
‘ಭಾರತ ಕಿರಿಯರ ತಂಡದ ಕೋಚ್ ಹಾಗೂ ಐಪಿಎಲ್ನ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಸಲಹೆಗಾರ ರಾಹುಲ್ ದ್ರಾವಿಡ್, ಬಿಸಿಸಿಐನ ಸ್ವಹಿತಾಸಕ್ತಿ ನಿಯಮದ ಪ್ರಕಾರವೇ ನಡೆದುಕೊಳ್ಳುತ್ತಿದ್ದು ಯಾವುದೇ ಷರತ್ತು ಉಲ್ಲಂಘಿಸಿಲ್ಲ' ಎಂದು ಸರ್ವೋಚ್ಚ ನ್ಯಾಯಾಲಯ ನೇಮಿತ ಬಿಸಿಸಿಐ ಆಡಳಿತ ಸಮಿತಿ ಹೇಳಿದೆ ಎಂದು ಮೂಲಗಳು ತಿಳಿಸಿವೆ.
ಆಡಳಿತ ಸಮಿತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ವೇಳೆ ಇತಿಹಾಸ ತಜ್ಞ ರಾಮಚಂದ್ರ ಗುಹಾ ತಮ್ಮ ಪತ್ರದಲ್ಲಿ, ದ್ರಾವಿಡ್ ವಿರುದ್ಧ ಸ್ವಹಿತಾಸಕ್ತಿ ಆರೋಪ ಮಾಡಿದ್ದರು. ‘ರಾಷ್ಟ್ರೀಯ ಕೋಚ್ ಆಗಿದ್ದುಕೊಂಡು, ಐಪಿಎಲ್ ತಂಡಕ್ಕೂ ಸಲಹೆಗಾರರಾಗಿ ಕಾರ್ಯನಿರ್ವಹಿಸಲು ಹೇಗೆ ಸಾಧ್ಯ' ಎಂದು ಪ್ರಶ್ನೆ ಮಾಡಿದ್ದರು. ಗುಹಾ ರಾಜೀನಾಮೆ ನೀಡಿದ ವಾರದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ್ದ ದ್ರಾವಿಡ್, ನನ್ನ ಸ್ಥಾನವೇನೂ ಎನ್ನುವುದನ್ನು ವಿವರಿಸುವಂತೆ ಕೇಳಿಕೊಂಡಿದ್ದರು ಹಾಗೂ ಸ್ವಹಿತಾಸಕ್ತಿ ಆರೋಪ ಮಾಡಿದ್ದರ ಉದ್ದೇಶವೇನು, ಅದಕ್ಕಿರುವ ದಾಖಲೆಗಳೇನು ಎನ್ನುವುದನ್ನು ತೋರಿಸುವಂತೆ ಕೋರಿ ಆಡಳಿತ ಸಮಿತಿಗೆ ಪತ್ರ ಬರೆದಿದ್ದರು.
‘ಸ್ವಹಿತಾಸಕ್ತಿ ಕುರಿತು ಪ್ರಶ್ನಿಸಿರುವುದು ನ್ಯಾಯೋಚಿತವಾದುದು. ಆದರೆ, ದ್ರಾವಿಡ್ ಅಥವಾ ಉಳಿದವರನ್ನು ಟೀಕಿಸುವುದು ನ್ಯಾಯವಾದುದಲ್ಲ. ಏಕೆಂದರೆ, ಅವರು ಬಿಸಿಸಿಐನ ಸ್ವಹಿತಾಸಕ್ತಿ ನಿಯಮದ ಪ್ರಕಾರವೇ ನಡೆದುಕೊಳ್ಳುತ್ತಿದ್ದು, ಯಾವ ನಿಯಮವನ್ನೂ ಉಲ್ಲಂಘಿಸಿಲ್ಲ. ಸ್ವತಃ ಬಿಸಿಸಿಐ, ಐಪಿಎಲ್ ತಂಡದ ಸಲಹೆಗಾರನಾಗಿ ಕೆಲಸ ಮಾಡಲು ಅನುಮತಿ ನೀಡಿತ್ತು. ನಿಯಮದಲ್ಲಿ ಬದಲಾವಣೆ ಮಾಡಿಲ್ಲ. ಆದಕಾರಣ ಟೀಕಿಸುವುದು ನ್ಯಾಯವಲ್ಲವೆಂದು ಆಡಳಿತ ಸಮಿತಿ ತಿಳಿಸಿದೆ' ಎಂದು ಮೂಲಗಳು ಹೇಳಿವೆ.
‘ಇದೇ ವೇಳೆ ರಾಷ್ಟ್ರೀಯ ತಂಡದ ಕೋಚ್ ಆಗಿರುವವರು ಅಥವಾ ಬೇರೆ ಹುದ್ದೆಗಳಲ್ಲಿ ಇರುವವರು ಐಪಿಎಲ್ ತಂಡಗಳ ಸಲಹೆಗಾರರಾಗಿ ಅಥವಾ ಕೋಚ್ ಆಗಿ ಕಾರ್ಯ ನಿರ್ವಹಿಸಲು ಅನುಮತಿ ನೀಡಬೇಕೋ ಅಥವಾ ಬೇಡವೋ ಎಂಬುದರ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದು ಬಿಸಿಸಿಐ ಹೇಳಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.