಶ್ ಚಾಂಡಿಮಾಲ್ ನಿಷೇಧದ ಭೀತಿ ಎದುರಿಸುತ್ತಿದ್ದಾರೆ.

ಚೆಂಡನ್ನ ವಿರೂಪಗೊಳಿಸೋ ಮೂಲಕ ಚಾಂಡಿಮಾಲ್ ಐಸಿಸಿ 2.2.9 ಬ್ರೀಚಿಂಗ್ ಕೋಡ್ ಉಲ್ಲಂಘಿಸಿದ್ದಾರೆ ಎಂದು ಐಸಿಸಿ ಹೇಳಿದೆ. ಆದರೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ತಂಡದ ಪರ ನಿಂತಿದೆ. ಲಂಕಾ ಕ್ರಿಕೆಟಿಗರು ಯಾವುದೇ ನಿಯಮ ಉಲ್ಲಂಘಿಸಿಲ್ಲ. ಐಸಿಸಿ ಹೇಳಿಕೆಯನ್ನ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದೆ.

ಗ್ರಾಸ್ ಐಸೆಲೆಟ್‌ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದ ಅಂತ್ಯದಲ್ಲಿ ಶ್ರೀಲಂಕಾ ಕ್ರಿಕೆಟಿಗರು ಚೆಂಡು ವಿರೂಪಗೊಳಿಸಿದ್ದಾರೆ ಎಂದು ಅಂಪೈರ್ ಅಲೀಮ್‌ದಾರ್ ಹಾಗೂ ಇಯಾನ್ ಗೊಲ್ಡ್ ಶಂಕೆ ವ್ಯಕ್ತಪಡಿಸಿದ್ದರು.  ಹೀಗಾಗಿ ತೃತೀಯ ದಿನದದಾಟದ ಆರಂಭದಲ್ಲೇ ಅಂಪೈರ್‌ಗಳು ಚೆಂಡು ಬದಲಾಯಿಸಲು ನಿರ್ಧರಿಸಿದ್ದಾರೆ. ಇದರಿಂದ ಕುಪಿತಗೊಂಡ ದಿನೇಶ್ ಚಾಂಡಿಮಾಲ್ ನೇತೃತ್ವದ ಶ್ರೀಲಂಕಾ ತಂಡ ನಿಗಧಿತ ಸಮಯದಲ್ಲಿ ಮೈದಾನಕ್ಕಿಳಿಯದೇ ಅಂಪೈರ್ ವಿರುದ್ಧ ಪ್ರತಿಭಟನೆ ನಡೆಸಿದರು.

ತಕ್ಷಣ ಮಧ್ಯಪ್ರವೇಶಿಸಿದ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್, ಶ್ರೀಲಂಕಾ ಕೋಚ್ ಜೊತೆ ಮಾತುಕತೆ ನಡೆಸಿದ್ದಾರೆ.  ಬಳಿಕ ಲಂಕಾ ಕ್ರಿಕೆಟಿಗರು ತಡವಾಗಿ ದಿನದಾಟ ಆರಂಭಿಸಲು ಮೈದಾನಕ್ಕಿಳಿದಿದ್ದಾರೆ. ಲಂಕಾ ತಂಡ ಐಸಿಸಿ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ವೆಸ್ಟ್ಇಂಡೀಸ್ ತಂಡಕ್ಕೆ 5 ರನ್‌ಗಳನ್ನ ಹೆಚ್ಚುವರಿಯಾಗಿ ನೀಡಲಾಗಿತ್ತು.

ಸೌತ್ಆಫ್ರಿಕಾ ವಿರುದ್ಧ ಬಾಲ್ ಟ್ಯಾಂಪರಿಂಗ್ ನಡೆಸಿದ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರಾನ್ ಬೆನ್‌ಕ್ರಾಫ್ಟ್ ನಿಷೇಧದ ಶಿಕ್ಷೆ ಅನುಭವಿಸುತ್ತಿದ್ದಾರೆ. 

click me!