
ಬೆಂಗಳೂರು(ಜ.11): ಭಾರತದ ಅನುಭವಿ ಆಟಗಾರ ಪರುಪಳ್ಳಿ ಕಶ್ಯಪ್ ಅವರ ಮನೋಜ್ಞ ಆಟದ ನೆರವಿನಿಂದ ಚೆನ್ನೈ ಸ್ಮಾಶರ್ಸ್ ತಂಡ, 2ನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್'ನಲ್ಲಿ 4-1 ಅಂಕಗಳಿಂದ ಅವಧ್ ವಾರಿಯರ್ಸ್ ತಂಡದ ಎದುರು ಮುನ್ನಡೆ ಸಾಧಿಸಿದೆ. ಇದರೊಂದಿಗೆ ಸೆಮಿಫೈನಲ್ ಹಂತವನ್ನು ಮತ್ತಷ್ಟು ಭದ್ರಗೊಳಿಸಿಕೊಂಡಿದೆ.
ಇಲ್ಲಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಚೆನ್ನೈನ ಪರುಪಳ್ಳಿ ಕಶ್ಯಪ್ 11-7, 5-11, 11-7 ಗೇಮ್'ಗಳಿಂದ ಅವಧ್ ವಾರಿಯರ್ಸ್ನ ಆದಿತ್ಯ ಜೋಷಿ ಎದುರು ಗೆಲುವು ಸಾಧಿಸಿದರು. ಇಂದು ಟ್ರಂಪ್ (ಅತ್ಯಂತ ಮಹತ್ವನೀಯ) ಪಂದ್ಯವಾಗಿದ್ದರಿಂದ ಚೆನ್ನೈ ತಂಡ ಈ ಗೆಲುವಿನೊಂದಿಗೆ 2 ಅಂಕಗಳನ್ನು ಪಡೆದು ಮುನ್ನಡೆ ಸಾಧಿಸಿದೆ.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚೆನ್ನೈನ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು 11-4, 11-6 ಗೇಮ್'ಗಳಿಂದ ಅವಧ್ ವಾರಿಯರ್ಸ್ನ ರಿತುಪರ್ಣ ದಾಸ್ ಎದುರು ಗೆಲುವು ದಾಖಲಿಸಿದರು. ಈ ಗೆಲುವಿನೊಂದಿಗೆ ಚೆನ್ನೈ ತಂಡ ಉತ್ತಮ ಮುನ್ನಡೆ ಕಾಯ್ದುಕೊಂಡಿತು. ಯಾವ ಹಂತದಲ್ಲೂ ಸಿಂಧು ಅವರಿಗೆ ಸರಿಸಾಟಿಯಲ್ಲದ ಅವಧ್ ತಂಡದ ರಿತುಪರ್ಣ ಪ್ರಭಾವಿ ಆಟವಾಡುವಲ್ಲಿ ವಿಫಲರಾದರು. ಹೀಗಾಗಿ ರಿಯೊ ಒಲಿಂಪಿಕ್ಸ್ ಕೂಟದ ರಜತ ಪದಕ ವಿಜೇತೆ ಸಿಂಧು, ಸಿಂಗಲ್ಸ್ನಲ್ಲಿ ಸುಲಭ ಗೆಲುವು ದಾಖಲಿಸಿದರು. ಕೇವಲ 2 ಸೆಟ್'ಗಳ ಆಟದಲ್ಲಿ ಸಿಂಧು ಕ್ರಮವಾಗಿ 7 ಮತ್ತು 5 ಪಾಯಿಂಟ್ಸ್ಗಳ ಅಂತರ ಕಾಯ್ದುಕೊಂಡು ಪಂದ್ಯ ಜಯಿಸಿದರು.
ಸೈನಾ ಗೈರು: ಅವಧ್ ವಾರಿಯರ್ಸ್'ನ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್, ಚೆನ್ನೈ ಸ್ಮಾಶರ್ಸ್ ಎದುರಿನ ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ. ಸೈನಾ ಗೈರು ಹಾಜರಿ ಪಂದ್ಯದುದ್ದಕ್ಕೂ ಎದ್ದುಕಂಡಿತು. ಆರಂಭದಲ್ಲಿ ಮುನ್ನಡೆ ಸಾಧಿಸಿದ್ದ ವಾರಿಯರ್ಸ್ ಕ್ರಮೇಣ ಎದುರಾದ ಸೋಲುಗಳಿಂದ ಜರ್ಜರಿತಗೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.